ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃತ್ತಿಕಾ ಶ್ರೀನಿವಾಸನ್


 ಕೃತ್ತಿಕಾ ಶ್ರೀನಿವಾಸನ್


ವಿದುಷಿ ಕೃತ್ತಿಕಾ ಶ್ರೀನಿವಾಸನ್ ಸಂಗೀತಲೋಕದ ಪ್ರತಿಭೆ.‍  ಇವರು ಇನ್ಫೋಸಿಸ್ ಸಂಸ್ಥೆಯಲ್ಲಿನ ಟೆಕ್ನಿಕಲ್ ಅನಲಿಸ್ಟ್ ಹುದ್ಧೆಯನ್ನು ಸಂಗೀತಕ್ಕಾಗಿ ಬಿಟ್ಟುಕೊಟ್ಟ ಸಂಗೀತ ನಿಷ್ಠಾವಂತರು. ಕೃತ್ತಿಕಾ   ಅವರು 'ಭಾರತದ ಪ್ರಥಮ ಇಂಟರಾಕ್ಟೀವ್ ಮ್ಯೂಸಿಕ್ ಮ್ಯೂಸಿಯಮ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ (IME)' ಸಂಸ್ಥೆಯ ಸ್ಪೆಷಲ್ ಪ್ರಾಜೆಕ್ಟ್ಸ್ ಎಕ್ಸಿಕ್ಯೂಟೀವ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಕಲಾವಿದರಾಗಿ ಪ್ರಸಿದ್ಧಿ  ಪಡೆದಿದ್ದಾರೆ.

ಕೃತ್ತಿಕಾ ಅವರ ಜನ್ಮದಿನ ಮಾರ್ಚ್ 16.  ಅವರದ್ದು ಸಂಗೀತ ಸಾಹಿತ್ಯಗಳಲ್ಲಿ ಪ್ರಸಿದ್ಧವಾದ ಕುಟುಂಬ.  ಇವರ ತಾತ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ವಿಮರ್ಶಕರೂ,  ವಿದ್ವಾಂಸರೂ ಮತ್ತು ನಮ್ಮ ನಾಡಿನ ಕನ್ನಡ ಮತ್ತು ಇಂಗ್ಲಿಷಿನ ಶ್ರೇಷ್ಠ ಬರಹಗಾರರೂ ಆದ ಪ್ರೊ. ಸಿ. ಎನ್. ರಾಮಚಂದ್ರನ್.  ತಾಯಿ ಗೀತಾ ಶ್ರೀನಿವಾಸನ್ ಅವರೂ ಮಹತ್ವದ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಸಹೋದರಿ ದೀಪಿಕಾ ಶ್ರೀನಿವಾಸನ್ ಅವರೂ ಸಂಗೀತ ವಿದುಷಿಯಾಗಿ ಮೃದಂಗ ವಾದನದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದಾರೆ.

ಓದಿನಲ್ಲಿ ಪ್ರತಿಭಾವಂತ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಗಳಿಸಿರುವ ಕೃತ್ತಿಕಾ ಅವರು ಬಾಲ್ಯದಿಂದಲೇ ಕರ್ನಾಟಕ ಸಂಗೀತ ಸಾಧನೆ ಆರಂಭಿಸಿದರು.   ಶಾಲೆಯ ದಿನಗಳಲ್ಲಿ 'ಬೆಸ್ಟ್ ಸ್ಟೂಡೆಂಟ್' ಬಹುಮಾನವನ್ನು ಮೂರು ವರ್ಷ ಸತತ ಗಳಿಸಿದ ಅವರು ಶಾಲಾ ಕಾಲೇಜು ವ್ಯಾಸಂಗದ ಉದ್ದಕ್ಕೂ ರಾಜ್ಯಮಟ್ಟದ ಸಂಗೀತ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ನಿರಂತರ ಬಹುಮಾನ ಗಳಿಸುತ್ತಿದ್ದರು. 2011-12ರಲ್ಲಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಂಗೀತ ವಿದ್ಯಾರ್ಥಿ ವೇತನ ಸಂದಿತ್ತು.

ಕೃತ್ತಿಕಾ ಅವರು ಸಂಗೀತ ಕಲಾನಿಧಿ ಚಿತ್ರವೀಣಾ ರವಿಕಿರಣ್ ಅವರಲ್ಲಿ ಉನ್ನತಮಟ್ಟದ ಸಂಗೀತ ಸಾಧನೆ ಮಾಡಿದ್ದಾರೆ. ಆನೂರು ಅನಂತಕೃಷ್ಣಶರ್ಮ ಅವರ ಬಳಿ ರಾಗ ತಾನ ಪಲ್ಲವಿಯಲ್ಲಿನ ಮನೋಧರ್ಮ ವೈಶಿಷ್ಟ್ಯಗಳ ಅಧ್ಯಯನ ಮಾಡಿದ್ದಾರೆ.  ಇದಲ್ಲದೆ ವಿದುಷಿ ಟಿ. ಎಸ್ ವಸಂತಮಾಧವಿ ಅವರಲ್ಲಿ ಸಂಗೀತ ಸಾಧನೆ ಮಾಡಿ ಉನ್ನತ ಶ್ರೇಣಿಯಲ್ಲಿ ವಿದ್ವತ್ ಸಂಗೀತ ಪದವಿ ಗಳಿಸಿದ್ದಾರೆ.

ಆಕಾಶವಾಣಿಯ 'ಬಿ' ಶ್ರೇಣಿಯ ಕಲಾವಿದರಾಗಿರುವ ಕೃತ್ತಿಕಾ ಶ್ರೀನಿವಾಸನ್ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಸಂಗೀತ ಕಛೇರಿಗಳನ್ನು ಮಾಡುತ್ತಾ ಬಂದಿದ್ದಾರೆ. ಅಕಾಶವಾಣಿ ಮತ್ತು ದೂರದರ್ಶನದಲ್ಲಿ ಇವರ ಸಂಗೀತ ಕಾರ್ಯಕ್ರಮಗಳು ನಡೆದಿವೆ.‍

ಕೃತ್ತಿಕಾ ಶ್ರೀನಿವಾಸನ್ ಅವರು ಅನೇಕ ವಿಶಿಷ್ಟ ಹೆಸರಿನ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. 'ಗಂಗಾ ಕಾವೇರಿ ಸಂಗಮ' ಎಂಬ ಅವರ ಸಂಯೋಜಿತ ಸಂಗೀತ ಕಾರ್ಯಕ್ರಮ ವಾಲ್ಮೀಕಿ, ಆದಿ ಶಂಕರ, ತ್ಯಾಗರಾಜ, ದಾಸವರೇಣ್ಯರು, ಮೀರಾ ಭಜನ್, ಕೊಡವ ಸಂಯೋಜನೆಗಳು ಮುಂತಾದ ಅನೇಕ ವೈವಿಧ್ಯಗಳ ಸಂಯೋಜನೆಯಿಂದ ಕೂಡಿ ಮೆಚ್ಚುಗೆ ಗಳಿಸಿದೆ.  ಸಂಸ್ಕೃತ, ಕನ್ನಡ, ತೆಲುಗು, ಹಿಂದಿ, ಕನ್ನಡ, ಕೊಡವ ಸೇರಿದಂತೆ ಅನೇಕ ಭಾಷೆಗಳಲ್ಲಿ ಇವರ ನಾದಸುಧೆ ವ್ಯಾಪಿಸಿದೆ. 'ಮಹಿಳಾ ವಾಗ್ಗೇಯಕಾರರು'ಗಳ ರಚನೆಗಳು, 'ಕನ್ನಡದ್ದೇ ರಚನೆಗಳ ರಾಗ ತಾನ ಪಲ್ಲವಿ', 'ಆದಿಶಂಕರರ ರಚನೆಗಳು', 'ಕುವೆಂಪು ರಾಮಾಯಣ ದರ್ಶನಂ' ಮುಂತಾದ ವಿಶಿಷ್ಟ ಕಾರ್ಯಕ್ರಮಗಳು ಕೃತ್ತಿಕಾ ಅವರ ಸಂಯೋಜನೆಗಳ ವೈವಿಧ್ಯವನ್ನು ಸೂಚಿಸುವಂತಹವಾಗಿವೆ.

ಕೃತ್ತಿಕಾ ಶ್ರೀನಿವಾಸನ್ ಅವರು ನಿಮ್ಹಾನ್ಸ್ ಸಂಸ್ಥೆಯಲ್ಲಿ ಏರ್ಪಟ್ಟ 'Influence of Music on Human Beings: A Comparative Study’ ಎಂಬ ಆರು ವಾರಗಳ ವಿಶಿಷ್ಟ ಕಾರ್ಯಕ್ರಮ ಯೋಜನೆ, ಸಂಗೀತ ವಿಶೇಷಜ್ಞರಾದ ಡಾ. ಎಂ. ಸೂರ್ಯಪ್ರಸಾದ್ ಅವರ ಉಪಸ್ಥಿತಿಯಲ್ಲಿ ರಾಗ ತಾನ ಪಲ್ಲವಿ ವಿಶೇಷದ 'ಪ್ರತಿಭೋತ್ಸವ' ಮುಂತಾದ ಅನೇಕ ಸಂಗೀತ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕೃತ್ತಿಕಾ ಶ್ರೀನಿವಾಸನ್ ಅವರು ಮಂಜುಳಾ ಗುರುರಾಜ್ ಮಾರ್ಗದರ್ಶನದಲ್ಲಿ 'ಚೈತ್ರ' ಎಂಬ ಸುಗಮ ಸಂಗೀತದ ಆಲ್ಬಮ್ ಹೊರತಂದಿದ್ದಾರಲ್ಲದೆ ಅನೇಕ ಶಾಸ್ತ್ರೀಯ ಸಂಯೋಜನಗಳಲ್ಲಿ ಹಾಡಿದ್ದಾರೆ. 

ಕೃತ್ತಿಕಾ ಶ್ರೀನಿವಾಸನ್ ಅವರಿಗೆ ಡಿ. ಸುಬ್ಬರಾಮಯ್ಯ ಫೈನ್ ಆರ್ಟ್ಸ್ ಟ್ರಸ್ಟ್ ವತಿಯಿಂದ 'ಸಂಗೀತ ಕೌಸ್ತುಭ' ಬಿರುದು ಸಂದಿದೆ.  ಅವರು 2015 ವರ್ಷದಲ್ಲಿ ಗುರು ವಿದ್ವಾನ್ ಟಿ. ಎಸ್.ವಸಂತಮಾಧವಿ ಅವರೊಂದಿಗೆ ಅಮೆರಿಕದಲ್ಲಿ ಮೂರುವಾರಗಳ ಅವಧಿಯ ಸಂಗೀತಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕೃತ್ತಿಕಾ ಅವರು 'ಅಲ್ಪಾಯುಷಿ ಮಹಾಸಾಧಕರು - ಸಂಗೀತಗಾರರು' ಎಂಬ ಕೃತಿಯ ಸಹಲೇಖಕರಾಗಿಯೂ ಕೊಡುಗೆ ನೀಡಿದ್ದಾರೆ.  ಅನೇಕ ಆಸಕ್ತರಿಗೆ ಸಂಗೀತ ಮಾರ್ಗದರ್ಶನ ಕೂಡಾ ಮಾಡುತ್ತಿದ್ದಾರೆ. ನೃತ್ಯ ಪ್ರಕಾರಗಳಿಗಾಗಿ ಸಂಗೀತ ಸಂಯೋಜನೆ ಮತ್ತು ಗಾಯನವನ್ನೂ ಪ್ರಸ್ತುತಪಡಿಸಿದ್ದಾರೆ.

ಆತ್ಮೀಯರೂ ಪ್ರತಿಭಾನ್ವಿತ ಸಂಗೀತ ಸಾಧಕರೂ ಆದ ಕೃತ್ತಿಕಾ ಶ್ರೀನಿವಾಸನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Krithika Sreenivasan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ