ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಸಿ. ಪಂಕಜಾ


 ಎಂ. ಸಿ. ಪಂಕಜಾ


ಎಂ. ಸಿ. ಪಂಕಜಾ ಪ್ರಸನ್ನ ಆಪ್ತ ಸಲಹಾ ಕೇಂದ್ರದ ಮೂಲಕ ಅನೇಕ ನೊಂದ ಜೀವಿಗಳಿಗೆ ಬದುಕನ್ನು ಹಸನು ಮಾಡಿಕೊಡುತ್ತಿರುವ ನಿಃಸ್ವಾರ್ಥ ಹಿರಿಯರು. 

ಪಂಕಜಕ್ಕ ಎಂದೇ ಪ್ರಸಿದ್ದರಾದ ಎಂ. ಸಿ. ಪಂಕಜಾ ಅವರು ಜನಿಸಿದ್ದು ಮಾರ್ಚ್ 15ರಂದು.  ಅವರಿಗೀಗ ವಯಸ್ಸು ಸುಮಾರು 88.  ಅವರ ಊರು ಚನ್ನಪಟ್ಟಣ.  ಶಿಕ್ಷಕಿಯಾಗಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಭಾಜನರಾಗಿದ್ದ ಪಂಕಜಾ ಅವರು ಸಮಾಜ ಸೇವೆಗೆ ಮುಖಮಾಡಿ ತಮ್ಮ ವೃತ್ತಿಯನ್ನು ತೊರೆದರು.

ಪಂಕಜಾ ಅವರಿಗೆ ಹಲವಾರು ಜನ ಆತ್ಮಹತ್ಯೆಗೆ ಪ್ರಯತ್ನಿಸುವುದನ್ನು ತಪ್ಪಿಸುವುದು ಮುಖ್ಯವೆನಿಸಿತು.  ಹೀಗೆ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಜೀವಗಳನ್ನು ಉಳಿಸಿದರು. ಈ ಸಂದರ್ಭದಲ್ಲಿ ಅವರು ಮಹಾನ್ ಸಮಾಜ ಕಾರ್ಯಕರ್ತರಾಗಿ ರಾಷ್ಟ್ರೀಯ ಸ್ವಯಂ ಸೇವಕದಲ್ಲಿ ದೊಡ್ಡ ಹೆಸರು ಮಾಡಿದ್ದ ದಿವಂಗತ ಅಜಿತ್ ಕುಮಾರ್ ಅವರ ಕಣ್ಣಿಗೆ ಬಿದ್ದರು.

ಅಜಿತ್ ಕುಮಾರ್ ಅವರು ಪ್ರಸನ್ನ ಆಪ್ತ ಸಲಹಾ ಕೇಂದ್ರವನ್ನು ಸಮಾಜದಲ್ಲಿ ಉತ್ತಮ ಮಾನಸಿಕ ಸ್ವಾಸ್ಥ್ಯ ನಿರ್ಮಾಣದ ಉದ್ದೇಶದಿಂದ ಸ್ಥಾಪಿಸಿದ್ದರು.  ಅವರು ತಮ್ಮ ಈ ಮಹದುದ್ದೇಶದ ಕಾರ್ಯದಲ್ಲಿ ಸಮರ್ಥ ಸಮಾನ ಮನಸ್ಕರನ್ನು ಅರಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಪಂಕಜಾ ಅವರು ಈ ಕಾರ್ಯಕ್ಕೆ ಸಮರ್ಥರೆಂಬ ಭಾವ ಮೂಡಿತು.  ಹೀಗೆ ಪ್ರಸನ್ನ ಆಪ್ತ ಸಲಹಾ ಕೇಂದ್ರದ ಮೂಲಕ ಪಂಕಜಾ ಅವರ ಸೇವೆ 1980ರಿಂದ ಅವಿರತವಾಗಿ ಸಾಗಿ ಬಂದಿದೆ.

ರಾಜ್ಯದೆಲ್ಲೆಡೆಗಳಿಂದ ಮಾನಸಿಕ ತೊಂದರೆಗೊಳಗಾದವರು, ಜೀವನದಲ್ಲಿ ತೊಂದರೆಗಿಳಗಾದವರು,  ಚಟಗಳಿಗೆ ಒಳಗಾದವರು, ಮಕ್ಕಳಲ್ಲಿ ಗ್ರಹಿಕೆ ಕಡಿಮೆ ಇರುವ ಸಮಸ್ಯೆ ಇರುವವರು ಹೀಗೆ ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ಸಮಾಧಾನ ಕಂಡುಕೊಳ್ಳುತ್ತಿದ್ದಾರೆ.  ಇಲ್ಲಿ ಅವರಿಗೆ ಆಪ್ತ ಪಂಕಜಕ್ಕನ ಆಪ್ತ ನೆಲೆಯಿದೆ.  ಇಲ್ಲಿಗೆ ಸಮಾಲೋಚನೆಗೆ ಬಂದವರು ಯಾವುದೇ ಹಣ ನೀಡಬೇಕಿಲ್ಲ.  ಸಮಾಲೋಚನೆಯ ನಂತರದಲ್ಲಿ ಕೇಂದ್ರಕ್ಕೆ ಬಂದು ಸೇವೆ ಸಲ್ಲಿಸುವ ಅನೇಕ ಪ್ರಸಿದ್ಧ ತಜ್ಞ ವೈದ್ಯರಿಂದ ವೈದ್ಯಕೀಯ ಸಹಾಯವೂ ಉಚಿತವಾಗಿ ಸಲ್ಲುತ್ತಿದೆ. 

ಪ್ರಸನ್ನ ಕೇಂದ್ರದಲ್ಲಿ ಶ್ರದ್ಧಾಸಕ್ತಿಯುಳ್ಳವರಿಗೆ ಆಪ್ತ ಸಮಾಲೋಚನೆಯ ತರಬೇತಿ ಸಹಾ ಲಭ್ಯವಿದ್ದು,  ಸುಮಾರು 2500 ಜನ ಈ ಕೇಂದ್ರದಿಂದ ಆಪ್ತ ಸಮಾಲೋಚಕರಾಗಿ ರೂಪುಗೊಂಡಿದ್ದು ಸಮಾಜಮುಖಿಗಳಾಗಿದ್ದಾರೆ. 

ಎಂ. ಸಿ. ಪಂಕಜಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಾರ್ಗಿ ಪ್ರಶಸ್ತಿ, ದೇಶಸ್ನೇಹಿ ಪ್ರಶಸ್ತಿ, ಸಮಾಜ ಸೇವಕಿ ಪ್ರಶಸ್ತಿ,, ನವರತ್ನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಸಮಾಜದ ಸ್ವಾಸ್ಥ್ಯಕ್ಕಾಗಿ ನಿರಂತರ ನಿಃಸ್ವಾರ್ಥ ಸಲ್ಲಿಸುತ್ತಿರುವ ಹಿರಿಯರಾದ ಎಂ. ಸಿ. ಪಂಕಜಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

On the birthday of great social worker M. C. Pankaja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ