ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಮ್ಮ ಕೇಶವಮೂರ್ತಿ


 ರಾಜಮ್ಮ ಕೇಶವಮೂರ್ತಿ


ರಾಜಮ್ಮ ಕೇಶವಮೂರ್ತಿ ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದು  ಪ್ರಸಿದ್ಧರು.

ರಾಜಮ್ಮನವರು  ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ 1929ರ ಏಪ್ರಿಲ್ 28ರಂದು ಜನಿಸಿದರು. ತಂದೆ ಲಕ್ಷ್ಮೀಕಾಂತಯ್ಯನವರು. ತಾಯಿ ಗುಂಡಮ್ಮನವರು. ಸರಕಾರಿ ಸೇವೆಯಲ್ಲಿದ್ದ  ಕಾಂತಯ್ಯನವರಿಗೆ  ಭದ್ರಾವತಿಗೆ ವರ್ಗವಾದಾಗ ಅಲ್ಲಿ ವಾಸವಿದ್ದ  ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ ಮುಂತಾದವರಲ್ಲಿ ರಾಜಮ್ಮನವರ  ಸಂಗೀತ ಶಿಕ್ಷಣ ಮೊದಲ್ಗೊಂಡಿತು.  1947ರಲ್ಲಿ ರಾಜಮ್ಮನವರು  ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಹೊಂದಿದರು.

ಮದುವೆಯ ನಂತರ ಮೈಸೂರಿಗೆ ಬಂದ ರಾಜಮ್ಮನವರು ಸಂಗೀತ ವಿದ್ವಾಂಸರಾದ ಆರ್‌.ಕೆ. ನಾರಾಯಣಸ್ವಾಮಿ, ಆರ್‌.ಕೆ. ಶ್ರೀಕಂಠನ್ ಮುಂತಾದವರಲ್ಲಿ ಪ್ರೌಢಶಿಕ್ಷಣವನ್ನು ಪಡೆದು ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುಂದೆ ರಾಜಮ್ಮನವರು  ಸರಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲಾರಂಭಿಸಿದರು. ರಾಜಮ್ಮನವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿಯ ವಿದ್ವತ್ ಪರೀಕ್ಷೆಯ ಪರೀಕ್ಷಕರಾಗಿ, ಅಧ್ಯಕ್ಷಿಣಿಯಾಗಿ  ಸೇವೆ ಸಲ್ಲಿಸಿದ ಕೀರ್ತಿ ಅವರದ್ದು.  ಪಿ.ಯು. ಮತ್ತು ಬಿ.ಎ. ತರಗತಿಗಳ ಐಚ್ಛಿಕ ಸಂಗೀತ ವಿದ್ಯಾರ್ಥಿಗಳಿಗೆ ಸಹಾ ಅವರು ಸಂಗೀತ ಪಾಠ ಮಾಡಿ ಮಾರ್ಗದರ್ಶನ ನೀಡಿದರು.

ರಾಜಮ್ಮನವರ ಕಚೇರಿಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮುಂಬೈ ಹೀಗೆ ವಿವಿದೆಡೆಗಳಲ್ಲಿ ಜರುಗಿದವು. ಅವರ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದಲೂ ಭಿತ್ತರಗೊಂಡವು.

ರಾಜಮ್ಮ ಕೇಶವಮೂರ್ತಿಯವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.   ಚಿಕ್ಕಮಗಳೂರಿನ 4ನೇ ಭಾರತೀಯ ಧರ್ಮ ಸಮ್ಮೇಳನದಲ್ಲಿ ಸಂಗೀತ ರತ್ನ ಬಿರುದು, ಬೆಂಗಳೂರಿನ ಗಾಯನ ಸಮಾಜ, ರಾಜಾಜಿನಗರದ ಶಂಕರ ಜಯಂತಿ ಸಂದರ್ಭದ ಸಂಗೀತ ಸಮ್ಮೇಳನದ ಅಧ್ಯಕ್ಷತೆ,  ಸಂಗೀತ ವಿಶಾರದೆ ಬಿರುದು ಸನ್ಮಾನ, ಪುರಂದರ – ತ್ಯಾಗರಾಜರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಗೀತ ಕಲಾ ತಪಸ್ವಿ, ಶೇಷ ಗಣಪತಿ ಮಹಿಳಾ ಸಂಘದವರಿಂದ ಅಭಿನವ ಶಾರದೆ,  1977ರಲ್ಲಿ ಸ್ವರಭೂಷಿಣಿ ಬಿರುದು, ಕರ್ನಾಟಕ ಸಂಗೀತ  ನೃತ್ಯ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಸಂಗೀತ ವಿದ್ವಾನ್ ಮುಂತಾದ ಅನೇಕ  ಪ್ರಶಸ್ತಿ ಗೌರವಗಳು ಅವರಿಗೆ ಸಂದಿದ್ದವು. 

ರಾಜಮ್ಮ ಕೇಶವಮೂರ್ತಿ ಅವರ ಪತಿ ಬಿ. ಎಂ. ಕೇಶವಮೂರ್ತಿ ಮತ್ತು ಮಕ್ಕಳಾದ ಬಿ ಕೆ ಚಂದ್ರಮೌಳಿ, ಬಿ ಕೆ ಶೇಷಾದ್ರಿ ಮತ್ತು ಬಿ ಕೆ ಅನಂತರಾಮ್ ಸಹಾ ಸಂಗೀತದಲ್ಲಿ ಮಹತ್ವದ ಸಾಧಕರೆನಿಸಿದ್ದಾರೆ.

ರಾಜಮ್ಮ ಕೇಶವಮೂರ್ತಿ ಅವರು 2024ರ ಡಿಸೆಂಬರ್ 4ರಂದು ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು.

Rajamma Keshavamurthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ