ವಾಣಿ
ವಾಣಿ
ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ‘ವಾಣಿ’ ಪ್ರಮುಖರಾಗಿದ್ದಾರೆ. ಅವರ ಮೂಲ ಹೆಸರು ಬಿ. ಎನ್. ಸುಬ್ಬಮ್ಮ. ಅವರು ಸರಳ, ಸಹಜ ಬರವಣಿಗಳಲ್ಲಿ ವೈವಿಧ್ಯತೆಯ ಸುಂದರ ಕಥಾಕುಸುಮಗಳನ್ನು ನೀಡಿದವರು.
ವಾಣಿಯವರು 1917ರ ಮೇ 12 ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಸುಬ್ಬಮ್ಮನವರ ತಂದೆ ಶಾಸನ ಸಭೆಯ ಸದಸ್ಯರಾಗಿ, ರಾಜಸೇವಾಸಕ್ತ ಬಿರುದಾಂಕಿತರಾಗಿದ್ದ ನರಸಿಂಗರಾಯರು. ತಾಯಿ ಹಿರಿಯಕ್ಕಮ್ಮನವರು.
ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಪ್ರಸಿದ್ಧ ವಕೀಲರಾದ ಎಂ. ಎನ್. ನಂಜುಂಡಯ್ಯನವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಾಣಿಯವರ ವಿದ್ಯಾಭ್ಯಾಸ ಎಸ್ಎಸ್ಎಲ್ಸಿ ಯಲ್ಲಿ ಕೊನೆಗೊಂಡಿತು. ಆದರೆ ಇಂಗ್ಲಿಷ್, ಕನ್ನಡ ಪುಸ್ತಕಗಳನ್ನು ಓದಲು ಕುಳಿತರೆ ಊಟ, ತಿಂಡಿ, ತೀರ್ಥಗಳ ಪರಿವೆಯೇ ಅವರಿಗಿರುತ್ತರಲಿಲ್ಲವಂತೆ. ತಮ್ಮ ಪತಿಯ ಮನೆ 40-50 ಜನರಿದ್ದ ದೊಡ್ಡ ಅವಿಭಕ್ತ ಕುಟುಂಬ. ಆದರೂ ಬಿಡುವು ಸಿಕ್ಕರೆ ಸಾಕು ವಾಣಿಯವರು ಬರವಣಿಗೆಯಲ್ಲಿ ತಲ್ಲೀನರಾಗಿಬಿಡುತ್ತಿದ್ದರಂತೆ. ‘ಚಿಲುಮೆಯಲ್ಲಿ ನೀರು ಉಕ್ಕಿದಂತೆ ಪುಟಿದೇಳುತ್ತಿದ್ದ ಬರವಣಿಗೆಯ ಚೈತನ್ಯವನ್ನು ನನ್ನಿಂದ ತಡೆಹಿಡಿಯಲಾಗದೆ ಬರೆಯುತ್ತಿದ್ದೆ’ ಎನ್ನುತ್ತಿದ್ದ ವಾಣಿಯವರದ್ದು ಅತಿ ಸಹಜ ಬರವಣಿಗೆ.
ಸುಬ್ಬಮ್ಮನವರು ‘ವಾಣಿ’ಯಾಗಿದ್ದೇ ಒಂದು ಕಥೆಯಂತಿದೆ. ತಮ್ಮ ಮೊದಲ ಕಥೆ ‘ತಾರಾ’ವನ್ನು ಪತ್ರಿಕೆಗೆ ಕಳುಹಿಸುವಾಗ ಅದು ಪ್ರಕಟವಾಗುತ್ತದೋ ಇಲ್ಲವೋ ಎಂಬ ಹಿಂಜರಿಕೆಯಿಂದ, ಕಥೆಯೊಂದಿಗೆ ಸಂಪಾದಕರಿಗೆ ಮನವಿಯೊಂದನ್ನಿರಿಸಿ, ತಮ್ಮ ಕಥೆಯನ್ನು ‘ಶ್ರೀನಾಥ’ ಎಂಬ ಹೆಸರಿನಲ್ಲಿ ಪ್ರಕಟಿಸುವಂತೆ ಕೋರಿದ್ದರು. ಆದರೆ ಕಥೆಯನ್ನು ಮೆಚ್ಚಿದ ಸಂಪಾದಕರು ಅದನ್ನು ‘ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಹೀಗಾಗಿ ಸುಬ್ಬಮ್ಮನವರು ‘ವಾಣಿ’ ಎಂಬ ಬರಹಗಾರ್ತಿಯಾಗಿ ಬದಲಾದರು. ಅವರು ಬರೆದ ಎರಡನೆಯ ಕಥೆಯು ಕನ್ನಡ ಸಾಹಿತ್ಯ ಪರಿಷತ್ತಿನ ಭಾಸ್ಕರರಾವ್ ಸ್ಮಾರಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತು. ಹೀಗಾಗಿ ಅವರು ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಕಥೆಗಳನ್ನು ಮೂಡಿಸಲು ಪ್ರಾರಂಭಿಸಿದರು. 1944ರ ವರ್ಷದಲ್ಲಿ ವಾಣಿಯವರ ಏಳು ಕಥೆಗಳನ್ನೊಳಗೊಂಡ ಕಥಾಸಂಕಲನವು ಮಾಸ್ತಿಯವರ ಮುನ್ನುಡಿಯೊಂದಿಗೆ ಪ್ರಕಟಗೊಂಡಿತು. ಮುಂದೆ ‘ನಾಣಿಯಮದುವೆ’, ‘ಬಾಬು ಬರ್ತಾನೆ’, ‘ಅರ್ಪಣೆ’, ‘ಅಪರೂಪದ ಅತಿಥಿ’, ‘ಹ್ಯಾಪಿ ಬರ್ತ್ಡೇ’ ಮುಂತಾದ ಹಲವಾರು ಕಥಾಸಂಕಲನಗಳು ಪ್ರಕಟಗೊಂಡವು.
ವಾಣಿಯವರು, ಉತ್ತರ ಭಾರತವು ಚಂಡಮಾರುತದಿಂದ ಸಂಕಷ್ಟಕ್ಕೊಳಗಾದ ಸುದ್ದಿಯನ್ನಾಧರಿಸಿ ರಚಿಸಿದ ಕಾದಂಬರಿ ‘ಬಿಡುಗಡೆ’. ಈ ಮೊದಲ ಕಾದಂಬರಿ ಬಿಡುಗಡೆಯಾಗಲು ಬಹಳಷ್ಟು ವರ್ಷ ಕಾಯಬೇಕಾಯಿತು. ಅಂದಿನ ದಿನಗಳು ಪ್ರಕಾಶಕರನ್ನು ಹುಡುಕುವುದೇ ಬಹು ಪ್ರಯಾಸವಾಗಿದ್ದ ಕಾಲ. ಮೊಟ್ಟ ಮೊದಲ ಕಾದಂಬರಿಯನ್ನು ಮೈಸೂರಿನ ಡಿ.ವಿ.ಕೆ. ಮೂರ್ತಿಯವರು ತಮ್ಮ ಪ್ರಕಾಶನದಡಿಯಲ್ಲಿ ಪ್ರಕಟಿಸಿದ್ದೇ ಅಲ್ಲದೆ ನಂತರ ಅವರು ಬರೆದ ಕಾದಂಬರಿಗಳೆಲ್ಲವನ್ನೂ ಪ್ರಕಟಿಸಿದರು. ಬಿಡುಗಡೆ, ಎರಡು ಕನಸು, ಶುಭಮಂಗಳ, ಕಾವೇರಿ ಮಡಿಲಲ್ಲಿ, ಹೊಸಬೆಳಕು, ಅನಿರೀಕ್ಷಿತ, ಪ್ರೇಮಸೇತು, ತ್ರಿಶೂಲ, ಸುಲಗ್ನಾಸಾವಧಾನ ಮುಂತಾದ 20 ಕಾದಂಬರಿಗಳಲ್ಲಿ ಎರಡುಕನಸು, ಶುಭಮಂಗಳ, ಹೊಸಬೆಳಕು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಕಾದಂಬರಿಗಳು ಮಲಯಾಳಂ ಹಾಗೂ ತೆಲುಗಿಗೂ ಅನುವಾದಗೊಂಡಿವೆ.
ವಾಣಿಯವರ 518 ವಚನಗಳ ಸಂಗ್ರಹ ‘ನವನೀತ’ ಪ್ರಕಟಗೊಂಡಿದ್ದು, ಅದಕ್ಕೆ ಮಹಾನ್ ವಿದ್ವಾಂಸರಾದ ಹಾ.ಮಾ. ನಾಯಕರು ಮುನ್ನುಡಿ ಬರೆದಿದ್ದಾರೆ. ವಾಣಿಯವರ ನಿಧನಾನಂತರದಲ್ಲಿ ಪ್ರಕಟಗೊಂಡದ್ದು ‘ತಾರಮ್ಮಯ್ಯ’ ಎಂಬ ಹರಟೆಗಳ ಸಂಗ್ರಹ. ವಾಣಿಯವರು ಹಲವಾರು ನಾಟಕಗಳನ್ನೂ ಬರೆದಿದ್ದರೂ ಅವು ಪ್ರಕಟಣೆಯ ಅದೃಷ್ಟವನ್ನು ಕಾಣಲಿಲ್ಲ. “ಸಾಹಿತ್ಯರಚನೆ ಎನ್ನುವುದು ಕೇವಲ ಕಲ್ಪನೆಯಷ್ಟೆ ಆಗಿಲ್ಲದೆ, ಅನುಭವದ ಭಾಗ ಕೂಡಾ ಅದರಲ್ಲಿ ಸರಿಸಮಾನವಾಗಿ ಬೆರೆತಿದ್ದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ” ಎಂದು ವಾಣಿ ಅವರು ತಮ್ಮ ಅಕ್ಕನ ಮಗಳು ತ್ರಿವೇಣಿಯವರೊಡನೆ ಆಗಾಗ್ಗೆ ಹೇಳುತ್ತಿದ್ದರಂತೆ.
ವಾಣಿಯವರ ‘ಮನೆಮಗಳು’ ಕಾದಂಬರಿಗೆ 1962ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿ ದೊರೆಯಿತು. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಿಂದ, 1970 ವರ್ಷದಲ್ಲಿ ಜರುಗಿದ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ ಏರ್ಪಟ್ಟಿತು. 1972 ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನ (1970) ದಲ್ಲಿ ಮಹಿಳಾ ಗೋಷ್ಠಿಯ ಅಧ್ಯಕ್ಷತೆ, ಧರ್ಮಸ್ಥಳದಲ್ಲಿ ನಡೆದ ವಾರ್ಷಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಡ್ಯದಲ್ಲಿ ನಡೆದ ಲೇಖಕಿಯರ ಸಂಘದ ಸಮ್ಮೇಳಾನಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ವಾಣಿಯವರಿಗೆ ಸಂದವು.
1976ರಲ್ಲಿ ಪತಿ ನಂಜುಂಡಯ್ಯನವರು ಅಪಘಾತದಲ್ಲಿ ಮರಣ ಹೊಂದಿದ್ದು, 1984ರಲ್ಲಿ ಮಗ ಕೆನಡಾದಲ್ಲಿ ಅಕಾಲ ಮೃತ್ಯವಿಗೊಳಗಾಗಿ ಚಿತಾಭಸ್ಮವನ್ನೂ ಮಾತ್ರ ನೋಡಬೇಕಾಗಿ ಬಂದ ಸಂದರ್ಭದ ಕೊರಗಿನಿಂದ ವಾಣಿಯವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ, ಪಾರ್ಶ್ವವಾಯು ಪೀಡಿತರಾದ ಅವರು 1988ರ ಫೆಬ್ರವರಿ 14ರಂದು ಈ ಲೋಕವನ್ನಗಲಿದರು.
On the birth anniversary of great novelist Vani
ಲೇಖನಕ್ಕಾಗಿ ಧನ್ಯವಾದಗಳು. ಅವರ ಕಥೆ,ಕಾದಂಬರಿಗಳನ್ನು ಓದಿದ್ದ,ನನಗೆ ಅವರ ಪರಿಚಯವೇ ಇಲ್ಲದ್ದು ಈ ಲೇಖನ ಓದಿದ ಬಳಿಕ ಅರಿವಾಯಿತು. ಆ ತಾಯಿಗೆ ನನ್ನ ನಮನ.
ಪ್ರತ್ಯುತ್ತರಅಳಿಸಿ-ಗುರುರಾಜ