ಎನ್. ಮರಿಶಾಮಾಚಾರ್
ಎನ್. ಮರಿಶಾಮಾಚಾರ್
ಎನ್. ಮರಿಶಾಮಾಚಾರ್ ಕಲಾಗುರುಗಳಾಗಿ, ಕಲಾವಿದರಾಗಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಆಗಿ ಮತ್ತು ಕಲಾ ಸಾಹಿತಿಗಳಾಗಿ ಪ್ರಸಿದ್ಧರಾಗಿದ್ದವರು.
ಮರಿಶಾಮಾಚಾರ್ 1951ರ ಮೇ 15ರಂದು ವಿಜಯಪುರದಲ್ಲಿ ಜನಿಸಿದರು. ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸತ್ತಾಗ ತುಂಬ ಬೇಸರವಾಯಿತು. ಆಗಿನ್ನೂ ಆರನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ ಶಾಲೆಯ ಗೋಡೆಗೆ ನೇತುಹಾಕಿದ್ದ ನೆಹರೂ ಫೋಟೊ ನೋಡಿಕೊಂಡು ಒಂದು ಚಿತ್ರ ಬಿಡಿಸಿದ. ಅದು ಆತ ಬರೆದ ಮೊದಲ ಚಿತ್ರ. ಸ್ವಪ್ರೇರಣೆಯಿಂದ ಅಂಥದೊಂದು ಚಿತ್ರ ಬಿಡಿಸಿದ ಹುಡುಗ ಮುಂದೆ ಕಲಾರಂಗದಲ್ಲಿ ಮೂಡಿಸಿದ ಹೆಜ್ಜೆಗುರುತುಗಳು ನಿಚ್ಚಳವಾಗಿವೆ.
ಜಯನಗರದ ಆರ್ವಿ ಹೈಸ್ಕೂಲಿನಲ್ಲಿ ಓದುವಾಗಲೂ ಏನಾದರೂ ಕಾರ್ಯಕ್ರಮ ಆದರೆ ಮೇಷ್ಟರು, ಮೇಡಂಗಳು ಇವರಿಂದ ಡ್ರಾಯಿಂಗ್ ಮಾಡಿಸುತ್ತಿದ್ದರು. ಗಣಪತಿ ಹಬ್ಬ, ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವ ಸಂದರ್ಭ ಯಾವುದೇ ಆಗಲಿ ರೂಪುತಳೆಯುತ್ತಿದ್ದದ್ದು ಮರಿಶಾಮಾಚಾರ್ ಮೂಸೆಯ ಚಿತ್ರಗಳೇ. ಒಂದೊಮ್ಮೆ ಸ್ಪರ್ಧೆಯಲ್ಲಿ ಅವರು ರಚಿಸಿದ ಲ್ಯಾಂಡ್ಸ್ಕೇಪ್ಗೆ ಮೊದಲ ಬಹುಮಾನ ಸಿಕ್ಕಿತು. ಬದುಕಿನಲ್ಲಿ ಬಣ್ಣಗಳು ಮೂಡಲು ಹೀಗೆ ಪ್ರೇರಣೆ ಮೂಡಿತು.
ಮರಿಶಾಮಾಚಾರ್ ಅವರ ಅಣ್ಣ ಕೆನ್ಸ್ಕೂಲ್ ವಿದ್ಯಾರ್ಥಿ. ಕಲೆಯ ರುಚಿ ಹದಗೊಂಡಿದ್ದು ಅಣ್ಣನ ಸಹವಾಸದಿಂದ. ಭೌತವಿಜ್ಞಾನ ವಿಷಯ ಕೈಕೊಟ್ಟು, ಮೈಸೂರಿನಲ್ಲಿ ಪಿಯುಸಿ ಫೇಲಾದ ಮೇಲೆ ಅಣ್ಣ ಸ್ಟೆನ್ಸಿಲ್ ಮೇಲೆ ಮಾಡುತ್ತಿದ್ದ ಡ್ರಾಯಿಂಗ್ಗಳಿಗೆ ಮರಿಶಾಮಾಚಾರ್ ಇಂಡಿಯನ್ ಇಂಕ್ ಫಿಲ್ ಮಾಡುತ್ತಲೇ ರೇಖೆಗಳ ಕದಲಿಕೆಗಳನ್ನು ತಮ್ಮದಾಗಿಸಿಕೊಂಡರು. ಅನಕೃ ಕಾದಂಬರಿಗಳನ್ನು ಓದುವ ಹವ್ಯಾಸವಿದ್ದ ಅವರಿಗೆ ಕಲಾವಿದರ ಬಗ್ಗೆ ಮೊದಲು ಕೆಟ್ಟ ಅಭಿಪ್ರಾಯವಿತ್ತು. ಆಗಾಗ ಮನೆಗೆ ಬರುತ್ತಿದ್ದ ಹಡಪದ, ಆ ಅಭಿಪ್ರಾಯ ತಪ್ಪೆಂದು ಮನದಟ್ಟು ಮಾಡಿಸಿದರು. ಕೆನ್ಸ್ಕೂಲ್ಗೆ ಸೇರುವಂತೆ ಸಲಹೆ ಕೊಟ್ಟಿದ್ದೂ ಅವರೇ.
ಕೆನ್ಸ್ಕೂಲ್ನಲ್ಲಿ ಐದು ವರ್ಷ ಡಿಪ್ಲೊಮಾ, ಎರಡು ವರ್ಷ ಆರ್ಟ್ ಮಾಸ್ಟರ್ ಕಲಿಕೆ ಮಾಡಿ ಎರಡರಲ್ಲೂ ಕ್ರಮವಾಗಿ ಮೊದಲ ಹಾಗೂ ಎರಡನೇ ರ್ಯಾಂಕ್ ಗಳಿಸಿದರು. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಡ್ರಾಯಿಂಗ್ ಮೇಷ್ಟ್ರು ಕೆಲಸ ಸಿಗಲು ಅಷ್ಟು ಸಾಕಾಯಿತು. ಅಲ್ಲಿ ಅವರು ಕೆಲಸ ಮಾಡಿದ್ದು ನಾಲ್ಕೇ ದಿನ. 1977ರಲ್ಲಿ ಕೆ.ಕೆ.ಹೆಬ್ಬಾರರು ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಬರೋಡಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರತಿಭಾವಂತರನ್ನು ಕಳುಹಿಸುವುದು ಕೂಡ ಅವುಗಳಲ್ಲಿ ಒಂದು. ಗುರು ತೋರಿದ ಹಾದಿಯಲ್ಲಿ ನಡೆದ ಮರಿಶಾಮಾಚಾರ್ ಕೈಲಿದ್ದ ಒಳ್ಳೆಯ ಸಂಬಳ ತರುವ ಡ್ರಾಯಿಂಗ್ ಮೇಷ್ಟ್ರು ಕೆಲಸ ಬಿಟ್ಟು 1978ರಲ್ಲಿ ಬರೋಡಕ್ಕೆ ಹೊರಟರು.
ಮುಂದೆ ಮರಿಶಾಮಾಚಾರ್ ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನ ಆಯೋಜಿಸುವ ಅಧಿಕಾರಿಯಾಗಿ 'ಕನ್ಫರ್ಮ್' ಆಗದ ಆ ಕೆಲಸದಲ್ಲಿ ಹದಿನಾರು ವರ್ಷ ದುಡಿದರು. 1995ರಲ್ಲಿ ಶಿಲ್ಪಕಲಾ ಅಕಾಡೆಮಿ ಆರಭಗೊಂಡಾಗ ಅಲ್ಲಿನ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು.
ಕಲಾಗ್ರಾಮದಂಥ ಮಹತ್ವದ ಕಲ್ಪನೆ ಸಾಕಾರಗೊಂಡಿದ್ದರಲ್ಲಿ ಮರಿಶಾಮಾಚಾರ್ ಶ್ರಮವಿತ್ತು. ಅದರ ಸಂಸ್ಥಾಪಕ ಸದಸ್ಯರಲ್ಲಿ ಅವರೂ ಒಬ್ಬರು.
ಹಳ್ಳಿಯಿಂದ ಬಂದ ವಿದ್ಯಾರ್ಥಿಗಳಿಗೆ ಕಲೆಯ ಅಧ್ಯಯನಕ್ಕೆ ಯೋಗ್ಯವಾದ ಅಕಾಡೆಮಿಕ್ ಪುಸ್ತಕಗಳನ್ನು ರಚಿಸಿದ್ದು ಮರಿಶಾಮಾಚಾರ್ ಮಾಡಿದ ಮಹತ್ವದ ಕೆಲಸ. ಬಹುತೇಕ ವಿದ್ಯಾರ್ಥಿಗಳಿಗೆ ಇಂದಿಗೂ ಅವು ಅಧ್ಯಯನ ಪರಿಕರಗಳಾಗಿವೆ.
'ನಿಮ್ಮದೇ ಶೈಲಿ ಬಳಸಿಕೊಳ್ಳಿ' ಎಂಬ ಹಡಪದ ಮೇಷ್ಟರ ಮಾತನ್ನು ಕಿವಿಗೆ ಹಾಕಿಕೊಂಡವರು ಮರಿಶಾಮಾಚಾರ್. ಪರೀಕ್ಷೆ ಸಮಯದಲ್ಲಿ ಮಂಡ್ಯದಲ್ಲಿ ಕಾಲುವೆಗೆ ಬಸ್ ಬಿದ್ದು ದುರಂತವಾಗಿತ್ತು. ಅದನ್ನೇ ವಸ್ತುವಾಗಿಟ್ಟುಕೊಂಡು ಅವರು ಚಿತ್ರ ಬರೆದರು. ಹಡಪದ ತುಂಬಾ ಮೆಚ್ಚಿದ್ದ ಆ ಚಿತ್ರವೇ ಕೆನ್ ಸ್ಕೂಲ್ನ ಡಿಪ್ಲೊಮಾದಲ್ಲಿ ಮೊದಲ ರ್ಯಾಂಕ್ ದಕ್ಕಿಸಿಕೊಟ್ಟಿತು. ಮುಂದೆ ಮಿನಿಯೇಚರ್ ಪೇಟಿಂಗ್, ತೊಗಲುಗೊಂಬೆ ಅಳವಡಿಸಿ ಚಿತ್ರಗಳನ್ನು ಬರೆಯತೊಡಗಿದ ಮರಿಶಾಮಾಚಾರ್, ಕಲಾ ಪರಿಚಾರಿಕೆಗೆ ನಿಂತ ಮೇಲೆ ಚಿತ್ರ ಬರೆಯುವುದು ಕಡಿಮೆಯಾಯಿತು.
ಅಕಾಡೆಮಿಯ ಪ್ರದರ್ಶನಾಧಿಕಾರಿಯಾಗಿ ಮರಿಶಾಮಾಚಾರ್ ಅನೇಕ ಶಿಬಿರ ಆಯೋಜಿಸಿದ್ದರು. ಎನ್.ಎಸ್.ಬೇಂದ್ರೆ ತರಹದ ಹೆಸರಾಂತ ಕಲಾವಿದ ಅವರ ಶಿಬಿರದ ಭಾಗವಾಗಿದ್ದರು.
ಮರಿಶಾಮಾಚಾರ್ ಅವರು 'ಚಿತ್ರಕಲಾ ಪ್ರಪಂಚ', `ಶಿಲ್ಪಕಲಾ ಪ್ರಪಂಚ', 'ಕಲಾಕೋಶ' ಸಂಪುಟಗಳು ,`ದೃಶ್ಯಕಲಾ', `ಸಮಕಾಲೀನ ಕಲೆ', `ಭಾರತದ ದೃಶ್ಯ ಕಲಾವಿದರು', `ಕಲಾ ಸಾಧಕ', ಕೆ.ಕೆ.ಹೆಬ್ಬಾರ್ ಅವರನ್ನು ಕುರಿತ `ಹಾಡುವ ರೇಖೆ' ಸೇರಿದಂತೆ ಹತ್ತಾರು ಕೃತಿಗಳನ್ನು ರಚಿಸಿದರು.
ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆದಾಗ ಮರಿಶಾಮಾಚಾರ್ ಹಳ್ಳಿಯ ಶಿಲ್ಪಿಗಳನ್ನು ಕರೆದು ಕ್ಯಾಂಪ್ ಮಾಡಿ, ಅವರೊಟ್ಟಿಗೆ ವಿಚಾರ ವಿನಿಮಯ ನಡೆಸಲು ಅನುವು ಮಾಡಿಕೊಟ್ಟರು. ಅಖಿಲ ಭಾರತ ಶಿಲ್ಪಕಲಾ ಶಿಬಿರಗಳು, ಮಿನಿಯೇಚರ್ ಶಿಬಿರಗಳು, ಸಣ್ಣ ಸಣ್ಣ ಶಿಲ್ಪಗಳನ್ನು ಮಾಡುವ ಮೂಲಕ ಮಾರುಕಟ್ಟೆ ದಕ್ಕಿಸಿಕೊಳ್ಳುವುದು ಇವೇ ಮೊದಲಾದ ಕೆಲಸಗಳನ್ನು ಶಿಲ್ಪಕಲಾ ಅಕಾಡೆಮಿಯ ಮೂಲಕ ಮಾಡಿದರು. ಶಿಲ್ಪ ಕಲಾವಿದರ ಮಾಲೆಯನ್ನು ಪ್ರಕಟಿಸಿದ್ದಲ್ಲದೆ, ಮೈಸೂರಿನ ಶಿಲ್ಪಿ ಸಿದ್ದಲಿಂಗ ಸ್ವಾಮಿಗಳ ಕುರಿತ ಕೃತಿಯನ್ನು ಸಂಪಾದಿಸಿದರು. ಹೆಬ್ಬಾರರ ಜೊತೆಗೆ ತಾವು ಕಳೆದ ಅಮೂಲ್ಯ ಕ್ಷಣಗಳನ್ನೂ ಬರಹ ರೂಪಕ್ಕೆ ಇಳಿಸಿದರು.
ಮನುಷ್ಯ ಮನುಷ್ಯನನ್ನು ತುಳಿಯುವ ಪ್ರಕ್ರಿಯೆನ್ನು ತೆರಿಗ್ರಾಫ್ ಮೂಲಕ ಹೋರಾಟವನ್ನಾಗಿ ಚಿತ್ರಿಸಿದ್ದು, ಎಚಿಂಗ್ ಮೂಲಕ ಜೆಂಕ್ಶೀಟ್ನಲ್ಲಿ ಬರಗಾಲದ ಚಿತ್ರ ಮೂಡಿಸಿದ್ದು, ಮುಂಬೈ ಮೇಲೆ ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಡಿಜಿಟಲ್ ಕಲಾಕೃತಿಯನ್ನು ರಚಿಸಿದ್ದು ಆಗಾಗ ಮರಿಶಾಮಾಚಾರ್ ಅವರೊಳಗಿನ ಕಲಾವಿದ ಜೀವತಳೆಯುತ್ತಿದ್ದುದಕ್ಕೆ ಉದಾಹರಣೆಗಳಾಗಿವೆ.
ತಾವು ಮೆಚ್ಚಿದ ಕೆ.ಕೆ. ಹೆಬ್ಬಾರ್, ಆರ್.ಎಂ. ಹಡಪದ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಮರಿಶಾಮಾಚಾರ್ ಅವರಿಗೆ 2007ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿಯೂ ಸಂದಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿ, ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳೂ ಅವರಿಗೆ ಸಂದಿದ್ದವು.
ಎನ್.ಮರಿಶಾಮಾಚಾರ್ 2013ರ ಏಪ್ರಿಲ್ 3ರಂದು ತಮ್ಮ 62ನೆಯ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಹತ್ತಿರದವರು ಪ್ರೀತಿಯಿಂದ 'ಮರಿ' ಎನ್ನುತ್ತಿದ್ದರು. ಅನೇಕರ ಪಾಲಿಗೆ `ಮೇಷ್ಟ್ರೇ' ಆಗಿದ್ದರು. ಕರ್ನಾಟಕದ ಕಲಾವಲಯದಲ್ಲಿ 'ಮರಿ' ಅವರದು ಹಿರಿ ಹೆಜ್ಜೆ.
On the birth anniversary of artist, teacher, writer and administrator N. Marishamachar
ಕಾಮೆಂಟ್ಗಳು