ಕೆ. ಎನ್. ಕೃಷ್ಣಮೂರ್ತಿ
ಕೆ. ಎನ್. ಕೃಷ್ಣಮೂರ್ತಿ
ವಿದ್ವಾನ್ ಕೆ. ಎನ್. ಕೃಷ್ಣಮೂರ್ತಿ ಅವರು ಮೃದಂಗ ಹಾಗೂ ಘಟಂ ವಾದನದಲ್ಲಿ ಪ್ರಖ್ಯಾತರಾಗಿದ್ದವರು.
ಕನ್ನಡ ನಾಡಿನಲ್ಲಿ ಪ್ರಸಿದ್ಧರಾದ ಕೃಷ್ಣಮೂರ್ತಿಯವರು 1926ರ ಮೇ 23ರಂದು ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ ಜನಿಸಿದರು. ಈ ಊರು ಹಲವಾರು ವಿದ್ವನ್ಮಣಿಗಳಿಗೆ ಜನ್ಮ ಕೊಟ್ಟ ಜಾಗ. ತಂದೆ ಕೆ.ಕೆ. ನಾರಾಯಣ ಅಯ್ಯರ್. ತಾಯಿ ಪಾರ್ವತಿ ಅಮ್ಮಾಳ್.
ಚಿಕ್ಕಂದಿನಿಂದಲೂ ಕೃಷ್ಣಮೂರ್ತಿ ಅವರಿಗೆ ಸಂಗೀತದಲ್ಲಿ, ಅದರಲ್ಲೂ ವಾದ್ಯಗಳತ್ತ ಒಲವು. ಪಾಲ್ಘಾಟ್ ಸಿ.ಕೆ. ಅಯ್ಯಮಣಿ, ಕೆ. ಕುಂಜುಮಣಿ ಅಯ್ಯರ್, ಟಿ.ಎಸ್.ಮಣಿ ಮತ್ತು ಬೆಂಗಳೂರಿನ ಎಂ.ಎಲ್. ವೀರಭದ್ರಯ್ಯನವರ ಬಳಿ ಮೃದಂಗ ವಾದನದ ಶಿಕ್ಷಣ ನಡೆಯಿತು. ನಂತರ ಆಸಕ್ತಿಯಿಂದ ಘಟಂ ಕಲಿತರು. ಮುಂದೆ ಘಟಂ ಕೃಷ್ಣಮೂರ್ತಿ ಎಂಬ ಹೆಸರಿನಿಂದಲೇ ಅವರು ಪ್ರಖ್ಯಾತರಾದರು.
ಕೃಷ್ಣಮೂರ್ತಿ ಅವರಿಗೆ 1952ರಲ್ಲಿ ಮೊದಲ ಬಾರಿಗೆ ಕಚೇರಿ ಮಾಡಿದ ಅನುಭವ ದೊರೆಯಿತು. ವೃತ್ತಿಪರರು, ಉದಯೋನ್ಮುಖರು ಎಲ್ಲರೊಡನೆಯೂ ಕಚೇರಿಯಲ್ಲಿ ಭಾಗಿಯಾದರು. ಮೂರು ತಲೆ ಮಾರಿನ ಸಂಗೀತಗಾರರಿಗೆ ಘಟಂ ಸಹಕಾರ ನೀಡಿದರು. ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಚೆಂಬೈ ವೈದ್ಯನಾಥ್ ಭಾಗವತರ್, ಟಿ. ಚೌಡಯ್ಯ, ಎಂ. ಬಾಲಮುರುಳಿ ಕೃಷ್ಣ, ರಾಧಾಜಯಲಕ್ಷ್ಮಿ, ಎಂ.ಎಲ್. ವಸಂತಕುಮಾರಿ, ಆರ್.ಕೆ.ಶ್ರೀಕಂಠನ್, ಟಿ.ಆರ್.ಮಹಾಲಿಂಗಂ, ಎನ್. ರಮಣಿ, ರಾಮನಾಡ್ ಕೃಷ್ಣನ್, ಕದ್ರಿ ಗೋಪಾಲನಾಥ್, ಸುಧಾ ರಘುನಾಥನ್, ಮ್ಯಾಂಡೋಲಿನ್ ಯು. ಶ್ರೀನಿವಾಸ್, ಮಧುರೈ ಸೋಮಸುಂದರಂ, ಮಧುರೆ ಟಿ.ಎನ್.ಶೇಷಗೋಪಾಲನ್, ಬಾಂಬೆ ಸಹೋದರಿಯರು, ಹೈದರಾಬಾದ್ ಸೋದರರು ಮುಂತಾದವರೂ ಸೇರಿದಂತೆ ಅನೇಕರಿಗೆ ಘಟಂ ಸಹವಾದನ ನೀಡಿದರು. ದೇಶ ವಿದೇಶಗಳಲ್ಲಿ ಇವರ ಕಾರ್ಯಕ್ರಮಗಳು ನಡೆದವು. ಮಲೇಶಿಯಾ, ಸಿಂಗಪೂರ್, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳ ಸಂಗೀತೋತ್ಸವಗಳಲ್ಲಿ ಭಾಗಿಯಾದರು.
ಕೆ. ಎನ್. ಕೃಷ್ಣಮೂರ್ತಿ ಅವರಿಗೆ ಕರ್ನಾಟಕ ಸರಕಾರದ ಕರ್ನಾಟಕ ಕಲಾಶ್ರೀ, ನಾದಜ್ಯೋತಿ ತ್ಯಾಗರಾಜ ಭಜನ್ ಸಭಾದಿಂದ ಕಲಾಜ್ಯೋತಿ, ಪರ್ಕಸಿವ್ ಆರ್ಟ್ ಸೆಂಟರಿನಿಂದ ಪಳನಿ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ ಮತ್ತು ಲಯ ಕಲಾ ನಿಪುಣ ಬಿರುದು, ಆರ್.ಕೆ. ಶ್ರೀಕಂಠನ್ ಪ್ರಶಸ್ತಿ, ತ್ಯಾಗರಾಜ ಗಾನಸಭಾದಿಂದ ಮತ್ತು ಮೂಕಾಂಬಿಕ ತಾಳವಾದ್ಯ ಸಂಗೀತ ಕಲಾಶಾಲೆಯಿಂದ ಕಲಾಭೂಷಣ, ಪಿಳ್ಳೆ ಗಾನಕಲಾ ಸಭಾದಿಂದ ಗಾನಕಲಾಚಂದ್ರ ಮುಂತಾದ ಪ್ರಶಸ್ತಿಗಳು ಸಂದವು. ಕೆ.ಎನ್.ಕೆ. ಸ್ಕೂಲ್ ಆಫ್ ಪರ್ಕಷನಸ್ ಮೂಲಕ ಬೆಂಗಳೂರು ಮತ್ತು ಲಂಡನ್ನಿನಲ್ಲಿ ಶಿಷ್ಯರಿಗೆ ಘಟಂ ತರಬೇತಿ ನೀಡಿದರು.
ಮಹಾನ್ ವಿದ್ವಾಂಸರಾಗಿದ್ದ ಕೆ. ಎನ್. ಕೃಷ್ಣಮೂರ್ತಿ ಅವರು 2011ರಲ್ಲಿ ಈ ಲೋಕವನ್ನಗಲಿದರು.
On the birth anniversary of great percussionist Vidwan K. N. Krishnamurthy
ಕಾಮೆಂಟ್ಗಳು