ಸೌಮ್ಯಾ ಸ್ವಾಮಿನಾಥನ್
ಡಾ. ಸೌಮ್ಯಾ ಸ್ವಾಮಿನಾಥನ್
ಡಾ. ಸೌಮ್ಯಾ ಸ್ವಾಮಿನಾಥನ್ ವೈದ್ಯಕೀಯ ಕ್ಷೇತ್ರದಲ್ಲಿನ ಮಹತ್ವದ ಸಾಧಕರಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರತಿಷ್ಠಿತ ಚೀಫ್ ಸೈಂಟಿಸ್ಟ್ ಹುದ್ದೆ ನಿರ್ವಹಿಸಿದ್ದರು.
ಭಾರತೀಯ ಹಸಿರು ಕ್ರಾಂತಿಯ ಪಿತಾಮಹರೆನಿಸಿರುವ ಡಾ. ಎಂ. ಎಸ್. ಸ್ವಾಮಿನಾಥನ್ ಅವರ ಪುತ್ರಿಯಾದ ಡಾ. ಸೌಮ್ಯಾ ಸ್ವಾಮಿನಾಥನ್ 1959ರ ಮೇ 2ರಂದು ಕುಂಭಕೋಣಂನಲ್ಲಿ ಜನಿಸಿದರು.
ಸೌಮ್ಯಾ ಅವರು ಭಾರತ, ಯುನೈಟೆಡ್ ಕಿಂಗ್ಡಂ ಮತ್ತು ಅಮೆರಿಕಗಳಲ್ಲಿ ತಮ್ಮ ವ್ಯಾಸಂಗ ತರಬೇತಿಗಳನ್ನು ನಡೆಸಿದರು. 2009 – 2011 ಅವಧಿಯಲ್ಲಿ ಇವರು ಯೂನಿಸೆಫ್, ಯು ಎನ್ ಡಿ ಪಿ, ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಜಂಟಿ ವಿಶಿಷ್ಟ ಕಾರ್ಯಕ್ರಮವಾದ ‘ಉಷ್ಣವಲಯದ ಕಾಹಿಲೆಗಳ’ ಕುರಿತಾದ ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳ ಪ್ರಧಾನ ಸಂಯೋಜಕಿಯಾಗಿದ್ದರು. ಇದಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವದ ಅನೇಕ ಅರೋಗ್ಯ ಪ್ರಾತಿನಿಧಿಕ ಸಂಸ್ಥೆಗಳ ಹಲವಾರು ಸಮಿತಿಗಳು ಮತ್ತು ಸಲಹಾ ಸಮಿತಿಗಳಲ್ಲಿ ಇವರು ಸಂಭಾವಿತ ಪ್ರಾತಿನಿಧ್ಯತೆ ಪಡೆದವರಾಗಿದ್ದಾರೆ.
2017ರಿಂದ 2019 ಅವಧಿಯಲ್ಲಿ ಸೌಮ್ಯಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳ ಅನುಷ್ಠಾನ ವಿಭಾಗದ ಉಪ ಮಹಾ ಪ್ರಧಾನ ನಿರ್ದೇಶಕರಾಗಿದ್ದರು. ಅದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕ ಹುದ್ಧೆಯ ನಂತರದ ಎರಡನೇ ಸ್ಥಾನವೆನಿಸಿದೆ. 2019ರಿಂದ 2022 ಅವಧಿಯಲ್ಲಿ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀಫ್ ಸೈಂಟಿಸ್ಟ್ ಹುದ್ದೆ ನಿರ್ವಹಿಸಿದ್ದರು.
ಮೂಲತಃ ಮಕ್ಕಳ ವೈದ್ಯೆಯಾದ ಸೌಮ್ಯಾ ಸ್ವಾಮಿನಾಥನ್ ಅವರು ಕ್ಷಯರೋಗ ಮತ್ತು ಎಚ್ಐವಿ ಕುರಿತಾದ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕಿ (ಐಸಿಎಂಆರ್) ಹಾಗೂ ಆರೋಗ್ಯ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದ ಸೌಮ್ಯಾ ಅವರು, ಚೆನ್ನೈನಲ್ಲಿರುವ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.
On the birthday of former Chief Scientist of WHO Dr. Soumya Swaminathan
ಕಾಮೆಂಟ್ಗಳು