ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಜುಳಾ ಗುರುರಾಜ್


 ಮಂಜುಳಾ ಗುರುರಾಜ್


ಮಂಜುಳಾ ಗುರುರಾಜ್ ನಮ್ಮ ನಾಡಿನ ಪ್ರಸಿದ್ಧ ಇನಿಧ್ವನಿ.

ಮಂಜುಳಾ ಗುರುರಾಜ್ ಹುಟ್ಟಿದ ದಿನ ಜೂನ್ 10.  ತಂದೆ ಡಾ. ಎಂ. ಎನ್. ರಮಣ.  ತಾಯಿ ಜಿ. ಸೀತಾಲಕ್ಷ್ಮಿ.  ವಿಜ್ಞಾನ ಪದವೀಧರೆಯಾದ ಮಂಜುಳಾ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ.

ಕರ್ನಾಟಕದ ಪ್ರಸಿದ್ಧ ಆರ್ಕೆಸ್ಟ್ರಾ ತಂಡವಾದ ಸೌಂಡ್ ಆಫ್ ಮ್ಯೂಸಿಕ್ - ಗುರು ಸಂಗೀತ ತಂಡದಿಂದ ಪ್ರಾರಂಭವಾದ ಮಂಜುಳಾ ಅವರ ಇನಿದನಿಯ ಪಯಣ ಬಹು ವಿಶಾಲವಾದದ್ದು.  ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಪ್ರಧಾನವಾಗಿ ಎದ್ದು ಕಾಣುವ ಸಾಧನಾ ಸಂಗೀತ ಶಾಲೆ ಮಂಜುಳಾ ಅವರ ಸಾಧನೆಗಳ ಪ್ರತಿಧ್ವನಿಯಂತೆ ಎಲ್ಲೆಲ್ಲೂ ಮಾರ್ದನಿಸುತ್ತಿದೆ.

ಅಂದಿನ ದಿನಗಳಲ್ಲಿ ಇಷ್ಟೊಂದು ಸಂಖ್ಯೆಯ ಸಿನಿಮಾಗಳಿರಲಿಲ್ಲ.  ಸಿನಿಮಾ ಧ್ವನಿ ಮುದ್ರಣವೆಂದರೆ ಮದರಾಸಿನಲ್ಲಿ ಹಲವು ದಿನಗಳವರೆಗೆ ಕಾಯಬೇಕಿತ್ತು.  ಧ್ವನಿಮುದ್ರಣಕ್ಕೆ ಇರುವ ಸೀಮಿತ ಸಮಯ ಮತ್ತು ನಿಯಮಿತ ಸೀಮಿತ ವ್ಯವಸ್ಥೆಗಳಲ್ಲಿ ಯಾರಿಗೂ ಹೊಸ ಪ್ರತಿಭೆಗಳನ್ನು ಹುಡುಕುವ ಹೆಚ್ಚು ವ್ಯವಧಾನಗಳಿರಲಿಲ್ಲ.  ಇಂತಹ ಸಮಯದಲ್ಲಿ  ಎಲ್ಲೆಲ್ಲೂ ಪ್ರಸಿದ್ಧಿ ಕಾಣುತ್ತಿದ್ದ ಆರ್ಕೆಸ್ಟ್ರಾ ತಂಡದ ಗಾಯನದಿಂದ ಚಿತ್ರಸಂಗೀತಗಾರರನ್ನು ಸೆಳೆದ ಮಂಜುಳಾ ಸುತ್ತ ಮುತ್ತಲೂ, ಒಳಗೆ ಸೇರಿದರೆ ಗುಂಡು, ಹೃದಯದಲಿ ಇದೇನಿದು ನದಿಯೊಂದು ಓಡಿದೆ, ಮ್ಯಾಲೆ ಕವ್ಕೊಂಡ ಮುಂಗಾರು ಮೋಡ  ಅಂತಹ ಹಾಡುಗಳಿಗೆ ಧ್ವನಿಯಾದರು.  ಇದನ್ನು ನಮ್ಮ ಕರ್ನಾಟಕದ ಗಾಯಕಿಯೇ ಹಾಡಿದ್ದಾರೆಯೇ ಎಂದು ಅಚ್ಚರಿ ಮೂಡಿಸುವಷ್ಟು ಪ್ರಖ್ಯಾತರಾದರು. 

ವ್ಯವಸ್ಥಿತ ವ್ಯಾಪಾರೀ ಸಿನಿಮಾ ಮಾಧ್ಯಮದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ.  ಇದನ್ನು ಸಶಕ್ತವಾಗಿ ಗಮನಿಸಿದ ಮಂಜುಳಾ ತಮ್ಮ ಧ್ವನಿಯನ್ನು ಕನ್ನಡ ಬಾರದ ಹೇರಳವಾದ ಚಲನ ಚಿತ್ರ ನಟಿಯರಿಗೆ ಡಬ್ಬಿಂಗ್ ಮಾಡುವುದರಲ್ಲಿ, ಅಯ್ಯೋ ಕನ್ನಡದಲ್ಲಿ ಸರಿಯಾಗಿ ವಾರ್ತೆಗಳನ್ನು ಓದುವವರು ಕೂಡಾ ಯಾರೂ ಇಲ್ಲವೇ ಎಂದು ದೂರದರ್ಶನದಲ್ಲಿ ಜಿಗುಪ್ಸೆ ಮೂಡಿದ ಸಂದರ್ಭಗಳಲ್ಲಿ ವಾರ್ತೆಗಳನ್ನು ಓದುವವರಾಗಿ, ಹಲವು ರೀತಿಯ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳ ಕ್ಯಾಸೆಟ್ಟುಗಳ ಅಂತರ್ಧ್ವನಿಯಾಗಿ ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಥನೀಯ ಸಾಧನೆಗಳನ್ನು ಮಾಡಿದರು.  ಕುಹೂ ಕುಹೂ  ಎಂಬಂತಹ ದೂರದರ್ಶನದ ಸಂಗೀತ ಕಾರ್ಯಕ್ರಮಗಳ ಮೂಲಕ ಸಂಗೀತ ಪ್ರಚಾರಕ್ಕೆ ವಿಸ್ತಾರ ತರುವುದರ ಜೊತೆಗೆ ಎಲ್ಲಾ ಪ್ರಮುಖ ಗಾಯಕ ಗಾಯಕಿಯರನ್ನೂ ಪ್ರೇಕ್ಷಕನ ಸಮೀಪಕ್ಕೆ ಕರೆತಂದು ಗೌರವ ತೋರಿದರು.

ಮಂಜುಳಾ ಅವರು ಬೆಳದಿಂಗಳ ಬಾಲೆ ಚಿತ್ರದಲ್ಲಿ ಅಘೋಚರ ಸ್ತ್ರೀ ಪಾತ್ರಕ್ಕೆ ಧ್ವನಿಯಾಗಿ ಇಡೀ ಚಿತ್ರಕ್ಕೆ ಶೋಭೆ ತಂದ ರೀತಿ ಅವಿಸ್ಮರಣೀಯವಾದದ್ದು.  ಎಂಭತ್ತರ ದಶಕದಿಂದ ಮೊದಲ್ಗೊಂಡು ಹತ್ತು ಹಲವು ಸಾಧನೆಗಳ ಮಧ್ಯದಲ್ಲಿ ಸುಮಾರು 2500ಕ್ಕೂ ಹೆಚ್ಚು ಸಿನಿಮಾ ಗೀತೆಗಳಿಗೂ 15000ಕ್ಕೂ ಹೆಚ್ಚು ವಿವಿಧ ರೀತಿಯ ಗೀತೆಗಳ ಕ್ಯಾಸೆಟ್ಟುಗಳಿಗೆ ಧ್ವನಿಯಾಗಿರುವುದು ಅವರ ಮಹತ್ಸಾಧನೆಯಾಗಿದೆ.  ಇವೆಲ್ಲವನ್ನೂ ಮೀರಿದಂತದ್ದು ಸಂಗೀತ ಕಲಿಯಲು ಆಸಕ್ತರಿಗಾಗಿ ಅವರು ಎಲ್ಲೆಲ್ಲೂ ನಿರ್ಮಿಸಿದ ಸಾಧನಾ ಸಂಗೀತ ಶಾಲೆಗಳು.  ಅವರ ಹಲವು ಗೀತೆಗಳ ಗಾಯನಕ್ಕೆ ರಾಜ್ಯಪ್ರಶಸ್ತಿಗಳು, ಅಗಾಧ ಸಾಧನೆಗೆ ಹಲವಾರು ಗೌರವಗಳೂ ಸಂದಿವೆ.

ಇತ್ತೀಚಿಗೆ ಅವರು ಹೊಸ ರೀತಿಯ ವಾದ್ಯಗೋಷ್ಟಿಗಳನ್ನು ಬೃಹತ್ ಜನಸ್ತೋಮದ ಎದುರು ಪ್ರಸ್ತುತಪಡಿಸುವ ಕಾರ್ಯಕ್ರಮಗಳನ್ನು ಆಗಾಗ್ಗೆ ನಡೆಸಿದ್ದಾರೆ.

On the birth day of our popular singer Manjula Gururaj 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ