ವಿಶುಕುಮಾರ್
ವಿಶುಕುಮಾರ್
ವಿಶುಕುಮಾರ್ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ಸಕ್ರಿಯರಾಗಿದ್ದವರು.
ವಿಶುಕುಮಾರ್ 1935ರ ಜೂನ್ 15ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ದೋಗ್ರ ಪೂಜಾರಿ. ತಾಯಿ ಚಂದ್ರಾವತಿ. ಮಂಗಳೂರಿನಲ್ಲಿ ಅವರ ಪ್ರಾರಂಭಿಕ ಶಿಕ್ಷಣ ನಡೆಯಿತು. ಎಸ್ಎಸ್ಎಲ್ಸಿ ಯ ನಂತರ ಮುಜರಾಯಿ ಇಲಾಖೆ ಸೇರಿದಂತೆ ಹಲವಾರು ಸರಕಾರಿ ಉದ್ಯೋಗದಲ್ಲಿದ್ದರು ಕಡೆಗೆ ಸ್ವಯಂನಿವೃತ್ತಿ ಪಡೆದು ಸ್ವತಂತ್ರ ಜೀವನ ನಡೆಸಲು ಪ್ರಾರಂಭಿಸಿದರು.
ವಿಶುಕುಮಾರ್ ಹೈಸ್ಕೂಲಿನಲ್ಲಿದ್ದಾಗಲೇ ಕತೆ, ಕವನ, ನಾಟಕಗಳನ್ನು ಬರೆಯತೊಡಗಿದ್ದು, ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಇವರು ಹಿಂದು – ಮುಸ್ಲಿಂ ಪ್ರೇಮ ಪ್ರಕರಣದ ಹಿನ್ನಲೆಯಲ್ಲಿ ರಚಿಸಿದ ಕಾದಂಬರಿ ಕರಾವಳಿ (1966). ಇದು 'ಕನ್ನಡಪ್ರಭ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗತೊಡಗಿದಾಗ ವಿವಾದಕ್ಕೆಡೆಮಾಡಿಕೊಟ್ಟು ಪ್ರತಿಭಟನೆ ಪ್ರಾರಂಭವಾಗಿದ್ದರಿಂದ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ಛಲ ಬಿಡದ ವಿಶುಕುಮಾರ್ ಪುಸ್ತಕ ರೂಪದಲ್ಲಿ (1971) ಪ್ರಕಟಿಸಿದ್ದಲ್ಲದೆ ತಮ್ಮದೇ ನಿರ್ದೇಶನದಲ್ಲಿ ಚಲನಚಿತ್ರವನ್ನು ನಿರ್ಮಿಸಿದರು. ಪುನ: ಪ್ರತಿಭಟನೆಗಳು ನಡೆದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟು ಕರ್ನಾಟಕದ ಇತರೆಡೆ ಪ್ರದರ್ಶನಗೊಂಡಿತು. ಚಲನಚಿತ್ರ ರಂಗದಲ್ಲಿ ಆಸಕ್ತರಾಗಿದ್ದ ವಿಶುಕುಮಾರ್ ಚಲನಚಿತ್ರ ನಿಯತಕಾಲಿಕ ಚಿತ್ರದೀಪ ಹಾಗೂ ಸಂಜೆವಾಣಿ ದಿನಪತ್ರಿಕೆಯ ಸಂಪಾದಕರಾಗಿಯೂ ಕೆಲಕಾಲ ಕಾರ್ಯ ನಿರ್ವಹಿಸಿದರು. ಸಮಕಾಲೀನ ರಾಜಕೀಯವನ್ನು ವಸ್ತುವಾಗಿಸಿಕೊಂಡು ವಿಡಂಬನೆಯ ಮೂಲಕ ರಚಿಸಿದ ನಾಟಕ ‘ಡೊಂಕು ಬಾಲದ ನಾಯಕರು’ (1982). ಇದರ ಮೊನಚು ಭಾಷೆಯನ್ನು ಅರಗಿಸಿಕೊಳ್ಳಲಾಗದ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರ ಆದೇಶದಂತೆ ಕೆಲ ಸಂಭಾಷಣೆಗಳಿಗೆ ಕತ್ತರಿ ಹಾಕಬೇಕಾಯಿತು. ಆದರೂ ಬಹು ಯಶಸ್ವಿ ಎನಿಸಿದ ಈ ನಾಟಕವು ಬೆಂಗಳೂರಿನಲ್ಲಲ್ಲದೆ ಮಂಗಳೂರು, ಕಾಸರಗೋಡು, ಮೈಸೂರು, ಬಳ್ಳಾರಿ, ಕಲ್ಬುರ್ಗಿ ಮುಂತಾದಡೆಗಳಲ್ಲಿ ಅನೇಕ ಪ್ರದರ್ಶನಗಳನ್ನು ಕಂಡಿತು.
ವಿಶುಕುಮಾರ್ ಬರೆದ ಕಾದಂಬರಿಗಳು ಕರಾವಳಿ, ಮದರ್, ವಿಪ್ಲವ, ಕಾಮುಕರು, ಕಪ್ಪು ಸಮುದ್ರ, ಹಂಸಕ್ಷೀರ, ಕರ್ಮ, ಭೂಮಿ, ಈ ಪರಿಯ ಬದುಕು, ಭಟಕಳದಿಂದ ಬೆಂಗಳೂರಿಗೆ, ಮಿಯಾಂವ್ ಕಾಮತ್, ಪ್ರಜೆಗಳು – ಪ್ರಭುಗಳು, ನೆತ್ತರ ಗಾನ, ಭಗವಂತನ ಆತ್ಮ ಕಥೆ, ಗಗನಗಾಮಿಗಳು ಮುಂತಾದವು. ಇವುಗಳಲ್ಲಿ ಕರಾವಳಿ ಅಖಂಡ ಬ್ರಹ್ಮಚಾರಿಗಳು, ಮದರ್ ಮತ್ತು ಕೋಟಿ ಚನ್ನಯ್ಯ ಚಲನಚಿತ್ರಗಳಾಗಿವೆ. ತುಳು ಭಾಷೆಯ ಕೋಟಿ ಚನ್ನಯ್ಯ ಚಲನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿತು.
ವಿಶುಕುಮಾರ್ ರಚಿಸಿದ ನಾಟಕಗಳಲ್ಲಿ ಡೊಂಕುಬಾಲದ ನಾಯಕರು, ಪ್ರಜೆಗಳು – ಪ್ರಭುಗಳು, ಹೆಗಲಿಗೆ ಹೆಗಲು, ಕೋಟಿ ಚನ್ನಯ್ಯ, ತರಂಗರಂಗ, ಅಂತರಂಗ, ಈ ಗಂಡಸರು ಮುಂತಾದವುಗಳು ಸೇರಿವೆ.
ಇವರು ಬರೆದ ಅನೇಕ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲ ಕಥೆಗಳು ‘ಕುಸುಮ ಕೀರ್ತನ’ಎಂಬ ಸಂಕಲನದಲ್ಲಿ ಸೇರಿದೆ.
ವಿಶುಕುಮಾರ್ 1986ರ ಅಕ್ಟೋಬರ್ 4ರಂದು ನಿಧನರಾದರು.
Writer and film director Vishukumar
ಕಾಮೆಂಟ್ಗಳು