ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ನೀಲಾ


 ಕೆ. ನೀಲಾ


ಕೆ. ನೀಲಾ ಅವರು ಸ್ತ್ರೀಪರ ಹಾಗೂ ಬಡ ಜನರಪರ ಹೋರಾಟದ ಧ್ವನಿಯಾಗಿ, ಅಂಕಣಗಾರ್ತಿಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.

ನೀಲಾ ಅವರು 1966ರ ಜೂನ್  2ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನೀಲಾ ಅವರ ಅನೇಕ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಾ ಬಂದಿವೆ. 

ನೀಲಾ ಅವರು ಹಲವು ತೆರದಲ್ಲಿ ಬರಹಗಳನ್ನು ಮೂಡಿಸುತ್ತಾ ಬಂದಿದ್ದಾರೆ.  ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಅವರು ಬರೆದ 'ಬದುಕು ಬಂದೀಖಾನೆ' ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ. ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ಕಥಾ ಸಂಕಲನ ಹಾಗೂ  ರೈಲು ಚಿತ್ರಗಳು ಅಂಚಿನಲ್ಲಿ  ಪ್ರವಾಸ ಕಥನ ಪ್ರಕಟಿಸಿದ್ದಾರೆ.  ನೆಲದ ಪಿಸಿಮಾತು, ನೆಲದ ನಂಟು, ಬಾಳ ಕೌದಿ   ನೀಲಾ ಅವರ ಅಂಕಣ ಬರಹಗಳು. ಕರುಳಿರಿಯುವ ನೋವು ಪದವಿ ಪಠ್ಯಪುಸ್ತಕದಲ್ಲಿ ಸೇರಿದೆ.  

ನೀಲಾ ಅವರು ವರದಕ್ಷಿಣೆಗಾಗಿ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ ಮುಂತಾದ ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದವರು.  ಹಲವು ನಿಟ್ಟಿನಲ್ಲಿ ಸಮಾಜವನ್ನು ಒಂದುಗೂಡಿಸಿ ಜನಪರ ಹೋರಾಟ ನಡೆಸುತ್ತಾ ಬಂದವರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿಯಲ್ಲಿ ಸಾವಿರಾರು ಕೂಲಿ ಕಾರ್ಮಿಕರ ಕೈಗೆ ಉದ್ಯೋಗ ಕೊಡಿಸಿ ಕೂಡಾ ಅವರು ಹೆಸರಾಗಿದ್ದಾರೆ.

ನೀಲಾ ಅವರ ಕೊಂದಹರುಳಿದರೆ ಕತೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿ ಪುರಸ್ಕಾರ, ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ, ಸಂದಿದೆ. ಮುನ್ನೂರು ಪ್ರತಿಷ್ಠಾನದ ಅಮ್ಮ ಪ್ರಶಸ್ತಿ(2009), ಪ್ರಜಾವಾಣಿ ದೀಪಾವಳಿ ಸಂಭ್ರಮದ ಕಥಾಸ್ಪರ್ಧೆಯಲ್ಲಿ ’ತಿಪ್ಪೆಯನರಸಿ’ ಕತೆಗೆ ದ್ವಿತಿಯ ಬಹುಮಾನ (2000),  ಶ್ರೀಮತಿ ಯಶೋಧಾ ರಾಗೌ ಟ್ರಸ್ಟ್ ಮೈಸೂರು ವತಿಯಿಂದ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ(2011), ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ,  ಸಾಮಾಜಿಕ ಸೇವೆಗಾಗಿ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ (2019) ಮುಂತಾದ ಹಲವಾರು ಗೌರವಗಳು ನೀಲಾ ಅವರಿಗೆ ಸಂದಿವೆ.

ನೀಲಾ ಅವರು ಬೇಲೂರಿನ ಉರಿಲಿಂಗ ಪೆದ್ದಿ ಟ್ರಸ್ಟ್ ನಡೆಸುವ  ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ( 2012) ಮತ್ತು ಬೀದರ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ (2013) ಅಧ್ಯಕ್ಷತೆ ವಹಿಸಿದ್ದರು. ನೀಲಾ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.

ಕೆ. ನೀಲಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು

On the birth day of activist and writer K. Neela 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ