ಸಿ. ಜಿ. ಕೃಷ್ಣಸ್ವಾಮಿ
ಸಿ. ಜಿ. ಕೃಷ್ಣಸ್ವಾಮಿ
ರಂಗಭೂಮಿಯಲ್ಲಿ ಸಿ.ಜಿ.ಕೆ ಎಂಬುದು ವಿಶಿಷ್ಟತೆಗೆ ಹೆಸರು. ರಂಗಭೂಮಿಯ ಮುಖೇನ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದವರು ಸಿ. ಜಿ. ಕೃಷ್ಣಸ್ವಾಮಿ.
ಸಿ.ಜಿ. ಕೃಷ್ಣಸ್ವಾಮಿ 1950ರ ಜೂನ್ 27ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಗೋವಿಂದನಾಯ್ಕ ಮತ್ತು ತಾಯಿ ತಿಮ್ಮಾಜಮ್ಮ. ಸಿ.ಜಿ.ಕೆ ಅವರ ಶಾಲಾ ವಿದ್ಯಾಭ್ಯಾಸ ಮಂಡ್ಯದಲ್ಲಿ ನಡೆಯಿತು. ನ್ಯಾಷನಲ್ ಕಾಲೇಜು ಮತ್ತು ಸೆಂಟ್ರಲ್ ಕಾಲೇಜುಗಳಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಅರ್ಥಶಾಸ್ತ್ರ ಪದವಿ ಪಡೆದರು.
ಸಿ.ಜಿ. ಕೆ ಅವರು ಉದ್ಯೋಗಕ್ಕಾಗಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ಐಸೆಕ್ ಸೇರಿ ನಂತರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆದರು.
ಸಿ.ಜಿ.ಕೆ ಅವರು ಹಲವಾರು ಸವಾಲುಗಳ ನಡುವೆಯೂ ಬದುಕು ರೂಪಿಸಿಕೊಂಡವರು. ಪೋಲಿಯೋ ಪೀಡಿತರಾದ ಸಿ.ಜಿ.ಕೆ ಅವರು ತಮ್ಮ ದೈಹಿಕ ನ್ಯೂನತೆಯನ್ನು ಎಂದೂ ಮನಸ್ಸಿಗೆ ಹರಿಯಬಿಡದೆ ರಂಗತಜ್ಞರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಮಹಾನ್ ಸಂಘಟಕರಾಗಿ ಬೆಳೆದರು. ವಿದ್ಯಾರ್ಥಿ ದೆಸೆಯಿಂದಲೇ ಮುಂದಾಳತ್ವ ವಹಿಸುತ್ತಿದ್ದ ಅವರಿಗೆ ಎಲ್ಲಕ್ಕೂ ಮುನ್ನುಗ್ಗುವ ಛಾತಿ ಇತ್ತು. ಮೂರು ದಶಕಗಳ ಕಾಲ ನಾಟಕರಂಗದ ಅಸಾಧ್ಯಗಳನ್ನೆಲ್ಲಾ ಸಾಧ್ಯವಾಗಿಸಿ ಲಕ್ಷಾಂತರ ನಾಟಕ ಪ್ರೇಕ್ಷಕರನ್ನು ರಂಗಭೂಮಿ ಕಡೆಗೆ ಸೆಳೆದ ಅಸಾಮಾನ್ಯ ರಂಗಕರ್ಮಿಯವರು.
ಸಿ.ಜಿ.ಕೆ ಅವರು ತಾವೇ ಬರೆದು ನಿರ್ದೇಶಿಸಿದ ನಾಟಕಗಳು ಹಲವಾರು. ಬೆಲ್ಚಿ, ಭಾರತದರ್ಶನ, ಸೈಕ್ಲೋನ್, ಪಂಚತಾರ, ಮೇಡೇ, ಅಲ್ಲೇ ಇದ್ದೋರು, ದೌಡ್ಗಾಂ, ದೇವರ ಮುಂದೆ ಕಾದು ಕುಂತ ಬಸವ, ಒಡಲಾಳ (ದೇವನೂರು ಮಹಾದೇವರ ನೀಳ್ಗತೆ ಆಧಾರಿತ), ಅಬೋಲಿನ (ಯಶವಂತ ಚಿತ್ತಾಲರ ಕಥೆಯಾಧಾರ), ಕಳ್ಳಿಯಲ್ಲಿ ಕೆಂಪು ಹೂವು (ಕೇಶವರೆಡ್ಡಿ ಹಂದ್ರಾಳರ ಸಣ್ಣಕಥೆಯಾಧಾರ) ಮುಂತಾದುವುಗಳಿಗೆ ನಾಟಕರೂಪ ನೀಡಿ ರಂಗದ ಮೇಲೇರಿಸಿದರು. ಸಿ.ಜಿ. ಕೆ ಅವರು ನಿರ್ದೇಶಿಸಿದ ನಾಟಕಗಳು ಒಡಲಾಳ, ಮಹಾಚೈತ್ರ, ಸುಲ್ತಾನ ಟಿಪ್ಪು, ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಅಂಬೇಡ್ಕರ್, ಯಯಾತಿ, ಶೇಕ್ಸ್ಪಿಯರನ ಸ್ವಪ್ನನೌಕೆ, ಜ್ಯೂಲಿಯಸ್ ಸೀಸರ್, ತುಘಲಕ್, ಕುಸುಮಬಾಲೆ, ವೈಶಂಪಾಯನ ತೀರ, ರುಡಾಲಿ, ಚಕೋರಿ, ಒಥೆಲೋ, ಶೋಕಚಕ್ರ, ದಂಡೆ, ಇಗೋ ಮುಗಿಲು ಅಗೋಪಂಜರದವರೆಗೆ ಮುಂತಾದವು.
ಸಿ. ಜಿ. ಕೃಷ್ಣಸ್ವಾಮಿ ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರ ಜವಾಬ್ದಾರಿ, ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು. ಅವರ ಆತ್ಮವೃತ್ತಾಂತ ‘ಕತ್ತಲೆ ಬೆಳದಿಂಗಳೊಳಗೆ’ ಪ್ರಕಟಗೊಂಡಿದೆ.
ಸಿ.ಜಿ. ಕೆ ಅವರು ಶರೀಫರನ್ನು ಕುರಿತು ‘ನಡಿಯೋ ದೇವರ ಚಾಕರಿಗೆ’, ಅಲ್ಲಮನನ್ನು ಕುರಿತು ‘ಅಲ್ಲಮನಿಗೆ ನಮಸ್ಕಾರ’ ರಂಗಕ್ಕೇರಿಸಲು ಸಿದ್ಧತೆ ನಡೆಸಿದ್ದರು. ಲಿಂಗೈಕ್ಯ ಮರುಳು ಸಿದ್ಧರ ಸಾಕ್ಷ್ಯಚಿತ್ರ ತಯಾರಿಸಲು ನಾಗತಿಹಳ್ಳಿ ಚಂದ್ರಶೇಖರರೊಡನೆ ಸಿರಿಗೆರೆಗೆ ಆಗಮಿಸಿದ್ದ ಸಿ.ಜಿ.ಕೆ. ತೀವ್ರ ಹೃದಯಾಘಾತಕ್ಕೊಳಗಾಗಿ ಎಲ್ಲವನ್ನೂ ಇದ್ದಲ್ಲಿ ಇದ್ದಂತೆಯೇ ಬಿಟ್ಟು 2006ರ ಜನವರಿ 11ರಂದು ಈ ಲೋಕದಿಂದ ಹೊರಕ್ಕೆ ನಡೆದೇ ಬಿಟ್ಟರು.
On the birth anniversary of great theatre personality C. G. Krishnaswamy
ಕಾಮೆಂಟ್ಗಳು