ಶಂಕರ ದೇವಾಡಿಗ
ಉಳ್ಳೂರು ಶಂಕರ ದೇವಾಡಿಗ
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ನಿರ್ವಹಣೆಯಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ವು ಕಾಲದಿಂದ ಪ್ರಸಿದ್ಧರಾದವರು ಉಳ್ಳೂರು ಶಂಕರ ದೇವಾಡಿಗರು.
ಶಂಕರ ದೇವಾಡಿಗ ಅವರು 1969ರ ಜೂನ್ 7ರಂದು ಜನಿಸಿದರು.
ಕುಂದಾಪುರ ತಾಲೂಕಿನ 11ನೇ ಉಳ್ಳೂರಿನ ಚಂದ್ರಾವತಿ ಮತ್ತು ನಾರಾಯಣ ದೇವಾಡಿಗರ ಒಂಬತ್ತು ಮಂದಿ ಮಕ್ಕಳಲ್ಲಿ ಮೂರನೆಯವರಾದ ಶಂಕರ ದೇವಾಡಿಗ ಅವರು ಪ್ರಾಥಮಿಕ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಮೊದಲು ಆಯ್ಕೆ ಮಾಡಿಕೊಂಡಿದ್ದು ಹೊಲಿಗೆ ವೃತ್ತಿಯನ್ನು. ತಮ್ಮ ಕಸಬಿನೊಂದಿಗೆ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆ ಹಾಗೂ ನರ್ತನವನ್ನು ಕಲಿತು ತಮ್ಮ 15ನೇ ವಯಸ್ಸಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ, ಕೀರ್ತಿಶೇಷ ಮುತ್ತಯ್ಯ ಹೆಗ್ಡೆಯವರ ಯಜಮಾನಿಕೆಯಲ್ಲಿ ನಿರಂತರ ಒಂಬತ್ತು ವರ್ಷಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದರು.
ಶಂಕರ ದೇವಾಡಿಗರು ಸಾಂಪ್ರದಾಯಿಕ ಯಕ್ಷಗಾನ ಚೌಕಟ್ಟಿನ ಒಳಗೆ ಹಂತಹಂತವಾಗಿ ಬೆಳೆದು ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡರು. ಆ ಬಳಿಕ ಶಿರಸಿ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಕಳೆದ 12 ವರ್ಷಗಳಿಂದ ಕಲಾಸೇವೆಗೈಯುತ್ತಿದ್ದಾರೆ.
ಸರಳ, ಸಜ್ಜನಿಕೆಯವರಾದ ಶಂಕರ ದೇವಾಡಿಗರು ತೆರೆಮರೆಯ ಕಾಯಿಯಂತಿರುವ ನಿರಂತರ ಹಸನ್ಮುಖೀ ಹಾಗೂ ಚುರುಕಿನ ಕಲಾವಿದ. ಪೌರಾಣಿಕ ಸತ್ವಗಳನ್ನು ಮೈಗೂಡಿಸಿಕೊಂಡು ರಂಗಸ್ಥಳದಲ್ಲಿ ಹಿತಮಿತವಾಗಿ ಪ್ರಸಂಗದ ಮೌಲ್ಯಗಳನ್ನು ಎತ್ತಿಹಿಡಿದು ಅಭಿನಯಿಸುವ ಅವರ ಸುಭದ್ರೆ, ತಾರಾವಳಿ, ಮಾಲಿನಿ, ಚಂದ್ರಾವಳಿ, ಚಿತ್ರಾಂಗದೆ, ಸೀತೆ, ದಮಯಂತಿ ಮುಂತಾದ ಪಾತ್ರಗಳು ಯಶಸ್ವೀ ಪ್ರಸ್ತುತಿಗಳೆನಿಸಿವೆ. ರಂಗಪಂಚಮಿಯ ಶಶಿರೇಖೆ, ಪ್ರತಿಜ್ಞಾ ಪಲ್ಲವಿಯ ಬೆಳ್ಳಿ, ನೀಲ ಮೇಘ ಶ್ಯಾಮದ ನೀಲವೇಣಿ, ಶಿವಾನಿ ಭವಾನಿಯ ಶಿವಾನಿ, ಸಾವನಿ-ಪಾವನಿಯಲ್ಲಿ ಹಾಸ್ಯಪಾತ್ರವಾದ ಸರಸಿ, ಅಗ್ನಿಚರಿತ್ರಾದ ಲಕುಮಿ, ನಾಗವಲ್ಲಿಯ ಪಂಚಮಿ, ಶಿವರಂಜನಿಯ ನೇತ್ರಾ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿ ಹೊಸ ಕಾಲದ ಪ್ರಸಂಗಗಳ ಪಾತ್ರಗಳಿಗೂ ತಾವು ಸೈ ಎಂದು ತೋರಿಸಿಕೊಟ್ಟಿದ್ದಾರೆ.
ಜಲವಳ್ಳಿ ವೆಂಕಟೇಶ್ವರ ರಾವ್, ಚಿಟ್ಟಾಣಿ ರಾಮಚಂದ್ರ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಬಳ್ಕೂರು ಕೃಷ್ಣ ಯಾಜಿ, ಸುಬ್ರಹ್ಮಣ್ಯ ಧಾರೇಶ್ವರ, ಭಾಸ್ಕರ ಜೋಶಿ, ರಾಮ ನಾಯಿರಿ, ಗೋಪಾಲ ಆಚಾರಿ, ಕುಂಜಾಲು ರಾಮಕೃಷ್ಣ, ಮೂರೂರು ವಿಷ್ಣು ಭಟ್ ಮುಂತಾದ ಮೇರು ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದು ಶಂಕರ ದೇವಾಡಿಗರ ಹೆಮ್ಮೆಯ ಅನುಭವ. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಲು ಇಚ್ಛಿಸುವ ಇವರು ಭಾಗವತ ರಾಘವೇಂದ್ರ ಮಯ್ಯ ಮತ್ತು ಸುರೇಶ್ ಶೆಟ್ಟರೊಂದಿಗೆ ಅತಿ ಹೆಚ್ಚು ತಿರುಗಾಟ ಪೂರೈಸಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ಬಹಳ ದೊಡ್ಡ ಪರಂಪರೆ ಯಿದೆ. ಹಿಮ್ಮೇಳ-ಮುಮ್ಮೇಳಗಳ ಸಾಮರಸ್ಯ, ಕಲೆ-ಕಲಾವಿದರ ಸಾಂಗತ್ಯ, ಸಾಹಿತ್ಯ - ಪೂರಕಾಂಶ ಗಳ ಸಂತುಲನ, ರಂಗಸ್ಥಳ ಮತ್ತು ಪ್ರೇಕ್ಷಕರ ಅರ್ಥಪೂರ್ಣವಾದ ಹೃದಯ ಸಂವಾದಗಳಿದ್ದಾಗ ಮಾತ್ರ ಈ ಕಲೆಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಶಂಕರ ದೇವಾಡಿಗರ ಖಚಿತ ಅಭಿಪ್ರಾಯ. ಕೊನೆತನಕ ಕಲಾಸೇವೆಯಲ್ಲಿ ತೊಡಗಿರಬೇಕೆನ್ನುವುದು ಇವರ ಹೃದಯದ ಹಂಬಲ.
ಶಂಕರ ದೇವಾಡಿಗರು ಪ್ರೇಕ್ಷಕರ ಮೆಚ್ಚುಗೆಯ ನುಡಿಗಳೇ ತಮಗೆ ಬಹುದೊಡ್ಡ ಗೌರವ ಎನ್ನುತ್ತಾರೆ. ತನ್ನ ಹುಟ್ಟೂರು ಉಳ್ಳೂರಿನಲ್ಲಿ ತುಂಬು ಅವಿಭಕ್ತ ಕುಟುಂಬದೊಂದಿಗೆ ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರೊಂದಿಗೆ ಸಂತೃಪ್ತ ಸಂಸಾರಿಯಾಗಿರುವ ಇವರು 2014 ವರ್ಷದಲ್ಲಿ ಉಡುಪಿಯ ಪಿ.ಪಿ.ಸಿ. ಸಭಾಂಗಣದಲ್ಲಿ ತಮ್ಮ ಕಲಾಸೇವೆಯ ರಜತ ಸಂಭ್ರಮದ ಪ್ರಯುಕ್ತ ಸಮ್ಮಾನ ಸ್ವೀಕರಿಸಿದ್ದಾರೆ.
ಮಾಹಿತಿ ಕೃಪೆ: ಬಯಲಾಟ.ಕಾಮ್
ಚಿತ್ರಕೃಪೆ:. ರಾಮ್ ನರೇಶ್ ಮಂಚಿ Ram Naresh Manchi Sir
On the birth day of Yakshagana artiste Uluru Shankara Devadiga
ಕಾಮೆಂಟ್ಗಳು