ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯು. ಜಿ. ಕೃಷ್ಣಮೂರ್ತಿ


 ಯು. ಜಿ. ಕೃಷ್ಣಮೂರ್ತಿ


"ನನ್ನಲ್ಲಿ ನಿಮಗೆ ಕೊಡಲಿಕ್ಕೆ ಏನೂ ಇಲ್ಲ, ನಾನು ಯಾವುದನ್ನೂ ಬೋಧಿಸುವುದಿಲ್ಲ, ಯಾವುದೇ ಸಾಧನೆಗಳೆಂಬುದೇ ಸುಳ್ಳು ಮೋಸದ ಸರಕುಗಳು... " ಎಂದು ಹೇಳುತ್ತಿದ್ದವರದೂ ಒಂದು ಅರಿತ ಜ್ಞಾನ ಎಂದು ಅನುಸರಿಸಿ ಮೆಚ್ಚುತ್ತಿದ್ದ, ಇಂದೂ ತಲೆದೂಗುತ್ತಿರುವ ಅನೇಕ ಪ್ರಾಜ್ಞರು ಈ ಲೋಕದಲ್ಲಿ ಇದ್ದಾರೆ. ಹಾಗೆ ನುಡಿಯುತ್ತಿದ್ದವರು ಯು. ಜಿ. ಕೃಷ್ಣಮೂರ್ತಿ.

ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ 1918ರ ಜುಲೈ 9ರಂದು ಆಂಧ್ರದ ಮಸುಲಿಪಟ್ನಂ ಬಳಿಯ ಗುಡಿವಾಡ ಎಂಬ ಹಳ್ಳಿಯಲ್ಲಿ ಜನಿಸಿದರು. ತಾಯಿ ಇವರು  ಹುಟ್ಟಿದ ಕೆಲವೇ ದಿನದಲ್ಲಿ ತೀರಿಕೊಂಡರು. ತಂದೆ ಮರು ಮದುವೆ ಮಾಡಿಕೊಂಡ. ಮಗು ತಾತ, ಅಜ್ಜಿಯರ ಜೊತೆ ಬೆಳೆಯಿತು. ವಕೀಲರಾಗಿದ್ದ ತಾತ ಮಗುವನ್ನು  ರಾಜಕುಮಾರನಂತೆ ಬೆಳೆಸಿದರು. ಸ್ವತಃ ಥಿಯೊಸಾಫಿಸ್ಟರಾಗಿದ್ದ ಅವರಿಗೆ ಅನ್ನಿ ಬೆಸೆಂಟ್‌, ಕರ್ನಲ್‌ ಆಲ್ಕಾಟ್‌, ಜಿಡ್ಡು ಕೃಷ್ಣಮೂರ್ತಿ ಮತ್ತು ಥಿಯೊಸಾಫಿಕಲ್‌ ಸೊಸೈಟಿಯ ಇತರ ಪ್ರಮುಖರ ನಿಕಟ ಪರಿಚಯವಿತ್ತು. ಬಾಲ್ಯದಲ್ಲಿ ಅವರೆಲ್ಲರ ಸಂಪರ್ಕದಲ್ಲಿ ಬೆಳೆದ ಯು.ಜಿ. ಮುಂದೆ ಅನೇಕ ವರ್ಷ ಮದರಾಸಿನ ಅಡ್ಯಾರಿನಲ್ಲಿರುವ ಥಿಯೊಸಾಫಿಕಲ್‌ ಸೊಸೈಟಿಯಲ್ಲೇ ಕಳೆದರು. ಯು.ಜಿ. ಕೃಷ್ಣಮೂರ್ತಿ ಬಾಲ್ಯದಲ್ಲೇ ಶ್ರುತಿ ಶಾಸ್ತ್ರ ಪುರಾಣಗಳನ್ನು, ತರ್ಕ, ಮೀಮಾಂಸೆಗಳನ್ನು ಅಭ್ಯಾಸ ಮಾಡಿದ್ದರು.  ನಾಲ್ಕರಿಂದ ಆರು ವರ್ಷದವರೆಗೆ ಹುಡುಗನಿಗೆ ವೇದ, ಉಪನಿಷತ್ತು, ಪಂಚಾದಶಿ ಮೊದಲಾದವುಗಳ ಪಾಠವಾಯಿತು. ಅವನು ಏಳು ತುಂಬುವ ಹೊತ್ತಿಗೆ ಎಲ್ಲವನ್ನೂ ಬಾಯಿಯಲ್ಲೆ ಹೇಳಬಲ್ಲವನಾಗಿದ್ದ. 

ಕೃಷ್ಣಮೂರ್ತಿಯ ತಾತ ಪ್ರತ್ಯೇಕವಾಗಿದ್ದ ಧ್ಯಾನದ ಕೊಠಡಿಯಲ್ಲಿ ಒಂದೆರಡು ಗಂಟೆ ಧ್ಯಾನಮಾಡುತ್ತಿದ್ದರು. ಒಂದು ದಿನ ಸುಮಾರು ಎರಡು ವರ್ಷದ ಒಂದು ಮಗು ಯಾಕೋ ಅಳತೊಡಗಿತು. ಧ್ಯಾನ ಮಾಡುತ್ತಿದ್ದ ತಾತ ಕೆಳಗಿಳಿದು ಬಂದು ಆ ಮಗುವನ್ನು ನೀಲಿಗಟ್ಟುವಂತೆ  ಹೊಡೆದರು. ಆಗ ಬಾಲಕ ಕೃಷ್ಣಮೂರ್ತಿ "ಈತನ ಧ್ಯಾನಕ್ಕೇನು ಬೆಲೆ?" ಎಂದು ಯೋಚಿಸಿದ.  ಅದೇ ತಾತ ಯು.ಜಿ.ಯನ್ನು ಭಾರತದ ಎಲ್ಲ ಪವಿತ್ರ ಕ್ಷೇತ್ರಗಳಿಗೆ, ಆಶ್ರಮಗಳಿಗೆ ಕರೆದೊಯ್ದರು. 

ಯು.ಜಿ. ಹಿಮಾಲಯದಲ್ಲಿ ಏಳು ವರ್ಷ ಯೋಗಾಭ್ಯಾಸ ಮಾಡಿದರು.
ಆ ಕಾಲದಲ್ಲಿ ಅವರು ಶಿವಾನಂದ ಸರಸ್ವತಿ ಅವರ ಶಿಷ್ಯರಾಗಿದ್ದರು. ಸದಾ ಧ್ಯಾನ, ಗ್ರಂಥ ಪಠಣ. ಗ್ರಂಥಗಳಲ್ಲಿ ವಿವರಿಸಲಾದ ಸಮಾಧಿ, ಅತಿ ಸಮಾಧಿ, ನಿರ್ವಿಕಲ್ಪ ಸಮಾಧಿ ಎಲ್ಲವನ್ನೂ ಸಾಧಿಸಿದರು. ಆಗ ಮನಸ್ಸು ಎಂಥ ಅನುಭವವನ್ನು ಬೇಕಾದರೂ ಕೊಡಬಲ್ಲುದೆಂದು ಅನ್ನಿಸಿತು. ಆದರೆ ಯು.ಜಿ.ಗೆ ಬೇಕಾಗಿದ್ದದ್ದು ಅದಲ್ಲ. ಎಲ್ಲರೂ ಮೋಕ್ಷ ದ ಬಗ್ಗೆ ಮಾತಾಡುತ್ತಾರಲ್ಲ, ಅದೇನು ಎಂದು ತಿಳಿಯುವ ಕುತೂಹಲವಿತ್ತು. ಅದಕ್ಕಾಗಿ ಕಡು ನಿಷ್ಠೆಯ ಜೀವನ. ಊಟದಲ್ಲಿ ಉಪ್ಪು, ಮೆಣಸಿನ ಕಾಯಿಗಳನ್ನೂ ವರ್ಜಿಸುವ ನಿಷ್ಠುರತೆ ಕಲಿತರು. ಒಂದು ದಿನ ತಮ್ಮ ಗುರು ಶಿವಾನಂದ ಸರಸ್ವತಿ ಯಾರಿಗೂ ಕಾಣದಂತೆ ಉಪ್ಪಿನಕಾಯಿ ತಿನ್ನುತ್ತಿದ್ದುದನ್ನು ಕಂಡು ಅವರಿಗೆ ಭ್ರಮನಿರಸನವಾಯಿತು; 'ಆತ್ಮನಿಯಂತ್ರಣವಿಲ್ಲದ ಈತ ಆತ್ಮವಂಚಕ' ಎನ್ನಿಸಿತು. ತಕ್ಷ ಣ ಯೋಗಾಭ್ಯಾಸವನ್ನು ಕೈಬಿಟ್ಟರು; ಅಧ್ಯಾತ್ಮಕ್ಕೆ ಸಂಬಂಧಪಟ್ಟ ಎಲ್ಲವನ್ನೂ ಅನುಮಾನದಿಂದ ನೋಡತೊಡಗಿದರು. ಬ್ರಾಹ್ಮಣ್ಯದ ಕುರುಹಾಗಿದ್ದ ಜನಿವಾರ ಹೋಯಿತು. ಎಲ್ಲ ಧಾರ್ಮಿಕ ಸಂಪ್ರದಾಯಗಳನ್ನೂ ಪ್ರಶ್ನಿಸುವ ಪರಿಪಾಠ ಬೆಳೆಯಿತು.

ಇಪ್ಪತ್ತೊಂದನೆಯ ವರ್ಷದ ಹೊತ್ತಿಗೆ ಅರೆ ನಾಸ್ತಿಕರಾಗಿದ್ದ ಯು.ಜಿ. ಮದರಾಸು ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ, ಮನೋವಿಜ್ಞಾನಗಳನ್ನು ಕಲಿಯತೊಡಗಿದರು. ಅವರಿಗೆ ಮೊದಲಿನಿಂದಲೂ ಮನಸ್ಸಿನ ಬಗ್ಗೆ ಕುತೂಹಲ. ಆದರೆ ಎಷ್ಟು ಪುಸ್ತಕಗಳನ್ನು ಓದಿದರೂ ಮನಸ್ಸೆಂದರೆ ಏನು ಎಂದು ಗೊತ್ತಾಗಲಿಲ್ಲ. ಫ್ರಾಯ್ಡ್‌, ಯೂಂಗ್‌, ಏಡ್ಲರರ ಸಿದ್ಧಾಂತಗಳಿಂದ ನೆರವಾಗಲಿಲ್ಲ. ಈ ಬಗ್ಗೆ ತಮ್ಮ ಪ್ರೊಫೆಸರರನ್ನು ಕೇಳಿದಾಗ, ''ಇಂಥ ಕಿರಿಕಿರಿಯ ಪ್ರಶ್ನೆಗಳನ್ನು ಕೇಳಬೇಡ. ಪರೀಕ್ಷೆಯಲ್ಲಿ ಪಾಸು ಮಾಡಬೇಕೆಂದಿದ್ದರೆ ನೋಟ್ಸನ್ನು ಉರುಹೊಡಿ" ಎಂಬ ಉತ್ತರ ಬಂತು. ಹಾಗಾದರೆ ಡಿಗ್ರಿಯೇ ಬೇಡ ಎಂದು ಓದು ನಿಲ್ಲಿಸಿದರು. ಅದೇ ಹೊತ್ತಿಗೆ ಸ್ನೇಹಿತನೊಬ್ಬನಿಂದ ರಮಣ ಮಹರ್ಷಿಯ ವಿಚಾರ ತಿಳಿಯಿತು. 

ರಮಣಮಹರ್ಷಿಯವರ ಬಳಿ ಹೋಗಿ ನನಗೆ ಮೋಕ್ಷ ನೀಡಬಲ್ಲಿರಾ ಎಂಬ ಪ್ರಶ್ನೆಗೆ ರಮಣರು: "ನಾನಿದನ್ನು ನಿನಗೆ ನೀಡಬಲ್ಲೆ ಆದರೆ ಅದನ್ನು ನೀನು ಸ್ವೀಕರಿಸಬಲ್ಲೆಯಾ?" ಎಂದು ಉತ್ತರ ನೀಡಿದರಂತೆ. ಯು. ಜಿ. ಕೃಷ್ಣಮೂರ್ತಿಗೆ "ಇದು ಅಹಂಕಾರದ ಉತ್ತರ" ಎನಿಸಿತಂತೆ.  ಕೊನೆಗೆ ನಾನು ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತೇನೆ ಎಂದು ಶಪಥ ಮಾಡಿಕೊಂಡರಂತೆ.

ತನ್ನ ಬದುಕಿನುದ್ದಕ್ಕೂ ಪ್ರಶ್ನೆಗಳನ್ನು ಹಾಕುತ್ತಲೇ ತನ್ನದೇ ವಿಚಿತ್ರ ಜೀವನದರ್ಶನವನ್ನು ಕಂಡುಕೊಂಡ ಯು. ಜಿ. ಕೃಷ್ಣಮೂರ್ತಿ ಅವರು ಜೆ. ಕೃಷ್ಣಮೂರ್ತಿ ಅವರಿಗೆ  "ನನಗೆ ನೀವು ನೀಡುತ್ತಿರುವ ನಿಮ್ಮ ಈ ಅಮೂರ್ತ ಬೋಧೆಗಳ ಹಿಂದೆ ಏನಾದರೂ ತಿರುಳಿದೆಯೇ?" ಎಂದು ಕೇಳಿದರು.  ಅದಕ್ಕೆ ಜೆಕೆ "ಇದನ್ನು, ಅರಿಯುವ ಮಾರ್ಗವೇ ನಿನ್ನಲ್ಲಿಲ್ಲವಲ್ಲ!" ಎಂದು ಉತ್ತರಿಸಿದಾಗ  ವ್ಯಗ್ರರಾಗಿ,  "ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗ ನನ್ನಲ್ಲಿಲ್ಲವೆಂದರೆ, ನಿಮ್ಮಲ್ಲಿ ಅದನ್ನು ನನಗೆ ತಿಳಿಹೇಳುವ ಯಾವ ಮಾರ್ಗವೂ ಇಲ್ಲವೆಂದಾಯಿತು. ಏಳು ವರ್ಷ ಹಾಳಾಯಿತು" ಎಂದು ಹೊರಬಂದರು.

ಯು. ಜಿ. ಕೃಷ್ಣಮೂರ್ತಿ ಬುದ್ಧನನ್ನೂ ಒಳಗೊಂಡ ಹಾಗೆ ಎಲ್ಲ ಮತಸ್ಥಾಪಕರನ್ನೂ ತಪ್ಪುದಾರಿ ಹಿಡಿದವರೆಂದೋ ಪರಮ ಸ್ವಾರ್ಥಿಗಳೆಂದೋ ಹುಚ್ಚರೆಂದೋ ಕರೆಯುತ್ತಿದ್ದವರು; ಎಲ್ಲ ತರಹದ  ನಂಬಿಕೆಗಳನ್ನೂ ಬುಡಮೇಲು ಮಾಡುತ್ತಿದ್ದರು; ನಾವು ಅನುಸರಿಸುವ ಸಂಪ್ರದಾಯಗಳೆಲ್ಲವೂ ನಿರರ್ಥಕವೆನ್ನುತ್ತಿದ್ದರು. ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆನ್ನುವುದು ನಮ್ಮ ಆಶಯ. ಅದಕ್ಕಾಗಿ ನಾವು ಮಾಡುವ ಧ್ಯಾನ, ಪ್ರಾರ್ಥನೆ, ತಪ್ಪಸ್ಸು, ಸಾಧನೆಗಳು ಒಂದೆರಡಲ್ಲ. ಆದರೆ ಅವೆಲ್ಲವೂ ನಮ್ಮನ್ನು 'ಕತ್ತಲೆಯಿಂದ ಇನ್ನಷ್ಟು ಕತ್ತಲೆಗೆ ಕೊಂಡೊಯ್ಯುವ ಕ್ರಿಯೆಗಳೆನ್ನುತ್ತಿದ್ದರು.

ಯು. ಜಿ. ಕೃಷ್ಣಮೂರ್ತಿ ಜಗತ್ತಿನಾದ್ಯಂತ ಪ್ರವಾಸ ಮಾಡಿ ಅನೇಕ ಸಾವಿರಾರು ಉಪನ್ಯಾಸ ಚರ್ಚೆಗಳಲ್ಲಿ ಪಾಲ್ಗೊಂಡರು. ಅವರಿಗೆ ಅನೇಕ ಪ್ರಸಿದ್ಧ ಸೆಲೆಬ್ರಿಟಿ ಅನುಯಾಯಿಗಳೂ ಇದ್ದರು.

ಅವರ ಮಾತುಗಳೆಂದು ಅಲ್ಲಲ್ಲಿ ಕಂಡದ್ದು ಹೀಗಿದೆ:

ಸತ್ಯವೇನೆಂದರೆ ನಿಮ್ಮಲ್ಲಿ ಯಾವ ಸಮಸ್ಯೆಯೂ ಇಲ್ಲವೆಂದರೆ ಒಂದನ್ನು ನೀವು ಸೃಷ್ಟಿಸುತ್ತೀರಿ. ನಿಮ್ಮಲ್ಲಿ ಸಮಸ್ಯೆಯಿಲ್ಲವೆಂದರೆ ನೀವು ಜೀವಿಸುತ್ತಿಲ್ಲವೆಂದೇ ನಿಮಗೆ ಭಾಸವಾಗುತ್ತದೆ.

ನೀವು ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ಸರಿ ಮತ್ತು ತಪ್ಪು ಎಂಬ ದ್ವಂದ್ವಗಳ ಸುಳಿಯಲ್ಲಿ ಸಿಲುಕದೆ ಇದ್ದಾಗ ನಿಮಗೆ ಕೆಡುಕನ್ನು ಮಾಡಲು ಆಗುವುದಿಲ್ಲ. ನೀವು ಈ ಪಂಜರದಲ್ಲಿದ್ದಾಗಲೆಲ್ಲಾ ತಪ್ಪನ್ನು ಮಾಡುವ ಅಪಾಯವಿದ್ದೇ ಇರುತ್ತದೆ.

ಪ್ರಕೃತಿಯಲ್ಲಿ ಸಾವು ಅಥವಾ ವಿನಾಶವೆಂಬುದೇ ಇಲ್ಲ. ಅಲ್ಲಿ ನಡೆಯುವುದು ಬರೀ ಅಣುಗಳ ಮರುಜೋಡಣೆ. ವಿಶ್ವದಲ್ಲಿ ಶಕ್ತಿಯ ಸಮತೋಲನವನ್ನು ನಿರ್ವಹಿಸಲು ಅಗತ್ಯ ಅಥವಾ ಅವಶ್ಯಕತೆ ಇದ್ದಲ್ಲಿ ಮಾತ್ರ ಸಾವು ಘಟಿಸುತ್ತದೆ.

ನೀನು ನೀನಾಗಿರಲು ಒಂದು ಅಸಾಧಾರಣ ಬುದ್ಧಿ ಬೇಕು. ನಿನಗೆ ಅದಾಗಲೇ ಅನುಗ್ರಹೀತವಾಗಿದೆ. ಅದನ್ನು ನಿನಗೆ ಬೇರೆ ಯಾರೂ ಕೊಡುವ ಅಗತ್ಯವಿಲ್ಲ, ಅಥವಾ ಬೇರೆ ಯಾರೂ ಅದನ್ನು ನಿನ್ನಿಂದ ಕಸಿಯಲಾಗುವುದಿಲ್ಲ. ಯಾರು ಈ ಊರ್ಜೆಯನ್ನು ತನ್ನದೇ ರೀತಿಯಲ್ಲಿ ಪ್ರಕಟಿಸಲು ಯತ್ನಿಸುತ್ತಾರೋ ಆತನೇ ‘ಸಹಜ ಮಾನವ’.

‘ನೈತಿಕ ಮನುಷ್ಯ’ ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆಂದೇ ಆತ ನೈತಿಕತೆಯನ್ನುಅನುಷ್ಟಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.

ಸಕಲ ಅನುಭವಗಳೂ,  ಅವು ಆಧ್ಯಾತ್ಮಿಕವಾಗಿರಲಿ ಅಥವಾ ಬೇರೆ ಯಾವುದೇ ಆಗಿರಲಿ ಮನುಷ್ಯನ ನರಳಾಟಕ್ಕೆ ಮೂಲ ಕಾರಣ.

ನೀನು ಇಷ್ಟ ಪಡುವ ಯಾವುದರಲ್ಲೂ ಈ ದೇಹಕ್ಕೆ ಆಸಕ್ತಿಯಿಲ್ಲ. ನಿರಂತರ ಘರ್ಷಣೆಯಾಗುತ್ತಿರುವುದು ಇದೇ, ಇದರಲ್ಲೇ.

‘ಸಹಜ ಸ್ವಭಾವ’ ಅಕಾರಣವಾದದ್ದು. ಅದು ಸುಮ್ಮನೆ ಘಟಿಸುತ್ತದೆ.

ಆತ್ಮ ಸಾಕ್ಷಾತ್ಕಾರವೆಂಬುದು ನಿನ್ನ ಶೋಧ, ನಿನ್ನಿಂದ. ಅದೆಂದರೆ ಶೋಧಿಸುವುದಕ್ಕೆ ಅಲ್ಲಿ ಯಾವ ನೀನೂ ಇಲ್ಲವೆಂಬುದು. ಅದು ಒಂದು ಬೆಚ್ಚಿಬೀಳಿಸುವ ಸಂಗತಿ.  ಏಕೆಂದರೆ ಅದು ನಿಮ್ಮ ಪ್ರತಿ ನರ, ಪ್ರತಿ ಜೀವಕೋಶ, ಅಷ್ಟೇಕೆ ನಿಮ್ಮ ಮೂಳೆಗಳ ಮಜ್ಜೆಯಲ್ಲಿರುವ ಜೀವಕೋಶಗಳನ್ನೂ ವಿಸ್ಫೋಟಗೊಳಿಸುವಂತಹ ಭಯಾನಕ ಸಂಗತಿ.

ನಿಜವಾದ ಆತ್ಮಸಾಕ್ಷಾತ್ಕಾರ ಏನೆಂದರೆ ಆತ್ಮಸಾಕ್ಷಾತ್ಕಾರವೆಂಬುದೇ ಇಲ್ಲವೆಂಬ ಸತ್ಯ.
ಆಲೋಚನೆ ತನ್ನ ಹುಟ್ಟಿನಲ್ಲಿ, ತನ್ನ ಮೂಲದಲ್ಲಿ, ತನ್ನ ಅಭಿವ್ಯಕ್ತಿಯಲ್ಲಿ, ತನ್ನ ಕ್ರಿಯೆಗಳಲ್ಲಿ ಅತ್ಯಂತ ದಮನಕಾರಿ ಫ್ಯಾಸಿಸ್ಟ್. ನಾನು ಈ ಫ್ಯಾಸಿಸ್ಟ್ ಪದ ಪ್ರಯೋಗ ಮಾಡುತ್ತಿರುವಾಗ ಅದನ್ನು ರಾಜಕೀಯ ಪರಿಭಾಷೆಯಲ್ಲಿ ಬಳಸುತ್ತಿಲ್ಲ, ಆದರೆ ಅದು ನಮ್ಮ ಚಿಂತನೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸುವುದು ಮತ್ತು ರೂಪುಗೊಳಿಸುವುದು ಎಂದೇ ಅರ್ಥ.

ಆಲೋಚನೆ ಒಂದು ಸತ್ತ ಸಂಗತಿ. ಅದು ಯಾವತ್ತೂ ಜೀವಿಸುವ ಯಾವುದನ್ನೂ ಸ್ಪರ್ಶಿಸುವುದಿಲ್ಲ. ಅದು ಜೀವನವನ್ನು ವಶಪಡಿಸಿಕೊಳ್ಳಲಾರದು.  ವಶಪಡಿಸಿಕೊಂಡು ಅದಕ್ಕೆ ಒಂದು ಮೂರ್ತತೆಯನ್ನು ಕೊಡಲಾಗುವುದಿಲ್ಲ. ಅದು ಜೀವನವನ್ನು ಸ್ಪರ್ಶಿಸಿದ ಕ್ಷಣವೇ ಅದು ಬದುಕಿನ ಶೀಲತೆಯಿಂದ ನಾಶವಾಗುತ್ತದೆ.

ಮಾನವ ಜೀವಕ್ಕೇ, ನಿಮ್ಮ ಧಾರ್ಮಿಕ ಸಿದ್ಧಾಂತ, ನೀತಿ ಮೋಕ್ಷ, ಆನಂದ, ಮುಕ್ತಿ ಅಥವಾ ಇನ್ನಾವುದರಲ್ಲೂ ಆಸಕ್ತಿಯಿಲ್ಲ. ಅದರ ಆಸಕ್ತಿಯೆಲ್ಲಾ ಒಂದೇ. ಅದೇ ಬದುಕುಳಿಯುವುದು. 

ಮಾನವ ದೇಹ ಸೃಷ್ಟಿಯ ಅಸಾಧಾರಣ ಅದ್ಭುತ ಕೃತಿ; ಆದರೆ ಸಂಸ್ಕೃತಿಯ ಫಲವಾಗಿ, ಒಬ್ಬ ಮನುಷ್ಯನಾಗಿ ಅವನೊಬ್ಬ ಕೊಳೆತ ವಸ್ತು.

ನೀನು ನಿಸರ್ಗಕ್ಕೆ ಬದುಕಿರುವ ವೇಳೆಗಿಂತಲೂ ಸತ್ತಾಗಲೇ ಹೆಚ್ಚು ಉಪಯೋಗ.

ಧರ್ಮ ಮತಗಳು ಗುಲಾಬಿ ಹೂಗಳ ಭರವಸೆ ನೀಡುತ್ತವೆ, ಕೊನೆಗೆ ನಿಮಗೆ ದಕ್ಕುವುದು ಬರೀ ಮುಳ್ಳುಗಳೇ.

ಯು. ಜಿ. ಕೃಷ್ಣಮೂರ್ತಿ ಅವರ ಚಿಂತನೆಗಳು ಮತ್ತು ಬದುಕಿನ ರೀತಿಯನ್ನು ಗಮನಿಸಿದಾಗ,  ನನ್ನ ಈ ಕಿರು ನೋಟದಲ್ಲಿ ನೆನಪಾದದ್ದು... ಕುವೆಂಪು ಅವರ ಅನಿಕೇತನ.

"ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಂಗತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಓ ನನ್ನ ಚೇತನ ಆಗು ನೀ ಅನಿಕೇತನ"

ಯು. ಜಿ. ಕೃಷ್ಣಮೂರ್ತಿ 
ಇಟಲಿಯ ವೆಲ್ಲಿಕ್ರೋಸಿಯಾದಲ್ಲಿ 2007ರ ಮಾರ್ಚ್ 22ರಂದು ನಿಧನರಾದರು. 

On the birth anniversary of U. G. Krishnamurthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ