ಕನ್ನಡ ಸಂಪದ
12ನೇ ವರ್ಷಕ್ಕೆ ಕಾಲಿಟ್ಟ 'ಕನ್ನಡ ಸಂಪದ'
ನನ್ನ 'ಕನ್ನಡ ಸಂಪದ' ಪುಟ ಇಂದು 12ನೇ ವರ್ಷಕ್ಕೆ ಅಡಿಯಿರಿಸಿದೆ. ಇದು ನನ್ನ ಬದುಕನ್ನು ಬದಲಿಸಿದ ಹನ್ನೊಂದು ವರ್ಷಗಳು.
ಈ ವಿಶ್ವ ಎಂಬುದು ನನಗೆ ಅರ್ಥವಾಗಿರುವ ಸೀಮಿತ ಭಾವದಲ್ಲಿ ಒಂದು ಉದ್ಯಾನವನ. ಉದ್ಯಾನವನವೆಂಬುದು ಆಗಾಗ ಅರಳಿ, ಅಳಿದುಹೋದರೂ, ಅದು ಉಳಿಸಿಹೋದ ಹೂಗಳ ಪರಿಮಳ, ಮುಂದೆ ಅರಳುವ ಹೂಗಿಡಗಳಿಗೆ ಮತ್ತು ಅಲ್ಲಿ ಬಂದು ಕೂರುವ ಪಕ್ಷಿಗಳಿಗೆ ಚೈತನ್ಯಧಾಮ. ಅಂತೆಯೇ ಆಗಾಗ ಈ ಭುವಿಯಲ್ಲಿ ಉದಿಸಿದ ಕೆಲವು ಜೀವಿಗಳು ತಮ್ಮ ಆಯುಷ್ಯ ಮುಗಿಸಿಹೋದರೂ, ತಾವು ಉಂಡ ಬದುಕಿನ ಸವಿಯನ್ನು, ಮುಂದೆ ಬಂದ ಜೀವಿಗಳಿಗೆ ಉಳಿಸಿಟ್ಟು ಹೋದ ಚೈತನ್ಯಗಳು.
ನಮ್ಮ ಮನಸ್ಸುಗಳು ನಾವು ಕಾಣದ್ದನ್ನು ಒಪ್ಪುವುದಿಲ್ಲ. ಆದರೆ ನಾವು ನಡೆಯುವ ಹಾದಿ, ಉಸುರಿಸುವ ಹಸುರಿನ ತಂಗಾಳಿ, ಮರದ ನೆರಳು, ಹಚ್ಚಿದ ದೀಪದ ಬೆಳಕು, ಉಪಯೋಗಿಸುವ ವಸ್ತುಗಳು ಇತ್ಯಾದಿ ಯಾವೊಂದೂ, ನಾವು ಸೃಜಿಸಿದ್ದಂತೂ ಅಲ್ಲ. ಮಹಾನ್ ಶ್ರೀಮಂತರಾದ ವಾರೆನ್ ಬಫೆಟ್ ಹೇಳುವಂತೆ "ನಾವು ಮರದ ಕೆಳಗೆ ನೆರಳಲ್ಲಿ ಇಂದು ಇದ್ದೇವೆಂದರೆ ಆ ಮರವನ್ನು ಹಿಂದೆ ಯಾರೋ ಸಸಿಯಾಗಿ ನೆಟ್ಟಿದ್ದರು ಎಂದು ಅರ್ಥ".
ಯಾವುದೇ ವ್ಯಕ್ತಿಯಲ್ಲಿರಬಹುದಾದ, ತಾನು ಏನನ್ನಾದರು ಮಾಡುತ್ತೇನೆ ಎಂಬ ಕ್ರಿಯಾತ್ಮಕ ಭಾವ, ನನ್ನನ್ನು ತುಂಬಾ ಸೆಳೆಯುವಂತದ್ದು. ಕ್ರಿಯಾತ್ಮಕ ಭಾವ ಇದ್ದಾಗ ಅಲ್ಲಿ ಒಂದು ಸೃಜನಶೀಲತೆ ಇದ್ದೇ ಇರುತ್ತದೆ. ಆ ಕ್ರಿಯಾತ್ಮಕ ಭಾವವನ್ನು ನಮ್ಮ ಸುತ್ತಮುತ್ತಲಿನವರಲ್ಲಿ ಹಾಗೂ ಕಡೇಪಕ್ಷ ನಾವು ಯಾರ ಹೆಸರನ್ನು ಕೇಳಿ ಬೆಳೆದಿದ್ದೇವೋ ಅವರಲ್ಲಾದರೂ ಗುರುತಿಸುವುದು, ನಮ್ಮ ಬದುಕಿಗೆ ಅವಶ್ಯಕವಾಗಿ ಬೇಕಾದ ಮೂಲಭೂತ ಪೋಷಣೆ. ಅದನ್ನು ಮಾಡದಿದ್ದರೆ ನಮಗೂ ಈ ಪ್ರಪಂಚಕ್ಕೂ ಯಾವುದೇ ಸಂಬಂಧವಿಲ್ಲದಂತೆ, ಸೂತ್ರಕಿತ್ತ ಗಾಳೀಪಟದಂತೆ ನಮ್ಮ ಬದುಕಾಗಿದೆ ಎಂಬ ಭಾವದಲ್ಲಿ ನಾವು ಬಾಳುತ್ತಿದ್ದರೆ ಅಚ್ಚರಿಯಿಲ್ಲ. ಈ ನಿಟ್ಟಿನಲ್ಲಿ ನಾನು ಕನ್ನಡ ಸಂಪದ ಪುಟದಲ್ಲಿ ಸ್ಮರಿಸುವ ವ್ಯಕ್ತಿಗಳ ಚಿಂತನೆ ನನಗೆ ದಿನಾ ಎಂತದ್ದೋ ಉತ್ಸಾಹ ತುಂಬುತ್ತಾ ಬಂದಿದೆ.
ಫೇಸ್ಬುಕ್ನಲ್ಲಿ ಲೇಖನಗಳನ್ನು ಪೋಸ್ಟ್ ಮಾಡುವ ನಾನು ಜನಸ್ಪಂದನೆ ಬಯಸದೆ ಈ ಕೆಲಸವನ್ನು ಮಾಡುತ್ತೇನೆ ಎನ್ನಲಾರೆ. ಆದರೆ, ನನ್ನ ಪೋಸ್ಟ್ ಜನರನ್ನು ತಲುಪಿದೆಯೊ ಇಲ್ಲವೋ ಎಂದು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ ಎಂದು ನನಗನ್ನಿಸಿದೆ. ನಾನು ನನ್ನ ಈ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ. ಅದು ನನಗೆ ಮುಖ್ಯ.
ನಾನು ಸ್ಮರಿಸಿದ ವ್ಯಕ್ತಿಗಳೊ, ಆ ವ್ಯಕ್ತಿಗಳ ಮಕ್ಕಳೋ, ಮೊಮ್ಮಕ್ಕಳೋ ವಿಶ್ವದ ಯಾವುದೋ ಅಂಚಿನಿಂದ ಬಂದು ನನ್ನೊಡನೆ ಆಪ್ತತೆಯಿಂದ ಮಾತಾಡಿದಾಗ ಆದ ಅನುಭವವಿದೆಯೆಲ್ಲ ಅದರ ಅನುಭವವನ್ನು ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ. 'ಕನ್ನಡ ಸಂಪದ' ಪುಟವನ್ನು ನಿನ್ನೆಯವರೆಗೆ 46,104 ಜನ ಲೈಕಿಸಿ, 49,063 ಮಂದಿ ಫಾಲೋ ಮಾಡ್ತಾ ಇದಾರೆ, ಸಂಸ್ಕೃತಿ ಸಲ್ಲಾಪ ತಾಣವನ್ನು 11,30,500ಕ್ಕೂ ಹೆಚ್ಚು ಸಲ ಜನ ಬಂದು ನೋಡಿದ್ದಾರೆ. ಅವರೆಲ್ಲ ನಾ ಬರೆದದ್ದು ಎಲ್ಲವನ್ನೂ ನೋಡುತ್ತಾರೆ, ಮೆಚ್ಚುತ್ತಾರೆ ಎಂಬ ಯಾವುದೇ ಭ್ರಮೆಯೂ ನನ್ನಲ್ಲಿಲ್ಲ.
ಹಲವು ಪಂಥೀಯ ಮನೋಭಾವಗಳುಳ್ಳ ಹಲವರಿಗೆ ನಾನು ಕೆಲವು ವ್ಯಕ್ತಿಗಳ ಬಗ್ಗೆ ಹೇಳುವುದು ರುಚಿಸುವುದಿಲ್ಲ ಎಂಬುದೂ ನನ್ನ ಅನುಭವಕ್ಕೆ ಬರುತ್ತದೆ. ಸಿದ್ಧಾಂತಗಳೇ ಬದುಕಲ್ಲ. ಬದುಕಿನ ಹೊಳಹುಗಳು ನಮಗೆ ಒಪ್ಪದ ವಿಚಾರಗಳಿಂದಲೂ ಮೂಡಬಹುದು. ನಾನು ಪಂಡಿತನಲ್ಲ. ಸಾಹಿತಿ, ಕಲಾವಿದ, ಬರಹಗಾರ ಏನೂ ಅಲ್ಲ. ನಾನು ಪೂರ್ಣತ್ವವನ್ನು ಅರಸಿ ಹುಡುಕಿಹೊರಟವನಲ್ಲ. ಬದುಕಿನ ಸುಖಗಳನ್ನು ಪುಟ್ಟ ಪುಟ್ಟದರಲ್ಲಿ, ಚಿಂದಿ ಚಿಂದಿಗಳಲ್ಲಿ, ದೊಡ್ಡವರ ಮುಗ್ದತೆಯಲ್ಲಿ, ಕಿರಿಯರ ದೊಡ್ಡತನದಲ್ಲಿ, ಹಲವರ ಸಣ್ಣತನಗಳಲ್ಲಿ, ಹೀಗೆ ಎಲ್ಲೆಡೆ ಕಾಣಲಿಚ್ಚಿಸಿದವನು. ವ್ಯಾಜ್ಯ, ದ್ವೇಷ, ಅನಗತ್ಯ ಟ್ರೋಲಿಂಗ್, ಏನೋ ತೋಚಿದ್ದು ಕಿಂಚಿತ್ತು ಮಾಡುವನಿಗೆ ಹೀಗೆ ಮಾಡಬೇಕಿತ್ತು - ಹಾಗೆ ಮಾಡಬೇಕಿತ್ತು ಎಂದು ಕೆಲವರು ಕೊಡುವ ಕ್ಷುಲ್ಲಕ ಉಪದೇಶ ಇತ್ಯಾದಿ ಬಿಟ್ಟು ಎಲ್ಲವೂ ನನಗೆ ಓಕೆ. ಇಲ್ಲಿ ಬಹಳ ಜನ ನಾನು ಮಾಡಿದ ತಪ್ಪುಗಳನ್ನು ದಿನಾ ಆಪ್ತವಾಗಿ ತಿದ್ದುತ್ತಾರೆ. ಪ್ರತಿದಿನ ಕೆಲವೊಂದು ಜನರದ್ದಾದರೂ ಹೊಸರೀತಿಯ ಹೃದಯವಂತಿಕೆ, ಆಪ್ತತೆ, ಪ್ರೀತಿ, ಬೆಂಬಲ, ವಿಶ್ವಾಸ ಇದೆಲ್ಲ ನನಗೆ ನಿರಂತರ ಸಿಗುತ್ತಲೇ ಇದೆ. ಇದಕ್ಕೆಲ್ಲ ನಾ ಹೇಗೆ ಕೃತಜ್ಞತೆ ಹೇಳುವುದು?
ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?
ಎಂಬ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಮಾತು ನೆನಪಾಗುತ್ತಿದೆ. ನಾನು ನಿಮಗೆಲ್ಲ ಋಣಿ. ನಮಸ್ಕಾರ.
ಇಲ್ಲಿದೆ https://Facebook.com/Kannadasampadaಕನ್ಮ
My page Kannada Sampada entered 12th year
ಕಾಮೆಂಟ್ಗಳು