ರಾಘವೇಂದ್ರರಾವ್
ಎಂ. ಎಲ್. ರಾಘವೇಂದ್ರರಾವ್
ಎಂ. ಎಲ್. ರಾಘವೇಂದ್ರರಾವ್ ಬರಹ ಮತ್ತು ಪ್ರಕಟಣಾಲೋಕದ ಸಾಧಕರು.
ರಾಘವೇಂದ್ರರಾವ್ 1942ರ ಡಿಸೆಂಬರ್ 20ರಂದು ಮೈಸೂರಿನಲ್ಲಿ ಜನಿಸಿದರು.
ಬೆಳದದ್ದು ಆಂಧ್ರಪ್ರದೇಶದ ಹಿಂದುಳಿದ ಗ್ರಾಮವಾದ ‘ಮೋದ’ ಎಂಬಲ್ಲಿ. ತಂದೆ ಲಕ್ಷ್ಮಣರಾವ್. ತಾಯಿ ಅನಸೂಯಾಬಾಯಿ. ಅಕ್ಷರ ಕಲಿಯ ತೊಡಗಿದ್ದು ಮೊದಲು ತೆಲುಗು ಭಾಷೆಯಲ್ಲಾದರೂ ನಂತರ ಕನ್ನಡವನ್ನು ರೂಢಿಸಿಕೊಂಡಿದ್ದು ತಾಯಿ ಹಾಗೂ ತಾತನವರಿಂದ ದೊರೆತ ಮನೆಯಲ್ಲಿನ ಶಿಕ್ಷಣದಿಂದ.
ರಾಘವೇಂದ್ರರಾವ್ ಶಾಲೆಗೆ ಹೋಗಿ ಕಲಿತದ್ದು ಅತ್ಯಲ್ಪ. ಆದರೆ ಕಷ್ಟಪಟ್ಟು ಕಲಿತ ಕನ್ನಡ ಪ್ರಾಜ್ಞವಾಗಿ ಬರೆಯುವಷ್ಟು ಸಶಕ್ತವಾದದ್ದು. ಹೀಗೆ ಅವರು ಕನ್ನಡದಲ್ಲಿ ರಚಿಸಿದ ಕಥೆಗಳು ಮೊದಲು ಜನಪ್ರಗತಿ ಮತ್ತು ಮಲ್ಲಿಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ತೆಲುಗಿನಿಂದ ಇವರು ಅನುವಾದಿಸಿದ ಕಥೆ 1975ರಲ್ಲಿ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇವರು 1976ರಲ್ಲಿ ‘ಮುರಳಿ’ ಎಂಬ ಮಾಸ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಲ್ಲದೆ 'ಧೃವ' ಪತ್ರಿಕೆಯಲ್ಲಿ ಸಹಸಂಪಾದಕರ ಜವಾಬ್ದಾರಿಯನ್ನು ವಹಿಸಿಕೊಂಡರು.
ರಾಘವೇಂದ್ರರಾವ್ ತಾವೇ ಕೃತಿಗಳನ್ನು ರಚಿಸಿದ್ದಲ್ಲದೆ ಹಲವಾರು ಲೇಖಕ-ಲೇಖಕಿಯರು ರಚಿಸಿದ ಕೃತಿಗಳು ಬೆಳಕು ಕಾಣುವಂತೆ 1980-81ರಲ್ಲಿ ‘ಮಧುರ’ ಎಂಬ ಸ್ವಂತ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು.
ರಾಘವೇಂದ್ರರಾವ್ ಅವರು ರಚಿಸಿದ ಹಲವಾರು ಕಾದಂಬರಿಗಳು ಕರ್ಮವೀರ, ರಾಗಸಂಗಮ, ಮಧುರ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ದಿನ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿಯೂ ಪ್ರಸಿದ್ಧರಾಗಿದ್ದ ಇವರು ಉದಯವಾಣಿ ಪತ್ರಿಕೆಗಾಗಿ ‘ಮನ ಮಂಥನ’ ಶೀರ್ಷಿಕೆಯಲ್ಲಿ ಮೂಡಿಸಿದ್ದ ಅಂಕಣಗಳು ಜನಪ್ರಿಯವೆನಿಸಿದವು. ಆಧ್ಯಾತ್ಮಿಕ, ವ್ಯಕ್ತಿವಿಕಸನ, ಭಕ್ತಿ – ಜ್ಞಾನ ಪ್ರಸಾರ ಮುಂತಾದ ಹಲವಾರು ಪ್ರಕಾರಗಳಲ್ಲಿ ರಾಘವೇಂದ್ರರಾವ್ ಕೃತಿ ರಚಿಸಿದ್ದಾರೆ. ತೆಲುಗಿನಿಂದ ಯಂಡಮೂರಿ ವೀರೇಂದ್ರನಾಥ್, ಡಾ. ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್, ಮೈನಂಪಾಟಿ ಭಾಸ್ಕರ್ ಮುಂತಾದವರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ಮೌನ ರಾಗ, ಮೇಡ್ ಫಾರ್ ಈಚ್ ಅದರ್, ಭೂಮಿಗೀತೆ, ಹೈಜಾಕ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಅನುವಾದಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿ ಶಿಕ್ಣಣ ವಿಕಾಸ ಮುಂತಾದವುಗಳಲ್ಲದೆ ಜೀವನ ಮಂತ್ರ, ನೀವು, ಈ ಕ್ಷಣ ನಿಮ್ಮದು, ರಿಲ್ಯಾಕ್ಷೇಷನ್, ನಿಮ್ಮೊಳಗಿನ ನೀವು, ಗೆಲುವಿನ ದಿಕ್ಸೂಚಿ, ಯಶಸ್ಸಿನ ರಹಸ್ಯ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಧ್ಯಾನ – ಯೋಗಕ್ಕೆ ಸಂಬಂಧಿಸಿದಂತೆ ‘ಮನ ಮಂಥನ’. ‘ಮನಸ್ಸು ಲಹರಿ’ ‘ಧ್ಯಾನ ಮನಸ್ಸು ನಿರಾಳ’ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಮಕ್ಕಳೇ ನೀವು ಹೇಗಿರಬೇಕು?, ಗುಡ್ ಪೇರೆಂಟ್ ಗುಡ್ ಚಿಲ್ಡ್ರನ್, ಚಿಣ್ಣರ ಕುರಿತು ಹಿರಿಯರ ಕಿವಿ ಮಾತು, ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಉದರ ಸಂಬಂಧಿ ಸಮಸ್ಯೆಗಳು, ತೂಕ ಇಳಿಕೆ, ಆರೋಗ್ಯಗಳಿಕೆ, ನಡಿಗೆ, ವಯಸ್ಸು ಜೀವನ ನಿರ್ವಹಣೆ, ದೇಹಾಲಯ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ಮಕ್ಕಳ ಮನಸ್ಸನ್ನರಿತು ಸಾಮಾನ್ಯ ಜ್ಙಾನವನ್ನು ಬೋಧಿಸುವ ಭೂಮಿಯ ನಂತರ ನಿಮ್ಮ ನೆಲೆಯೆಲ್ಲಿ? ಮೂರು ಹೆಜ್ಜೆಗಳಲ್ಲಿ ವಿಶ್ವ, ಕಪ್ಪು ಮರಿ ಮೀನು, ಜ್ಞಾನ ವಿಜ್ಞಾನ ಪ್ರಶ್ನೋತ್ತರಗಳು ಮುಂತಾದ ಹತ್ತಾರು ಕೃತಿಗಳನ್ನೂ ಪ್ರಕಟಿಸಿದ್ದಾರೆ. ‘ತಮ್ಮದೇ ಆದ ‘ಮಧುರ’ ಪ್ರಕಾಶನದಡಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
On the birthday of writer and publisher M. L. Raghavendra Rao
ಕಾಮೆಂಟ್ಗಳು