ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ22


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ : ಎರಡನೆಯ ಸಂಧಿ


ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾಂಗದಲಿ ರಣದಲಿ
ಕಲಿ ಜರಾಸಂಧನನ ಸೀಳಿದು ಬಿಸುಟನಾ ಭೀಮ

---

ಕೇಳು ಜನಮೇಜಯ ಧರಿತ್ರೀ
ಪಾಲ ಮಂತ್ರಾಳೋಚನೆಗೆ ಭೂ
ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿ ಮಂಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ ೧

ದ್ರುಪದ ಧೈಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾಂಡವಾತ್ಮಜ
ರು ಪತಿಕಾರ‍್ಯ ವಿಚಾರನಿಷ್ಠರು ಬಂದರೋಲಗಕೆ
ನೃಪತಿ ಹದನೇನಮರ ಮುನಿಪರ
ನುಪಚರಿತ ಮಂತ್ರಾರ್ಥ ಸಿದ್ಧಿಗೆ
ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ ೨

ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ
ಮರೆಸಿತೆಂಬುದು ಲೋಕವೀ ನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು ೩

ಅಲ್ಲಿ ಸುರರಲಿ ಸುಪ್ರತಿಷ್ಠಿತ
ನಲ್ಲಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ ೪

ಆಗಲಿದಕೇನರಸ ದೀಕ್ಷಿತ
ನಾಗು ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು
ಆ ಗರುವರುಬ್ಬೇಳೆ ತಪ್ಪೇ
ನಾಗಲೀ ಗೋವಿಂದ ಮತದಲಿ
ತೂಗಿ ನೋಡುವೆವಿದರ ತೂಕವನೆಂದನಾ ಭೂಪ ೫

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬಂದನು ಪಾವುಡವ ಮುಂ
ದಿಳುಹಿದನು ಕೃಷ್ಣಂಗೆ ಪಾಂಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ ೭

ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿಂದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ ೮

ಪುರಕೆ ಬಿಜಯಂಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿಂದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ೯

ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ ೧೦

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆಂದ ೧೧

ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ ೧೨

ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವ ಸಾ
ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ ೧೩

ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿ ದ್ರೋಹರು ಸದರವೇ ನೃಪರು
ಅಕ್ಕಜರ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ ೧೪

ಕೆದರಿ ಸಪ್ತದ್ವೀಪ ಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ ೧೫

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆಂದ ೧೬

ಕಾಲ ಯವನಾ ದಂತವಕ್ರ ನೃ
ಪಾಲರಲಿ ದುರುದುಂಬಿಯೈ ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸ ಡಿಬಿಕರು
ಸಾಲುವನ ಮುರ ನರಕರಾಳನ
ಮೇಳವವನೇನೆಂಬೆನೈ ಭೂಪಾಲ ಕೇಳೆಂದ ೧೭

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆಂದ ೧೮

ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದಡಾತ ಮುನಿಯನೆ ಭೂಪ ಕೇಳೆಂದ ೧೯

ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲಗರ್ವಿತರಸಂಖ್ಯಾತರಹರೆಂದ ೨೦

ಅವರಿರಲಿ ಮತ್ತಿತ್ತಲುತ್ತರ
ದವನಿಪರು ಧಕ್ಕೆಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾಂಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ ೨೧

ಔಕಿ ಚತುರಂಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆಂದ ೨೨

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆಂದ ೨೩

ಕಂಸನನು ಕೆಡಹಿದೆವು ಮುರಿದೆವು
ಹಂಸ ಡಿಬಿಕರ ಪೌಂಡ್ರಕರ ನಿ
ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ
ಹಿಂಸೆಯಿವನಲಿ ಹರಿಯದಿವ ನಿ
ಸ್ಸಂಶಯನು ವಿಜಯದಲಿ ಯಾಗ
ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ ೨೪

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರ ರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ ೨೫

ಅಹಹ ಯಾಗವ್ರತಕೆ ಭಂಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ ೨೬

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ ೨೭

ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸಂನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ೨೮

ಏಕೆ ಗಾಂಡಿವವಿದು ಶರಾವಳಿ
ಯೇಕೆ ಇಂದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯಧ್ವಜ ವಿಳಾಸವಿದು
ಲೋಕರಕ್ಷಾ ಶಿಕ್ಷೆಗಿಂತಿವು
ಸಾಕು ಹುಲುಮಂಡಳಿಕರಿವದಿರ
ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ ೨೯

ನೆರಹು ಹಾರುವರನು ದಿಗಂತಕೆ
ಹರಹು ನಮ್ಮನು ಬಂಧುವರ್ಗವ
ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ೩೦

ಅಹುದು ಭೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗಂಡುಗರಿಗಿದಿರಾ
ರಹಿತ ಬಲವಿನ್ನರಸ ಚಿಂತಾ
ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ ೩೧

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮಂತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ ೩೨

ಕಂಗಳನುಜರ ಚಿತ್ರ ನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ೩೩

ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ‍್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದು ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ೩೪

ಆರವನು ಹಿರಿದಾಗಿ ನೀ ಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ
ವೀರರಿಗೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ೩೫

ಧರಣಿಪತಿ ಕೇಳೈ ಬೃಹದ್ರಥ
ನರಸು ಮಾಗಧಮಂಡಲಕೆ ತ
ತ್ಪುರಿ ಗಿರಿವ್ರಜಮೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದ ನಾತಂ
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆಯರಿಬ್ಬರದು ಭುತ ರೂಪು ಗುಣಯುತರು ೩೬

ಅವರೊಡನೆ ಸುಖ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ೩೭

ಊರ ಹೊರವಡುವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ
ನಾರಿಯರು ಸಹಿತವನ ಚರಣಾಂ
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶಿರ್ವಚನವನು ಮುನಿ ನೃಪಾಲಂಗೆ ೩೮

ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿಂ
ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನ ರಾಜ್ಯವ ಬಿಸುಟೆನೆನಗೀ
ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ ೩೯

ಐಸಲೇ ಸುತಹೀನ ರಾಜ್ಯ ವಿ
ಳಾಸ ನಿಷ್ಫಲವಹುದಲೇ ಸಂ
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀಂದ್ರನಂತ
ರ್ಭಾಸಿತಾತ್ಮ ಧ್ಯಾನಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ ೪೦

ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದ ಕೋ ಪುತ್ರಸಂತತಿ
ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕಂದಿದಾನನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿ ಪದಕೆರಗಿ ಪರಿತೋಷದಲಿ ನಿಂದಿರ್ದ ೪೧

ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ೪೨

ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರ ಬಾಹೆಯಲಿ ನಡುವಿರುಳರಸ ಕೇಳೆಂದ ೪೩

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ ೪೪

ಶಿಶುವನಾರೋ ಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸಂ
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದಸು ಮೇಘರವ ಘೂ
ರ್ಮಿಸುವವೋಲ್ ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಸಿತಾ ರಭಸ ೪೫

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಆರಿವಳು ತಾನೆನುತ ಕಂಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿನಲಿ ಕೈದೊಟ್ಟಿಲ ಕುಮಾರಕನ ೪೬

ನಿಂದುದಲ್ಲಿಯದಲ್ಲಿ ರಕ್ಕಸಿ
ಯೆಂದು ಭಯದಲಿ ಬಳಿಕ ಕರುಣದ
ಲೆಂದಳವಳಂಜದಿರಿ ಹೋಹೋಯೆನುತ ಕೈ ನೆಗಹಿ
ಇಂದಿನವನು ಮಗನೆನಗೆ ಭೂಪತಿ
ಬಂದನಾದರೆ ಕೊಡುವೆನೀತನ
ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ ೪೭

ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದಿತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆ ನಿಪುದಭಿಧಾನವೆನ್ನದು
ವರ ಜರಾಸಂಧಕನಿವನು ಸುರ
ನರರೊಳಗೆ ಬಲುಗೈಯನಹನೆಂದಿತ್ತಳರ್ಭಕನ ೪೮

ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆಂದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮರ್ತ್ಯರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆಂದ ೪೯

ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರಂಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮುಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ ೫೦

ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನೆಲೆ
ಕಿರಿಯರಿವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ ೫೧

ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ ೫೨

ರೂಢಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ
ಜೋಡಿಗಳ ಜಯರವದ ದೈತ್ಯ ವಿ
ಭಾಡ ಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ ೫೩

ಆಳು ನಡೆಯಲಿ ಮಗಧರಾಯನ
ಮೇಲೆ ದಂಡು ಮುಕುಂದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವಂಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ೫೪

ಜನಪ ಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳ ಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನದ ಕಾಣಿಕೆಗೊಳುತ ನಾನಾ
ಜನಪದಂಗಳ ಕಳೆದು ಗಂಗಾ ೫೫

ವಿನುತ ನದಿಯನು ಹಾಯ್ದು ಬಂದರು ಪೂರ್ವಮುಖವಾಗಿ
ಬರುತ ಕಂಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊಂಪಿನ
ಭರಿತವನು ಗೋಧನ ಸಮೃದ್ಧಿಯ ಧಾನ್ಯ ರಾಶಿಗಳ
ವರನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮಂಡಿತ ಮಗಧ ಮಂಡಲವ ೫೬

ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸಕ್ರಮುಕ ಜಂಬೂ ಮಾತುಳಂಗಮಯ
ಕಳವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ೫೭

ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರರುಹಬಂಧು ಚರಮಾ
ಶಾ ಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ೫೮

ವೃಷಭ ಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮೌಲ್ಯ
ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಭೇರೀತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ೫೯

ಏನಿದದುಭುತವೆಂದು ನಡುವಿರು
ಳಾ ನರೇಶ್ವರನಮಳವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯವಿ
ಧಾನದಲಿ ವಿಪ್ರೌಘವಚನಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦

ಇವರು ಗಿರಿಯಿಂದಿಳಿದು ರಾತ್ರಿಯೊ
ಳವನ ನಗರಿಯ ರಾಜಬೀದಿಯ
ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ
ತಿವಿದರಡ್ಡೈಸಿದರನುಬ್ಬಿದ
ತವಕಿಗರು ಮಗಧೇಂದ್ರ ರಾಯನ
ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ ೬೧

ಉರವಣಿಸಿದರು ಮೂರು ಕೋಟೆಯ
ಮುರಿದರಾ ದ್ವಾರದಲಿ ರಾಯನ
ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ
ಧರಣಿಯಮರರಪೂರ್ವಿಗರು ಭಾ
ಸುರರು ಭದ್ರಾಕಾರರೆಂದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲಗೋತ್ರವದಾವುದೆನುತ ವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು ೬೩

ಸ್ನಾತಕವ್ರತ ವೇಷದಲಿ ಬಂ
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತಂದರರ್ಥವ
ನೀತಗಳು ಬಯಸರು ವಿರೋಧ
ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ ೬೪

ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿ ರಜ
ನೀ ರಮಣ ಪಾವಕರೊ ಕಟಪಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ ೬೫

ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾಂಡುವಿನ ಮಕ್ಕಳು ಮೀರಿ ಖಳರಲ್ಲ
ಸಾಗರೋಪಾಂತ್ಯದ ನರೇಂದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ ೬೬

ಯಾದವರು ಹಿಂದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮಂಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ ೬೭

ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿಂ
ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ
ನಿವಗಿದೇನೀ ವಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನುಂಟು ಹೇಳಿನ್ನಂಜ ಬೇಡೆಂದ ೬೮

ಸ್ನಾತಕವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯ ಕುಲಕಿದು
ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು
ಸ್ನಾತಕರು ನಾವ್ ವೈರಿ ಗೃಹದಲಿ
ಭೀತರದ್ವಾರಪ್ರವೇಶವ
ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ ೬೯

ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರು ನೀವೀ ಬ್ರಾಹ್ಮಣರು ನಿಮ
ಗಾರುಪಾಧ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ ೭೦

ಮುರಿದು ಹಲಬರಿಳಾಧಿನಾಥರ
ಸೆರೆಯಲಿಕ್ಕಿದೆ ರಾಜ್ಯ ಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾಧ್ಯರೆಂದನು ನಗುತ ಮುರಹರನು ೭೧

ಆ ನೃಪಾಲರ ಮಗನೊ ಮೊಮ್ಮನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನಂಘವಣೆ ನೀನಾ
ರಾ ನರೇಂದ್ರರ ಸೆರೆಯ ಬಿಡುಗಡೆ
ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ ೭೨

ಎಲವೊ ಧರೆಯಲಧರ್ಮಶೀಲರ
ತಲೆಯ ಚೆಂಡಾಡುವೆವು ಧರ್ಮವ
ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭಂಡ ವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ ೭೩

ಇವರು ಗಡ ಗಜದವನ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭಂಡರು ನೀವೊ ನಾವೋ ಸಾಕದಂತಿರಲಿ
ಕವಡುತನದಲಿ ದಿಟ್ಟರಹಿರಂ
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ ೭೪

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟ ಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆಂದನಸುರಾರಿ ೭೫

ಕೇಳಿ ಕೆದರಿದ ಕಡುನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳುನಗೆ ಬಿಳಿನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ ೭೬

ಈತನಾರೆಂದರಿವಿರೈ ನ
ಮ್ಮಾತನೀತನು ನಮ್ಮ ಕಂಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿಂದೆ ಚೌರಾ
ಶೀತಿ ದುರ್ಗದೊಳೋಡಿ ಬದುಕಿದ
ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ ೭೭

ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗೂಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರಗಾಹಿಗಳ ತೋಹುಗಳೊ
ಬಲು ಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳುಗುಳದ ಜಯಸಿರಿಯ ಕಾಹಿನೊಳಾರು ನೀನೆಂದ ೭೮

ಹೋರಿ ಹೆಂಗುಸು ಬಂಡಿ ಪಕ್ಷಿ ಸ
ಮೀರಣಾಶ್ವಾಜಗರ ಗಾರ್ದಭ
ವೀರರೀತನ ಘಾತಿಗಳುಕಿತು ಕಂಸಪರಿವಾರ
ಆರುಭಟೆಯುಳ್ಳವನು ಕಂಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನುಂಟು ಶಿವಶಿವಯೆಂದನಾ ಮಗಧ ೭೯

ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ ೮೦

ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ ೮೧

ಎಲವೊ ಗೋಪಕುಮಾರ ಕಂಸನ
ಲಲನೆಯರ ವೈಧವ್ಯ ದುಃಖಾ
ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕಂಸನ ಕಾಲಯವನನ
ಕಳನ ಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ ೮೨

ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ೮೩

ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡ ನೀ
ನಾಕೆವಾಳನೆ ಶಿವಶಿವಾ ಜಗ
ದೇಕದೈವದ ಕೂಡೆ ದಂಡಿಯೆಯೆಂದನಾ ಭೀಮ ೮೪

ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳುಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವರೊಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ೮೫

ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇ ದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವುಂಟೇ ತರಿಸಿಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆಂದನಾ ಮಗಧ ೮೬

ಎಲವೊ ಬಾಹಿರ ಮಗಧ ಹಲಧರ
ನುಳಿಯೆ ಪಾಂಡವನೃಪರು ಪರಿಯಂ
ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳಲ್ಪವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ ೮೭

ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವಂಜುವೆವು ರಣ ನಾ
ಟಕಪಲಾಯನ ಪಂಡಿತರು ನೀವೆಂದನಾ ಮಗಧ ೮೮

ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕಂಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ ೮೯

ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ ೯೦

ಅಂಕಕಿಬ್ಬರು ಭಟರು ತಿಲಕಾ
ಲಂಕರಣ ಶೋಭೆಯಲಿ ರಣ ನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ೯೧

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವೊ
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ ೯೨

ಆಯುಧಂಗಳಲೇನು ನೀ ನಾ
ಗಾಯುತದ ಬಲನೆಂಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡ ಬೇಹುದಲೆ
ಆಯಿತೇ ಸಮಜೋಳಿ ನಿನಗದು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾಹತ್ತಿಗನುವಾದ ೯೩

ಧರಣಿಪತಿ ಕೇಳ್ಮಾಗಧನ ಮಂ
ದಿರದ ರಾಜಾಂಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿಂದುದು
ಪುರದ ಹೊರ ಬಾಹೆಯಲಿ ಕೃತ ಸಂ
ಚರಣ ಕಾರ್ತಿಕಶುದ್ಧಪಾಡ್ಯದೊಳಾಹವಾರಂಭ ೯೪

ಸಿಡಿಲು ಬೊಬ್ಬಿಡುವಂತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕಲೀಯದೆ ತಿರುಗಿದರು ಗಡ
ಬಡಿಸಿ ದಂಡೆಯೊಳೊತ್ತಿದರು ಸಮ
ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ ೯೫

ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕು ಹರಿಯರು ಕೊಂಡ ಹೆಜ್ಜೆಯ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಗಳು
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ ೯೬

ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆಮುರಿವ ಸಕುಟುಂಬ ಡೊಕ್ಕರ
ಕಡಸಿ ಕತ್ತರಿ ಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವಂಗುಲ ದುವಂಗುಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆಂದ ೯೭

ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬಂಧದಲಿ ಕರ
ವಳಯದಲಿ ಕೈದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ೯೮

ಅಗಡಿಯಲಿ ಲೋಟಿಸಿ ನಿರಂತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು ೯೯

ಧೂಳಿ ಕುಡಿದುದು ಬೆಮರನಾ ಕೆಂ
ಧೂಳಿ ನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳ ತೆಕ್ಕೆಯ ತವಕಿಗರು ಹೆಣಗಿದರು ಪುಟಭಟರು ೧೦೦

ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ೧೦೧

ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲ ಭಯಂಕರ
ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತ ವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿ ವಜ್ರನೆಂದುದು ಮಗಧ ಪರಿವಾರ ೧೦೨

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೂಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ೧೦೩

ಬಾಳ ಹೋಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೊ ಬಿರು ಹೊಯ್ಲ ಧಾರೆಯ ಕಿಡಿಯ ತುಂಡುಗಳೊ
ತೋಳ ನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ೧೦೪

ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿ ದಡೌಕಿ ಧಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ೧೦೫

ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೋ ಭೈ
ರವನ ಫಣೆಗಣ್ಣಾಟವೋ ಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ೧೦೬

ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝಣು ಝಣು
ಝಣು ಜಗತ್ರಯ ಜಟ್ಟಿ ಝಣು ಝಣು
ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ ೧೦೭

ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ
ಢಾಯ್ಲ ರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ೧೦೮

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ೧೦೯

ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹು ಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ೧೧೦

ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದು ಬಿಂಕ ಬೀಯದು ನೋಯದಾಟೋಪ
ತೆತ್ತ ಕೈ ಕಂಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋಂಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ೧೧೧

ಅರಸ ಕೇಳೈದನೆಯ ದಿವಸದೊ
ಳುರುಭಯಂಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈ ಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ ೧೧೨

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದುಭಯದಬಿಗುಹಿನಲಿ
ಉರುಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ೧೧೩

ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ೧೧೪

ಹೊರಗೆ ಬಲಿದೊಳಡಿಳ್ಳವನು ಪರ
ರರಿಯದಂತಿರೆ ತಿವಿದ ಮಗಧನ
ಪರಿಯನರಿದನು ದನುಜರಿಪು ಪರರಿಂಗಿತಜ್ಜನಲೆ
ಅರಿವುದರಿದೆ ಚರಾಚರಂಗಳ
ಹೊರಗೊಳಗು ತಾನದಿಲ್ಲಿದ
ನರಿಯನೇ ಶಿವಯೆಂದನಾ ಜನಮೇಜಯನು ನಗುತ ೧೧೫

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿ ನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿವೃಕೋದರನನಿಲರೂಪ ಧ್ಯಾನಪರನಾದ ೧೧೬

ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ
ಆ ನಗೆಯನೇ ವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮಂಡಲದಂತೆ ತಿರುಗಿದನಾ ಜರಾಸಂಧ ೧೧೭

ಬರಸೆಳೆದು ಕರದಿಂದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸಂಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ೧೧೮

ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹು ಸತ್ವದಲಿ ೧೧೯

ತಿರುಹಿದನು ನೂರೆಂಟು ಸೂಳನು
ಧರೆಯೊಳಪ್ಪಳಿಸಿದನು ಬಳಿಕಾ
ಪುರ ಜನದ ಪರಿಜನದ ಹಾಹಾ ರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ ೧೨೦

ಮನೆಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವಂಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೋಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕಂಡಸುರಹರ ಸಾರಿದನು ಕೈ ನೆಗಹಿ ೧೨೧

ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ ೧೨೨

ಮುರಿದು ಕೆಡಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದನು ನಾನಾ ದ್ವೀಪಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊಂಡು ನಗರದ
ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ ೧೨೩

ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈಮುಗಿದು ೧೨೪

ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿಂದಾಯ್ತು ನಿಜ ರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎವಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು ೧೨೫

ನಗರಜನ ಮಂತ್ರಿಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗಗೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು ೧೨೬

ಶವವ ಸಂಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು೧೨೭

ಅವನ ಸಂಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತಂ
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮

ತೇರುಗಳ ತೇಜಿಗಳನಾ ಭಂ
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ
ಧಾರುಣಿಯನವಗಿತ್ತು ಸಕಳ ಮ
ಹೀರಮಣರನು ಕಳುಹಿ ಬಂದನು
ವೀರನಾರಾಯಣನು ಶಕ್ರಪ್ರಸ್ಥಪುರವರಕೆ ೧೨೯

ಸಂಕ್ಷಿಪ್ತ ಭಾವ
Lrphks Kolar

ರಾಜಸೂಯಯಾಗಕ್ಕೆ ಸಿದ್ಧತೆ. ಭೀಮನಿಂದ ಜರಾಸಂಧ ವಧೆ.

ನಾರದರು ತೆರಳಿದ ನಂತರ ಧರ್ಮಜನು ಆಪ್ತರೊಂದಿಗೆ ಸಮಾಲೋಚನೆ ಮಾಡಿದನು. ಕೃಷ್ಣನನ್ನು ಕರೆತಂದರು. ರಾಜಸೂಯದ ಬಗ್ಗೆ ಎಲ್ಲರೂ ಸೇರಿ ಆಲೋಚಿಸಿದರು. ಸಕಲ ರಾಜರುಗಳನ್ನು ಗೆಲ್ಲಬೇಕಾಗಿರುವ ಬಗ್ಗೆ ಮಾತುಗಳಾದವು. ಕೃಷ್ಣನು ಧರ್ಮಸಂರಕ್ಷಣೆಯ ಕಾರಣದಿಂದ ಅತ್ಯಂತ ದುಷ್ಟ ಬಲಶಾಲಿಗಳಾದವರನ್ನು ಈ ನೆಪದಲ್ಲಿ ಸೋಲಿಸಬಹುದೆಂದು ಯೋಚಿಸಿದನು.  ಇವರಲ್ಲಿ ಜರಾಸಂಧ ಪ್ರಮುಖ. ಅವನ ಹಿನ್ನೆಲೆ ಹೀಗಿದೆ. 

ಮಗಧದ ರಾಜ ಬೃಹದ್ರಥನಿಗೆ ಪುತ್ರ ಸಂತಾನವಿಲ್ಲದ್ದರಿಂದ ದುಃಖಿತನಾಗಿದ್ದ ಸಮಯದಲ್ಲಿ ಕೌಶಿಕ ಮುನಿಯ ವರ ಪ್ರಸಾದದ ರೂಪವಾಗಿ ಒಂದು ಮಾವಿನ ಹಣ್ಣನ್ನು ಇಬ್ಬರು ಪತ್ನಿಯರು ತಿಂದರು. ನಂತರದಲ್ಲಿ ಇಬ್ಬರ ದೇಹದಿಂದ ಅರ್ಧ ಅರ್ಧ ಭಾಗವುಳ್ಳ ಶಿಶುಗಳು ಜನಿಸಲು ಅವರೆಲ್ಲ ಹೆದರಿ ಅವುಗಳನ್ನು ಬಿಸುಟರು. ಆಗ ಜರೆ ಎಂಬ ರಾಕ್ಷಸಿಯು ಕರುಣೆಯಿಂದ ಆ ಸೀಳುಗಳನ್ನು ಕೂಡಿಸಲು ಶಿಶುವಾಯ್ತು. ಜರಾಸಂಧನೆಂದು ಹೆಸರಾಯಿತು. 

ಜರಾಸಂಧ ಬಲು ಪರಾಕ್ರಮಿ. ಸೋಲರಿಯದ ವೀರ. ಸಕಲರನ್ನೂ ಗೋಳಾಡಿಸುತ್ತಿದ್ದನು. ನೂರಾರು ರಾಜರು ರಾಜಪುತ್ರರುಗಳು ಅವನ ಬಂಧನದಲ್ಲಿದ್ದರು. ಇವನನ್ನು ಸೋಲಿಸದೆ ರಾಜಸೂಯ ಸಾಧ್ಯವಿಲ್ಲ ಎಂದಾಗ ಭೀಮಾರ್ಜುನರು ಮುಂದೆ ಬಂದರು. ಕೃಷ್ಣನು ಅವರೊಂದಿಗೆ ಮಗಧದ ಕಡೆಗೆ ಹೊರಟನು. ಇತ್ತ ಇತರ ರಾಜರುಗಳಿಗೆ ದೂತರು ಓಲೆ ತೆಗೆದುಕೊಂಡು ಹೊರಟರು. ಯಾಗದ ಪೂರ್ವಭಾವಿ ಸಿದ್ಧತೆಗಳು ಆರಂಭವಾದವು.

ವಿಪ್ರವೇಷದಲ್ಲಿ ಹರಿ, ಭೀಮ ಮತ್ತು ಅರ್ಜುನರು ಮಗಧದ ಅರಮನೆಯನ್ನು ವಿರುದ್ಧ ದಿಕ್ಕಿನಿಂದ ಪ್ರವೇಶಿಸಿದರು. ಮೊದಲಿಗೆ ಇವರನ್ನು ಬ್ರಾಹ್ಮಣರೆಂದು ಬಗೆದು ಸತ್ಕರಿಸಿದರೂ ಜರಾಸಂಧನಿಗೆ ಅನುಮಾನ ಮೂಡಿತು. ಕೃಷ್ಣನನ್ನು ಮೂದಲಿಸಿದನು. ಇವರಿಬ್ಬರನ್ನು ಪರಿಹಾಸ್ಯ ಮಾಡಿದನು. ಕೊನೆಯಲ್ಲಿ ಇವರು ಮೂವರೊಳಗೆ ಒಬ್ಬನೊಂದಿಗೆ ಕಾದಾಟವೆಂದು ನಿಶ್ಚಯವಾಯಿತು.

ಜರಾಸಂಧ ಭೀಮನನ್ನು ಆರಿಸಿಕೊಂಡನು. ಮಲ್ಲಯುದ್ಧ ಮೊದಲಾಯಿತು. ಇಬ್ಬರೂ ಸಾಹಸಿಗಳು. ಜಗಜಟ್ಟಿಗಳು. ಸತತವಾಗಿ ವಿವಿಧ ಪಟ್ಟುಗಳಿಂದ ಒಬ್ಬರನ್ನೊಬ್ಬರು ನೋಯಿಸುತ್ತಾ ಐದು ದಿನ ಹೋರಾಡಿದರು. ಜರಾಸಂದನ ಸತ್ತ್ವ ಕಡಿಮೆಯಾಗುತ್ತ ಬಂದದ್ದನ್ನು ಕಂಡ ಕೃಷ್ಣನು ಭೀಮನಿಗೆ ಅವನನ್ನು ಕೊನೆಗಾಣಿಸಲು ಪ್ರೋತ್ಸಾಹಿಸಿದನು. ಭೀಮ ಜರಾಸಂಧನನ್ನು ಎರಡಾಗಿ ಸೀಳಿದನು. ಆದರೆ ತಕ್ಷಣದಲ್ಲಿಯೇ ಮತ್ತೆ ಆ ಸೀಳುಗಳು ಸೇರಿಕೊಂಡವು. ಹೀಗೆ ಹಲವು ಬಾರಿ ನಡೆಯಿತು. ಕೊನೆಗೆ ಕೃಷ್ಣ ತನ್ನ ಬೆರಳುಗಳನ್ನು ಪಲ್ಲಟವಾಗಿ ಇಟ್ಟುಕೊಂಡು ಸನ್ನೆ ಮಾಡಿದನು. ಭೀಮನು ಈ ಬಾರಿ ಸೀಳಿದಾಗ ಪಲ್ಲಟವಾಗಿ ಬಿಸುಟನು. ಹೀಗೆ ಜರಾಸಂಧನ ಮರಣವಾಯಿತು.

ಪ್ರಜೆಗಳಿಗೆ ಸಮಾಧಾನ ಹೇಳಿ, ಜರಾಸಂಧನ  ಮಗ ಸಹದೇವನನ್ನು ರಾಜನನ್ನಾಗಿಸಿ, ಸೆರೆಯಲ್ಲಿದ್ದ ರಾಜರುಗಳನ್ನು ಬಿಡಿಸಿ ಅವರೆಲ್ಲರನ್ನೂ ರಾಜಸೂಯ ಯಾಗಕ್ಕೆ ಆಮಂತ್ರಿಸಿ ಇವರುಗಳು ಇಂದ್ರಪ್ರಸ್ಥಪುರಕ್ಕೆ ವಾಪಸಾದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ