ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ23


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ - ಮೂರನೆಯ ಸಂಧಿ


ಭೂಪತಿಯ ನೇಮದಲಿ ಜಂಬೂ
ದ್ವೀಪ ನವ ಖಂಡದಲಿ ಸಕಳಮ
ಹೀಪತಿಗಳನು ಗೆಲಿದು ಕಪ್ಪವ ತಂದನಾ ಪಾರ್ಥ

---

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವಪುರಿಗೆ ಲಕ್ಷ್ಮೀ
ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿಂಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ ೧

ಕಂಡು ಕೃಷ್ಣನನಿವರ ಕಾಣಿಸಿ
ಕೊಂಡನರಸು ಕ್ಷೇಮ ಕುಶಲವ
ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕಂಡೆವೈ ನಿನ್ನಮಳ ಕರುಣಾ
ಖಂಡ ಜಲಧಿಯ ಭಕ್ತ ಜನಕಾ
ಖಂಡಲದ್ರುಮವೆಂದು ತಕ್ಕೈಸಿದನು ಹರಿಪದವ ೨

ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕಂದವನು ಮಗಧನ
ತೊಡಕಿ ತೋಟಿಯ ಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬಂದಂದವನು ವಿಸ್ತರಿಸಿದನು ಮುರವೈರಿ ೩

ಎಲೆ ಮಹೀಪತಿ ನಿನ್ನ ಯಜ್ಜ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನ ಕುಲಕೆ ಯವಸಾಂಬು ಗೋಚರವೆ
ನೆಲನ ಗರುವರ ಗೊಂದಣವನಂ
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆಂದ ೪

ರಚಿಸು ಯಜ್ಜಾರಂಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರೆಸಿದರಾ ಕ್ಷಣಕೆ ಬಹೆವು
ಸಚಿವರಾವೆಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆಂದನು ದಾನವಧ್ವಂಸಿ ೫

ಎಂದು ಕಳುಹಿಸಿಕೊಂಡು ದೋರಕಿ
ಗಿಂದಿರಾಪತಿ ಮಾಗಧನ ರಥ
ದಿಂದ ಬಿಜಯಂಗೈದನಿನಿಬರು ಕಳುಹಿ ಮರಳಿದರು
ಬಂದ ವೇದವ್ಯಾಸ ಧೌಮ್ಯರ
ನಂದು ಕರೆಸಿ ಯುಧಿಷ್ಠಿರನು ನಿಜ
ಮಂದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ೬

ಅಕಟ ನಾರದನೇಕೆ ಯಜ್ಜ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜಂಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿಂತಿಸಿದ ೭

ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರೆ ಕೀರ್ತಿಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲಿ
ಬಣಗುಗಳು ನಾವೆಂದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡುವಡಾಯ್ತು ತೆರನೆಂದರಸ ಬಿಸುಸುಯ್ದ ೮

ಎನಲು ಧಿಮ್ಮನೆ ನಿಂದು ಭುಗಿಲೆಂ
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾಂಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾ ರಂಗದಲಿ ಹಾ
ಯೆನುತ ತಲೆದೂಗಿದನು ಘನಶೌರ್ಯಾನುಭಾವದಲಿ ೯

ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣಿಗಳಿವು ನಾಳಿನಲಿ ಕಬ್ಬಿನ
ಕಣಿಗಳೋ ಗಾಂಢೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆಂದನಾ ಪಾರ್ಥ ೧೦

ಸಕಲ ಜಂಬೂದ್ವೀಪ ಪರಿಪಾ
ಲಕರ ಭಂಡಾರಾರ್ಥಕಿದೆ ಸು
ಪ್ರಕಟವೆಂದುಂಗುರವನಿತ್ತನು ನೃಪನ ಹಸ್ತದಲಿ
ಸುಕರ ದುಷ್ಕರವೆಂಬ ಚಿಂತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸಂಹರಿಪೆ ತಾ ವೀಳೆಯವನೆನಗೆಂದ ೧೧

ಪೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊಂಡಾಡಿ
ಈತನುತ್ತರದೆಸೆಗೆ ಭೀಮನು
ಶಾತಮನ್ಯುವದೆಸೆಗೆ ಯಮಳರ
ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ ೧೨

ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತಂದಳು ತಳಿಗೆ ತಂಬುಲ ಮಂಗಳಾರತಿಯ ೧೩

ಪರಮ ಲಗ್ನದೊಳಿಂದು ಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶಸ್ಥಿತಿಯ
ಕರಣ ತಿಥಿ ನಕ್ಷತ್ರವಾರೋ
ತ್ಕರದಲಭಿಮತ ಸಿದ್ಧಿ ಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪

ಅರಸ ವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವಂದೆರಗಿ ಕುಂತಿಯ
ಚರಣ ಧೂಳಿಯ ಕೊಂಡು ವಿಪ್ರವ್ರಜಕೆ ಕೈಮುಗಿದು
ಅರಸಿಯರು ದೂರ‍್ವಾಕ್ಷತೆಯ ದಧಿ
ವಿರಚಿತದ ಮಾಂಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವಂಟರರಮನೆಯ ೧೫

ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣಿಗೆ ಮನವಳುಕಿ ಕೊಟ್ಟನು
ತುರಗಗಜ ರಥಧನ ವಿಲಾಸಿನಿ ಜನವನುಚಿತದಲಿ ೧೬

ಅವನ ಕಾಣಿಸಿಕೊಂಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ
ಅವನಿಪತಿ ಕಟದೇವನೆಂಬವ
ನವಗಡಿಸಿ ಸರ್ವಸ್ವವನು ಕೊಂ
ಡವನ ಬಲಸಹಿತಾ ದ್ಯುಮತ್ಸೇನಕನ ಝೋಂಪಿಸಿದ ೧೭

ಆತನನು ಗೆಲಿದನು ಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ
ಆತನರ್ಥವಕೊಂಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮

ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆಂಬವನು
ಈ ನರನ ಶರಜಾಲವದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿಂದ್ರಾದ್ಯರಿಗೆ ಸದರವೆ ರಾಯ ಕೇಳೆಂದ ೧೯

ಮುರಿಯದಾ ಬಲವೀತನುರುಬೆಗೆ
ಹರಿಯದೀ ಬಲವುಭಯ ಬಲದಲಿ
ಕುರಿದರಿಯ ಕುಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರಿವುಗಳ ಬೇಳಂಬವನು ಬೇ
ಸರದೆ ಕಾದಿದನೆಂಟು ದಿನ ಭಗದತ್ತ ನೀತನಲಿ ೨೦

ಆವನೈ ನೀನಧಿಕತರ ಸಂ
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯಂಗೆ ಸಖರಿಂ
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆಂದನು ಕಂಡನರ್ಜುನನ ೨೧

ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣದೇವನ
ಮೇದಿನಿಯ ಸಾಮ್ರಾಜ್ಯಪದವಿಯ ರಾಜಸೂಯವನು
ಆದರಿಸಿ ಸಾಕೆನಲು ಗಜಹಯ
ವಾದಿಯಾದ ಸಮಸ್ತ ವಸ್ತು ವ
ನೈದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ ೨೨

ಒಂದು ತಿಂಗಳು ಪಲವು ಮನ್ನಣೆ
ಯಿಂದ ಮನ್ನಿಸಿ ತನ್ನ ಸೇನಾ
ವೃಂದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮುಂದೆ ನಡೆದನು ರಾಮಗಿರಿಯಲಿ
ನಿಂದು ಕಪ್ಪವಕೊಂಡು ನಡೆದನು
ಮುಂದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩

ಆ ಗಿರೀಂದ್ರ ನಿವಾಸಿಗಳ ಸರಿ
ಭಾಗ ಧನವನು ಕೊಂಡು ಬಳಿಕ ಮ
ಹಾಗಜಾಶ್ವನ ಸೂರೆಗೊಂಡನು ಮುಂದೆ ದಂಡೆತ್ತಿ
ಆ ಗಯಾಳರ ಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳೆಂದ ೨೪

ಗಿರಿಯ ತಪ್ಪಲ ವನಚರರ ಸಂ
ಹರಿಸಿ ಮುಂದೆ ಬೃಹಂತಕನ ಕಾ
ತರಿಸಿ ಕಾಣಿಸಕೊಂಡು ಸೇನಾಬಿಂದು ನಗರಿಯಲಿ
ಇರವ ಮಾಡಿ ಸುದಾಮ ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊಂಡು ವುಲೂಕರನು ಪೌರವರ ಭಂಗಿಸಿದ ೨೫

ಮುಂದೆ ದಸ್ಯುಗಳೇಳುವನು ಕ್ಷಣ
ದಿಂದ ಕಾಶ್ಮೀರಕರ ಸಾಧಿಸಿ
ಬಂದು ದಶಮಂಡಲದ ಲೋಹಿತರನು ವಿಭಾಡಿಸಿದ
ತಂದ ಕಪ್ಪದಲಾ ತ್ರಿಗರ್ತರ
ನಂದು ಹದುಳಿಸಿ ಗರುವಿತರನಾ
ಟಂದು ತೆಂಕಣದಾಭಿಚಾರಕ ರೂಷಕರ ಗೆಲಿದ ೨೬

ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊಂಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿಂಹನಗರಿಯಲಿ
ಮೇಲೆ ವಂಗರ ಮುರಿದು ವರನೇ
ಪಾಳಕರ‍್ಪರ ಹೂಣಿಯರನು ವಿ
ಶಾಲ ಕಾಂಬೋಜಾದಿಗಳನಪ್ಪಳಿಸಿದನು ತಿರುಗಿ ೨೭

ಪಾರಶೀಕ ಕಿರಾತ ಬರ‍್ಬರ
ಪಾರಿಯಾತ್ರರ ಮುರಿದು ಸರ‍್ವ ವಿ
ಹಾರವನು ಮಾಡಿದನು ಮ್ಲೇಚ್ಛ ಸಹಸ್ರಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಬುರಸಹಣ ಭೂಪರೊ
ಳಾರುಭಟೆಯಲಿ ಕಾದಿ ಕೊಂಡನು ಸಕಲ ವಸ್ತುಗಳ ೨೮

ಬೆದರಿಸಿದನಾ ಹಿಮಗಿರಿಯ ಪಾ
ರ್ಶ್ವದ ಕಿರಾತರ ಮುಂದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿಂದ ನಿಚಯವ
ಸದೆದು ಹತ್ತಿದನಗ್ರಶಿಖರಕೆ ಪಾರ್ವತೀಪಿತನ ೨೯

ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇಧ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆಂದ ೩೦

ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರುಂಟೆಂದಾ ಪುಳಿಂದರ
ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿಂ
ಪುರುಷ ಖಂಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನಂಗಳಲಿ ೩೧

ಅದು ಗಣನೆಗೊಂಬತ್ತು ಸಾವಿರ
ವದರೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪುದುತದೀಯ ಜನಂಗಳಿತ್ತುದು
ಸುದತಿಯರನಾ ಮಂಡಲಕೆ ಮೀಟಾದ ವಸ್ತುಗಳ ೩೨

ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩

ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುಡುಕಿದುದು ನಾನಾ ದಿಗಂತವ
ತಡೆಯದದುಭುತವಾದ್ಯ ಗಜಹಯ ರಥದ ನಿರ್ಘೋಷ ೩೪

ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿವರುಷದಲ್ಲಿಯ
ಸೀಮೆಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆಂದ ೩೫

ಉತ್ತರೋತ್ತರ ದೇವ ಭೂಮಿಗ
ಳೆತ್ತಣವರೀ ದಳನಿಚಯ ತಾ
ನೆತ್ತ ಭೂರಿದ್ವನಿಯನೀ ಗಜಬಜವನೀ ಜನವ
ಎತ್ತಲೆಂದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾಂಗನೆಯರನು ಮನ್ನಿಸಿ ಕಂಡು ಫಲುಗುಣಗೆ ೩೬

ಎರಡು ಕಡೆಯಂಬುಧಿಯ ಪಾರ್ಶ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ೩೭

ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟದಾನವ ಮಂಡಲೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ೩೮

ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದುದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊಂಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯ ತರವೆಂದ ೩೯

ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರುಂಟು ವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗಂಜಿಸಿ ಕಳೆದುಕೊಂಡನು ಸಕಲವಸ್ತುಗಳ ೪೦

ಹರಿದು ಹತ್ತಿತು ಗಂಧಮಾದನ
ಗಿರಿಯ ಸುತ್ತಣ ಯಕ್ಷ ವಿದ್ಯಾ
ಧರರನಂಜಿಸಿ ಕೊಂಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜಂಬು ನೇರಿಲ
ಮರನ ಕಂಡರು ಗಗನಚುಂಬಿತ
ವೆರಡು ಸಾವಿರ ಯೋಜನಾಂತದೊಳತಿ ವಿಳಾಸದಲಿ ೪೧

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾನದಿಯೆರಡು ತಡಿವಿಡಿದು ೪೨

ಆ ರಸೋದಕ ಪಾನವೇ ಸಂ
ಸಾರ ಸೌಖ್ಯದ ಸಿದ್ಧಿಯಿತರಾ
ಹಾರವಿಂಧನ ತಂಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿಂ ಮನ್ನಿಸಿದರರ್ಜುನನ ೪೩

ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊರೆಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನು ಪವನ ಸರೋವರ
ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ ೪೪

ಲಲಿತ ದಿವ್ಯಾಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ೪೫

ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗಂಧಮಾದನ
ಸಾನುವನು ವೆಂಠಣಿಸಿಯಡರಿತು ಚೂಣಿಶೃಂಗದಲಿ
ಆ ನಗೇಂದ್ರನನಿಳಿದು ಪಡುವಣ
ಕಾನನಂಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ ೪೬

ಅಲ್ಲಿ ಸಾಗರ ತೀರ ಪರಿಯಂ
ತೆಲ್ಲಿ ಗಜಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ೪೭

ಎಡಕಡೆಯಲೊಂಬತ್ತು ಸಾವಿರ
ನಡು ನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕಂಡರು ಮಂದರಾಚಲವ ೪೮

ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ನೋಡಬೇಕೆಂದರ್ಜುನನ ಸೇನೆ
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ೪೯

ಇಳುಹಿದರು ಚೂಣಿಯನು ಮುಂದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ೫೦

ಶಕರು ಖದ್ಯೋತ ಪ್ರತಾಪರು
ವಿಕಳ ಚಿಂಘರು ದೀರ್ಘಮಯವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳ ಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ೫೧

ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವಂಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊಂಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತಂದ ೫೨

ಅದು ಮಹಾ ರಮಣೀಯತರವಂ
ತದರೊಳಿದ್ದುದು ಶುದ್ಧಭೋಗಾ
ಸ್ಪದರು ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ
ಕುದುರೆ ರಥ ಗಜ ಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳಂ
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩

ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯಂ
ತರ ನಡೆದನೊಂಬತ್ತು ಸಾವಿರ ಯೋಜನಾಂತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ ೫೪

ನೀಲ ಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲು ದುರ್ಗದ ಸಂಧಿಗೊಂದಿಯೊ
ಳಾಳು ಹರಿದುದು ಸೂರೆಗೊಂಡು ವಿ
ಶಾಳ ವಸ್ತುವ ತಂದರಲ್ಲಿದ್ದ ರಸುಗಳ ಗೆಲಿದು ೫೫

ಎರಡು ಸಾವಿರದುದ್ದವದು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊಂಡು ನವ ಸಾ
ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ ೫೬

ಅರಸ ಕೇಳಲ್ಲಿಂದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿಕೊಂಡರಲ್ಲಿಯ ಸಾರವಸ್ತುಗಳ ೫೭

ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ
ಬಳಸಿ ಬಂದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕಂಡೀತನನು ಹೊಗಳಿದರು ತಮತಮಗೆ ೫೮

ಈತ ಭಾರತ ವರುಷಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವ ಭೂಮಿಪರ
ಈತ ಗೌರೀಸುತನವೋಲ್ ಪುರು
ಹೂತ ತನಯನವೋಲು ಭುವನ
ಖ್ಯಾತನೆಂದಾ ಸ್ತ್ರೀಕಟಕ ಕೊಂಡಾಡಿತರ್ಜುನನ ೫೯

ತನತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ ೬೦

ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃಂಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ
ಭಾರಣೆಯ ಮುಂಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ೬೧

ಅರಸು ಮೋಹರ ಹತ್ತಿತಾಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ೬೨

ನೆರೆದರಲ್ಲಿಯ ನೃಪರು ದೂತರ
ಹರಿಯ ಬಿಟ್ಟರು ಪಾರ್ಥನಿದ್ದೆಡೆ
ಗರಸ ಕೇಳವರುಗಳು ಬಂದರು ಕಂಡರರ್ಜುನನ
ಗಿರಿಯ ನಿಳಿಯದಿರಿತ್ತಲುತ್ತರ
ಕುರುಗಳಿಹ ಸಂಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆಂದರವರಂದು ೬೩

ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿ ಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆ ಬಾಂಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆಂದರು ಚರರು ಫಲುಗುಣಗೆ ೬೪

ಮಾಣಲದು ನಮಗವರು ಬಂಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣಿಯಾವುದು ನಿಮ್ಮ ದೇಶದೊಳ್ಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತಂದು ಕೊಟ್ಟರು ಸಕಲ ವಸ್ತುಗಳ ೬೫

ತಿರುಗಿತಲ್ಲಿಂದಿತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿಂ
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬಂದುದು ತೆಂಕ ಮುಖವಾಗಿ ೬೬

ಕಳುಹಿ ಕಳೆದನು ಹಿಂದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರಂಗಳಿಗೆ
ನೆಲನನಗಲದ ವಸ್ತುವಿದನೆಂ
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ ೬೭

ಸಂಕ್ಷಿಪ್ತ ಭಾವ

ಅರ್ಜುನನು ಜಂಬೂದ್ವೀಪ ಮತ್ತು ಹಲವು ಭಾಗಗಳ ರಾಜರುಗಳನ್ನು ಗೆದ್ದು ಬಂದದ್ದು.

ಕೃಷ್ಣನು ಧರ್ಮಜನಿಗೆ ಜರಾಸಂಧನ ವಧೆಯ ವೃತ್ತಾಂತವನ್ನೆಲ್ಲ ತಿಳಿಸಿ ಯಾಗಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲು ತಿಳಿಸಿದನು. ಜಂಬೂದ್ವೀಪದ ಹಾಗೂ ಅದರ ಸುತ್ತಮುತ್ತಲಿನ ರಾಜರುಗಳನ್ನು ಜಯಿಸುವುದು ಹೇಗೆ ಎಂದಾಗ ಅರ್ಜುನನು ಮುಂದೆ ಬಂದನು. ಕೊನೆಗೆ ಉತ್ತರ ದಿಕ್ಕಿಗೆ ಅರ್ಜುನ, ಪೂರ್ವಕ್ಕೆ ಭೀಮ, ದಕ್ಷಿಣಕ್ಕೆ ಸಹದೇವ ಮತ್ತು ಪಶ್ಚಿಮಕ್ಕೆ ನಕುಲರನ್ನು ನೇಮಿಸಿ ಹರಸಿ ಕಳುಹಿಸಲಾಯಿತು. ಇತ್ತ ಕೃಷ್ಣನು ಕರೆದ ಕೂಡಲೇ ಬರುವುದಾಗಿ ತಿಳಿಸಿ ತನ್ನ ಊರಿಗೆ ಮರಳಿದನು.

ಅರ್ಜುನನು ಪಯಣದ ಮೇಲೆ ಪಯಣ ನಡೆಸಿ ದಾರಿಯುದ್ದಕ್ಕೂ ಇದ್ದ ರಾಜ್ಯಗಳನ್ನು ಜಯಿಸುತ್ತಾ ಹೊರಟನು. ಇವನ ಸೈನ್ಯದ ಆರ್ಭಟ, ಇವನ ಪರಾಕ್ರಮಗಳ ಎದುರು ಎಲ್ಲರೂ ತಲೆಬಾಗಿದರು. ತಮ್ಮಲ್ಲಿದ್ದ ಅಪೂರ್ವವಾದ ಧನಕನಕ ವಸ್ತುಗಳನ್ನು, ಸೈನ್ಯವನ್ನು ಕಾಣಿಕೆಯಾಗಿ ಕೊಟ್ಟರು. ಇಲ್ಲಿ ಹಲವಾರು ರಾಜರುಗಳ  ಹೆಸರುಗಳನ್ನು ವರ್ಣಿಸಲಾಗಿದೆ. ಜಂಬೂನದಿಯ ದಂಡೆಯುದ್ದಕ್ಕೂ ಇದ್ದ ರಾಜರುಗಳನ್ನೂ ಜಯಿಸಿದನು. ಉತ್ತರ ಕುರುಗಳಿದ್ದ ಭಾಗವನ್ನು ತನ್ನ ಬಂಧುಗಳೆಂಬ ಕಾರಣದಿಂದ ತಡವಲಿಲ್ಲ. ಉಳಿದಂತೆ ಎಲ್ಲ ಯಕ್ಷರು, ಗಂಧರ್ವರು, ಕಿನ್ನರರು, ಕಿರಾತಕರು, ಗಿರಿಜನರು, ತ್ರಿಗರ್ತರು ಇತ್ಯಾದಿ ಸಕಲ ರಾಜರುಗಳೂ ಇವನಿಗೆ ಮಣಿದರು. ಜಂಬೂದ್ವೀಪ, ಮಾಲ್ಯವಂತ ಪರ್ವತ, ಭುವನ ಪರ್ವತ, ಹಿಮಗಿರಿ, ಹೇಮಕೂಟ ಇತ್ಯಾದಿ ಉತ್ತರದಿಕ್ಕಿನಲ್ಲಿ ಇದ್ದ ಮಹತ್ವದ ಸ್ಥಳಗಳನ್ನೆಲ್ಲ ಸುತ್ತಾಡಿ ಅಪಾರವಾದ ಧನರಾಶಿಯನ್ನು ಪಡೆದು ರಾಜಸೂಯ ಯಾಗಕ್ಕೆ ಕಾಣಿಕೆಗಳೊಂದಿಗೆ ಬರಲುಹೇಳಿ ತನ್ನ ಸೈನ್ಯದೊಂದಿಗೆ ಮರಳಿದನು.

ಈ ವಿಜಯಗಳ ಮಧ್ಯದಲ್ಲೇ, ನಾರದರು ಪ್ರೇರಿಸಿದ ರಾಜಸೂಯದತ್ತಲಿನ ನಡೆಯ ವಿಜಯಗಳಿಂದ, ಏನೇನು ಕಾದಿದೆಯೊ ಎಂಬ ಅನಿಸಿಕೆ ಪ್ರಾಜ್ಞ ಧರ್ಮಜನಲ್ಲಿ ಕಾಡದಿರಲಿಲ್ಲ



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ