ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಲಿನಿ ರಘುನಾಥ


 ಶಾಲಿನಿ ರಘುನಾಥ್ ಭಟ್


ಡಾ. ಶಾಲಿನಿ ರಘುನಾಥ ಭಟ್ ಸಾಹಿತ್ಯ, ಜಾನಪದ, ಕ್ರೀಡೆ ಹೀಗೆ ಬಹುಮುಖಿ ಸಾಧಕರು.

ಶಾಲಿನಿ 1951ರ ಫೆಬ್ರವರಿ 14ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕಿಲಾರದ ಕೃಷಿಕ ಕುಟುಂಬದಲ್ಲಿ ಜನಿಸಿದರು.  ತಂದೆ ರಾಮಚಂದ್ರ ಹೆಗಡೆ.  ತಾಯಿ ವೇಣುಬಾಯಿ ಅವರು ಕೆ. ವಿ. ಸುಬ್ಬಣ್ಣನವರ ಅಕ್ಕ.  

ಹೆಣ್ಣು ಮಕ್ಕಳ ವಿದ್ಯೆಗೆ ಪ್ರೋತ್ಸಾಹವಿಲ್ಲದಿದ್ದರೂ ಆಯಿಯ ಪ್ರೋತ್ಸಾಹದಿಂದ ಶಾಲಿನಿ ಅವರ ವಿದ್ಯೆ ಕಲಿಕೆ ಸಾಗಿತು. ಪ್ರಾಥಮಿಕ ವಿದ್ಯಾಭ್ಯಾಸ ಹಲವಾರು ಕಡೆ ನಡೆಯಿತು.  ಧಾರವಾಡದಲ್ಲಿ ಚಿನ್ನದ ಪದಕದ ಸಾಧನೆಯೊಂದಿಗೆ ಸ್ನಾತಕೋತ್ತರ ಕನ್ನಡ ಎಂ.ಎ. ಪದವಿ ಪಡೆದರು.  ಇವರು ವ್ಯಾಸಂಗಕ್ಕೆ ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಪ್‌ ಪಡೆದ ಪ್ರತಿಭಾನ್ವಿತೆ.  ಭಾಷಾಂತರ, ಭಾಷಾವಿಜ್ಞಾನ, ಜಾನಪದ ವಿಷಯಗಳಲ್ಲಿ  ಡಿಪ್ಲೊಮ ಪಡೆದರು.  

ಶಾಲಿನಿ ಅವರು ಕ್ರೀಡೆಯಲ್ಲೂ ಮುಂದು. ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಅಥ್ಲೀಟ್ ಆಗಿ ಹೈಜಂಪ್, ಹರ್ಡಲ್ಸ್‌ನಲ್ಲಿ ಅಂತರ ವಿಶ್ವವಿದ್ಯಾಲಯ ದಾಖಲೆ ಸ್ಥಾಪಿಸಿದವರು. 

ಶಾಲಿನಿ ರಘುನಾಥ 1973ರಿಂದ ಅಧ್ಯಾಪಕಿ ವೃತ್ತಿ ಜೀವನ ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಸಂಸ್ಥೆಯಲ್ಲಿ ಅಧ್ಯಾಪಕಿ, ಪ್ರವಾಚಕಿ, ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಯನಪೀಠ, ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರವಾಚಕಿ, ಜಾನಪದ ವಿಭಾಗದ ಅಧ್ಯಕ್ಷೆ ಹೀಗೆ ಹಲವು ಜವಾಬ್ದಾರಿ ನಿರ್ವಹಿಸಿದರು. 

ಬಾಲ್ಯದಲ್ಲೇ ಜಾನಪದ ಸಾಂಸ್ಕೃತಿಕ ಲೋಕದ ಗೀಳು ಹಚ್ಚಿಕೊಂಡ ಡಾ|| ಶಾಲಿನಿ ರಘುನಾಥ, ಅಧ್ಯಾಪಕ ವೃತ್ತಿಯಿದ್ದರೂ ಸಂಶೋಧನೆ ಹಾಗೂ ಸಾಹಿತ್ಯದತ್ತ ಗಮನ ಹರಿಸಿದವರು. "ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಭಾಷೆಯ ಸಮಾಜೋಭಾಷಿಕ ಅಧ್ಯಯನ" ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಶಾಲಿನಿ ಅವರಿಗೆ 1995ರಲ್ಲಿ ಪಿಎಚ್‌.ಡಿ ಪದವಿ ನೀಡಿತು.

ಶಾಲಿನಿ ಅವರು ವಿದ್ಯೆಗಾಗಿ ಕಷ್ಟ ಪಟ್ಟಂತೆ ಹುದ್ದೆಗಾಗಿಯೂ ಹೋರಾಟ ಮಾಡಿ ನ್ಯಾಯಾಲಯದಲ್ಲೂ ಜಯ ಗಳಿಸಿದರು.  ಅನೇಕ  ಎಂ.ಫಿಲ್ ವಿದ್ಯಾರ್ಥಿಗಳಿಗೆ, ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜರ್ಮನಿಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಿಲ್ಲಾ ಜಾನಪದ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ನಿಘಂಟು ಕಮ್ಮಟ, ಸಮಾಜೋದ್ಧಾರ ವಿಚಾರ ಸಂಕಿರಣ, ವಿಧವಾ ವಿವಾಹ ಚಳವಳಿ ಸಂಕಿರಣ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ವಿಚಾರ ಸಂಕಿರಣ, ಭಾಷೆ ಮತ್ತು ಸಂಸ್ಕೃತಿ ಮೇಲಿನ ತರಬೇತಿ ಶಿಬಿರ, ನಾಟಕಗಳ ವಿಚಾರ ಸಂಕಿರಣ, ಅಖಿಲ ಭಾರತ ಜಾನಪದ ಸಮ್ಮೇಳನ ಮುಂತಾದ ನೂರಾರು ಕಡೆಗಳಲ್ಲಿ ಪ್ರಬಂಧ ಮಂಡನೆ ಮಾಡಿದರು. 

ಡಾ. ಶಾಲಿನಿ ಅವರು ಮೈಸೂರು ವಿಶ್ವವಿದ್ಯಾಲಯದ ‘ಕರ್ನಾಟಕ ವಿಷಯ ವಿಶ್ವಕೋಶ’ಕ್ಕೆ ತಮ್ಮಯ್ಯ ಕವಿ, ದೊಡ್ಡಬೆಲೆ ನಾರಾಯಣಶಾಸ್ತ್ರಿ, ಬೆಳ್ಳಾವೆ ನರಸಿಂಹಶಾಸ್ತ್ರಿ, ನಾಚಿರಾಜ ಮುಂತಾದವರ ಬಗ್ಗೆ ಲೇಖನಗಳನ್ನು ಬರೆದರು. ಜೀಶಂಪ, ದೇಜಗೌ, ಪ. ಸು. ಭಟ್ಟ, ಪ್ರೊ. ಮರಿಯಪ್ಪಭಟ್ಟ, ಶಿವಲಿಂಗಮ್ಮ ಕಟ್ಟಿ, ಬಿ.ವಿ.ಶಿರೂರ ಮುಂತಾದ ಹಲವಾರು ಅಭಿನಂದನ ಗ್ರಂಥಗಳಿಗೆ ಲೇಖನ ಬರೆದರು. 

ಡಾ. ಶಾಲಿನಿ ರಘುನಾಥ್ 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿದ್ದು, ವಿವಿಧ ಗ್ರಂಥಗಳಲ್ಲಿ ಸಂಗ್ರಹಿತಗೊಂಡಿವೆ. ಇವರು ಸುಮಾರು 30 ಗ್ರಂಥಗಳನ್ನು ಪ್ರಕಟಿಸಿದ್ದು, ಇವುಗಳಲ್ಲಿ 11 ಸಂಪಾದನೆಗಳಾಗಿವೆ.  ಇವರ ಕೃತಿಗಳಲ್ಲಿ ಮಹಿಳೆ ಮತ್ತು ಶಿಕ್ಷಣ, ಉಪಭಾಷಾ ಅಧ್ಯಯನ, ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಹಾಡುಗಳು, ಸೌರಭ, ಸಮನ್ವಿತ, ಅಭಿವ್ಯಕ್ತಿ ಮುಂತಾದವು ಸೇರಿವೆ.

ಡಾ. ಶಾಲಿನಿ ರಘುನಾಥ ಅವರಿಗೆ ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಲತಾಗುರು ಸಿದ್ಧಪ್ಪ ಪ್ರಶಸ್ತಿ, ತೀ.ನಂ.ಶ್ರೀ. ಸ್ಮಾರಕ ಪ್ರಶಸ್ತಿ, ಎನ್.ಎಂ.ಕೆ. ಆರ್.ವಿ. ಕಾಲೇಜಿನ ಶಾಶ್ವತಿ ಸಂಸ್ಥೆಯ ಸದೋದಿತ ಪ್ರಶಸ್ತಿ, ಕ.ಸಾ.ಪ. ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರಶಸ್ತಿ, ಜಾನಪದ ಅಕಾಡೆಮಿಯ ಬೆಳ್ಳಿ ಹಬ್ಬದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.  ಇವರು 2017ರಲ್ಲಿ ನಡೆದ ಅಖಿಲ ಭಾರತ ಜಾನಪದ ಸಮ್ಮೇಳನದ  ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು.

On the birthday of writer Dr. Shalini Raghunath Bhat 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ