ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ66


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ವಿರಾಟ ಪರ್ವ  - ಏಳನೆಯ ಸಂಧಿ


ಕದನ ಚೌಪಟಮಲ್ಲ ಪರಬಲ
ಮದನಮದಹರರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ

ನಾಲ್ಕು ಕಡೆಯಿಂದೆರಗಿದ ಶತ್ರುಗಳನ್ನು ಗೆಲ್ಲಬಲ್ಲ ವೀರನೂ, ಶತ್ರು ಸೈನ್ಯವೆಂಬ ಮನ್ಮಥನನ್ನು ದಹಿಸಬ್ಲಲ್ಲ ರುದ್ರನೂ ಆದ ಅರ್ಜುನನು ಶತ್ರುಗಳನ್ನು ಗೆದ್ದು ವಿರಾಟನ ಗೋವುಗಳನ್ನು ಬಿಡಿಸಿ ಊರಿಗೆ ಮರಳಿಸಿದನು.

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ೧

ಸುರಿಸುತಿವೆ ಕಂಬನಿಗಳನು ಗಜ
ತುರಗ ಚಯವೊರೆಯುಗಿದಡಾಯುಧ
ಮುರಿದು ಬಿದ್ದವು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿವೆ ಪಡಿ ಸೂರ್ಯ ಮಂಡಲವೆಂದನಾ ದ್ರೋಣ ೨

ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ
ಇದು ಸ್ಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ ೩

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹರವವಿದೆ
ತುರಗ ದಳ್ಳಿರಿ ಸಾರುತಿದೆ ಸಂ
ಗರಕೆ ಸಾಹಸಮಲ್ಲ ಮೊಳಗಿದನೆಂದನಾ ದ್ರೋಣ ೪

ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸ್ವಾಮಿಯ
ನಿಳಿಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ೫

ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದರೆ ತರಿವೆನು ಲೋಕಪಾಲಕರ
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ೬

ಹೊಕ್ಕುತಾ ಬಳಿಸಲಿಸಿದೊಡೆ ಹಿಂ
ದಿಕ್ಕಿಕೊಂಬವರಾರು ಹಗೆವನ
ಸಿಕ್ಕಿದುರಗನ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ೭

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕಲಬರಿ
ಗನಿಮಿಷರಿಗಳವಲ್ಲ ಬಲ್ಲೈ ಪಾರ್ಥನದಟುಗಳ ೮

ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರದ ವಾಸಿಗಳ ೯

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ ೧೦

ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ
ಮರುಳು ಹಾರುವ ಗದ್ಯಪದ್ಯದ
ಸರಸವಿದ್ಯೆಗಳಲ್ಲದೀ ಸಂ
ಗರದ ಕರ್ಕಶವಿದ್ಯೆ ನಿಮಗೇಕೆಂದನಾ ಕರ್ಣ ೧೧

ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸಿಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯವ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ೧೨

ಇಂದು ಪಿತೃದಿನವಿಂದು ಸಂಕ್ರಮ
ವಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭದಿನ ವಡ್ಡಂತಿ ಲೇಸೆಂದು
ಬಂದು ನಾನಾಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ೧೩

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳೆಸಿಯೆ ರಾಜಗುರುತನದಿಂದ ಬೆರೆತಿಹಿರಿ
ಬಿಲ್ಲವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ೧೪

ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗಳೊಳುಗುಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದೊಳು ಖರೆಯನಲಾ
ಕೀಳುಜಾತಿಗೆ ತಕ್ಕನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ ೧೫

ನಗುವೆ ವಿಪ್ರರನಾವರಾಯರ
ಮಗನು ಹೇಳಾ ದಾನಧರ್ಮಾ
ದಿಗಳೊಳರ್ಥವನಾರು ಕೊಂಬರು ದ್ವಿಜರು ಹೊರಗಾಗೆ
ಜಗವ ರಕ್ಷಿಸಲಾವು ಕೊಳ್ವೆವು
ಮಗುಳೆ ಕೊಡುವೆವು ಕ್ಷತ್ರವೈಶ್ಯಾ
ದಿಗಳು ಕೊಡುವರು ತತ್ಪರಿಗ್ರಹ ಯೋಗ್ಯರಲ್ಲೆಂದ ೧೬

ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬುವನೊ ಕೊಡುವವನೊ
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನಯ ಭವವ ನೆನೆಯೆಂದ ೧೭

ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ೧೮

ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತ
ನ್ನೋಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ೧೯

ಆಳುಮತ್ಸರದಧಿಕ ರೋಷದ
ಮೇಲು ನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗೆದನುಚಿತೋಕ್ತಿಯಲಿ ಸಂತೈಸಿ
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ೨೦

ಬಂದು ಭೀಷ್ಮಗೆರಗಿ ಕೈಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯ ಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತ ವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ೨೧

ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ ೨೨

ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ೨೩

ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವೊಡೆ
ಬೇಕು ಬೇಡೆಂಬವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ೨೪

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡುಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆಮಗುಂಟೆ ವೈರವ
ಕೊಂಡೆಸಗಬೇಕೆಂದು ನುಡಿದನು ಕೌರವರಾಯ ೨೫

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡು ಮಾಡಿಸಿದ ೨೬

ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮನಿಂದನು ಥಟ್ಟ ಮೇಳೈಸಿ
ವೀರಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ೨೭

ಇತ್ತಲಖಿಳ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತ ಮಝರೆನುತೆ
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ೨೮

ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲವರ ಸಾಹಸವ
ಅರಿತುಕೊಂಬೆನು ಕೊಲ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗು ವೇಗವ ನೋಡು ನೀನೆಂದ ೨೯

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳು ಫಲು
ಗುಣ ಕಣಾ ಬಂದವನು ಕುರುಕುಲ
ವನದವಾನಳನರಿಯೆನುತ್ತುತ್ತರನು ಗರ್ಜಿಸಿದ ೩೦

ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು
ಹಿಳುತ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ೩೧

ನಗುತಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೀದು ಹಾಯ್ದನು ಮುಂದೆ ಕೌರವರಾಯ ಮೋಹರಕೆ
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಕೆಯ ಸಸಿಯಂತಾಯ್ತು ಕೌರವಸೇನೆ ನಿಮಿಷದಲಿ ೩೨

ಬಿರಿದುವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಢ ಗರ್ಜನೆಗೆ
ಶಿರವೊಡೆದು ಸಿಡಿಯಿತು ಪದಾತಿಯ
ನರನ ಶಂಖಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿಬಿದ್ದುದು ಹೆದರಿ ಹೆಮ್ಮೈಸಿ ೩೩

ಎಲೆಲೆ ನರನೋ ಸುಭಟಜೀವರ
ದಳದುಳಿಗನೋ ದಿಟ್ಟರಾಯರ
ದಳದ ವಹ್ನಿಯೊ ಪಾರ್ಥನೋ ಫಡ ಕಾಲಭೈರವನೋ
ಗೆಲುವರಾವೆಡೆ ಕರ್ಣಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ೩೪

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರುಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊಕ್ಕ ಹಗೆವನ
ಸರಳಿಗುಸಿರನು ತೆರದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯನಿದಿರಿನೊಳು ೩೫

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ೩೬

ತುಡುಕಿ ಖಂಡವ ಕಚ್ಚಿ ಹಾರುವ
ಗಿಡುಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳ ನಡೆ
ಗೆಡಹಿದವು ಗರಿಸಹಿತ ಹಾಯ್ದವು ಹಯದ ಹೊಟ್ಟೆಯಲಿ ೩೭

ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮ ಸೀಳಾಗಿ ಬಿದ್ದವು ಗಜದ ಹೋಳುಗಳು
ಕೊರಳು ಹರಿದೊರತೆಯಲಿ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ೩೮

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟಿಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಕಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ೩೯

ಮುಂದೆ ಕವಿದಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ೪೦

ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಕುಲಕೆ ಸತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ೪೧

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತಧಾರೆಗಳು ೪೨

ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥಪಾವಕನುರುಹಿದನು ಮುಳಿದು ೪೩

ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಶ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ೪೪

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ ೪೫

ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನು ವೊಟ್ಟಿಗೆ ಕಾಲನರಮನೆಗೆ ೪೬

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ೪೭

ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ೪೮

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ೪೯

ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ೫೦

ಕೆಲವು ಕಡೆಗಂದಿಗಳ ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿಹರಿದು
ಮಲೆತು ಕಾಲಲಿ ನೆಲನ ಕರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗ ನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ ೫೧

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುನಿಂದರು ಮತ್ತೆ ಕಾಳಗಕೆ
ಅರಸು ಮೋಹರ ಮುರಿದ ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ೫೨

ಸಂಕ್ಷಿಪ್ತ ಭಾವ

ಅರ್ಜುನನು ವಿರಾಟನ ಗೋವುಗಳನ್ನು ಸೆರೆಯಿಂದ ಬಿಡಿಸಿದ್ದು.

ಯುದ್ಧಕ್ಕೆ ಸಿದ್ಧನಾಗಿ ಬಂದ ಅರ್ಜುನನನ್ನು ಕಂಡ ದ್ರೋಣರು ಭೀಷ್ಮನಿಗೆ ತಮ್ಮ ಕಡೆ ಆಗುತ್ತಿರುವ ಅಪಶಕುನಗಳ ಬಗ್ಗೆ ಹೇಳಿದರು. ನಾವು ಗೋವುಗಳನ್ನು ಸೆರೆ ಹಿಡಿದದ್ದೇ ತಪ್ಪು. ಈಗ ಪಾರ್ಥ ಬಂದಿದ್ದಾನೆ ಎಂದು ಚಿಂತಿತರಾದರು. ಆಗ ಕರ್ಣನು ಅವರನ್ನು ಮೂದಲಿಸಿದನು. ಪಾರ್ಥನನ್ನು ಹೊಗಳಿದ್ದು ಅವನಿಗೆ ಹಿಡಿಸಲಿಲ್ಲ. ಇವರುಗಳನ್ನು ಅವನು ಖೂಳರು, ದುಶ್ಚರಿತರು ಎಂದು ಬಯ್ದನು. ಆಗ ಕೋಪಗೊಂಡ ಕೃಪಾಚಾರ್ಯರು ಕರ್ಣನ ಮೇಲೆ ಹರಿಹಾಯ್ದರು. ಅದಕ್ಕೆ ಅವನು ನೀವುಗಳೇನಿದ್ದರೂ ಯಜ್ಞ, ಪೂಜೆ, ಹೋಮ ಅಂತ ದಾನ ದಕ್ಷಿಣೆ, ಭೋಜನ ಇಷ್ಟಕ್ಕೇ ಸರಿ ಎಂದು ಹೀಗಳೆದ. ಆಗ ಅಶ್ವತ್ಥಾಮ ಕೋಪಗೊಂಡು ಮುಂದೆ ಬಂದ. ಕುಲದ ಬಗ್ಗೆ ಮಾತುಗಳಾದವು.ಹೀಗೇ ವಾದ ವಿವಾದಗಳು ಬೆಳೆದವು.

ದುರ್ಯೋಧನ ಎಲ್ಲರನ್ನೂ ಸಮಾಧಾನ ಮಾಡಿ ಭೀಷ್ಮರ ಬಳಿ ಬಂದು ಆತನು ಪಾರ್ಥನೆಂದು ಗುರುತಾಯಿತು. ಮತ್ತೆ ವನವಾಸ ಎಂದು ಉತ್ಸಾಹದಿಂದ ಹೇಳಿದಾಗ ಭೀಷ್ಮರು ಅಧಿಕಮಾಸ, ಉಪರಿಗಳು ಇವೆಲ್ಲದರ ಲೆಕ್ಕದ ಪ್ರಕಾರ ನಿನ್ನೆಗೇ ಅಜ್ಞಾತವಾಸದ ಅವಧಿ ಮುಗಿಯಿತು. ನಿನ್ನಿನ ಹಗಲು ನಿನ್ನದು. ಇಂದಿನದು ಅವರದು ಎಂದು ಹೇಳಿದಾಗ ಕೌರವನು ಪೆಚ್ಚಾದನು.

ಗೋವುಗಳೊಂದಿಗೆ ಹಸ್ತಿನಾಪುರದತ್ತ ನಡೆ. ಇಲ್ಲಿನದು ನಾವು ನೋಡುತ್ತೇವೆ ಎಂದು ಸೇನೆಯನ್ನು ಎರಡು ಭಾಗ ಮಾಡಿಸಿದ ಭೀಷ್ಮ. ಅದರಂತೆ ದುರ್ಯೋಧನ ನಡೆದ. ಇದನ್ನು ಕಂಡು ಅರ್ಜುನ ಒಳ್ಳೆಯದು ಎಂದು ಹೇಳಿ ಉತ್ತರನಿಗೆ ರಥವನ್ನು ದುರ್ಯೋಧನನ ಕಡೆಗೆ ತಿರುಗಿಸಲು ಹೇಳಿದ. ಮೊದಲು ಗೋವುಗಳ ರಕ್ಷಣೆಗೆ ಆದ್ಯತೆ ಕೊಟ್ಟನು. ಇತ್ತ ಯುದ್ಧಕ್ಕೆ ಕರೆದ ದ್ರೋಣಾದಿಗಳಿಗೆ ಬಾಣಗಳಿಂದಲೇ ನಮಸ್ಕರಿಸಿ ದುರ್ಯೋಧನನ ಕಡೆ ತಿರುಗಿದ. ಭಯಂಕರವಾದ ಯುದ್ಧವಾಯಿತು. ಚದುರಂಗ ಸೇನೆಯೂ ಪುಡಿಯಾಯಿತು. ಗೋವುಗಳನ್ನು ಗೋಪಾಲಕರು ಒಂದುಗೂಡಿಸಿ ಮರಳಿ ವಿರಾಟನಗರದತ್ತ ನಡೆಸಿದರು. ಅದುವರೆಗೂ ಭಯಭೀತವಾಗಿದ್ದ ಗೋವುಗಳ ಹಿಂಡು ಈಗ ಪರಿಚಿತ ದಾರಿಯಲ್ಲಿ ಸಂತಸದಿಂದ ಹೊರಟವು. ಅರ್ಜುನನ ಪರಾಕ್ರಮವನ್ನು ಕಂಡು ಹನುಮನು ಕೊಂಡಾಡಿದನು. ಉತ್ತರನಿಗೂ ಉತ್ಸಾಹ ಮೂಡಿತು.

ಗೋವುಗಳನ್ನು ಬಿಡಿಸಿ ಕಳಿಸಿದ ನಂತರ ಈಗ ಯುದ್ಧಕ್ಕೆ ಬರುವವರೆಲ್ಲ ಬನ್ನಿರಿ ಎಂದು ಗಾಂಡೀವವನ್ನು ತೂಗುತ್ತಾ ನಿಂತ ಅರ್ಜುನ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ