ಭಾರತಕಥಾಮಂಜರಿ67
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ವಿರಾಟ ಪರ್ವ - ಎಂಟನೆಯ ಸಂಧಿ
ರಾಯ ರಿಪುಬಲ ಜನಧಿವಡಬನ
ಜೇಯನರ್ಜುನನಖಿಳ ಕೌರವ
ರಾಯದಳವನು ಜಯಿಸಿದನು ಸಮ್ಮೋಹನಾಸ್ತ್ರದೊಳು
ಕೌರವಸೈನ್ಯ ಸಮುದ್ರಕ್ಕೆ ವಡಬಾನಲನಾದ, ಸೋಲನ್ನರಿಯದ ಅರ್ಜುನನು, ಸಮ್ಮೋಹನಾಸ್ತ್ರದಿಂದ ಕೌರವ ಸೈನ್ಯವನ್ನೆಲ್ಲಾ ಜಯಿಸಿದನು.
ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯೆ ದನಿದೋರಿದವು ಹುಲುಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಯಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ ೧
ಹತ್ತು ಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ೨
ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯಗಿಡಿಮಿಡಿ ಪಟಹ ಡಿಂಡಿಮದ
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ೩
ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ
ಅರಸನಳುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ೪
ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಸರಿಯಲಿ
ಬಿಗಿದ ಬಿಲ್ಲಾಳೌಕಿತುರವಣಿಸಿದರು ಸಬಳಿಗರು
ಉಗಿದಡಾಯುಧವೇರಿದರು ಭಾ
ಪೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರತಿರಥರು ೫
ಅರರೆ ರಾವುತ ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಗ ಸಬಳಿಗ ಪೂತು ಪಾಯಿಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳುಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬
ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ಜಂತ್ರದ ಮೀನನೆಚ್ಚೊಡೆ ರಾಯಕಟಕದಲಿ
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳುಕದ್ದೋಡಿದೊಡೆ ದಿಟನೀ
ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ೭
ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ
ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲಗುಣ ನೆಚ್ಚನತಿರಥರ ೮
ಗುರುಸುತನ ಬಳಿ ರಥವನೈ ಸಾ
ವಿರವ ಮುರಿದನು ಕರ್ಣನೊಡನೆಯ
ವರಮಹಾರಥವೆಂಟುಸಾವಿರವನು ರಣಾಗ್ರದೊಳು
ಗುರುನದೀಜರ ಬಳಿ ರಥವಸಾ
ಸಿರವ ಸೈಂಧವ ಕೃಪ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ೯
ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರ ರಥವ ಹುಡಿಮಾಡಿದರ್ನು ಹನ್ನೆರಡು ಸಾವಿರವ
ಧುರಕೆ ವೆಗ್ಗಳರಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆನಾನೆಂದ ೧೦
ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯಮಗ ಮಸೆಗಂಡನಶ್ವತ್ಥಾಮ ಮೈಮರೆದ
ಅವನಿಪತಿಗೇರಾಯ್ತು ಸಲೆ ಸೈಂ
ಧವಶಕುನಿದುಶ್ಯಾಸನಾದಿಗ
ಳವಯವದಲಂಬುಗಳನಾಯ್ದರು ತೋದ ರಕುತದಲಿ ೧೧
ಕಡಿವಡೆದುದಾ ಚೂಣಿಬಲ ಬಂ
ಗೊಡದ ನಾಯಕರಾಮ್ತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ೧೨
ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೈ ಕರ್ಣ ನೀನರಿದೈ
ಅತಿಬಲನು ನೀನಹಿತಬಲ ವನ
ಹುತವಹನು ನೀನಿರಲು ಕುರುಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ೧೩
ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ೧೪
ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ೧೫
ಎಲವೊ ಗರುಡಿಯ ಕಟ್ಟಿ ಶ್ರಮವನು
ಕಲಿಸಿ ಬದುಕುವ ಬಳಿಕ ಶಿಷ್ಯರ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡಫಡ ಪಾರ್ಥಮೈದೋರೆನುತ ಮಾರಾಂತ ೧೬
ಇತ್ತಲಿತ್ತಲು ಪಾರ್ಥ ನಿಲುನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ೧೭
ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ೧೮
ಚಕಿತ ಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣ ಮುಖರು ರೋಷ
ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ
ವಿಕಟಕರ ವೇಲ್ಲಿತ ಮಹಾಸಾ
ಯಕರು ನಿಷ್ಠುರ ಸಿಂಹಗರ್ಜನ
ವಿಕಲಿತಾಚಲ ಸಂಧಿಬಂಧರು ಹೊಕ್ಕು ಹೆಣಗಿದರು ೧೯
ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಮ್ಗಣಕೆ ಕಲಿಪಾರ್ಥ ೨೦
ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿನಗಾನೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ೨೧
ಆಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ ೨೨
ವೀರನಲ್ಲಾ ಬನದ ರಾಜಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದೆಲಾ ದಿಟವೇಕಚಕ್ರದೊಳು
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ ತೆಗೆದೆಚ್ಚನಾ ಕರ್ಣ ೨೩
ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸುರಿಮಳೆಯ ೨೪
ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳಿಂದೊದರುತಿರ್ದುದು ಕೂಡೆ ಕುರುಸೇನೆ ೨೫
ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರಪಂಜರವ ಮುಸುಕಿದನರ್ಜುನನ ರಥವ
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ೨೬
ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಮಝ ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಸಂತತಿಯ
ಭಾಲದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಗಳ ೨೭
ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ೨೮
ಓಟನೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ೨೯
ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆ ಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀನೋಡು ಕೈಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦
ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ೩೧
ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರುವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ೩೨
ಭಾವಿಸಲು ಪ್ರತಿ ಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯಲಿ ಕಲಿಸಿದಿರಿ ನಿಮಗೊಪ್ಪಿಸುವೆನದನು
ನೀವು ನೋಡುವುದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿಬಲವೆನಲು ಹಬ್ಬಿತು ಪಾರ್ಥ ಶರಜಾಲ ೩೩
ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಸಲೆ ಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ೩೪
ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ ೩೫
ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಂಚನ ಬಾಣ ಸೃಷ್ಠಿಯೊ ಬಲ್ಲನಾವವನು
ಇಳೆಯ ಮರ್ತ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳುವುದೋ ಗುಣಕೇಕೆ ಮತ್ಸರವೆಂದುದಮರಗಣ ೩೬
ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ೩೭
ಫಡ ಫಡೆಲವೋ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ
ನುಡಿಗೆ ತೆರಹಾಯ್ತೆಂಬ ಖುಲ್ಲರ
ಬೆಡಗನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ೩೮
ಆವುದೈ ನೀನರಿದ ಬಿಲು ವಿ
ದ್ಯಾವಿಷಯ ಘನ ಚಾಪವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದಾಭಾಸಕರ ಜಯ ನಿನ
ಗಾವ ಪರಿ ತೆಗೆ ಶಸ್ತ್ರವಿದ್ಯಾ
ಭಾವಗೋಷ್ಠಿಯ ಬಲ್ಲೊಡರಿಯೆಂದೆಚ್ಚನರ್ಜುನನ ೩೯
ಅಕ್ರಮವೆ ತ್ರೈಲೋಕ್ಯವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನೊಳು ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟಿದು
ವಕ್ರಭಣಿತೆಯು ಸಲುವುದಶ್ವತ್ಥಾಮಗೆನುತೆಚ್ಚ ೪೦
ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದೊಳು
ಗರ್ಜಿಸಿದೊಡೇನಹುದೆನುತೆ ಗುರುಸೂನು ಹರುಷದೊಳು
ನಿರ್ಜರರು ಮಝ ಪೂತುರೆನಲಾ
ವರ್ಜಿಸಿದ ತಿರುವಿನೊಳು ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ ೪೧
ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯ ಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ೪೨
ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ
ತರಣಿಬಿಂಬವ ನಭವ ಹೂಳ್ದುದು
ಗುರುಸುತನ ಸಾಮರ್ಥ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ೪೩
ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ೪೪
ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲುನಿ
ಲ್ಲೆಂದು ಕೃಪನಡಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿಲೇಸೆನುತ ಫಲುಗುಣ
ನೊಂದು ಕವಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೫
ತರಹರಿಸಿ ಶರವೈದರಲಿ ಸಂ
ಹರಿಸಿಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ೪೬
ಎಲೆಲೆ ಕರ್ಣದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ೪೭
ಬಾಯ ಬಿಟ್ಟುದು ನೆರೆದ ಕೌರವ
ರಾಯದಳ ವಡಮುಖದೊಳದಟರು
ಹಾಯಿದರು ತಮತಮೆಗೆ ತೆರೆದರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ತುಡುಕಿ ಬೆರಳೊಳು
ಸಾಯಕವ ತೂಗುತ್ತೆ ತಡೆದನು ಪಾರ್ಥನುರವಣೆಯ ೪೮
ಓಡಿದಾಳಲ್ಲಲ್ಲಿ ಧೈರ್ಯವ
ಮಾಡಿತೆಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದೊಳು
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನಗಂಭೀರ ಭೇರಿಯ ಬಹಳ ರಭಸದೊಳು ೪೯
ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೦
ಪೂತುರೇ ಕಲಿಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ
೫೧
ನಿಮ್ಮ ಕಾರುಣ್ಯಾವಲೋಕನ
ವೆಮ್ಮಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ೫೨
ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚಾ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ೫೩
ಅರಿಯ ಶರಹತಿಗುತ್ತರನು ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ೫೪
ಕವಚವಿದೆ ಕೊಳ್ ಬಾಣ ಧಾರಾ
ನಿವಹ ಶಸ್ತ್ರಸಂಭವಿನ್ನಾ
ಹವದೊಳಂಜದಿರೆನುತೆ ಕುಡಲುತ್ತರನು ದುಗುಡದೊಳು
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋ ಎನ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೫
ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದುಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ೫೬
ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥವಿಸಂಚಿಸಿತು
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ೫೭
ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ೫೮
ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ೫೯
ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ
ಕಲಿ ಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗಸುರನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ೬೦
ಪೂತುರೇ ಕಲಿಪಾರ್ಥ ಬಿಲುವಿ
ದ್ಯಾತಿಶಯನಿಧಿ ಜಾಗು ಗಂಗಾ
ಜಾತ ಹರ ಮುರವೈರಿಗಳ ಮಿಕ್ಕಿರಿ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಖಳನುಯ್ವನೇ ಮೇಣ್
ಸೀತೆ ಬನದೊಳು ನವೆವಳೇ ಎನುತಿರುದಮರಗಣ ೬೧
ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮಧೈರ್ಯನಾಚಾರಿಯನ ಪರಿಣತಿಯ
ಬಂದ ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ೬೨
ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನನಾತನ ತೋರ ತೋಳಿನ
ಬನವ ಕಡಿದನು ವೀರ ಭಾರ್ಗವರಾಮನತಿಬಲನು
ಮುನಿದು ಮಲೆತೊಡೆ ಬೆರಗನಾತನ
ಮನಕೆ ಬಿತ್ತಿದನೀತನೀತನೊ
ಳೆನಗೆ ಸರಿನೂಕುವುದೆ ಕಾಳಗವೆಂದನಾ ಪಾರ್ಥ ೬೩
ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ
ಹುತ್ತ ಕುರಗನು ಬಗಿದು ಹೊಗುವವೊ
ಲುತ್ತರಿಸಿದವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ೬೪
ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆಯಾವೆಡೆ
ದೊರೆಯೆನುತ್ ಅಬಾಯ್ಬಿಡಲು ಕೌರವರಾಯ ಮಾರಾಂತ ೬೫
ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕುನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುದತಿರಥರು ೬೬
ಕಲಕಿ ಕೆದರಿದ ಬಲ ಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯ ನೊಲೆವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ೬೭
ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಹುರಿ ಬಲುಹು ನಿಗುಚುವೆ
ನಿಗ್ಗರವ ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ ೬೮
ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಪೋರೆಯೊಳವಗಡಿಸಿ ಹೊಂ
ದೇರ ದೂವಾಳಿಸುತ ಮೂದಲಿಸಿದನು ಫಲುಗುಣನ ೬೯
ಬಾಲವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲುಪೋಗಿನಲಿರಲು ಬೇಡಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ೭೦
ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರಬೇಕೆಂದಡವಿಯೊಕ್ಕೆವು ಹೊಲ್ಲೆಹೇನಿದಕೆ
ಜಾರಿ ಹೋಯಿತ್ತವಧಿಯಿನ್ನೀ
ಮೀರಿಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನುತ್ತ ನರನೆಚ್ಚ ೭೧
ಅರಿಯೆ ನೀನೆಲೆ ಮರುಳೆ ಗರುಡನ
ತರವರಿಕೆಯಲಿ ಹಾವು ಕನ್ನವ
ಕೊರೆದು ಬದುಕುವುದೇ ವೃಥಾ ಕಕ್ಕುಲಿತೆ ನಿನಗೇಕೆ
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹದಿರೆನುತ ಕೌರವರಾಯ ತೆಗೆದೆಚ್ಚ ೭೨
ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರತೆಗಳ ಕಾಣಿಸಿದ ೭೩
ನವನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವುದಿಲ್ಲೆಂದ ೭೪
ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹುಭಂಗವನ್ವಯಕೆ
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ೭೫
ಹುರುಳುಗೆಟ್ಟುದು ಗರುವತನವೆಂ
ದರಸನಾಚಿದನಧಿಕ ಶೌರ್ಯೋ
ತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟದಳಿವ ನಿಶ್ಚೈಸಿ ೭೬
ನೊಂದನವನಿಪನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯೊಳು ಮಸಗಿದನು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯೊಳು ಭೀಷ್ಮ ದುಶ್ಯಾಸನ ಕೃಪಾದಿಗಳು ೭೭
ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಶಕುನಿ ವಿಕರ್ಣ ದುಸ್ಸಹರು
ನರನ ಮುಸುಕಿದರೊಂದು ಕಡೆಯೊಳು
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ೭೮
ಅಂಗವಿಸಿತರಿಸೇನೆ ಲೋಕವ
ನುಂಗಿ ನೊಣೆಯಲು ಕುಣಿವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದೊಳು
ಭಂಗಿತರ ಮರುವಲಗೆಯೊಳು ಸ
ರ್ವಾಂಗ ಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಬೆಸಗೊಂಡ ೭೯
ಅಂಜದಿರು ಕಲಿಯಾಗು ಸೂರ್ಯನ
ಮಂಜು ಮುಸುಕಿದೊಡೇನು ರಿಪುಬಲ
ಪುಂಜವನು ತತ್ ಕ್ಷಣದಿ ಜಯಿಸುವೆನೊಂದು ಬಾಣದೊಳು
ರಂಜಕರ ನುಡಿಯಲ್ಲವೆನುತೆ ಧ
ನಂಜಯನು ನುಡಿಯುತ್ತುಮಿರೆ ರಿಪು
ಭಂಜಕನ ಮುತ್ತಿದುದು ಕೌರವರಾಜ ಸಕಲಬಲ ೮೦
ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲು ಮೇಘ ಘಟೆಗಳ
ಮುರಿದ ಮೋಹರವವುಕ್ಕಿ ಪವನನ ಸೆರಗ ಹಿಡಿವಂತೆ
ತೆರಳದೊತ್ತಂಬರಿಸಿ ತನ್ನಯ
ಸರಳೊಳಳಿದಾ ಹೆಣವ ತುಳಿದ
ಬ್ಬರಿಸಿ ಬರೆ ಸಮ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧
ಇಸಲು ಸಮ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ೮೨
ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯನೊಳಗಿಟ್ಟು
ತೊನೆದು ಕೆಡೆದವು ಜೋದರಾಗಳು
ಕನಲಿ ಕೆಡೆದರು ಗುರುನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ೮೩
ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುಹು ಸಹಿತವೆ ಹೊನ್ನಮರಗೋ
ಡುಗಳ ಮೇಲಡೆಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ ೮೪
ಸೆಳೆ ಸಡಿಲೆ ಕೈದುಗಳ ಕೈಯಿಂ
ಕಳಚೆಯೊಬ್ಬರನೊಬ್ಬರತ್ತಲು
ಮಲಗೆ ಬೆಂಬತ್ತಳಿಕೆ ಬದಿಯೊಳಗಡಗೆ ತೋಳುಗಳ
ತಲೆಯೊಳೊರಿಗಿಸಿ ಗುರುಗುರಿಸಿ ರಥ
ದೊಳಗೆ ನಿದ್ರಾಕುಲರು ಸಾರಥಿ
ಗಳು ಬೆರಸಿ ನಿದ್ರೆಯೊಳು ಮೈಮರೆದಿರ್ದರತಿರಥರು ೮೫
ಸರಳ ಸೊಕ್ಕವಗಡಿಸೆ ಕೃಪ ಮೈ
ಮರೆದನತ್ತಲು ದ್ರೋಣನಿತ್ತಲು
ಪರಮ ನಿದ್ರಾಸಕ್ತನಾದನು ತನ್ನ ಮಗನೊಡನೆ
ಕರದ ಬಿಲು ನಸು ಸಡಿಲೆ ಕರ್ಣನು
ಮರೆದನತ್ತಲು ರಥದೊಳಿತ್ತಲು
ದುರುಳ ದುರ್ಯೋಧನನೊಡನೆ ಮೈಮರೆದುದಾಸೇನೆ ೮೬
ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನರಾ ಸಮ್ಮೋಹನಾಸ್ತ್ರದ ಬಾಧೆಗೊಳಗಾಯ್ತು ೮೭
ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾತ್ರಯದೊಳಗೆ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ತುರ್ಯ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳತೊಳಗಿದನು ರಥದೊಳಗೆ ೮೮
ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ೮೯
ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲು ಚಾಚಿದ
ನಳಿವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ೯೦
ಧರಣಿಪಾಲರ ಮಕುಟವನು ಕ
ತ್ತರಿಸಿ ದುಶ್ಯಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ೯೧
ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ ೯೨
ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲುರಥದಿ ನಿಜನಗರಿಗೈತಂದ ೯೩
ಸಂಕ್ಷಿಪ್ತ ಭಾವ
Lrphks Kolar
ಅರ್ಜುನನು ಕೌರವನ ಸೇನೆಯನ್ನು ಸಮ್ಮೋಹನಾಸ್ತ್ರದಿಂದ ಗೆಲಿದು ಮರಳಿದನು.
ಗೋವುಗಳು ಮರಳಿದವು. ಕೌರವರು ಅರ್ಜುನನೊಡನೆ ಯುದ್ಧಕ್ಕೆ ಸಿದ್ಧರಾದರು. ಇಡೀ ಸೇನೆಯು ಅರ್ಜುನನನ್ನು ಮುಸುಗಿತು. ಆದರೆ ಅದನ್ನು ಪರಿಹರಿಸಿ ಮುಂದುವರಿದನು ಪಾರ್ಥ. ಅತಿರಥ ಮಹಾರಥರ ಪಡೆಯನ್ನು ಲೆಕ್ಕಕ್ಕೆ ಸಿಗದಂತೆ ಕೊಂದು ಹಾಕುತ್ತ ನಡೆದ. ದ್ರೋಣ, ಅಶ್ವತ್ಥಾಮ, ಕೃಪಾಚಾರ್ಯ, ಎಲ್ಲರನ್ನೂ ಏಕಾಂಗಿಯಾಗಿ ಎದುರಿಸಿದ ಅರ್ಜುನ. ಈ ಮದ್ಯೆ ಕರ್ಣನನ್ನು ಅಶ್ವತ್ಥಾಮ ಮುಂತಾದವರು ಮೂದಲಿಸಿದರು. ರೋಷಗೊಂಡ ಕರ್ಣ ಬಹಳ ಪರಾಕ್ರಮದಿಂದ ಹೋರಾಡಿದನು. ಒಂದು ಹಂತದಲ್ಲಿ ಯಾರು ಸೋಲುವರು, ಯಾರು ಗೆಲುವರು ಎಂಬಂತೆ ಆಯಿತು. ಆದರೆ ಅರ್ಜುನನ ಪರಾಕ್ರಮಕ್ಕೆ ಮಿಗಿಲಹುದೆ?
ದ್ರೋಣರಿಗೆ ವಿನಯದಿಂದ ನಮಿಸಿ ಎದುರಿಸಿದನು. ಗುಣಕೆ ಮತ್ಸರವುಂಟೆ ಎಂದು ಅಮರಗಣ ತಲೆದೂಗಿತು. ಸಾರಥಿ, ಹನುಮ ಎಲ್ಲರೂ ನೊಂದರು. ಮತ್ತೆ ಆರ್ಭಟಿಸಿದನು ಕಲಿ ಪಾರ್ಥ. ದ್ರೋಣನ ಹಿನ್ನಡೆಯನ್ನು ಕರ್ಣನು ಹೀಯಾಳಿಸಿದನು. ಎದುರು ಬಂದ ಕೃಪಾಚಾರ್ಯರೂ ಬಹಳ ಹೊತ್ತು ನಿಲ್ಲಲಿಲ್ಲ. ಕೊನೆಗೆ ಭೀಷ್ಮನು ಬಂದನು.
ಭೀಷ್ಮನಿಗೆ ನಮಿಸಿ ಕಾಳಗ ಮುಂದುವರೆಸಿದನು ಪಾರ್ಥ. ಇಬ್ಬರಿಗೂ ಘನಘೋರ ಯುದ್ಧವಾಯಿತು. ಉತ್ತರನು ಗಾಯಗೊಂಡನು. ಹನುಮನು ಬೊಬ್ಬಿರಿದನು. ಅರ್ಜುನನಿಗೂ ಸಾಕಷ್ಟು ಗಾಯವಾಯಿತು. ಆದರೆ ಸುಧಾರಿಸಿಕೊಂಡು ಶಸ್ತ್ರ ಪ್ರತ್ಯಸ್ತ್ರಗಳ ಸಹಾಯದಿಂದ ಹೋರಾಡಿದನು. ಒಂದು ಹಂತದಲ್ಲಿ ಭೀಷ್ಮನು ಹಿಂದೆ ಸರಿದನು. ದುರ್ಯೋಧನನ ಕೋಪ ಹೆಚ್ಚಿತು. ತಾನೇ ಮುಂದೆ ಬಂದನು.
ಬಾಲ, ವೃದ್ಧ, ವಿಪ್ರರನ್ನು ಸೋಲಿಸಿದೆನೆಂಬ ಗರ್ವ ಬಿಡು ಎಂದು ಮೂದಲಿಸುತ್ತ ಬಾಣಗಳ ಸುರಿಮಳೆಗೆಯ್ದನು ಕೌರವರಾಯ. ಅರ್ಜುನನ ಬತ್ತಳಿಕೆಯು ಅಕ್ಷಯವಾದುದು. ಕೌರವನ ಶರಗಳು ಮುಗಿದವು.
ಇದಕ್ಕೆಲ್ಲ ಕೊನೆ ಹೂಡಬೇಕೆಂದು ಅರ್ಜುನನು ಸಮ್ಮೋಹನಾಸ್ತ್ರವನ್ನು ತೆಗೆದು ಹೂಡಿದನು. ಆಗ ಅಲ್ಲಿದ್ದ ಸಕಲ ಸೇನೆಯೂ ನಿದ್ರಾವಶವಾಯಿತು. ಯಾರು ಯಾರು ಎಲ್ಲೆಲ್ಲಿ ಇದ್ದರೋ ಅಲ್ಲಲ್ಲೇ ಮಲಗಿದರು. ಆನೆ, ಕುದುರೆಗಳೂ ಮಲಗಿದವು. ಅರ್ಜುನನು ಇಳಿದು ಹೋಗಿ ಗುರುಹಿರಿಯರಿಗೆ ನಮಿಸಿ ಬಂದನು. ಉತ್ತರನು ರಾಜರುಗಳ ಕಿರೀಟ, ವಸ್ತ್ರಗಳನ್ನು ಸೆಳೆದು ತಂದನು.
ಮರಳಿ ಶಮೀವೃಕ್ಷಕ್ಕೆ ಬಂದು ಗಾಂಡೀವವನ್ನು ಎತ್ತಿಟ್ಟು ಮೊದಲು ಬಂದ ಸಾಮಾನ್ಯ ರಥದಲ್ಲಿ ತಾನು ಸಾರಥಿಯಾಗಿ ಕುಳಿತು ಬೃಹನ್ನಳೆಯಂತೆಯೇ ಉತ್ತರನೊಂದಿಗೆ ವಿರಾಟನಗರಕ್ಕೆ ಹಿಂದಿರುಗಿದನು.
ಕಾಮೆಂಟ್ಗಳು