ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ65


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ವಿರಾಟ ಪರ್ವ  - ಆರನೆಯ ಸಂಧಿ


ಚಂಡರಿಪು ಬಲ ವಿಲಯಹರನು
ದ್ದಂಡಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ತಡೆದನು ವೈರಿಮೋಹರವ


ಎಲೆ ಪರೀಕ್ಷಿತತನಯ ಕೇಳ್ ನೃಪ
ತಿಲಕನತಿವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ೧


ಕರಿಘಟಾವಳಿಯೊಡ್ಡುಗಲ್ಲಿನ
ತುರಗನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯ ಧ್ವನಿಯ ರವದು
ಬ್ಬರದಲಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ೨


ಜಡಿವ ಖಡ್ಗದ ಕಿಡಿಯ ಸೇನೆಯ
ತೊಡರುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟ ಛಟಿಗ ನಿಸ್ವನದ
ಇಡಿದ ಧೂಳಿಯ ಧೂಮರಾಶಿಯ
ಪಡೆ ವಿರಾಟನ ಸುತನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ ೩


ಪ್ರಳಯಮೇಘದ ಮಾಲೆಯೋ ಕರಿ
ಕುಲವೊ ಸಿಡಿಲಿನ ಗರುಡಿಯೋ ಕಳ
ಕಳವೊ ಕಲ್ಪಾನಳನ ಧೂಮಾವಳಿಯೊ ಕೈದುಗಳೊ
ನೆಲನದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ ೪


ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವಿಲಾಡಲಾರದು
ಒಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವಶಿವ ಕಾದಿಗೆಲಿದೆವು ಬಲಕೆ ನಮೊ ಎಂದ ೫


ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ ೬


ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ ೭


ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಹೋದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು ೮


ಸಾರಿ ಬರಬರಲವನ ತನುಮಿಗೆ
ಭಾರಿಸಿತು ಮೈಮುರಿದು ರೋಮನ್ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ ೯


ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡುಸುಡು 
ಕಾಕಲಾ ಕಣ್ಣೊಡೆಯದೇ ಕಾಣಾ ಮಹಾಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕ ವೆಳ್ಳನಿತಿಲ್ಲಲಾ ತೆಗೆ
ಸಾಕು ವಾಘೆಯ ಮರಳಿ ಸೆಳೆ ತೇಜಿಗಳ ತಿರುಹೆಂದ ೧೦


ನುಡಿಯ ಕೇಳದೆ ಮೂಮ್ದೆ ನಾಲ್ಕೆಂ
ಟಡಿಯನರ್ಜುನ ರಥವ ನಡೆಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿತೆ ಲೇಸು ಲೇಸೆಂದ ೧೧


ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೈ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಮೊದಲಿಗೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ ೧೨


ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ ೧೩


ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾರೋ ದಿಟ್ಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿಸೇನೆ ೧೪


ಈತ ಸಾರಥಿಯಳವೈಯಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ತಾನೆತ್ತ
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ ೧೫


ಇತ್ತಲರ್ಜುನನುತ್ತರನ ಬೆಂ
ಬತ್ತಿದನು ನಿಲು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲುನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ ೧೬


ಇಟ್ಟಣಿಸಿ ನರ ನೂರು ಹೆಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಬಾಹುಜ ಬೀಜವೋ ಮೇಣು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನಾನ್ವಯವ ೧೭


ಹಲುಗಿರಿದು ಬಾಯೊಳಗೆ ಬೆರಳ್ಗಳ
ನಿಳುಹಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ ೧೮


ಮನದೊಳೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪುವಾ
ಹಿನಿಯನಿರಿಯದೆ ನಾಡನರಿಯವೊ
ಲೆನಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ ೧೯


ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ೨೦


ಹರುಕನೇ ನೀನೆಲವೊ ರಾಯರೊ
ಳುರುವ ದೊರೆ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ದುರುಭರವ
ಸರಿಗಳೆಯದಪಕೀರ್ತಿ ರವಿಶಶಿ
ಮುರಿದು ಬೀಳ್ವನ್ನೆಬರವೆಲೆ ನರ
ಗುರಿಯೆ ನಡೆ ಕಾಳಗಕೆನುತೆ ಹಿಡಿದೆಳೆದನುತ್ತರನ ೨೧


ಕೊಳುಗುಳದೊಳೋಡಿದಡೆ ಹೆಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹೆಜ್ಜೆಯನಿಡಲು ಹೆಜ್ಜೆಯೊಳಶ್ವಮೇಧ ಫಲ
ಅಳಿದನಾದಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲನನುಗ್ಗಡಿಸುವನು ವೀರ ಸ್ವರ್ಗವಹುದೆಂದ ೨೨


ಧುರದೊಳೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಒಲಿದು
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನ ನಮಗಿಂದ್ರಪದವಿಯು ಬಿಟ್ಟು ಕಳುಹೆಂದ ೨೩


ಆಳೊಳೊಡ್ಡುಳ್ಳವನು ತೋರದ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದುಲಿದು ಬಾಷ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳಿತಿಹೆಯೋ ಎಂದ ೨೪


ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲಿಸದೆ ಬಿಟ್ಟು ಕಳುಹೆಂದ ೨೫


ವಳಿತವನು ವಾರುವವ ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ ೨೬


ಒಡಲು ಕಿಡುವುದು ನಾಳೆ ನಾಡಿದು
ಪೊಡವಿಯುಳ್ಳನ್ನ ಬರ ಲೋಕದೊ
ಳಡಗದಿಹುವಪಕೀರ್ತಿ ಕೀರ್ತಿಗಳೆಂಬುವಿದು ನಿರುತ
ಸುಡಲಿ ಜೀವನದಾಶೆಯನು ಕಿಡು
ವೊಡಲ ಭುಕ್ತಿಯ ಭೋಗಕೋಸುಗ
ಕಿಡಿಬೇಡಿಹಪರದ ಕೀರ್ತಿಯನೆಂದನಾ ಪಾರ್ಥ ೨೭


ಪೊಡವಿಪತಿಗಳ ಬಸಿರಬಂದೀ
ಯೊಡಲ ಕಕ್ಕುಲಿತೆಯಲಿ ಕಾಳಗ
ದೆಡೆಗೆ ಬಾರದರಿಲ್ಲ ಭೂತ ಭವದ್ಭವಿಷ್ಯದಲಿ
ನುಡಿಯಲಹುದೇ ಬಂಜೆನುಡಿಯನು
ಸುಡುಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರಗೆ ಕಾದಲು ಬೇಡ ಬಾಯೆಂದ ೨೮


ಕಾದುವೆನು ಮಾರೊಡ್ಡಿನಲಿ ನೀ
ಚೋದಿಸೆನ್ನಯ ರಥವನಕಟಾ
ವಾದವನು ನೆರೆಮಾಣು ಸಾರಥಿಯಾಗು ಬಾ ಎನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯೆಯಲ್ಲೆಂದ ೨೯


ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ನಿಯರ ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇ ಈ
ಗನ್ನಗತಕವ ನಾನು ಬಲ್ಲೆನು ಬಿಟ್ಟು ಕಳುಹೆಂದ ೩೦


ಎಲವೊ ಸಾರಥಿಯಾಗು ನಡೆ ನೀ
ಗಳಹಿದರೆ ಕಟವಾಯಕೊಯ್ವೆನು
ಗೆಲುವೆನೀ ಪ್ರತಿಭಟನಿಕಾಯವ ನಿನ್ನ ಸಾಕ್ಷಿಯಲಿ
ಬಳಿಕ ನೀ ನಗು ನಡೆಯೆನುತ ಪರ
ಬಲ ಭಯಂಕರನುತ್ತರನ ಹೆಡ
ತಲೆಯ ಹಗರಿನೊಳೌಕಿ ತಂದನು ರಥವನೇರಿಸಿದ ೩೧


ನಡೆಗೊಳಿಸಿದನು ರಥವ ಮುಂದಕೆ
ನಡೆಸುತುತ್ತರ ನುಡಿದ ಸಾರಥಿ
ಕೆಡಿಸದಿರು ವಂಶವನು ರಾಯನ ಹಿಂದೆ ಹೆಸರಿಲ್ಲ
ಬಿಡು ಮಹಾಹವವೆನಗೆ ನೂಕದು
ತೊಡೆಯದಿರು ನೊಸಲಕ್ಕರವ ನೀ
ನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ ೩೨


ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ ೩೩


ಮರನನೇರಿದರೊಳಗೆ ಪಾಂಡವ
ರಿರಿಸಿಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಿನ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ ೩೪


ಹೊರಗೆ ತೊಗಲಲಿ ಬಿಗಿದು ಕೆಲಬಲ
ನರಿಯದಂದೈ ಪಾಂಡುನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು ೩೫


ಕಾಲ ಭುಜಗನ ನಾಲಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವುವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆಂದೋರಂತೆ ಹಲುಬಿದನು ೩೬


ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ ೩೭


ತುಡಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ ೩೮


ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ ೩೯


ಗಿರಿಯನೆತ್ತಲುಬಹುದು ಬಿಲುಗಳ
ತೆರಳಿಚುವೊಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವ ದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು ೪೦


ಹೇಳು ಸಾರಥಿ ಬಿಲ್ಲದಾವನ
ತೋಳಿಗಳವದುವುದು ಮಹಾಶರ
ಜಾಲ ಬೆಸರಿದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ ೪೧


ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ ೪೨


ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನಸೂನು ಬೆಸಗೊಂಡ ೪೩


ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ ೪೪


ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ ೪೫


ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ ೪೬


ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾವಳಿಯ ಪೇಳ್ದಲ್ಪಮತಿಯನು ತಿಳುಹಬೇಕೆಂದ ೪೭


ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಭೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂಂದವನು ವಿಸ್ತರವಾಗಿ ವಿರಚಿಸಿದ ೪೮


ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಲುರೂಪು
ಅಂಬುಜಾಕ್ಷನ ಸಾಹಸಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ ೪೯


ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಲ್ಜೋಡಾಯ್ತು ನಿರ್ವಿ
ಘ್ನದಲಿ ದಾಂಟಿದೆವವಧಿಯನು ನ
ಮ್ಮೆದಟತನವನು ಭೀತಿಯಿಲ್ಲದೆ ನೋಡು ನೀನೆಂದ ೫೦


ಬಳೆಯ ನುಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗುಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ ೫೧


ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ರಥಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿದ ೫೨


ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ ೫೩


ಸಡಿಲಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯೆನೆ ಗಜರುಮಿಗೆ ಗರ್ಜಿಸಿದವಳ್ಳಿರಿದು
ಕುಡಿನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು ೫೪


ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು
ವೀರ ತಿಳುಹೆನಗಿಲ್ಲ ಕರ್ಣನ
ದಾರು ನಾಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ ೫೫


ಉದಯ ದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಿಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ ೫೬


ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾದನೀತನು
ಶಿವನ ನೊಸಲಂದದಲಿ ಮೆರೆವವ
ನಿವನು ಜಿತ ಸಂಗ್ರಾಮನಶ್ವತ್ಥಾಮ ನೋಡೆಂದ ೫೭


ಖುರದಲವನಿಯ ಹೊಯ್ದು ಲಹರಿಯ
ಲುರಿಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವವಿಳಾಸದಲಿ
ಸರಳ ತಿರುಹುತೆ ನಿಂದು ಧನುವಿನ
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿಬಲ ಕೃಪಾಚಾರಿಯನು ನೋಡೆಂದ ೫೮


ಲಲಿತ ರತ್ನ ಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಲುಝೇಂಕಾರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು ೫೯


ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರಗಂಗಾಸುತನು ನೋಡೆಂದ ೬೦


ಅಗಿವ ಹಾವಿನ ಹಳವಿಗೆಯ ಕೈ
ನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ
ನೆಗಹಿ ನಿಮಿರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ ೬೧


ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಭಾರಿಯ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನನೊಸಲಂದದಲಿ ಮೆರೆವವ
ರವನಿಪಾಲರು ಮಕುಟವರ್ಧನರವರ ನೋಡೆಂದ ೬೨


ಹೊಗಳಲನುಪಮ ಸೇನೆಯಿಂತಿದು
ದುಗುಣವಂಧಾಸುರನ ಸೇನೆಗೆ
ತಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನೆರೆ
ಹೊಗಳಿ ತೋರಿದನುತ್ತರಗೆ ಮೊಳೆ
ನಗೆಯ ಮನದೊಳಗಾಗ ಸೈವೆರಗಾದ ಸುಕುಮಾರ ೬೩


ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದೂವಾಳಿಸುವಡಾಹವಕೆ
ಅರರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿಮಂಡಲವನಂಡಲೆಯ ೬೪


ತುರಗ ಗರ್ಜನೆ ರಥದ ಚೀತ್ಕೃತಿ
ವರಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆನಿಷ್ಠುರ ದೇವದತ್ತರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕೆ
ಸುರಿಯೆ ಸುರಕುಲ ನೆರೆಯೆ ಭೀತಿಯೊಳಹಿತ ಬಲ ಹರಿಯೆ ೬೫


ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ ೬೬


ಏನು ಮತ್ಸ್ಯಕುಮಾರ ಬವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದ ಸಿಡಿಲು ಸುಳಿಯಲು ಬೆಂದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನಕಳುಹು ಮ
ಹಾನಿಧಾನವ ಮಾಣುಮಾಣೆನೆ ಪಾರ್ಥನಿಂತೆಂದ ೬೭


ಖೇಡನಾಗದಿರದ್ಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತೆ ಸಂತೈಸಿ
ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ ೬೮


ಸಂಕ್ಷಿಪ್ತ ಭಾವ

ಅರ್ಜುನನು ತನ್ನ ನಿಜರೂಪವನ್ನು ತಾಳಿ ಯುದ್ಧಕ್ಕೆ ಹೊರಟ ಪ್ರಸಂಗ.


ಉತ್ತರಕುಮಾರನು ಬಹಳ ಪೌರುಷದಿಂದ ಬಂದವನು ದೂರದಿಂದಲೇ ಕೌರವರ ಮಹಾಸೈನ್ಯವನ್ನು ನೋಡಿ ಬಹಳ ಭಯಪಟ್ಟು ಸಾರಥಿಗೆ ರಥವನ್ನು ಹಿಂದಿರುಗಿಸಲು ಹೇಳಿದನು. ಇದೇನು ಮೃತ್ಯುವಿನ ನಾಲಗೆಯೊ, ಸಿಡಿಲಿನ ಗರುಡಿಯೊ, ಜಗತ್ತುಗಳನ್ನು ನುಂಗುವ ಸಮುದ್ರವೊ ಈ ಸೇನೆ..ಇದರೊಡನೆ ಕಾದಿ ಗೆಲಿದವರುಂಟೆ? ಬದುಕಿದ್ದರೆ ಅದೇ ಪುಣ್ಯವೆಂದು ಉತ್ತರನು ರಥವನ್ನು ಹಿಂತಿರುಗಿಸಲು ಒತ್ತಾಯಿಸಿದನು.


ಆದರೆ ಅರ್ಜುನನು ಕೇಳದೆ ಇವನಿಗೆ ಧೈರ್ಯ ಹೇಳುತ್ತ ಮುನ್ನಡೆದಾಗ ಬಹುವಾಗಿ ಬೆದರಿದ ಉತ್ತರನು ರಥದಿಂದ ಧುಮುಕಿ ಓಡತೊಡಗಿದನು. ಅರ್ಜುನನು ಬೆನ್ನಟ್ಟಿದನು. ಇದನ್ನು ಕಂಡ ಕೌರವನ ಸೇನೆ ಗೊಳ್ಳೆಂದಿತು. ಪರಿಪರಿಯಾಗಿ ಧೈರ್ಯವನ್ನು ಹೇಳಿ ನೀನು ಯುದ್ಧ ಮಾಡಬೇಡ. ನನಗೆ ಸಾರಥಿಯಾಗು ಎಂದು ಪುಸಲಾಯಿಸಿ ಅವನನ್ನು ಮತ್ತೆ ರಥಕ್ಕೆ ಹತ್ತಿಸಿಕೊಂಡು ಆಯುಧಗಳಿದ್ದ ಶಮೀವೃಕ್ಷದೆಡೆಗೆ ನಡೆದನು.
ಅಲ್ಲಿದ್ದ ಆಯುಧಗಳನ್ನು ಉತ್ತರನಿಂದ ಇಳಿಸಿದನು. ಅವುಗಳನ್ನು ನೋಡಿ ಬೆದರಿದ ಉತ್ತರನಿಗೆ ಸಮಾಧಾನ ಹೇಳಿ ಆ ಆಯುಧಗಳನ್ನು ಪರಿಚಯಿಸಿದನು. ಕೊನೆಯಲ್ಲಿ ತಾನೇ ಅರ್ಜುನನೆಂದೂ ಹೇಳಿ ಉಳಿದವರ ಬಗ್ಗೆಯೂ ಹೇಳಿದಾಗ ಉತ್ತರ ಅವನ ಕಾಲಿಗೆ ಬಿದ್ದನು. ಆಗ ಅರ್ಜುನನು ತನ್ನ ನಿಜದ ವೇಷವನ್ನು ತೊಟ್ಟು ಈ ಬೃಹನ್ನಳೆಯ ರೂಪಕ್ಕೆ ಕಾರಣವನ್ನು ಹೇಳಿ ಎಲ್ಲ ರೀತಿಯಾಗಿ ಧೈರ್ಯವನ್ನು ತುಂಬಿ ಸೈನ್ಯದ ಕಡೆಗೆ ತಿರುಗಿದನು. ಗಾಂಡೀವದ ಸದ್ದು ಸಿಡಿಲಿನಂತೆ ಎರಗಿ ಮತ್ತೆ ಉತ್ತರನು ಕಳೆಗುಂದಲು ಅವನನ್ನು ಸಮಾಧಾನಿಸಿ ಕೌರವರ ಸೈನ್ಯದಲ್ಲಿದ್ದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ, ಮುಂತಾದವರನ್ನು ಪರಿಚಯಿಸುತ್ತ ನಡೆದನು. ಹನುಮನು ಬಂದು ಧ್ವಜದಲ್ಲಿ ನಿಂತನು. ಅಮರಶ್ರೇಣಿಯು ಈ ದೃಶ್ಯವನ್ನು ನೋಡಲು ಆಗಸದಲ್ಲಿ ನೆರೆಯಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ