ವೈ. ಸಿ. ಕಮಲ
ವೈ.ಸಿ. ಕಮಲ
ಡಾ. ವೈ. ಸಿ. ಕಮಲ ಅವರು ವಿಜ್ಞಾನ ಪ್ರಾಧ್ಯಾಪಕಿ, ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರು, ಬರಹಗಾರ್ತಿ, ಸಂವಹನಗಾರ್ತಿ, ಸಂಘಟನಾಗಾರ್ತಿ, ಪ್ರಕೃತಿ ಪ್ರೇಮಿ ಹೀಗೆ ಬಹುಮುಖಿ. "I’m a Teacher, Science Communicator, Event organizer, Education administrator all by passion” ಎಂದು ಹೇಳುವ ಅವರ ವಾಕ್ಯದಲ್ಲಿ all by passion ಎಂಬುದು ಅತ್ಯಂತ ಗಮನಾರ್ಹ.
ಕಮಲ ಅವರು ಜನಿಸಿದ ದಿನ ಏಪ್ರಿಲ್ 15. ತುಮಕೂರಿನ ನಾಗವಲ್ಲಿ ಅವರ ಊರು. ತಾಯಿ ಪಾರ್ವತಮ್ಮ. ತಂದೆ ಪಂಡಿತ ಚನ್ನಪ್ಪ ಎರೇಸೀಮೆ ನಾಡಿನ ಪ್ರಸಿದ್ಧ ವಿದ್ವಾಂಸರಾಗಿ 'ನುಡಿಗಾರುಡಿಗ' ಎಂದು ಖ್ಯಾತಿವಂತರಾಗಿದ್ದವರು. ಹೀಗಾಗಿ ಕಮಲ ಅವರಿಗೆ ವಿಜ್ಞಾನದ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಕೂಡಾ ಆಸಕ್ತಿಯ ಕ್ಷೇತ್ರಗಳು. ಕಮಲ ಅವರು ವಿಜ್ಞಾನ ಪದವಿ, ಸ್ನಾತಕೋತ್ತರ ಪದವಿಗಳ ಜೊತೆಗೆ "ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ - ಒಂದು ವಿಶ್ಲೇಷಣೆ" ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪುಸ್ತಕವೊಂದರಲ್ಲಿ, ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಇದು ಯಾರೂ ಕ್ರಮಿಸದ ದಾರಿಯ ಹೊಸ ಹೆಜ್ಜೆ ಎಂದು ಗುರುತಿಸಿದೆ.(ವಿಜ್ಞಾನ ಕರ್ನಾಟಕ ಪುಸ್ತಕ)
ಕಮಲ ಅವರು ಎಸ್ಜೆಆರ್ ಮಹಿಳೆಯರ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಬಸವನಗುಡಿ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥೆ ಮತ್ತು ಉಪಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸಿ, 2021ರ ಜುಲೈ ತಿಂಗಳಿನಿಂದ ಬೆಂಗಳೂರು ಜಯನಗರ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ, ಇತ್ತೀಚೆಗೆ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಅವರು 2013-14 ಅವಧಿಯಲ್ಲಿ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ, ಡೈರೆಕ್ಟರೇಟ್ ಆಫ್ ಕಾಲೇಜಿಯೇಟ್ ಎಜುಕೇಷನ್ನಿನ ಸಂವಹನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಪ್ರತಿಷ್ಠಿತ 'ದ ಬೆಂಗಳೂರು ಸೈನ್ಸ್ ಫೋರಂ'ನ ಜಂಟಿ ಕಾರ್ಯದರ್ಶಿಯಾಗಿ ಅದರ ನಿರಂತರ ಕಾರ್ಯನಿರ್ವಹಣೆಯಲ್ಲಿ ಸಕ್ರಿಯ ಪಾತ್ರಧಾರಿಗಳಾಗಿದ್ದಾರೆ. ಇದರ ಜೊತೆಗೆ ನ್ಯಾಷನಲ್ ಎಜುಕೇಷನ್ ಸೊಸಯಟಿ ಆಫ್ ಕರ್ನಾಟಕ, SSK ಶಿಕ್ಷಣ ಟ್ರಸ್ಟ್ ಇನ್ನಿತರ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯೆಯಾಗಿದ್ದಾರೆ. ಉದಯಭಾನು ಉನ್ನತ ಅಧ್ಯಯನ ಸಂಸ್ಥೆಯ, ವಿಜ್ಞಾನ ತಂತ್ರಜ್ಞಾನ ವಿಭಾಗದ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ವೈ. ಸಿ. ಕಮಲ ಅವರು ಅನೇಕ ರೂಪಕ- ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಅನೇಕ ವಿಜ್ಞಾನ ಭಾಷಣಗಳನ್ನು ಆಕಾಶವಾಣಿ, ಶಾಲೆ, ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಮಾಡಿರುವರು. ವಿಜ್ಞಾನ ಜಾಥಾ, ವಿಜ್ಞಾನ ಭಾಷಣ ಸ್ಪರ್ಧೆ, ವಿಜ್ಞಾನ ಪ್ರಬಂಧ ಸ್ಪರ್ಧೆ. ವಿಜ್ಞಾನ ಬೇಸಗೆ ಶಿಬಿರ, ವಿಜ್ಞಾನ ಅಧ್ಯಾಪಕರಿಗೆ ತರಬೇತಿ ಶಿಬಿರಗಳು ಇನ್ನೂ ಮುಂತಾದ ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ಸಂಘಟಿಸಿರುವರು.
ಕಮಲ ಅವರು ಒಟ್ಟು ಐದು ಪುಸ್ತಕಗಳನ್ನು ಬರೆದಿದ್ದು ಅವುಗಳಲ್ಲಿ ಎರಡು ಸಂಪಾದಿತ ಕೃತಿಗಳಾಗಿವೆ.
ಡಿಜಿಟಲ್ ಕ್ರಾಂತಿ ಮತ್ತು ಭಾರತ (ಅನುವಾದ) ಇವರ ಕೃತಿಗಳಲ್ಲಿ ಸೇರಿವೆ. 'ವಿಜ್ಞಾನ ತಂತ್ರಜ್ಞಾನ ದರ್ಶನ' ಎಂಬ 1700 ಪುಟಗಳ, ವಿಜ್ಞಾನ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯನ್ನು ದಾಖಲಿಸುವ ಮಹತ್ವದ ಪುಸ್ತಕದ ಸಂಪಾದನೆಯ ಕೆಲಸ ಮಾಡುತ್ತಿದ್ದಾರೆ.
ಅನೇಕ ನಿಯತಕಾಲಿಕಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಆಕಾಶವಾಣಿ ಹಾಗೂ ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವೈ. ಸಿ. ಕಮಲ ಅವರ ಆಸಕ್ತಿಗಳಲ್ಲಿ ವಿಜ್ಞಾನ ಮಾತ್ರವಲ್ಲದೆ ಅವರಲ್ಲಿ ವಿಶಾಲ ವ್ಯಾಪ್ತಿಯ ಓದಿನ ಹರವಿದೆ. ಪ್ರಕೃತಿ ಪ್ರೀತಿಯುಳ್ಳ ಅವರು ಉತ್ತಮ ಛಾಯಾಗ್ರಾಹಕಿಯೂ ಹೌದು. ಸಂಗೀತಾಸಕ್ತರಾದ ಅವರು ವೀಣಾವಾದಕಿ. ಕ್ರೀಡೆಯಲ್ಲೂ ಮುಂದು. ಟ್ರೆಕ್ಕಿಂಗ್ ಸಾಹಸವೂ ಜೊತೆಗಿದೆ. ಪ್ರವಾಸಪ್ರಿಯರೂ ಆಗಿದ್ದಾರೆ.
ಕಮಲ ಅವರು, ರಾಷ್ಟ್ರಮಟ್ಟದ ವಿವಿಧ ಸಂಘಟನೆಗಳಿಂದ ನಾಲ್ಕು ಬಾರಿ ವಿವಿಧ ಕಾರ್ಯಗಳಿಗೆ ಪುರಸ್ಕರತರಾಗಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ಗೌರವಿಸಿವೆ.
ಸದಾ ಕ್ರಿಯಾಶೀಲರೂ, ಸರಳರೂ, ಆತ್ಮೀಯರೂ ಆದ ವೈ. ಸಿ. ಕಮಲ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Kamala Yereseeme Channappa
ಕಾಮೆಂಟ್ಗಳು