ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ102


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಹನ್ನೊಂದನೆಯ ಸಂಧಿ


ಸೂ.     
ವಿಜಯ ವಿಗ್ರಹ ವೀರನಾ ಧ
ರ್ಮಜನ ನೇಮದಲಂದು ವೈರಿ
ವ್ರಜವ ತೊತ್ತಳದುಳಿದು ಸಾತ್ಯಕಿ ಕಂಡನರ್ಜುನನ  
 
ಬವರದೊಳು ಹರಿಪಾಂಚಜನ್ಯದ
ರವ ಭಯಂಕರವಾಯ್ತು ಬಹಳಾ
ಹವದೊಳಗೆ ಪಾರ್ಥಂಗೆ ಬಿದ್ದುದು ಭಟರ ಭಾರಾಂಕ
ಅವನಿ ಬಿರಿದುದು ಧರ್ಮಪುತ್ರನ
ಕಿವಿಗೆ ಸೆಲ್ಲೆಹವಾಯ್ತು ರಣರೌ
ರವದೊಳರ್ಜುನದೇವನಳಿಯದೆ ಮಾಣನಕಟೆಂದ     ೧  
 
ತಂದೆ ಸಾತ್ಯಕಿ ಹೋಗು ಫಲುಗುಣ
ನೊಂದನೋ ಜೀವಿಸಿದನೋ ಸುರ
ವೃಂದವನು ಸೇರಿದನೊ ಮೇಣೆಂಬೀ ನಿಧಾನವನು
ತಂದು ನೀನೆನಗರುಹು ಪಾರ್ಥನ
ಹಿಂದೆ ಬದುಕಿಲ್ಲವನಿಯಲಿ ತನ
ಗೆಂದು ದುಗುಡವ ಹಿಡಿದು ಸಾತ್ಯಕಿಗರಸ ನೇಮಿಸಿದ  ೨  
 
ಮೊಲನ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ  ೩  
 
ದಾರುಕನು ನಿಜ ರಥವನೆಸಗಲು
ದಾರ ಸಾತ್ಯಕಿ ಭೀಮಸೇನಗೆ
ಧಾರುಣೀಶನ ಕೊಟ್ಟು ಭಾರಿಯ ಭಟರ ಗಡಣದಲಿ
ಭಾರಣೆಯಲೈತಪ್ಪ ನಿಜ ಪರಿ
ವಾರವನು ಬೋಳೈಸಿ ನಿಸ್ಸಾ
ಳಾರವದ ಥಟ್ಟಣೆಯಲಿದಿರಾದನು ರಿಪುವ್ರಜಕೆ  ೪  
 
ತಳಿತ ಬೆಳುಗೊಡೆಗಳಲಿ ದೆಸೆ ಕ
ತ್ತಲಿಸೆ ಕರಿ ರಥ ತುರಗ ಚರಣೋ
ಚ್ಚಲಿತ ಧೂಳಿಯ ದಂಡು ನಡೆದುದು ಸೌರ‍್ಯಮಂಡಲಕೆ
ಮೊಳಗಿದವು ಬರಸಿಡಿಲ ಕಣ್ಣಿಯ
ಕಳಚಿದಂತಿರೆ ವಾದ್ಯಚಯವರಿ
ಬಲಕೆ ನಡೆದನು ವೀರಸಾತ್ಯಕಿ ಸಕಲ ಬಲಸಹಿತ  ೫  
 
ಬರಬರಲು ಮುಂದುಭಯರಾಯರ
ಗರುಡಿಯಧಿಪತಿ ಕಂಡನೆಲೆ ಸಂ
ಗರ ಸಹಾಯಸಮಗ್ರ ಸಾತ್ಯಕಿ ಗಮನವಾವೆಡೆಗೆ
ಧುರದ ಬಡವರನೆಮ್ಮ ವಂದಿಸಿ
ಮರಳು ಮೇಣ್ ನೀ ಸರಳ ಮೊನೆಯಲಿ
ಪರಿಹರಿಸಿ ಹೋಗೆನುತ ಗುರು ಚಾಚಿದನು ನಿಜರಥವ  ೬  
 
ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ಚಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ  ೭  
 
ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಖತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರಫಾಲನೇತ್ರಂಗೆ  ೮  
 
ಕಳುಹಿದನು ಯಮಸೂನು ಪಾರ್ಥನ
ಬಳಿಗೆ ನೀ ಕೃಪೆಮಾಡಿ ತನ್ನನು
ಕಳುಹಬೇಹುದು ನಿಮ್ಮೊಳಿದಿರೇ ರಣಕೆ ತಾನೆನುತ
ಸೆಳೆದ ಬಾಣವನಿಳುಹಿದರೆ ಗುರು
ತೊಲಗಿ ಕೊಟ್ಟನು ಪದವನಹಿತಾ
ವಳಿಗೆ ಸಾತ್ಯಕಿ ಮೊಳಗಿದನು ಕಳಶಜನ ನೇಮದಲಿ             ೯  
 
ಪಾರಸಿಕ ನೇಪಾಳ ಸಿಂಹಳ
ವೀರಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ  ೧೦  
 
ಚೀನ ಭೋಟ ವರಾಳ ಕೇಶಿ ಸು
ದೀನ ಖುರಸಾಣಾದಿ ದೇಶದ
ಮಾನನಿಧಿಗಳು ಕವಿದು ಮುತ್ತಿತು ಕೈಯ ಕೋಲ್ಗಳಲಿ
ಏನನೆಂಬೆನು ಸಮರದಲಿ ರಾ
ಜಾನುಮತ ಮಂತ್ರಣವೆನಿಪ ಮುನಿ
ಪಾನುಮತವರಿದಾಯ್ತು ಸಾತ್ಯಕಿಗಾ ಮಹಾಕದನ       ೧೧  
 
ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸರಿಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ      ೧೨  
 
ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಳನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ  ೧೩  
 
ಒಂದು ದೆಸೆಯಲಿ ಪಾರ್ಥ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಸರ
ಳಿಂದ ನೊಂದುದು ಸೇನೆಯೆನೆ ಕೃತವರ್ಮನಿದಿರಾಗಿ
ನಿಂದನೆಲವೋ ಮರುಳೆ ಮೀರಿದ
ಡಿಂದುಧರ ತಲೆಗಾವಡೀಗಳೆ
ಕೊಂದಡಲ್ಲದೆ ಬಿಡೆನೆನುತ ಮೂದಲಿಸುತೈತಂದ       ೧೪  
 
ನರನ ಮೈಗಂಡೀತನಲಿ ಸಂ
ಗರವನಾದರಿಸುವೆನು ಬಳಿಕೆಂ
ದರಿದು ಕೃತವರ್ಮಕನ ರಥವನು ಧನುವ ಸಾರಥಿಯ
ಸರಳು ಮೂರರಲೆಚ್ಚು ರಿಪುವನು
ಧುರದಿ ಹಿಂಗಿಸಿ ಹಂಸಮಯ ಮೋ
ಹರದೊಳಗೆ ಮೊಳಗಿದನು ತಾಗಿದನತಿರಥಾವಳಿಯ  ೧೫  
 
ಹೊಗಿಸದಿರಿ ಸಾತ್ಯಕಿಯ ಹಿಂದಕೆ
ತೆಗೆಸು ತೆಗೆಸೋ ಫಲುಗುಣನ ತೆ
ತ್ತಿಗನಿವನು ಹೊಯ್ ಹೊಯ್ಯೆನುತ ಹೊರವಂಟರತಿರಥರು
ಬಿಗಿದ ಬಿಲುಗಳ ತಿರುವೆರಳಬೊ
ಬ್ಬೆಗಳ ಕಿವಿಗಡಿಯಂಬುಗಳಿನಾ
ಳುಗಳ ದೇವನ ತಱುಬಿದರು ಕೌರವ ಸಹೋದರರು  ೧೬  
 
ಅವರ ಬಲನೆಡವಂಕದಲಿ ಸೈಂ
ಧವನ ಮೊನೆಯವರೌಕಿದರು ಕೌ
ರವನ ಬಳಿಯಲಿ ಸಂದಣಿಸಿದರು ಕರ್ಣನಂದನರು
ಬವರವಸದಳವಾಯ್ತು ರಿಪುಭಟ
ನಿವಹ ಮಧ್ಯದೊಳೀತ ಸಿಲುಕಿದ
ನವಿರಳಾಸ್ತ್ರವ ಸುರಿದು ಕಾಣನು ಹಗೆಗೆ ಹರಿವುಗಳ  ೧೭  
 
ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ 
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದ  ೧೮

ಸಂಕ್ಷಿಪ್ತ ಭಾವ

ಧರ್ಮಜನ ನೇಮದಂತೆ ಸಾತ್ಯಕಿಯು ಅರ್ಜುನನನ್ನು ಕಾಣಲು ಹೊರಟದ್ದು.

ಧರ್ಮಜನಿಗೆ ಕೃಷ್ಣನ ಪಾಂಚಜನ್ಯದ ಧ್ವನಿ ಕೇಳಿಸಿತು. ರಣದಲ್ಲಿ ಅರ್ಜುನ ಏನಾದನೋ ಎಂದು ಚಿಂತೆಯಾಯಿತು. ಸಾತ್ಯಕಿಯನ್ನು ಕರೆದು ಅರ್ಜುನನ ಬಗ್ಗೆ ತಿಳಿದು ಬಾ ಎಂದನು. ಅವನಿಲ್ಲದೆ ನಾನಿರುವುದಿಲ್ಲ. ಈ ಭಯಂಕರ ರಣದಲ್ಲಿ ಉಳಿದನೋ, ಅಳಿದನೋ ಎಂದು ಅಳಲಿದನು. ಸಾತ್ಯಕಿಯು ಕೃಷ್ಣ ಇರುವುದರಿಂದ ಏನೂ ತೊಂದರೆಯಿಲ್ಲ ಎಂದು ಸಮಾಧಾನ ಹೇಳಿ ಅರ್ಜುನನು ಇದ್ದೆಡೆಗೆ ಹೊರಟನು.

ದ್ರೋಣನು ಸಾತ್ಯಕಿಯನ್ನು ತಡೆದನು. ಆಗ ಅವನಿಗೆ ನಮಿಸಿ ನಿಮ್ಮೊಡನೆ ಕಾದಲಳವೇ ಎಂದು ಅವನಿಂದ ಅನುಮತಿ ಪಡೆದು ಮುಂದುವರಿದನು. ಎದುರಾದ ಸಿಂಹಳ, ಬಾಹ್ಲಿಕ, ನೇಪಾಳ, ಚೀನ, ಕೌಸಲ ಮುಂತಾದ ದೇಶಗಳ ಸೈನ್ಯವನ್ನು ಸೋಲಿಸುತ್ತಾ ಅವರುಗಳನ್ನು ಸ್ವರ್ಗದ ವಿಮಾನ ಹತ್ತಿಸಿದನು. ಕೌರವ ಸಹೋದರರು ಇವನನ್ನು ಅರ್ಜುನನ ಬಳಿಗೆ ಹೋಗದಂತೆ ತಡೆಯಲು ಬಂದರು. ರಿಪುಭಟರ ನಿವಾರಿಸಿ ಕಂಡನು ಸಾತ್ಯಕಿ ಕೃಷ್ಣಾರ್ಜುನರ. ಇತ್ತ ಧರ್ಮಜನು ಮತ್ತೆ ಕೃಷ್ಣನ ಶಂಖನಾದವನ್ನು ಕೇಳಿ ಕಳವಳಿಸಿದನು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ