ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ112



ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಎರಡನೆಯ ಸಂಧಿ

ಸೂ.   
ಭೀಮವಿಕ್ರಮ ಕುರುಬಲದೊಳು
ದ್ದಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ 
 
ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ  ೧ 
 
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯಗಿಡಿಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ    ೨ 

 
ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ    ೩
 
ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ    ೪
 
ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದುಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು  ೫
 
ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕರ‍್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ    ೬
 
ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು    ೭
 
ಸೂತಸುತ ದಳಪತಿಯೆ ಫಡ ಮು
ಯ್ಯಾತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್‌ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು     ೮
 
ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕುಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ    ೯ 
 
ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ    ೧೦ 
 
ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಿಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕಯರವರ ಥಟ್ಟಿನಲಿ    ೧೧ 
 
ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿನೃಪಾಲನಾನೆಗಳು    ೧೨ 
 
ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರು ಕೆಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದರು ತಮ್ಮೊಳಗೆ   ೧೩
 
ಕೆದರಿತರನೆಲೆ ರಾಯಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರಳ ತುಟಿಯಬ್ಬರಕೆ ಗಜ
ಬೆದರಿ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ   ೧೪ 
 
ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುದೈಸಾವಿರ ಮಹಾರಥರು   ೧೫ 
 
ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲುನಾರಾಚಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ   ೧೬ 
 
ಮೇಲುವಾಯ್ದಾರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ   ೧೭ 
 
ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ೧೮ 
 
ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳು
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ    ೧೯ 
 
ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ   ೨೦ 
 
ಕುಣಿದು ಪುಟನೆಗೆದರಿ ಗಜವ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ೨೧ 

ಸಂಕ್ಷಿಪ್ತ ಭಾವ
Lrphks Kolar

ಭೀಮನಿಂದ ಕ್ಷೇಮಧೂರ್ತಿಯ ಮರಣ

ಮಗನು ದಳಪತಿಯಾದುದನ್ನು ನೋಡಲೋ ಎಂಬಂತೆ ಸೂರ್ಯನು ಉದಯಿಸಿದನು. ಕರ್ಣನ ನೇತೃತ್ವದಲ್ಲಿ ಸೇನೆ ಮುನ್ನಡೆಯಿತು. ಭಾರೀ ಗದ್ದಲ ಆರ್ಭಟಗಳು ನಡೆದವು. ಮಕರವ್ಯೂಹದಲ್ಲಿ ಕೌರವಸೈನ್ಯವಿದ್ದರೆ ಅರ್ಧ ಚಂದ್ರಾಕಾರದಲ್ಲಿ ಪಾಂಡವ ಸೈನ್ಯ ಸಿದ್ಧವಾಗಿತ್ತು. ಕೌರವರಲ್ಲಿ ವೃಷಸೇನ, ವಿಕರ್ಣ, ಕೃಪ, ಕೃತವರ್ಮ ಗುರುನಂದನ ಮೊದಲಾದವರು ಮುಂಚೂಣಿಯಲ್ಲಿ ಸಾಗಿದರು. ಭಟರು ಕರ್ಣನನ್ನು ಹೊಗಳುತ್ತ ಸಾಗಿದರು.

ಸಾವಿರಾರು ಸಂಖ್ಯೆಯಲ್ಲಿ ರಥ , ಕುದುರೆ, ಆನೆ, ಕಾಲಾಳುಗಳು  ಸೋತರು. ಪಾಂಡವರನ್ನು ಎದುರಿಸಿ ಕ್ಷೇಮಧೂರ್ತಿ ಸಹಸ್ರ ಗಜಪಡೆಯೊಂದಿಗೆ ಬಂದು ನಿಂತನು. ಅವನ ಆನೆಗಳು ನಾನಾವಿಧಗಳಲ್ಲಿ ಪಾಂಡವರ ಸೈನ್ಯವನ್ನು ನೋಯಿಸಿದವು. ಆಗ ಭೀಮನು ಇವನನ್ನು ಎದುರಿಸಿದನು. 

ಇವರಿಬ್ಬರಿಗೂ ಕಾದಾಟ ಮೊದಲಾಯಿತು. ಮಹಾರಥರು ಸ್ವರ್ಗ ಸೇರಿದರು. ಕ್ಷೇಮಧೂರ್ತಿಯ ಪಕ್ಷದ್ದೇ ಒಂದು ಆನೆಯನ್ನು ಏರಿದ ಭೀಮನು ನೆಲ ಯಾವುದು, ಆಗಸವಾವುದು ತಿಳಿಯದಂತೆ ಬಾಣಗಳ ಸುರಿಮಳೆಗರೆದನು. ವೈರಿಗಳ ಪಡೆಯ ಆನೆಗಳು ಸತ್ತುಬಿದ್ದವು. ಕ್ಷೇಮಧೂರ್ತಿಯು ಕುಳಿತಿದ್ದ ಆನೆಯು ಎರಡು ಸೀಳಾಗಿ ಅವನು ಬಿದ್ದು ಮರಣ ಹೊಂದಿದನು. ಭೀಮನ ಎದುರಿಗೆ ನೀನೆಷ್ಟರವನು ಎಂದು ನಗುತ್ತ ಅವನನ್ನು ಅಪ್ಸರ ಸ್ತ್ರೀಯರು ವಿಮಾನದಲ್ಲಿ ಕೊಂಡೊಯ್ದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ