ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ113


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಮೂರನೆಯ ಸಂಧಿ


ಸೂ.   
ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ   
 
ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ          ೧   
 
ಕರೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಷದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ    ೨   
 
ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿಮಂಡಲವ
ಆ ವೃಕೋದರಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ          ೩   
 
ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರುವ ರಾವ್ತರ
ಶಿರವನೆಚ್ಚನು ಕೊಂದನೀಪರಿ ಹತ್ತು ಸಾವಿರವ           ೪   
 
ಬಿದ್ದವಗಣಿತ ತುರಗದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ          ೫   
 
ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ          ೬   
 
ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ          ೭   
 
ಕೆಣಕಿದರೆ ಭುಗಿಲೆಂದುದೀತನ
ರಣಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೋ ನಿನ್ನಾಳು ಕುದುರೆಯನರಿಯೆ ನಾನೆಂದ          ೮   
 
ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರುಹುದಹುದೆನುತ ತೆಗೆದೆಚ್ಚ           ೯   
 
ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ          ೧೦   
 
ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಶಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ         ೧೧   
 
ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು          ೧೨   
 
ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು        ೧೩   
 
ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ         ೧೪   
 
ಭಾರಿಯಾಹವವಾಯ್ತಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ           ೧೫   
 
ಮುಂದೆ ಹರಿದರು ಪಾಂಡುತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ           ೧೬   
 
ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ       ೧೭   
 
ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲನಂದನನ          ೧೮   
 
ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ       ೧೯   
 
ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ      ೨೦   
 
ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಭಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ         ೨೧   
 
ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯ ಬಡಿಕರು ಬಿಂಕ ಮೇಳವವಿಲ್ಲಲಾ ನಿನಗೆ
ಹೊಲಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ         ೨೨   
 
ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ          ೨೩   
 
ನೊಗನನೀಡಾಡಿದವು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ        ೨೪   
 
ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ         ೨೫   
 
ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೊಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವಸೇನೆ ಕಳವಳಿಸೆ        ೨೬   
 
ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ         ೨೭   
 
ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ          ೨೮   
 
ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕರು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಶಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಶೃಂಜಯರು     ೨೯   
 
ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೂಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳೆನುತಲೆಚ್ಚನು ಮಹಾಸ್ತ್ರದಲಿ          ೩೦   
 
ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ‍್ಯದ                
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು      ೩೧   

ಸಂಕ್ಷಿಪ್ತ ಭಾವ

ಸಾತ್ಯಕಿ, ಭೀಮ ಮತ್ತು ಅಶ್ವತ್ಥಾಮರ ಪ್ರತಾಪ

ಕ್ಷೇಮಧೂರ್ತಿಯ ಮರಣದ ನಂತರ ಕೌರವರ ಕಡೆಯವರು ಭೀಮನ ಮೇಲೆ ಕೋಪದಿಂದ ಮುನ್ನುಗ್ಗಿದರು. ಭೀಮನ ನೆರವಿಗೆ ಸಾತ್ಯಕಿಯು ಬಂದನು. ಸಾವಿರದ ಸಂಖ್ಯೆಯಲ್ಲಿ ರಥಗಳು ಮುರಿದು ಬಿದ್ದವು. ಕುದುರೆಗಳ ಅಳಿವಿಗೆ ಲೆಕ್ಕವೇ ಇಲ್ಲ.

ವಿಂದ ಮತ್ತು ಅನುವಿಂದರು ಸಾತ್ಯಕಿಯನ್ನು ಎದುರಿಸಿದರು. ಸಾವಿರಾರು ಆನೆಗಳು ಸಾತ್ಯಕಿಯನ್ನು ಮುತ್ತಿದವು. ಆದರೆ ಮೊದಲ ಲಗ್ಗೆಯಲ್ಲಿಯೇ ಸಾತ್ಯಕಿಯು ವಿಂದಾನುವಿಂದರನ್ನು ಸ್ವರ್ಗಕ್ಕೆ ಕಳಿಸಿದನು. 

ಕಲಿಕರ್ಣನು ಕೌರವರ ಮುಖ್ಯರನ್ನು ಮೂದಲಿಸಿದನು. ಮುರಿದ ಸೇನೆಯನ್ನು ಒಗ್ಗೂಡಿಸಿ ಸಾತ್ಯಕಿಯತ್ತ ನಡೆಸಿದನು. ಒಂದೆಡೆ ಸಾತ್ಯಕಿ, ಮತ್ತೊಂದೆಡೆ ಭೀಮ ಎದುರಿಸಿದರು. ಎರಡೂ ಪಕ್ಷಗಳಲ್ಲಿ ಸಾವುನೋವುಗಳಾದವು. ಪಾಂಡವರ ಮಕ್ಕಳನ್ನು ಚಿಕ್ಕವರೆಂದು ಗುರುತನುಜನು ಹೀಗಳೆದನು. ಅಶ್ವತ್ಥಾಮ ಭೀಮನನ್ನು ಎದುರಿಸಿದನು. ಎತ್ತ ತಿರುಗಿದರೆ ಅತ್ತ ತಿರುಗುತ್ತ ಬಾಣಗಳ ಸುರಿಮಳೆಯನ್ನು ಸುರಿಸುತ್ತ ಕೊನೆಗೆ ಇಬ್ಬರೂ ದಣಿದು ಮೈಮರೆತರು. ಸಾರಥಿ ರಥವನ್ನು ಹಿಂದೆ ತೆಗೆದುಕೊಂಡು ಅಶ್ವತ್ತಾಮನನ್ನು ಸಂತೈಸಿದ.

ಭೀಮ ಬಸವಳಿದುದನ್ನು ಕಂಡು ಪಾಂಡವ ಸೇನೆ ಕಳವಳಿಸಿತು. ಭೀಮನ ಸಾರಥಿ ಭೀಮನನ್ನು ಹಿಂದೆ ತಂದನು. ಎರಡೂ ಪಕ್ಷಗಳ ಉಳಿದ ಪ್ರಮುಖರು ಯುದ್ಧ ಮುಂದುವರೆಸಿದರು. ಶಲ್ಯನೊಂದಿಗೆ ಮಾದ್ರೀತನಯರು ಹೋರಾಡಲು ನಿಂತರು. ರಕ್ತದ ಚಿಲುಮೆ ಚಿಮ್ಮಿತು. ಪಾಂಡವಕುಮಾರರು ದಣಿದರು. ಶೌರ್ಯ ತಗ್ಗಿತು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ