ಭಾರತಕಥಾಮಂಜರಿ118
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಎಂಟನೆಯ ಸಂಧಿ
ಸೂ.
ಪೃಥಿವಿಪತಿ ಮಾದ್ರೇಶನನು ಸಾ
ರಥಿಯ ಮಾಡಿದನೊಲವು ಮಿಗಲತಿ
ರಥ ಭಯಂಕರ ಭಾನುಸುತನಾಹವಕೆ ನಡೆತಂದ
ಹರನ ಬೀಳ್ಕೊಂಡಖಿಳ ದಿವಿಜರು
ಹರೆದುದೀ ಪರಿ ಕಮಲಭವನೀ
ಶ್ವರನ ಸಾರಥಿಯಾಗೆ ಸಾರಿದುದಮರರಭ್ಯುದಯ
ಹರಿಯ ಸಾರಥಿತನದಿ ಜಯವಂ
ಕುರಿಸಿತವರಿಗೆ ನಿಮ್ಮ ಕೃಪೆಯಲಿ
ಕುರುಬಲಕೆ ಗೆಲವಾದಡೊಳ್ಳಿತು ಮಾವ ಕೇಳೆಂದ ೧
ಹರನು ಬಿಲುವಿದ್ಯವನು ಕೊಡುತವೆ
ಪರಶುರಾಮಂಗೆಂದನಧಮರಿ
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದ
ಸುರರ ಮೆಚ್ಚದ ರಾಮನೀತನ
ಕರೆದು ಗರುಡಿಯ ಹೊಗಿಸಿದನು ಕಡು
ಗರುವನೀ ರಾಧೇಯನಧಮನೆ ಮಾವ ಕೇಳೆಂದ ೨
ಸೂತಕುಲಸಂಭವನೆ ಭುವನ
ಖ್ಯಾತಕರ್ಣನು ಸಾಕಿದಾತನು
ಸೂತನಾದಡೆ ಮಾವ ಕೇಳನ್ವಯಕೆ ಹಳಿವುಂಟೆ
ಸ್ವಾತಿಯುದಕದೊಳಾದ ಮೌಕ್ತಿಕ
ವ್ರಾತಕಯ್ಯನೆ ಚಿಪ್ಪು ನಿಮಗಿ
ನ್ನೇತಕೀ ಸಂದೇಹ ರವಿಸುತ ಸೂತನಲ್ಲೆಂದ ೩
ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಭಾರಿ ಗುರು ಭೀ
ಷ್ಮಾದಿಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ ೪
ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮುರಿದುದಾದಡೆ
ನಮ್ಮ ಕೊರತೆಯದೇಕೆ ಕರೆಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳೆಂದ ೫
ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿತಂತಸ್ತಾಪಜಲನಿಧಿ
ಚಿತ್ತದುರುಸಂದೇಹತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ ೬
ಬೀಳುಕೊಂಡನು ಶಲ್ಯನನು ಭೂ
ಪಾಲನಿತ್ತಲು ಕರ್ಣನಾಯುಧ
ಶಾಲೆಯಲಿ ಶುಚಿಯಾಗಿ ಶಸ್ತ್ರಾಸ್ತ್ರವನು ಪೂಜಿಸಿದ
ಸಾಲದೀವಿಗೆಗಳನು ಶಸ್ತ್ರ
ಜ್ವಾಲೆ ಮಿಕ್ಕವು ತೀಕ್ಷ್ಣಧಾರಾ
ಭೀಳವಿಕ್ರಮ ವಿಸ್ಫುಲಿಂಗಿತವಾದವಡಿಗಡಿಗೆ ೭
ಕುರಿಯ ಹಣಿದದ ಕೋಳಿ ಕೋಣನ
ಮುರಿದಲೆಯ ಮೀಸಲಿನ ರಕುತದ
ದುರುದುರಿಪ ದಂಡೆಯಲಿ ಕಲಸಿದ ಕೂಳ ಮುದ್ದೆಗಳ
ಹೊರಗೆ ಬಡಿಸಿದ ಭೂತಬಲಿ ಬೊ
ಬ್ಬಿರಿತದೊಡನುಬ್ಬೇಳ್ವ ಲಗ್ಗೆಯ
ಹರೆಗಳಬ್ಬರವಾಯ್ತು ಕರ್ಣನ ಶಸ್ತ್ರಪೂಜೆಯಲಿ ೮
ವಿರಚಿಸಿತು ಶಸ್ತ್ರಾಸ್ತ್ರ ಪೂಜಾ
ಪರಿಸರಣ ರವಿಸೂನು ದರ್ಭಾಂ
ಕುರದ ಶಯನಸ್ಥಾನದಲಿ ಮಾಡಿದನು ಜಾಗರವ
ಕುರು ನೃಪಾಲನ ಪಾಳೆಯದೊಳಾ
ಯ್ತಿರುಳು ಮನೆಮನೆಗಳಲಿ ಶಸ್ತ್ರೋ
ತ್ಕರ ಸಮಾರಾಧನೆಯೊಳಿರ್ದುದು ಕೂಡೆ ನೃಪಕಟಕ ೯
ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗವನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ ೧೦
ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ ೧೧
ಕೀಲ ತೆಗೆಯಚ್ಚುಗಳ ಹೆರೆ ಬಲು
ಗಾಲಿಗಳ ಜೋಡಿಸು ಪತಾಕಾ
ಜಾಲವನು ನಿಲಿಸೀಸ ಬಲಿ ಬಲುಮಿಣಿಯ ಬಿಗಿಯೆನುತ
ಮೇಲೆ ಮೇಲಬ್ಬರದ ಘೋಳಾ
ಘೋಳಿ ಘಲ್ಲಿಸೆ ದೆಸೆಯಲತಿರಥ
ಜಾಲ ಕವಿದುದು ಕದನಕೌತೂಹಲರ ಕೇರಿಯಲಿ ೧೨
ನೀಡು ಬಿಲುಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ ೧೩
ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದವು ಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ ೧೪
ಅರಸ ಕೇಳಭ್ಯುದಿತವಾದುದು
ಸರಸ ಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣತಿಮಿರಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ ೧೫
ಉಲಿವ ಮಂಗಳಪಾಠಕರು ಕಳ
ಕಳಿಕೆ ಮೆರೆಯಲು ಹೊಳೆವ ಹೊಂಬ
ಟ್ಟಲಲಿ ಸೂಸಿದನರ್ಘ್ಯಜಲವನು ಜನಕನಿದಿರಿನಲಿ
ಲಲಿತ ಮಂತ್ರಾಕ್ಷತೆಗಳನು ಕರ
ತಳದೊಳಾಂತು ಮಹೀಸುರರಿಗ
ಗ್ಗಳೆಯನಿತ್ತನು ಧೇನುಮಣಿಕನಕಾದಿ ವಸ್ತುಗಳ ೧೬
ವರ ನಿಖಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಪದಮುಖಕೆ ಮುಂ
ಜೆರಗ ಬಿಟ್ಟನು ಬಿಗಿದು ಬದ್ದುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ ೧೭
ದಿನ ಗಣನೆ ಹದಿನೆಂಟು ಕೋಟಿಯ
ಕನಕವಂದಿನ ದಿನದಿ ಚೆಲ್ಲಿದ
ನನುಪಮಿತ ಧನ ರತುನ ಭಂಡಾರವನು ತೆಗೆತೆಗಸಿ
ಮನದಣಿಯೆ ಯಾಚಕರಿಗಿತ್ತುದ
ನೆನಗೆ ಬಣ್ಣಿಸಲಳವೆ ಕೇಳೈ
ಜನಪ ಕರ್ಣನದೇನ ನಿಶ್ಚಯಿಸಿದನೊ ಮನದೊಳಗೆ ೧೮
ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ ೧೯
ದೇವ ಗುರು ವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧ ಸೌಗಂಧಭಾವಿತ ಯಕ್ಷ ಕರ್ದಮವ ೨೦
ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರು ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ ೨೧
ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಶಾಸನಾದಿಗಳು
ವಿತತ ಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ ೨೨
ಬಳಿಯ ನೆಲನುಗ್ಗಡಣೆಗಳ ವೆ
ಗ್ಗಳೆಯ ಸುಭಟರ ಮೇಳದಲಿ ಬಂ
ದಿಳಿದು ದಂಡಿಗೆಯಿಂದ ನಸುನಗುತೇರಿದನು ರಥವ
ಚಳಹಯಂಗಳು ಹುರಿಯ ವಾಘೆಯ
ನಳವಡಿಸೆ ಬಲನೆಡಕೆ ವಾಜಿಯ
ಸುಳಿಸಿ ಸಾರಥಿತನವ ತೋರಿದನಂದು ಕಲಿಶಲ್ಯ ೨೩
ಬಳಿಯ ಪಾಯವಧಾರುಗಳ ಕಳ
ಕಳದೊಳಗೆ ರಥವೇರಿದನು ನೆಲ
ಹಿಳಿಯೆ ಹೇರಾಳಿಸಿತು ಬಹುವಿಧವಾದ್ಯನಿರ್ಘೋಷ
ತಳಿತವಮಳಚ್ಛತ್ರ ಚಮರಾ
ವಳಿಯ ಝಲ್ಲಿಯ ಪಟ್ಟಿಗಳ ನವ
ಪಳಹರಧ್ವಜದಂಡವೆತ್ತಿತು ವರರಥಾಗ್ರದಲಿ ೨೪
ಇಕ್ಕೆಲದ ರಾವುತರ ತೇರಿನ
ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳ ಸೂಳಿನ ಲಗ್ಗೆದಂಬಟದ
ಉಕ್ಕಿತೋ ವಿಲಯಾಬ್ಧಿಯೆನೆ ಸಾ
ಲಿಕ್ಕಿ ನಡೆದುದು ಸೇನೆ ರಾಯನ
ಸಿಕ್ಕಿನವಸರದಾನೆ ನಿಜಪಾಳೆಯವ ಬೀಳ್ಕೊಂಡ ೨೫
ರಾಯ ಕೇಳೈ ಬಳಿಕ ಕಲಿರಾ
ಧೇಯ ಬರುತಿರೆ ತೋರಿದುತ್ಪಾ
ತಾಯತವನೇನೆಂಬೆನೈ ಶಿವಶಿವ ಮಹಾದೇವ
ವಾಯಸದ ತಡೆ ಭೂಮಿಕಂಪ ನಿ
ಜಾಯುಧಂಗಳ ಕಿಡಿ ಗಜಾಶ್ವನಿ
ಕಾಯ ರಥವಾಜಿಗಳ ಕಂಬನಿ ಕಾಣಲಾಯ್ತೆಂದ ೨೬
ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ ೨೭
ತೃಣಕೆ ಕೊಂಬನೆ ಕರ್ಣನಿದನಾ
ರೆಣಿಸುವರು ದುಷ್ಕರ್ಮಶೇಷದ
ಋಣನಿಬದ್ಧರು ಕಂಡು ಮಾಡುವುದೇನು ಕೌರವರು
ರಣಮನೋರಾಗದಲಿ ದಳಸಂ
ದಣಿಯ ನಿಲಿಸಿದನತಿರಥರ ಲಾ
ವಣಿಗೆಗೊಂಡನು ಕರ್ಣ ಪರಿವಾರಕ್ಕೆ ಕೈಮುಗಿದು ೨೮
ನೊಂದವರು ನಿಲಿ ಸ್ವಾಮಿಕಾರ್ಯಕೆ
ಹಿಂದುಗಳೆವರು ಮರಳಿ ಮನೆಗಳ
ಹಿಂದಣಾಸೆಯ ಹೇವಹರುಕರಿಗಿಂದು ಮಹನವಮಿ
ನಿಂದರೊಳ್ಳಿತು ನೃಪನ ದೆಸೆಯಲಿ
ಕಂದು ಕಲೆಯುಳ್ಳವರು ಕಾಳೆಗ
ವಿಂದು ಬೆಟ್ಟಿತು ಬೀಳುಕೊಂಬುದು ಭೀತಿ ಬೇಡೆಂದ ೨೯
ಓಡಿ ನಾಚಿಸುವವರು ನಿಲಿ ರಣ
ಖೇಡರೀಗಳೆ ಮರಳಿ ಮನವ
ಲ್ಲಾಡಿ ಮರುಗುವರೇಳಿ ಮರಣದಲಾವ ಫಲಸಿದ್ಧಿ
ಕೂಡುಗಲಕರು ನಿಲ್ಲಿ ಇಹಪರ
ಗೇಡಿಗರು ಹೆರಸಾರಿ ಗುಣದಲಿ
ಬೇಡಿಕೊಂಬೆನು ಖಾತಿಗೊಳ್ಳೆನು ಹೋಗಿ ನೀವೆಂದ ೩೦
ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೊಂದಡುಬ್ಬುವರಿತ್ತ ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿ ರಣವನೆಂದನು ಕರ್ಣ ನಿಜಬಲಕೆ ೩೧
ವೀರ ಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡೆಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ ೩೨
ರಾಯ ಕೇಳೈ ಕರ್ಪುರದ ತವ
ಲಾಯಿಗಳನೊಡೆದೊಡೆದು ಭಟರಿಗೆ
ಹಾಯಿಕಿದನಂಜುಳಿಗಳಲಿ ಮೊಗೆಮೊಗೆದು ಬೇಸರದೆ
ಸಾಯದಿಹರೇ ರಣದೊಳಗೆ ರಾ
ಧೇಯನೀ ಮನ್ನಣೆಗೆ ಬದುಕುವ
ನಾಯಿಗಿಹಪರವುಂಟೆ ಎಂದುದು ನಿಖಿಳ ಪರಿವಾರ ೩೩
ಕೇಳಿರೈ ಪರಿವಾರವಿಂದಿನ
ಕಾಳೆಗವಲೇ ನಮಗೆ ಭೀಷ್ಮರ
ಕೋಲಗುರುವಿನ ಹರಿಬವನು ಮನವಾರೆ ಹೊತ್ತೆವಲ
ಸೋಲವೋ ಕೌರವನ ಭಾಗ್ಯದ
ಕಾಲವೋ ವಿಧಿ ಬಲ್ಲದೆನ್ನಯ
ತೋಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ ೩೪
ಆವ ತೋರಿಸಲಾಪನರ್ಜುನ
ದೇವನನು ರಿಪುಬಲದೊಳಾತಂ
ಗೀವೆನೀ ಪದಕವನು ಖಡೆಯವ ವಜ್ರಮಾಣಿಕದ
ಆವನೀ ಫಲುಗುಣನ ತೇರಿನ
ಠಾವಿದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ ೩೫
ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತುಸಾವಿರವ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ ೩೬
ತೋರಿರೈ ಫಲುಗುಣನನಿದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವರಾಯನಾಣೆಂದ ೩೭
ನರನ ಶರಹತಿಗೆನ್ನ ತನು ಜ
ಝ್ಝರಿತವಾಗಲಿ ನನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿ ಯುದ್ಧದಲಿ
ಕರುಳು ಕರುಳಲಿ ತೊಡಕಿ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ ೩೮
ಸರಳು ಸರಳಿಂಗೊಮ್ಮೆ ರೋಮಾಂ
ಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭಿಷೇಕವನು
ಧರಿಸಿ ವೈರಿಯ ಘಾಯಘಾಯದ
ಧರಧುರಕೆ ತನಿಹೆಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯ ತಾನೆಂದ ೩೯
ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ ೪೦
ಕೈದಣಿಯೆ ಹೊಯ್ದರಿಯ ಸೀಳಿದು
ಬಾಯ್ದಣಿಯೆ ಮೂದಲಿಸಿ ಹೆಚ್ಚಿದ
ಮೈದಣಿಯೆ ರಿಪುಭಟನ ಹೊಯ್ಲಲಿ ಘಾಯವನು ಪಡೆದು
ಹಾಯ್ದ ಕರುಳಿನ ಮಿದುಳ ಜೋರಿನ
ತೊಯ್ದ ರಕ್ತಾಂಬರದಿ ತಾನಿರ
ಲೈದಿ ಕುರುಪತಿ ಕಂಡನಾದರೆ ಧನ್ಯ ತಾನೆಂದ ೪೧
ನರನ ರಕುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ ೪೨
ಸಂಕ್ಷಿಪ್ತ ಭಾವ
Lrphks Kolar
ಶಲ್ಯನ ಸಾರಥ್ಯದಲ್ಲಿ ಕರ್ಣನು ಯುದ್ಧಕ್ಕೆ ಹೊರಟ ಪ್ರಸಂಗ
ದುರ್ಯೋಧನನು ಶಲ್ಯನಿಗೆ ತ್ರಿಪುರದಹನದ ಕಥೆಯನ್ನು ಹೇಳಿ ಕರ್ಣನ ಬಗ್ಗೆ ಒಳ್ಳೆಯ ಭಾವನೆ ಬರುವಂತೆ ಮಾತನಾಡಿದ. ಪರಶುರಾಮ ಕರ್ಣನಿಗೆ ವಿದ್ಯೆಯನ್ನು ಕಲಿಸಬೇಕಾದರೆ ಕರ್ಣನೇನು ಸಾಮಾನ್ಯನೆ? ಸೂತನು ಸಾಕಿರಬಹುದು ಆದರೆ ಕರ್ಣ ಪರಾಕ್ರಮದಲ್ಲಿ ಯಾರಿಗೂ ಕಡಿಮೆಯಿಲ್ಲವೆಂದ. ಶಲ್ಯನು ಸಾರಥಿಯಾಗಲು ಒಪ್ಪಿ ತನ್ನ ಮಾತನ್ನು ಮೀರಿ ನಡೆದರೆ ಕುದುರೆಗಳನ್ನು ಬಿಟ್ಟುಬಿಡುವುದಾಗಿ ಎಚ್ಚರಿಸಿದ.
ಸಂತೋಷದಿಂದ ಬಂದ ದುರ್ಯೋಧನ ಕರ್ಣನನ್ನು ಕಂಡ. ಕರ್ಣನು ಆಯುಧಶಾಲೆಯಲ್ಲಿ ಆಯುಧಗಳನ್ನು ಪೂಜಿಸಿದ. ಯಥೇಚ್ಛವಾಗಿ ದಾನ ಧರ್ಮಗಳನ್ನು ಮಾಡಿದ. ಬೆಳಗಾಯಿತು. ರಥವನ್ನು ಕಟ್ಟು, ಬಿಗಿ, ಗಾಲಿಗಳ ಜೋಡಿಸು, ಮುಂತಾದ ಗಲಾಟೆಗಳು ಆರಂಭವಾದವು. ಹದಿನೆಂಟು ಕೋಟಿಯಷ್ಟು ಧನಕನಕವನ್ನು ದಾನ ಮಾಡಿದ ಕರ್ಣ ಮನದಣಿಯೆ ಯಾಚಕರನ್ನು ಮೆಚ್ಚಿಸಿದ.
ದೇವ ಗುರುಗಳಿಗೆ ನಮಿಸಿ, ವೈಭವದಿಂದ ನಡೆದು ಬಂದನು ಕರ್ಣ. ರಥದ ಎಡಬಲಗಳಲ್ಲಿ ಬಹಳ ಸೈನ್ಯ, ವಂಧಿಮಾಗಧರು, ರಣಭೇರಿಗಳು ಎಲ್ಲ ನೆರೆದಿದ್ದವು. ರಥ ಹೊರಟಾಗ ಅಪಶಕುನಗಳು ತಲೆದೋರಿದವು. ಕುದುರೆಗಳು ಮುಗ್ಗರಿಸಿದವು. ಬಿರುಗಾಳಿ ಬೀಸಿತು. ನರಿಗಳು ಊಳಿಟ್ಟವು. ಇದಾವುದನ್ನೂ ಕರ್ಣ ಗಣಿಸಲಿಲ್ಲ.
ಹೆದರುವವರು, ಹೇಡಿಗಳು, ಮನೆಯೇ ಮುಖ್ಯ ಎನ್ನುವವರು ಈಗಲೇ ಹಿಂದೆ ಸರಿದುಬಿಡಿ. ಸ್ವರ್ಗವನ್ನು ಬಯಸುವವರು, ರಾಜ್ಯದ ಗೆಲುವಿಗೆ ಹೋರಾಡುವವರು ಬನ್ನಿ ಎಂದನು. ಎಲ್ಲರಿಗೂ ಕರ್ಪುರದ ವೀಳೆಯವನ್ನು ಧಾರಾಳವಾಗಿ ನೀಡಿದನು. ಯಾರು ಅರ್ಜುನನನ್ನು ತೋರಿಸುವರೋ, ಕದನಕ್ಕೆ ತನ್ನೆಡೆಗೆ ಕರೆತರುವರೋ ಅವರಿಗೆ ಮುಕ್ತಾವಳಿಯ ಬಹುಮಾನ, ಪಟ್ಟಣಗಳ ಬಹುಮಾನಗಳನ್ನು ಸಾರಿದನು. ಅರ್ಜುನನ ಬಾಣಗಳು ತನಗೆ, ತನ್ನ ಬಾಣಗಳು ಅವನಿಗೆ ತಾಗಬೇಕು. ಇಬ್ಬರೂ ಸರಿಸಮನಾಗಿ ಕಾದಬೇಕು. ಇಬ್ಬರ ದೇಹದಲ್ಲಿಯೂ ಗಾಯಗಳಾಗಿ ರಕ್ತ ಸುರಿಯಬೇಕು. ಕೈ ಸೋಲುವವರೆಗೂ ಕಾದಾಡಿ, ಬಾಯಿ ಸೋಲುವವರೆಗೂ ಮೂದಲಿಸಿ ಹೋರಾಡಬೇಕು. ಅರ್ಜುನನ ದೇಹವನ್ನು ಭೂತ ಪ್ರೇತಗಳಿಗೆ ನೀಡುವುದನ್ನು ಕುರುಪತಿ ಕಂಡನಾದರೆ ತಾನು ಧನ್ಯನೆಂದು ನುಡಿಯುತ್ತ ಕರ್ಣ ರಣರಂಗದತ್ತ ಹೊರಟನು.
ಕಾಮೆಂಟ್ಗಳು