ಭಾರತಕಥಾಮಂಜರಿ117
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಏಳನೆಯ ಸಂಧಿ
ಸೂ :
ಕಾಮಕೋಳಾಹಳನು ದಕ್ಷನ
ಹೋಮದಳವುಳಕಾರ ಹರ ನಿ
ಸ್ಸೀಮದಲಿ ಪುರ ಮೂರ ಗೆಲಿದನು ಸಲಹಿದನು ಸುರರ
ರಚಿಸಿ ರಥವನು ಭೀತಿ ಬೇಡಿ
ನ್ನುಚಿತವೇನದ ಮಾಡಿ ದೈತ್ಯ
ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
ಕುಚಿತರಿನ್ನೇಗುವರು ಖಳರಿ
ನ್ನಚಳಿತವಲೇ ನಿಮ್ಮ ಪದವೆನೆ
ನಿಚಿತಹರುಷರು ವಿಶ್ವಕರ್ಮಂಗರುಹಿದರು ಹದನ ೧
ಮಾವ ಕೇಳದುಭುತವನೀ ವಿ
ಶ್ವಾವನೀತಳವಾಯ್ತು ರಥ ತಾ
ರಾವಳಿಗಳೀಸಾಯ್ತು ಸತ್ತಿಗೆಯಾಯ್ತು ಕನಕಾದ್ರಿ
ಆವುದಯಘನಶೈಲವಸ್ತ
ಗ್ರಾವ ಕೂಬರ ರಥದಧಿಷ್ಠಾ
ನಾವಲಂಬನವಾಗೆ ರಚಿಸಿದನಾತ ನಿಮಿಷದಲಿ ೨
ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾಸಮುದ್ರವೆ ಆಯ್ತು ಗಾಲಿಗೆ ಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ ೩
ರಾಯ ಕೇಳೈ ಮತ್ತೆಯಾಹವ
ನೀಯ ಗಾರುಹಪತ್ಯ ದಕ್ಷಿಣ
ವಾಯುಸಖರಾದರು ತ್ರಿವೇಣುಕವಾ ರಥಾಗ್ರದಲಿ
ಆಯಿತಲ್ಲಿ ವರೂಥ ನಕ್ಷ
ತ್ರಾಯತವು ಬಳೆಯನುಕರುಷವೊಂ
ದಾಯಿತಾ ಗ್ರಹರಾಜಿಯಾದವು ಮಾವ ಕೇಳೆಂದ ೪
ಆ ರಥಾಗ್ರಕೆ ವೇದ ನಾಲುಕು
ವಾರುವಂಗಳ ಹೂಡಿದರು ನೊಗ
ನಾ ರಜನಿ ದಿನ ಮಾಸವುತ್ತರದಕ್ಷಿಣಾಯನವು
ಸಾರ ಧೃತಿ ವೇದಪ್ರತತಿ ವಿ
ಸ್ತಾರವಾದವು ನೊಗನ ಕೀಲ್ಗಳು
ಚಾರು ಕುಲಫಣಿನಿಕರ ಹಯಬಂಧನದ ನೇಣುಗಳು ೫
ಮಿಳಿಗಳಾದವು ಕುಹು ಸುತಾರಾ
ವಳಿಗಳಮಳ ಪ್ರಣವವಾದುದು
ಮೊಳೆಯ ಬಲುಚಮ್ಮಟಿಗೆ ಹಗ್ಗಕೆ ವರಷಡಂಗಮವು
ನಿಲಿಸಲಖಿಳ ಕ್ರತು ರಥಾಂಗಾ
ವಳಿಗಳಾದವು ವಿವಿಧವರ್ಣದ
ಜಲದಪಟಲ ಪತಾಕೆಯಾದವು ರಥದ ಬಳಸಿನಲಿ ೬
ಕಾಲದಂಡದ ರೌದ್ರದಂಡ ಕ
ರಾಳರಥ ಸೀಮಾಗ್ರದಂಡ ವಿ
ಶಾಲ ವಿಮಳ ಬ್ರಹ್ಮದಂಡದ ಸಾಲು ಚೆಲುವಾಯ್ತು
ಮೇಲುವಲಗೆಯ ಸುತ್ತ ಚಮರೀ
ಜಾಳ ಕನಕಧ್ವಜದ ತುದಿಯಲಿ
ಮೇಳವಿಸಿದನು ವಿಶ್ವಕರ್ಮನು ವಿಪುಳ ಶಾಕ್ವರವ ೭
ಅರಸ ಕೇಳ್ ಋತುಚರಿತ ಸಂವ
ತ್ಸರವೆ ಧನು ತತ್ಕಾಳರಾತ್ರಿಯೆ
ತಿರುವಿದೇನಾಶ್ಚರ್ಯವೈ ಶಿವ ಕಾಲರೂಪಿನಲಿ
ಸರಳರಚನೆಗೆ ವಿಷ್ಣುವನೆ ಸಂ
ಸ್ಮರಿಸಿದರು ವೈಕುಂಠತೇಜ
ಸ್ಫುರಿತ ಮಾರ್ಗಣ ಮೆರೆದುದಗ್ನಿಷ್ಟೋಮ ಮುಖವಾಗಿ ೮
ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ ೯
ಆ ಮಹಾ ಶಾಂಭವ ಸುತೇಜ
ಸ್ತೋಮಕೇನದು ಕೊರತೆಯೇ ಮ
ತ್ತೀ ಮಹೇಂದ್ರ ಬ್ರಹ್ಮಮುಖ ತೇಜಸ್ವಿಗಳ ಶಕ್ತಿ
ಆ ಮಹಾದೇವನಲಿ ಸೇರಿದು
ದೀ ಮಹಾರಥಕಾಗಿ ವಿಮಳ
ವ್ಯೋಮಕೇಶನು ನಗುತ ಬಿಜಯಂಗೆಯ್ಯಲನುವಾದ ೧೦
ಕಳಚಿ ತಲೆಮಾಲೆಯನು ಕೊಟ್ಟನು
ಕೆಲದವರ ಕೈಯಲಿ ವಿಭೂತಿಯ
ಗುಳಿಗೆಯನು ನೆಗ್ಗೊತ್ತಿ ಸರ್ವಾಂಗದಲಿ ಧೂಳಿಸಿದ
ಹೊಳೆಹೊಳೆವ ಕೆಂಜೆಡೆಯನಹಿಪತಿ
ಯಳುಕೆ ಬಿಗಿದನು ದಂತಿರ್ಮವ
ನೆಲಕೆ ಮುಂಜೆರಗೆಳೆಯಲುಟ್ಟನು ದೇಸಿ ಪರಿ ಮೆರೆಯೆ ೧೧
ಖಡೆಯ ಸರಪಣಿ ತೋಳಬಂದಿಗೆ
ಪೆಡೆವಣಿಯ ಮರಿವಾವುಗಳನಳ
ವಡಿಸಿದನು ಜೋಡಿಸಿದ ಶೇಷನ ಜಳವಟಿಗೆ ಮೆರೆಯೆ
ಜಡಿವ ಕಿರುಗೆಜ್ಜೆಗಳ ಬಿಗುಹಿನ
ಲುಡೆಯ ಬದ್ದುಗೆ ದಾರ ಉರಗನ
ಪೆಡೆವಣಿಯ ಗೊಂಡೆಯದ ಕಿಗ್ಗಟ್ಟೆಸೆಯೆ ಪಶುಪತಿಯ ೧೨
ನೆರೆದುದಭವನ ಕೆಲಬಲದಲು
ಬ್ಬರದ ಬೊಬ್ಬಿಯ ಜಡಿವ ಖಡ್ಗದ
ಬೆರಳ ಚಕ್ರದ ಭವಣಿಗಳ ಢವಣಿಸುವ ಢಾಣೆಗಳ
ಪರಿಪರಿಯ ಕೈದುಗಳ ಕರ್ಕಶ
ತರದ ಚರಿತದ ರೌದ್ರವೇಷದ
ವರಮಹಾಗಣ ನಿಕರವೊದಗಿತು ಮಾವ ಕೇಳೆಂದ ೧೩
ಸುರಬಲದ ನಿಸ್ಸಾಳಕೋಟಿಯ
ಮೊರಹು ಮೊಳಗಿತು ಬಿಲುದಿರುವಿನ
ಬ್ಬರದಲಾ ದನಿಯಡಗಿತಗಣಿತ ವಂದಿಘೋಷದಲಿ
ಅರರೆ ವಂದಿಧ್ವನಿಯ ಗರ್ಭೀ
ಕರಿಸಿ ಹೆಚ್ಚಿತು ಜಯಜಯ ಧ್ವನಿ
ನೆರೆ ಚತುರ್ದಶಜಗವ ಜಡಿದುದು ಮಾವ ಕೇಳೆಂದ ೧೪
ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರಗಣನಿಕರ ೧೫
ನಡೆದು ರಥದಲಿ ವಾಮಚರಣವ
ನಿಡುತ ಧೂರ್ಜಟಿ ದೇವನಿಕರಕೆ
ನುಡಿದನಾವನನೀ ರಥಕೆ ಸಾರಥಿಯ ಮಾಡಿದಿರಿ
ಕಡೆಗೆ ಸಾರಥಿಯಿಲ್ಲದೀ ರಥ
ನಡೆವುದೇ ದಾನವರ ಥಟ್ಟಣೆ
ತೊಡೆವುದೇ ಲೇಸಾಯ್ತೆನುತ ನೋಡಿದನು ಸುರಪತಿಯ ೧೬
ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತ ಸಿದ್ಧಿ ತನಗೆಂದ ೧೭
ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ದರುಪದವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ ೧೮
ಹುಸಿಯೆ ಬಳಿಕದು ಸಕಲ ಜಗವೊಂ
ದೆಸೆ ಪುರತ್ರಯ ದೈತ್ಯಭಟರೊಂ
ದೆಸೆ ಮಹಾದೇವೆನುತ ಕಮಲಜನೇರಿದನು ರಥವ
ಸಸಿನೆ ವಾಘೆಯ ತಿದ್ದಿ ತುರಗ
ಪ್ರಸರವನು ಬೋಳೈಸಿ ರಥವನು
ದೆಸೆದೆಸೆಗೆ ಹೊಳಸಿದನು ಲುಳಿವಡಿಸಿದ ಮಹಾರಥವ ೧೯
ದೇವ ಬಿಜಯಂಗೈವುದೆನೆ ದಿವಿ
ಜಾವಳಿಗಳುಬ್ಬರದ ಬೊಬ್ಬೆಯ
ಡಾವರದಲೇರಿದನು ಧೂರ್ಜಟಿ ವೇದಮಯ ರಥವ
ಮಾವ ಕೇಳದುಭುತವನೀ ವಿ
ಶ್ವಾವನೀತಳ ರಥ ರಥಾಂಗ
ಗ್ರಾವತತಿ ನುಗ್ಗಾಯ್ತು ಮುಗ್ಗಿತು ತೇರು ನಿಮಿಷದಲಿ ೨೦
ಕುದುರೆ ತಲೆಕೆಳಗಾದುದಿಳೆಯ
ದ್ದುದು ರಸಾತಳಕವರ ಭಾರಕೆ
ಕೆದರಿದವು ಕುಲಗಿರಿಯ ಹೂಟದ ಸಂಚ ದೆಸೆದೆಸೆಗೆ
ಕುದಿದುದಮರವ್ರಾತ ಸಂತಾ
ಪದಲಿ ವಿತಳಕೆ ಹಾಯ್ದು ನಿಮಿಷಾ
ರ್ಧದಲಿ ಹೆಗಲಿಂದೆತ್ತಿದನು ಹರಿ ವೃಷಭರೂಪಿನಲಿ ೨೧
ಅದ್ದ ರಥ ಹರಿಯುರವಣೆಗೆ ಚಿಗಿ
ದೆದ್ದು ಸಮವಾಯ್ತುಭಯ ಪುಟ ನೆಗೆ
ದೆದ್ದು ವಳಯವ ಕೊಡಹಿ ನಿಂದವು ವೇದವಾಜಿಗಳು
ಎದ್ದುದೋ ರಥ ಖಳ ಮನೋರಥ
ವದ್ದುದೋ ಮಝ ಪೂತುರೆನುತು
ಬ್ಬೆದ್ದುದಮರಕದಂಬ ಭಾರಿಯ ಭುಜದ ಬೊಬ್ಬೆಯಲಿ ೨೨
ಪ್ರಣವನಾದಾಹತಿಗೆ ಗತಿಯಲಿ
ಕುಣಿದವಗ್ಗದ ವೇದಹಯ ಹ
ಲ್ಲಣೆಯ ಹೇಷಿತ ರವಕೆ ಹೆದರಿತು ರಾಕ್ಷಸ ವ್ರಾತ
ಗಣಸಮೂಹದ ಚೂಣಿಯಲಿ ಸುರ
ಗಣ ಸುರಾರಿಗಳೂರ ಮುತ್ತಿತು
ಕೆಣಕಿದರು ಕಾಳೆಗವನಸುರರ ಥಟ್ಟು ಕಳವಳಿಸೆ ೨೩
ಭಟರು ವಿದ್ಯುನ್ಮಾಲಿಯದು ಲಟ
ಕಟಿಸಿ ನೂಕಿತು ತಾರಕಾಕ್ಷನ
ಚಟುಳ ಹಯ ಬಲ ಹೊಕ್ಕು ಹೊಯ್ದುದು ಬಿಟ್ಟ ಸೂಠಿಯಲಿ
ಲಟಕಟಿಸೆ ಸುರಸೇನೆ ಬಲುಗಜ
ಘಟೆಗಳೌಕಿತು ದೈತ್ಯ ಸುರ ಸಂ
ಘಟಿತ ಸಮರವನೇನನೆಂಬೆನು ಮಾವ ಕೇಳೆಂದ ೨೪
ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ ೨೫ |
ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ ೨೬
ಮೊಲನ ಮರಿ ಕೈವೊಯ್ದು ನಕ್ಕುದು
ಹುಲಿಯೊಡನೆ ಗಡ ಶಿವಶಿವಾ ವೆ
ಗ್ಗಳೆಯರನು ವಿಗ್ರಹದಲರಿವೆವು ಕಂಡು ಕೈಗುಣವ
ಹುಲುಪರೆಯ ದೇವಾಳಿ ತ್ರಿಪುರದ
ನೆಲನ ಮೆಟ್ಟಿತು ನಾಯ್ಗಳಿರ ಮುಂ
ದಲೆಯ ಕೊಯ್ ಕಡಿ ಬೆರಳನೆಂದರು ಖಳರು ತಮ್ಮೊಳಗೆ ೨೭
ಕಾದ ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು ೨೮
ಮುರಿದುದಿದು ಕಲ್ಪಾಂತವಹ್ನಿಯ
ಸೆರೆಯ ಬಿಟ್ಟರೊ ಶಿವಶಿವಾ ಖಳ
ರುರುಬೆ ಘನ ನಾವೇಕೆ ರಣವೇಕಿವರ ಕೂಡೆನುತ
ಒರಲುವಮರರ ಬಾಯಿ ಕೈಗಳ
ಮೊರೆಯ ತೆಗಸಿ ಮಹಾ ಗಣಂಗಳೊ
ಳುರುವ ನಂದೀಶ್ವರನು ಹೊಕ್ಕನು ಹೊಯ್ದು ದಾನವರ ೨೯
ದಿಂಡುದರಿದನು ದಾನವರ ಕಡಿ
ಖಂಡಮಯಮಾಯ್ತವನಿ ರಕುತದ
ದೊಂಡೆಗೆಸರಿನೊಳದ್ದುದಗಣಿತ ರಥಗಜಾಶ್ವಚಯ
ಹಿಂಡೊಡೆದು ಹೇರಾಳ ರಕ್ಕಸ
ದಿಂಡೆಯರು ಧಿಮ್ಮೆನಲು ಹೊಯ್ದರು
ಖಂಡಪರಶುವಿನಾಳು ಹೊಯ್ದನು ಸಾಲಹೆಣ ಹರೆಯೆ ೩೦
ಅರನೆಲೆಯ ಮುರಿದಿಟ್ಟಣಿಸಿ ತಲೆ
ವರಿಗೆಯಲಿ ಹೊಕ್ಕೌಕಿ ದುರ್ಗದ
ಹಿರಿಯ ಹುಲಿಮುಖದೊಳಗೆ ಹೊಯ್ದರು ಬೇಹಬೇಹವರ
ಅರಸ ಕೇಳೈ ದೈತ್ಯಭಟರ
ಚ್ಚರಿಯ ಮಾಡಿದರಳಿದವರನೆ
ಚ್ಚರಿಸಿದರು ಮಯವಿರಚಿತಾಮೃತ ಸಲಿಲಕೂಪದಲಿ ೩೧
ಮಯನ ಬಿನ್ನಾಣವನು ದೇವ
ತ್ರಯವರಿದುದಿದು ತೀರಲಸುರರ
ಲಯವೆನುತ ಹರಿ ಧೇನುವಬುಜಾಸನನು ಕರುವಾಗಿ
ಭಯವಿಹೀನರು ಹೊಕ್ಕರಾ ಬಾ
ವಿಯನು ಬತ್ತಿಸಿ ಬಳಿಕ ದೈತ್ಯರ
ಜಯವ ಮುರಿದರು ಮೋಹನದ ಬೌದ್ಧಾವತಾರದಲಿ ೩೨
ಭವನ ಭಕುತಿಯ ಬಿಡಿಸಿದರು ಶಾಂ
ಭವ ಸುಸಿದ್ಧಾಂತವನು ಬೌದ್ಧ
ವ್ಯವಹರಣೆಗಳ ಮಾಯೆಯಲಿ ಕೆಡಹಿದರು ಕಪಟದಲಿ
ಯುವತಿಯರು ಪರಪುರುಷ ಯೋಗ
ಪ್ರವರದೀಕ್ಷಿತರಾಯ್ತು ಬೌದ್ಧನ
ವಿವಿಧ ಮಾಯೆಗೆ ಮಾರುವೋದುದು ಮನ ಸುರಾರಿಗಳ ೩೩
ಹರಿ ಸರೋಜಾಸನರು ಶೂಲಿಯ
ಹೊರೆಗೆ ಬಂದರು ದೇವ ದೈತ್ಯರ
ಪುರವಧರ್ಮದ ಪೇಟೆಯಾದುದು ನಯನಪಾವಕನ
ಕರೆದು ಬೆಸಸುವಡಿದು ಸಮಯವೀ
ಸುರರ ಸಲಹುವ ಚಿತ್ತವುಳ್ಳರೆ
ಕರುಣಿ ಬಿಜಯಂಗೈವುದೆಂದರು ಪಾರ್ವತೀಪತಿಗೆ ೩೪
ಬಿಲ್ಲ ತುಡುಕಿದನಭವನೆಡಬಲ
ದಲ್ಲಿ ಜಯಜಯಜಯಜಯಧ್ವನಿ
ಘಲ್ಲಿಸಿತ್ತೀರೇಳುಭುವನ ಶ್ರವಣ ವೀಧಿಗಳ
ಭುಲ್ಲವಿಸಿ ಹಯ ಪದಸಮೂಹವ
ಚೆಲ್ಲಿದವು ಸಕ್ರಮದ ಪಾಳಿಯ
ಪಲ್ಲವಿಕೆ ಪರಿವಡೆದುದಮಳಪ್ರಣವಮಯವಾಗಿ ೩೫
ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ ೩೬
ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚರಾ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ ೩೭
ಒದಗಿತೀ ಹೇಳಿದ ಸಮಸ್ತ
ತ್ರಿದಶಸಚರಾಚರವು ತಮ್ಮಂ
ಗದಲಿ ರಚಿಸಿದ ವಿಶ್ವಕರ್ಮನ ಕೃತ ನಿಯೋಗದಲಿ
ಅದು ಬಳಿಕ ನಿರ್ಜರ ಸಮೂಹಾ
ಭ್ಯುದಯವೈಸಲೆ ಧನುವ ಕೊಂಡನು
ಮದನರಿಪು ತಿರುಹಿದನು ಬೆರಳಲಿ ಪಾಶುಪತ ಶರವ ೩೮
ಕೃತಕವೋ ದಿಟವೋ ದುರಂತರ
ಶ್ರುತಿಗಳರಿಯವು ನಮ್ಮ ಮಿಡುಕುವ
ಮತಿಯ ಪಾಡೇ ನಿಮಿಷಕಬುಜಭವಾಂಡ ಕೋಟಿಗಳ
ಸ್ಥಿತಿಗತಿಯನಗ್ಗಳದ ನಯನಾ
ಹುತಿಯ ಮಾಡುವ ತ್ರಿಪುರಹರ ಸಂ
ಗತಿಯ ಸಮಯವ ಹಾರಿದನು ಸುರವರುಷ ಸಾವಿರವ ೩೯
ಕೂಡಿದವು ಪುರ ಮೂರು ನಿಮಿಷದೊ
ಳೀಡಿರಿದುದುರಿ ನಯನವಹ್ನಿಯ
ಕೂಡಿ ಹುರಿಗೊಂಡೌಕಿ ಹರಿದುದು ಪಾಶುಪತಬಾಣ
ಝಾಡಿ ಹೊರಳಿಯ ಹೊಗೆಯ ಜೋಡಿಯ
ನೀಡುನಾಲಗೆ ಪುರದ ಸುತ್ತಲು
ಕೂಡೆ ವೇಢೆಯವಾಯ್ತು ಹರಹಿನ ಕಿಡಿಯ ಗಡಣದಲಿ ೪೦
ಕಟ್ಟಿತುರಿ ದೆಸೆ ನಾಲ್ಕರಲಿ ಬೆ
ನ್ನಟ್ಟಿ ಹೊಯ್ದುದು ಬಿನುಗುಗಳ ಜಗ
ಜಟ್ಟಿಗಳನೊರಗಿಸಿತು ಮರುಗಿಸಿತಸುರ ನಾರಿಯರ
ದಿಟ್ಟರುರಿದುದು ವೀರರಸುಗಳ
ಬಿಟ್ಟರಭವದ್ರೋಹಿಗಳು ನೆರೆ
ಕೆಟ್ಟ ಕೇಡಿಂಗಾರು ಮರುಗುವರರಸ ಕೇಳೆಂದ ೪೧
ಸರಳ ಮೊನೆಯಲಿ ಸಿಡಿದ ಕಿಡಿಯೊಂ
ದೆರಡರಲಿ ಬೆಂದುದು ಪುರತ್ರಯ
ವರಸ ಕೇಳೈ ಬಳಿಕ ಬಾಣದ ಬಾಯಿಧಾರೆಗಳ
ಹರನ ನಯನದ ಕಿಚ್ಚು ಕಾಣದು
ಪುರವನಾ ಖಾತಿಯಲಿ ಭೇದಿಸಿ
ಮುರಿಮುರಿದು ಸುಡತೊಡಗಿತಬುಜಭವಾಂಡ ಮಂಡಲವ ೪೨
ಎಲೆ ಚತುರ್ದಶ ಜಗವನುರಿಯ
ಪ್ಪಳಿಸಿತೇ ಬೆಂದುದು ಸುರೌಘದ
ಗೆಲವು ಕರೆಯಾ ಕಲ್ಪಮೇಘವನುರಿಯ ಮಾಣಿಸಲಿ
ಬಲುಕಣಿಗಳಲ್ಲಾ ಜನಾರ್ದನ
ನಳಿನಭವರಾವೆಡೆಯೆನುತ ಕಳ
ವಳಿಸಿದುದು ಮೊರೆಯಿಟ್ಟುದಭವನ ಮುಂದೆ ಭುವನಜನ ೪೩
ಅರಿಪುರತ್ರಯದಹನಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀನೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ ೪೪
ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ ೪೫
ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರುಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜಸಂಸ್ಥಾನ ಸಂಗತವಾಯ್ತು ನಿಮಿಷದಲಿ ೪೬
ಸಂಕ್ಷಿಪ್ತ ಭಾವ
Lrphks Kolar
ಶಿವನಿಂದ ತ್ರಿಪುರ ದಹನ.
ಶಿವನು ತ್ರಿಪುರದ ದಹನಕ್ಕೆ ನಿಶ್ಚಯಿಸಿ ಅದಕ್ಕೆ ರಥವನ್ನು ರಚಿಸಲು ಹೇಳಿದನು. ಬಹಳ ಅದ್ಭುತವಾದ ರಥ ವಿಶ್ವಕರ್ಮನಿಂದ ನಿರ್ಮಾಣವಾಯಿತು. ವಿಂಧ್ಯ, ಹಿಮಗಿರಿಗಳು ಹಲಗೆಗಳಾದವು. ಗಾಲಿಗೆ ಸೂರ್ಯ ಚಂದ್ರರಾದರು. ಗಂಗಾದಿ ಸಕಲ ನದಿಗಳು ಚಾಮರಗಳಾದವು . ನಾಲ್ಕು ವೇದಗಳು ನಾಲ್ಕು ಕುದುರೆಗಳಾದವು. ದಿನ ಮಾಸ ಅಯನಗಳು ನೊಗವಾಗಿ ಸುತಾರಾವಳಿಗಳು ಮಿಳಿಗಳಾಗಿ ಪ್ರಣವವು ಬಲು ಚಮ್ಮಟಿಗೆಯಾಯಿತು. ರಥದ ಸುತ್ತ ವಿವಿಧ ವರ್ಣಗಳ ಪತಾಕೆಗಳು ಮೆರೆದವು. ಕಾಲದಂಡವೇ ರೌದ್ರದಂಡವಾಯಿತು. ಸಂವತ್ಸರವೆ ಧನುವಾಗಿ ಕಾಳರಾತ್ರಿಯೆ ಶರವಾಗಿ ಅಚ್ಚರಿಯುಕ್ತ ರಥ ಸಿದ್ಧವಾಗಿ ನಿಂತಿತು.
ಆ ರಥವನ್ನು ಶಿವನಿಗೆ ಅರ್ಪಿಸಿದರು. ಮಹಾದೇವನು ರಥವನ್ನೇರಲು ಸಿದ್ಧನಾದನು. ತಲೆಮಾಲೆಯನ್ನು ತೆಗೆದು ವಿಭೂತಿಯನ್ನು ಮೈಗೆಲ್ಲ ಬಳಿದು ಕಿರುಗೆಜ್ಜೆಗಳ ನಾದದಲ್ಲಿ ಬಳಗದ ಬೊಬ್ಬೆಯಲ್ಲಿ ಸಿದ್ಧನಾದನು. ಇಂತಹ ಭವ್ಯವಾದ ರಥಕ್ಕೆ ಸಾರಥಿ ಯಾರೆನ್ನಲು ಅದಕ್ಕೆ ಬ್ರಹ್ಮನೇ ಸೂಕ್ತವೆಂದು ದೇವತೆಗಳು ನಿಶ್ಚಯಿಸಿ ಅವನನ್ನು ಒಡಂಬಡಿಸಿದರು. ಎಲ್ಲ ಸಿದ್ದವಾಗಿ ಬ್ರಹ್ಮನು ಬಂದು, ಶಿವನು ರಥವೇರಲು ರಥ ಒಮ್ಮೆ ಮುಗ್ಗರಿಸಿತು.ಆಗ ಹರಿಯು ವೃಷಭದ ರೂಪದಿಂದ ಬಂದು ಅದನ್ನು ಎತ್ತಿದನು. ಆ ಮಹಾ ಭಾರವನ್ನು ಬ್ರಹ್ಮನು ವೇದಹಯಗಳನ್ನು ಸಂತೈಸಿ ಸಂಭಾಳಿಸಿದನು. ಮತ್ತೆ ರಥ ಸರಿಯಾಗಿ ಹೊರಟಿತು.
ಮೂವರು ರಕ್ಕಸರು ಅವರ ಭಟರೊಡನೆ ಕಾಳೆಗಕ್ಕೆ ನಿಂತರು. ಅಮರರನ್ನು ಓಡಾಡಿಸಿ ನೋಯಿಸಿದರು. ದೇವ ದಾನವರ ನಡುವೆ ಭಯಂಕರ ಯುದ್ಧ ನಡೆಯಿತು. ಎಷ್ಟು ಬಾರಿ ಕೊಂದರೂ ಅಮೃತದ ಬಾವಿಯಿಂದ ಜೀವಂತವಾಗಿ ಹೊರಗೆ ಬರುತ್ತಿದ್ದ ದಾನವರನ್ನು ಕಂಡು ಶಿವನು ಆ ಬಾವಿಯನ್ನು ಬತ್ತಿಸಿದನು.
ಸಾವಿರ ವರ್ಷಗಳು ಉರುಳಿದವು. ಸಮಯ ಬಂದಿತು ಎನ್ನಲು ಶಿವನು ತನ್ನ ಪಾಶುಪತಾಸ್ತ್ರವನ್ನು ಪ್ರಯೋಗಿಸಿದನು. ಎಲ್ಲೆಡೆಯೂ ಉರಿ, ಬೆಂಕಿ, ಬೇಗೆಗಳು ಮೊದಲಿಟ್ಟವು. ಈ ಸಮಯದಲ್ಲಿ ಹರಿಯು ಬೌದ್ಧಾವತಾರಿಯಾಗಿ ಶಿವನಿಗೆ ಸಹಾಯಕನಾಗಿ ಬಂದನು. ಪಾಶುಪತಾಸ್ತ್ರದ ಬೇಗೆಗೆ ಇಡೀ ಜಗತ್ತು ತಲ್ಲಣಿಸಲು ಎಲ್ಲರೂ ಶಿವನ ಮೊರೆ ಹೊಕ್ಕರು. ಒಂದೇ ಸರಳಿನಲ್ಲಿ ಏಕಕಾಲಕ್ಕೆ ಆ ಮೂರು ನಗರಗಳು ಬಿದ್ದವು. ರಕ್ಕಸರ ಅಂತ್ಯವಾಯಿತು. ರಕ್ಷಿಸು ಎಂದು ಮೊರೆಯಿಟ್ಟ ಭಕ್ತರನ್ನು ಕರುಣಾಳು ಶಿವನು ಸಂತೈಸಿದನು. ರಥವು ಮಾಯವಾಗಿ ಮೊದಲಿನ ಸಹಜತೆ ಮೆರೆಯಿತು. ಹೀಗೆ ಬ್ರಹ್ಮನು ಶಿವನ ಸೂತತ್ವವನ್ನು ವಹಿಸಿದನು. ಹಾಗೆ ನೀನು ಕೌರವರ ಒಳಿತಿಗಾಗಿ ಕರ್ಣನ ಸಾರಥಿಯಾಗಿ ಮುಂದುವರಿ ಎಂದು ದುರ್ಯೋಧನ ತ್ರಿಪುರದಹನದ ಕಥೆಯನ್ನು ಮುಗಿಸಿದನು.
ಕಾಮೆಂಟ್ಗಳು