ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ119


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಒಂಭತ್ತನೆಯ ಸಂಧಿ

ಸೂ :  
ಸೆಣಸು ಮಿಗಲೊಳಗೊಳಗೆ ಖತಿಯಲಿ
ಕೆಣಕಿ ಬೈದಾಡಿದರು ಸಮರಾಂ
ಗಣಭಯಂಕರ ಶಲ್ಯಭಾಸ್ಕರಸುತರು ರಥದೊಳಗೆ   
 
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಖರೆಯದ ನುಡಿಯನಾಲಿಸಿ
ಕೇಳಿದನು ಕಲಿಶಲ್ಯ ಬೆರಳಲಿ ಮೀಸೆಗಳ ಮುರಿದು
ಹೇಳು ಹೇಳಿನ್ನೊಮ್ಮೆ ಪಾರ್ಥನ
ಹೇಳಿ ತೋರಿಸಲೇನ ಕೊಡುವೆ ನೃ
ಪಾಲಕನ ಪದದಾಣೆ ನುಡಿ ನುಡಿ ಕರ್ಣ ನುಡಿಯೆಂದ      ೧  
 
ಹಾರ ಖಡೆಯವ ಬೇಹ ಗಜಹಯ
ನಾರಿಯರ ಕೊಡಬೇಡ ಪಾರ್ಥನ
ತೋರಿ ಕೊಡುವೆನು ತನಗೆ ಹೇಳದೆ ಬರಿದೆ ಹಲುಗಿರಿದೈ
ಸೈರಿಸೀಗಳೆ ನಿನ್ನ ಕರುಳಿನ
ತೋರಣದ ಬಾಗಿಲಲಿ ವಿಜಯ
ಶ್ರೀರಮಣಿಯನು ತಹ ಕಿರೀಟಿಯ ತೋರಿಸುವೆನೆಂದ        ೨  
 
ಮೊಲನ ಕಾಹಿನ ಕಾಡಿನಲಿ ಹೆ
ಬ್ಬುಲಿ ವಿಭಾಡಿಸುವಂತೆ ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ
ದಳವ ಬಗಿದು ಮಹಾರಥರನೊಡೆ
ದುಳಿದು ನಿನ್ನಯ ನಾಲಗೆಯ ಹೆಡ
ತಲೆಯಲುಗಿವರ್ಜುನನನೀಗಳೆ ತೋರಿಸುವೆನೆಂದ         ೩  
 
ಹೊರಗೆ ಕೊಡುವುದನಿತ್ತ ತಾ ನಾ
ನರಸಿ ತಹೆನರ್ಜುನನನೇತಕೆ
ಬರಿದೆ ಭಟರಿಗೆ ಬಾಯ ಬಿಡುತಿಹೆ ಕರ್ಣ ಖೂಳನಲ
ಅರಸಲೇತಕೆ ಕಾಲ ಮೃತ್ಯುವ
ನರಸುವರೆ ಕಾಲಾಗ್ನಿಯನು ನೀ
ನರಸಲೇಕರ್ಜುನನನೀಗಳೇ ತೋರಿಸುವೆನೆಂದ         ೪  
 
ಆವನೊಬ್ಬನ ಬಿಲ್ಲ ಬೊಬ್ಬೆಯ
ಡಾವರದಲೆದೆ ಬಿರಿವುದಹಿತರಿ
ಗಾವನೊಬ್ಬನ ದನಿಗೆ ಬಿರಿವುದು ಧೈರ‍್ಯಗಿರಿಶಿಖರ
ಆವನೊಬ್ಬನ ಕಂಡರರಿಗಳ
ಜೀವ ತಲೆಕೆಳಕಹುದು ಸುಭಟರ
ದೇವನಾತನು ಪಾರ್ಥ ಬೇಕೇ ತೋರಿಸುವೆನೆಂದ         ೫  
 
ಹಸುಳೆ ನಿದ್ದೆಯ ಹಾವ ಹೊಯ್ದೆ
ಬ್ಬಿಸುವರೇ ಮೈಮರೆದ ಮಾರಿಯ
ಮುಸುಕನುಗಿವುದು ಬುದ್ಧಿಯೇ ಜೀವಾಭಿಲಾಷರಿಗೆ
ನುಸಿಗಳುರಿಜಾಳಿಗೆಯೊಡನೆ ಝೊಂ
ಪಿಸುವುದುಚಿತವೆ ಕರ್ಣ ಪಾರ್ಥನ
ಘಸಣಿಯೇಕೈ ನಿನಗೆ ಬೇಕೇ ತೋರಿಸುವೆನೆಂದ         ೬  
 
ಗರುಡನೆತ್ತಲು ಕೊಬ್ಬಿದೊಳ್ಳೆಯ
ಮರಿಯದೆತ್ತಲು ಸಿಂಹವೆತ್ತಲು
ನರಿಗಳೆತ್ತಲು ದಿಗಿಭವೆತ್ತಲು ನಾಯಮರಿಯೆತ್ತ
ನರನೊಡನೆ ಸಮದಂಡಿಯೇ ಜಗ
ವರಿಯದೇ ನಿನ್ನಾತನಭ್ಯಂ
ತರವನಕಟಾ ಕರ್ಣ ಸುಡು ನೀ ಕಷ್ಟ ಹೋಗೆಂದ        ೭  
 
ದಿಟಕೆ ಪಾರ್ಥನ ತೋರಿದರೆ ಸಂ
ಕಟವ ಮಾಡದೆ ಮಾಣಲಾ ಕಟ
ಕಟ ಧನಂಜಯನೆಂದು ಸೋತನು ಹಿಂದೆ ನಿನ್ನೊಡನೆ
ಕುಟಿಲಮತಿ ಗೋಗ್ರಹಣದಲಿ ಲಟ
ಕಟಿಸಿದನಲಾ ಮದುವೆಯೊಳಗು
ಬ್ಬಟೆಯ ಬಿಲ್ಲಿನೊಳೊದೆಸಿಕೊಂಡವ ಪಾರ್ಥನಹುದೆಂದ    ೮  
 
ನರನ ತೋರಿಸಿದವಗೆ ಶತಸಾ
ಸಿರವ ಸೂಸುವೆನೆಂದಲಾ ನಿ
ನ್ನರಸನನು ಗಂಧರ್ವರೆಳೆದೊಯ್ದಂದು ಗಗನದಲಿ
ಅರಸಿಯರು ಸಚಿವರು ಕುಮಾರರು
ಮೊರೆಯಿಡಲು ಫಲುಗುಣನು ಬಿಡಿಸಿದ
ಪರಿಯ ನೀ ನೆರೆ  ಕಂಡು ಮರೆವರೆ ಕರ್ಣ ಹೋಗೆಂದ   ೯  
 
ಕಂಡು ಮಾಡುವುದೇನು ಭೀಷ್ಮರು
ಕಂಡುದಿಲ್ಲಾ ಚಾಪವಿದ್ಯಾ
ಖಂಡಪರಶು ದ್ರೋಣನರ್ಜುನನನು ರಣಾಗ್ರದಲಿ
ಕಂಡು ನೀನೇಗುವೆ ಸುಯೋಧನ
ಭಂಡನೋ ಸಾರಥಿತನದ ನಾ
ಭಂಡನೋ ನೀ ಭಂಡನೋ ನಾವರಿಯೆವಿದನೆಂದ        ೧೦  
 
ಕಡು ಪರಾಕ್ರಮ ಪಿತ್ತ ನೆತ್ತಿಯ
ಹಿಡಿದು ನೀ ಗಳಹಿದರೆ ನಿನ್ನೀ
ಹಡಪದವರೀ ಚಮರದವರೀ ಛತ್ರಧಾರಿಗಳು
ಒಡೆಯ ನೀನೆಂದಂಜಿ ನಿರುತವ
ನುಡಿಯಲಮ್ಮರು ತಮ್ಮ ಮನದೊಳ
ಗೊಡಬಡುವರೇ ಕದನಬಾಹಿರ ಕರ್ಣ ಹೋಗೆಂದ      ೧೧  
 
ಕೇಳುತಿರ್ದನು ಕರ್ಣನಿವನಾ
ಭೀಳವಚನವನಧಿಕರೋಷ
ಜ್ವಾಲೆ ಝಳಪಿಸೆ ಮೀಸೆಗಡಿದನು ತೂಗಿದನು ಶಿರವ
ಖೂಳನಿವನನು ಹೊಯ್ದರೊಳಗೊಳ
ಗಾಳುದೋಟಿ ವಿಕಾರಿವಿಪ್ರನ
ಕಾಳುಶಾಪದ ಫಲವಲಾ ಸಂಪ್ರಾಪ್ತವಾಯ್ತೆಂದ        ೧೨  
 
ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀಶನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ         ೧೩  
 
ಸೆಣಸಿದೈ ತನ್ನೊಡನೆಯೀ ಫಲು
ಗುಣನ ಭಟನೋ ನೀನು ನೃಪತಿಯ
ರಣವಿಜಯವಿದ್ವೇಷಿಯೋ ನಾವರಿಯೆವಿಂದೀಗ
ಅಣಕವೇ ತುರುಗಾಹಿ ಕಾಜಿನ
ಮಣಿಯ ಬಲ್ಲನು ಗಡ ಕಿರೀಟಿಯ
ಗುಣ ಪರಾಕ್ರಮತನವ ನೀನೇ ಬಲ್ಲೆ ದಿಟವೆಂದ         ೧೪  
 
ರೂಢಿಯೋಲೆಯಕಾರನರ್ಜುನ
ನಾಡಿ ಪತಿಕರಿಸುವನು ನೀನದ
ನೋಡಿ ಸಂತಸಬಡುವರಿಬ್ಬರು ಕೃಪನು ಗುರುಸುತನು
ಕೋಡಗದ ಮೊಗಸಿರಿಗೆ ಕಾವಲಿ
ಯೋಡು ಕನ್ನಡಿಯಾಯ್ತು ಗಡ ಕೃತ
ಗೇಡಿಗುಚಿತವನೇನ ಮಾಡುವೆನೆಂದನಾ ಕರ್ಣ        ೧೫  
 
ಹಗೆಯನೇ ಕೊಂಡಾಡಿ ಸ್ವಾಮಿಗೆ
ಬೆಗಡ ಬೆಳಸಿ ರಣಾಗ್ರಸುಭಟರ
ನಗಡುಮಾಡಿ ವೃಥಾತ್ಮ ಕುಕ್ಷಿಂಭರಿಕರೆಂದೆನಿಸಿ
ಹೊಗಳಿಕೆಗೆ ಹೊಱಗಾದರೈವರು
ವಿಗಡರದರೊಳಗಿಬ್ಬರಳಿದರು
ಹಗೆಗಳುಳಿದಿರಿ ಮೂವರೆಂದನು ಭಾನುಸುತ ಮುಳಿದು    ೧೬  
 
ನಾವು ಭಂಡರು ಗರುವ ರಾಯರು
ನೀವಲೇ ಭುವನದಲಿ ಬಾಹಿರ
ರಾವು ನೀವತಿ ಚದುರರಾದಿರಲಾ ಮಹಾದೇವ
ತಾವು ತಮ್ಮಯ ಹೆಚ್ಚು ಕುಂದಿನ
ಜೀವಕಳೆಯರಿಯದ ನಿರರ್ಥಕ
ಜೀವಿಗಳಹಂಕಾರತನಕೇನೆಂಬುದಿದಕೆಂದ         ೧೭  
 
ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ ರಣಕೆ ದುರ‍್ಯೋ
ಧನಗೆ ಮಲೆವರ ಮಾರಿ ಪಾಂಡವಮೇಘಪವಮಾನ
ತನಗೆ ಸರಿ ಯಾರಿಲ್ಲ ನೆಣಗೊ
ಬ್ಬಿನಲಿ ನುಡಿದೈ ನಿನ್ನ ಬಾಂಧವ
ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ      ೧೮  
 
ಆರಿಗಾವುದು ದೇಶವಾ ಸಂ
ಸ್ಕಾರವವರಿಗೆ ಬಿಡದು ಬುದ್ಧಿಗೆ
ಬೇರುಗೊಲೆಯಲ್ಲಾ ಕುದೇಶ ಕುವಂಶ ಸಂಭೂತಿ
ಊರುಗರಲಾ ಮಾದ್ರದೇಶದ
ಭೂರಿ ದುರಿತರು ಕ್ಷತ್ರ ತಿಮಿರ ವಿ
ಕಾರಿಗಳ ಜಾತಿಯಲಿ ಜನಿಸಿದೆ ಶಲ್ಯ ಕೇಳೆಂದ         ೧೯  
 
ಖೂಳರಿಗೆ ತಾ ಜನ್ಮಭೂಮಿ ವಿ
ಟಾಳಚರಿತರ ತೌರುಮನೆ ದು
ಶ್ಶೀಲರಿಗೆ ದರ್ಪಣ ವಿಕಾರಿಗಳಿಗೆ ವಿಹಾರವನ
ಹೇಳುವರೆ ಪರಮಾಣು ಗುಣವಾ
ಬಾಲ ವೃದ್ಧರೊಳಿಲ್ಲ ಠಕ್ಕಿನ
ಠೌಳಿಕಾರರು ಮಾದ್ರದವರೆಲೆ ಶಲ್ಯ ಕೇಳೆಂದ         ೨೦  
 
ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು  ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ         ೨೧  
 
ಕುಟಿಲಸೃಷ್ಟಿಗೆ ನೀವರಸು ಚಾ
ವಟೆಯರಿಗೆ ಮನೆ ದುರ್ವ್ಯಸನ ಲಂ
ಪಟರಿಗಾಚಾರಿಯರು ಖಳರಿಗೆ ನಿಮ್ಮೊಳುಪದೇಶ
ಅಟಮಟದ ಘನದೇಹಸಿದ್ಧಿಯ
ಘುಟಿಕೆ ನಿಮ್ಮಲಿ ರಣಪಲಾಯನ
ಪಟುಭಟರಲಾ ಗುಣವಿಹೀನರು ಶಲ್ಯ ನೀವೆಂದ         ೨೨  
 
ಗರುಡಮತದಲಿ ಸರ್ಪವಿಷ ಪರಿ
ಹರಿಸುವುದು ದುರ್ಜನವಚೋ ನಿ
ಷ್ಠುರ ಮಹಾವಿಷಕಾವ ಗಾರುಡವಾವ ಮಂತ್ರಮುಖ
ದುರುಳ ನೀ ದುರುದುಂಬಿತನದಲಿ
ಹುರುಳುಗೆಡಿಸಿದಡೀಸರಲಿ ನೀ
ಗರುವನೇ ಬಾಹಿರನು ನಾನೇ ಶಲ್ಯ ಕೇಳೆಂದ         ೨೩  
 
ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ         ೨೪  
 
ಅರಳಿದಂಬುಜದೆಸಳಿನಲಿ ಕಡ
ದುರುವ ಕಂಡಡೆ ಕೂಡುವುದೆ ಮಧು
ಕರನ ಲಾಯದೊಳೆಲವೊ ಕರ್ಣ ದುರಾತ್ಮ ನಿನ್ನೊಡನೆ
ನರನ ಸರಿದೂಗುವರೆ ತೋರಿದ
ಪರಿಯಲೆಮ್ಮನು ಹೊಳ್ಳುಗಳೆ ಸಾ
ವಿರವನಿದರಲಿ ಖಾತಿಗೊಂಡಡೆ ಪಾರ್ಥನಾಣೆಂದ         ೨೫  
 
ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳೆಂದ        ೨೬  
 
ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾಪರಿ ಕಾಕಪೌರುಷ ಕರ್ಣ ನೀನೆಂದ         ೨೭  
 
ಆಡಲರಿಯದೆ ಬರಿದೆ ಸೈನ್ಯವ
ಹೂಡಿ ಹಲಬರ ಕೊಲಿಸಿ ಬಲವ
ಕ್ಕಾಡೆ ಕುರುಪತಿ ಕಟ್ಟುವಡೆಯನೆ ಕಳನ ಮಧ್ಯದಲಿ
ಆಡಿದಾತನು ಗೆಲವನರಸಿಗೆ
ಮಾಡಿದಾತನೆ ಸಾಕು ಪಾರ್ಥನ
ಕೂಡೆ ವಿಗ್ರಹ ಬೇಡ ತೆಗೆ ಮರಳೆಂದನಾ ಶಲ್ಯ         ೨೮  
 
ಬರಿಯ ಪಕ್ಷಭ್ರಮೆಯಲಾಡಿದ
ಡುರುವ ನುಡಿಯೇ ಶಲ್ಯ ಪಾರ್ಥನ
ನರಿವೆ ನಾನೆನ್ನಂಘವಣೆಯನು ಬಲ್ಲನಾ ಪಾರ್ಥ
ಸರಿಹೃದಯ ನೀ ನಿನ್ನೊಡನೆ ಸರಿ
ಗೊರಲಲಾರೆನು ಭೀಮ ಪಾರ್ಥರ
ನೊರಲಿಸುವೆನೀ ಬಾಣದಲಿ ಮಾದ್ರೇಶ ಕೇಳೆಂದ         ೨೯  
 
ಝಳದ ಝಾಡಿಗೆ ಹೆದರಿ ಸೂರ‍್ಯನ
ನುಳುಹುವನೆ ಕಲಿರಾಹು ದಾವಾ
ನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ
ಫಲುಗುಣನ ಕಣೆಗಿಣೆಯ ಪವನಜ
ನಳಬಳವ ಕೈಕೊಂಬ ಕರ್ಣನೆ
ತಿಳಿಯಲಾ ಮಾದ್ರೇಶ ನನ್ನಯ ವ್ಯಥೆಯ ಕೇಳೆಂದ          ೩೦  
 
ಪರಶುರಾಮನ ಕಂಡು ಹೊಕ್ಕೆನು
ಗರುಡಿಯನು ದ್ವಿಜನೆಂದು ಕಲಿತೆನು
ವರಧನರ‍್ವೇದವನು ಪಡೆದೆನು ದಿವ್ಯಮಾರ್ಗಣವ
ಸುರಪತಿಯ ಬೇಳಂಬವನು ವಿ
ಸ್ತರಿಸಲೇತಕೆ ವಜ್ರ ಕೀಟೋ
ತ್ಕರವ ಕಳುಹಿದರೆನ್ನ ತೊಡೆಗಳನುಗಿದವವು ಬಳಿಕ         ೩೧  
 
ಅರುಣಜಲ ಹೊನಲೆದ್ದು ಮಗ್ಗುಲ
ಲುರವಣಿಸಲಾ ರಾಮ ನಿದ್ರಾ
ಭರದಲಿದ್ದವನೆದ್ದು ನೋಡಿದನೆನಗೆ ಕಡುಮುಳಿದು
ಧರಣಿಸುರನೆಂದೆನ್ನ ಠಕ್ಕಿಸಿ
ಶರವ ಬೇಡಿದೆ ಕಾಳೆಗದೊಳೀ
ಶರ ನಿರರ್ಥಕವಾಗಲೆಂದನು ಶಾಪಹಸ್ತದಲಿ         ೩೨  
 
ಅದರಿನೀ ದಿವ್ಯಾಸ್ತ್ರ ಕಾಳೆಗ
ಕೊದಗಲರಿಯವು ಶಲ್ಯ ಪಾರ್ಥನ
ಸದೆವುದೇನರಿದಲ್ಲ ಕುರುಪತಿ ಹೀನಪುಣ್ಯನಲೆ
ಇದು ನಿದಾನವು ಬಾಣ ಮತ್ತೆನ
ಗೊದಗುವುವು ಬೇರುಂಟು ನೃಪನ
ಭ್ಯುದಯವುಳ್ಳಡೆ ಗೆಲುವೆನಹಿತರನೆಂದನಾ ಕರ್ಣ        ೩೩  
 
ಅರಸನಭ್ಯುದಯವನು ನೀನಧಿ
ಕರಿಸಿ ಗೆಲುವಡೆ ನಿನ್ನ ಹಂಗೇ
ಕರಿಗಳನು ಜಯಿಸುವರು ನಮ್ಮೀ ಛತ್ರಧಾರಕರು
ಸೊರಹದಿರು ಸಾರತ್ತ ತಾಗಿತು
ಪರಶುರಾಮನ ಶಾಪ ಗಡ ಮರು
ಳರಸು ಕೌರವ ನಿನ್ನ ಸಾಕಿದನೆಂದನಾ ಶಲ್ಯ         ೩೪  
 
ಕುಲಕೆ ಸೇರುವ ಮಾತು ಮಾತಿನ
ಬಳಿಗೆ ಸೇರುವ ಬಾಹುಬಲ ಭುಜ
ಬಲದ ತೂಕದ ಕೀರ್ತಿ ಕೀರ್ತಿಯ ಪರಿಯ ಪರಲೋಕ
ಇಳೆಯೊಳಗೆ ನಿನಗಲ್ಲದಾರಿಗೆ
ಸಲುವುದೆಲವೋ ಸೂತಸುತ ನಿ
ರ್ಮಳ ಪುರುಷ ನಿನ್ನಂಗದೇಶದ ವಿಧಿಯ ಕೇಳೆಂದ      ೩೫  
 
ವೇದಕರ್ಮವಿರೋಧಿಗಳು ಪರಿ
ವಾದಶೀಲರು ವರ್ಣಜಾತಿವಿ
ಭೇದಹೀನರು ಸಾರಸಪ್ತವ್ಯಸನಸಂಗತರು
ಕಾದುವರು ಬೆನ್ನಿನಲಿ ಗೆಲುವರು
ಪಾದದಲಿ ಪರಬಲವನಿರಿವರು
ಬೀದಿಯಲಿ ನಿನ್ನಂಗದೇಶದ ಸಿರಿಯ ಕೇಳೆಂದ         ೩೬  
 
ನಿನಗೆ ಸಾರಥಿಯಾದ ಬಾಹಿರ
ತನವೆ ತಾನದು ಸಾಲದೇ ಬೇ
ರೆನಗೆ ತಲೆಗುತ್ತಾವುದೆನುತವೆ ಬಿಸುಟು ವಾಘೆಯವ
ಮನಕತದ ಮೋರೆಯಲಿ ತತ್ಸ್ಯಂ    
ದನವನಿಳಿಯಲು ಭಂಡ ಫಡ ಹೋ
ಗೆನುತ ಖಡುಗವ ಜಡಿದು ನುಡಿದನು ಭಾನುಸುತ ಮುಳಿದು   ೩೭  
 
ಹೊಡೆದು ತಲೆಯನು ನಿನ್ನ ರಕುತವ
ಕುಡಿಸುವೆನು ಕೂರಸಿಗೆ ಪವನಜ
ನೊಡಲನೆತ್ತರ ತುಂಬುವೆನು ಪಾರ್ಥನ ಕಪಾಲದಲಿ
ಮಿಡುಕಬಾರದಲೇ ಸುಯೋಧನ
ತೊಡಗಿದಗ್ಗದ ರಾಜಕಾರಿಯ
ಕೆಡುವುದೆಂದೇ ನಿನ್ನನುಳಿಹಿದೆನೆಂದನಾ ಕರ್ಣ       ೩೮  
 
ಒಳಗೆ ಗಜಬಜವಾಯ್ತು ಶಲ್ಯನ
ಬಲುಭಟರು ಮುಕ್ಕುರುಕಿದರು ಕುರು
ಬಲದ ಮೆಳೆಯಲ್ಲಾಡಿತಲ್ಲಿಯದಲ್ಲಿ ಗುಜುಗುಜಿಸಿ 
ಬಳಿಕ ಕೌರವರಾಯ ಹರಿತಂ
ದಿಳಿದು ದಂಡಿಗೆಯಿಂದ ಗುಣದಲಿ
ತಿಳುಹಿ ಶಲ್ಯನ ಬೇಡಿಕೊಂಡನು ರಥಕೆ ಮರಳಿಚಿದ        ೩೯  
 
ನುಡಿದು ಕರ್ಣನ ತಿಳುಹಿ ಶಲ್ಯನ
ನೊಡಬಡಿಸಿ ರವಿಸುತನನಂಘ್ರಿಗೆ
ಕೆಡಹಿ ಮಾದ್ರೇಶನ ಮನಸ್ತಾಪವನು ನೆರೆ ಬಿಡಿಸೆ
ಕಡಹದಂಬುಧಿಯಂತೆ ವಾದ್ಯದ
ಗಡಣ ಮೊರೆದವು ಪ್ರಳಯಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳಕೋಟಿಗಳು         ೪೦

ಸಂಕ್ಷಿಪ್ತ ಭಾವ
Lrphks Kolar

ರಥದಲ್ಲಿ ಶಲ್ಯ ಮತ್ತು ಕರ್ಣರ ನಡುವೆ ವಾಗ್ವಾದ. ಒಬ್ಬರನ್ನೊಬ್ಬರು ಬಯ್ದಾಡುವುದು.

ಅರ್ಜುನನನ್ನು ತೋರಿಸಿದವರಿಗೆ ಬಹುಮಾನದ ಆಸೆಯನ್ನು ತೋರಿಸಿದ ಕರ್ಣನ ಬಗ್ಗೆ ಶಲ್ಯನಿಗೆ ಕೋಪ ಭುಗಿಲ್ ಎಂದಿತು. ಅವನನ್ನು ನಾನು ನಿನ್ನ ಕರುಳ ಮಾಲೆಯ ವಿಜಯ ತೋರಣದಲ್ಲಿ ತೋರಿಸುವೆನೆಂದ. ಬರಿದೆ ಹೊಗಳಿಕೊಳ್ಳಬೇಡ. ನರಿಗಳೆದುರು ಕಾಡಾನೆಯಂತೆ ಅರ್ಜುನ. ಅವನ‌ಬಿಲ್ಲಿನ ಶಬ್ದಕ್ಕೆ ನಿನ್ನ ಸೈನ್ಯ ತತ್ತರಿಸಿ ಹೋಗುವುದು. ಧೈರ್ಯಗಿರಿಯ ಶಿಖರವುರುಳುವುದು. ಹಾವಿನ ಮರಿಯು ಗರುಡನ ಮುಂದೆ ಉಳಿಯುವುದೇ? ಎಂದೆಲ್ಲ ಕೂಗಾಡಿದ.  ಗಂಧರ್ವರು ನಿನ್ನ ರಾಯನನ್ನು ಕರೆದೊಯ್ದಾಗ ಬಿಡಿಸಿದವನಾರು? ಗೋಗ್ರಹಣ ಸಂದರ್ಭದಲ್ಲಿ ಹೋರಾಡಿ ನಿಮ್ಮನ್ನು ಸೋಲಿಸಿದವರಾರು? ಅರ್ಜುನನ ಬಗ್ಗೆ ತಿಳಿಯದೆ ಬರಿದೇ ಗಳಹುವೆಯೆಂದನು. 

ಕರ್ಣನಿಗೆ ಇದನ್ನೆಲ್ಲ ಕೇಳುತ್ತ ಕೋಪ ನೆತ್ತಿಗೇರಿತು. ಅಯ್ಯೋ, ನೀನು ಇಷ್ಟರಮಟ್ಟಿಗೆ ಅರ್ಜುನನ ಪಕ್ಷಪಾತಿಯೇ.. ನಿನ್ನ ನಂಬಿ ದುರ್ಯೋಧನ ಕೆಟ್ಟನಲ್ಲ ಎಂದ. ನೀನು, ಕೃಪ ಮತ್ತು ಗುರುಸುತ ನೀವು ಮೂವರು ನರನ ಓಲೈಸುವವರೆಂದ. ನನಗೆ ಕೋಪ ಬಂದರೆ ಈ ಕೃಷ್ಣಾರ್ಜುನರು ಏನುಮಹಾ? ಇಂತಹ ನೂರ್ವರನ್ನು ಕೊಲ್ಲಬಲ್ಲೆ. ಯಾವ ದೇಶದಲ್ಲಿ ಜನಿಸುವರೋ ಆ ನೆಲದ ಗುಣವೇ ಅವರದಾಗುವುದು. ಮಾದ್ರ ದೇಶದವರು ಭಂಡರು. ವಿಕಾರಿಗಳು. ಖೂಳರು. ಕುದೇಶ, ಕುಟಿಲಮತಿಯರು,  ಕುವಂಶ ಸಂಸ್ಕೃತಿಯ ನೀನು ಹೀಗೆ ಮಾತನಾಡುವುದು ಅಚ್ಚರಿಯೇನಲ್ಲ ಎಂದು ಇಡೀ ದೇಶವನ್ನೇ ತೆಗಳಿದ.

ಅದಕ್ಕೆ ಶಲ್ಯನು ನೀನು ನಮ್ಮ ದೇಶವನ್ನು ಎಷ್ಟು ತೆಗಳಿದರೂ ಅದಕ್ಕೆ ಊನ ಬಾರದು. ಈ ಕ್ಷಣದಲ್ಲಿ ಭೀಮ ಮತ್ತು ಪಾರ್ಥರನ್ನು ತೋರಿಸುವೆ. ಧೈರ್ಯವಿದ್ದರೆ ಯುದ್ಧ ಮಾಡು. ಸುಮ್ಮನೆ ಮರಳುವುದು ಲೇಸು ಎಂದನು.  ನಿನ್ನೊಡನೆ ಮಾತನಾಡಿ ಫಲವೇನು? ಭೀಮಾರ್ಜುನರನ್ನು ಕೆಡವಲು ನನ್ನಲ್ಲಿ ಬಾಣಗಳಿವೆಯೆಂದ ಕರ್ಣ. 

ಹಿಂದೆ ಪರಶುರಾಮನಲ್ಲಿ ವಿದ್ಯೆ ಕಲಿಯುತ್ತಿದ್ದ ಸಮಯದಲ್ಲಿ ಇಂದ್ರನು ಕೀಟವಾಗಿ ತೊಡೆಯನ್ನು ಕೊರೆಯಲು ರಕ್ತ ಸುರಿಯಿತು. ಎಚ್ಚರಗೊಂಡ ಪರಶುರಾಮನು ಮುನಿದು ವಿಪ್ರನೆಂದು ಹೇಳಿ ಕಲಿತ ವಿದ್ಯೆ ಸಮಯದಲ್ಲಿ ಮರೆತುಹೋಗಲಿ ಎಂದು ಶಾಪವಿತ್ತನು. ನಾನು ಹೀನಪುಣ್ಯನಾದೆನು. ಆದರೆ ದುರ್ಯೋಧನನ ಅಭ್ಯುದಯವನ್ನು ಬಯಸುವವನು ನಾನೆಂದನು ಕರ್ಣ. ಶಲ್ಯನ ಮೇಲೆ ಕರ್ಣನ ಕೋಪ ಹೆಚ್ಚಾಯಿತು. ಶಲ್ಯನು ಕರ್ಣ ತನ್ನ ಮಾತು ಕೇಳಲಿಲ್ಲವೆಂದು ಹಗ್ಗ ಬಿಸುಟು ರಥದಿಂದ ಕೆಳಗಿಳಿದನು. ಕೊನೆಗೆ ದುರ್ಯೋದನ ಬಂದು ಇಬ್ಬರನ್ನೂ ಒಡಂಬಡಿಸಿ  ಮತ್ತೆ ರಥಕ್ಕೆ ಕಳಿಸಿ, ಸೇನೆಯ ಗೌಜನ್ನು ಸರಿಪಡಿಸಿದನು. ಹೀಗೆ ಶಲ್ಯನ ಸಾರಥ್ಯದ ಮೊದಲಿನಲ್ಲಿಯೇ ಅಸಮಾಧಾನದ ಹೊಗೆಯಾಡಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ