ಭಾರತಕಥಾಮಂಜರಿ123
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಹದಿಮೂರನೆಯ ಸಂಧಿ
ಸೂ :
ಮಡಿದರಾಹವದೊಳಗೆ ಕೌರವ
ನೊಡನೆ ಹುಟ್ಟಿದರನಿಲಸುತನಿಂ
ದಡಿಗಡಿಗೆ ಹಳಚಿದನು ಯಮನಂದನನನಾ ಕರ್ಣ
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ ೧
ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೊರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣಿಗಳಾದೆವೆ ಶಿವಶಿವಾ ಎಂದೊಲರಿತಖಿಳಬಲ ೨
ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸಿ ನಮ್ಮನು ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ ೩
ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೆಯ್ವದೂರರು ನಾವೆನುತ ಮರುಗಿತ್ತು ಪರಿವಾರ ೪
ನುಡಿಯ ಭಂಡರು ಕೆಲರು ಸಿಂಧದ
ಗುಡಿಯ ಭಂಡರು ಕೆಲರು ಹಾಹೆಯ
ತೊಡರ ಭಂಡರು ಕೆಲರು ಕೆಲರು ಕುಲಕ್ರಮಾಗತದ
ಗಡಬಡೆಯ ಭಂಡರು ವಿಪತ್ತಿನೊ
ಳೊಡೆಯನಿರೆ ಕೈದುಗಳ ಹೊರೆತಲೆ
ಯೊಡನೆ ಬಿಟ್ಟಿಯ ಭಂಡರಾವೆಂದುದು ಭಟವ್ರಾತ ೫
ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವಮಹಾರಥರ ೬
ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೊಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯ ರಭಸದಲಿ ೭
ಪೂತು ಮಝ ದಳಪತಿಯ ಹರಿಬವ
ನಾತುದೇ ಕುರುಸೇನೆ ಸುಭಟ
ವ್ರಾತವಳವಿಗೆ ಬರಲಿ ಬರಲಿ ವಿಶೋಕ ನೋಡೆನುತ
ಹೂತ ಸಂಪಗೆ ವನವನಳಿಸಂ
ಘಾತ ಮುತ್ತಿದಡೇನೆನುತ ನಿ
ರ್ಭೀತನಿದ್ದನು ಭೀಮ ಸುಮ್ಮಾನದ ಸಘಾಡದಲಿ ೮
ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ ೯
ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕು ಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ ೧೦
ಹರಿಬದೋಲೆಯಕಾರರೊ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕಯರು
ವರ ನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರು ಪುಳಿಂದಾದಿಗಳು ಕವಿದುದು ನೃಪನ ಸನ್ನೆಯಲಿ ೧೧
ಸರಕಟಿಸಿ ರಿಪುರಾಯದಳ ಸಂ
ವರಿಸಿಕೊಂಡುದು ಸಿಕ್ಕಿದಹಿತನ
ಸೆರೆಯ ಬಿಡದಿರಿ ಬಿಡದಿರಂಜದಿರಂಜದಿರಿ ಎನುತ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಕಳಿಂಗ ಕರೂಷ ಕೌರವ
ರರಸ ಮೊದಲಾದಖಿಳ ಬಲ ಜೋಡಿಸಿತು ಝಡಿತೆಯಲಿ ೧೨
ಏನ ಹೇಳುವೆನರಸ ಕರ್ಣನ
ಹಾನಿ ಹರಿಬದ ಬವರವನು ಪವ
ಮಾನನಂದನ ನಿಮಿಷದಲಿ ಮುಸುಕಿದನು ಬಾಣದಲಿ
ದಾನವರ ಥಟ್ಟಣೆಯ ಕೀಲಣ
ದಾ ನಗರಿಯನು ನೆಗ್ಗಿದಂತಿರ
ಲೀ ನಿಘಾತದ ಸೇನೆ ಮುರಿದುದು ಭಟನ ಭಾರಣೆಗೆ ೧೩
ಸಿಲುಕುವುವು ಮೃಗಪಕ್ಷಿ ಹೂಡಿದ
ಬಲೆಗಳಲಿ ಕಾಡಾನೆ ಬೀಸಿದ
ಬಲೆಯ ಕೊಂಬುದೆ ನಿನ್ನ ದಳ ಥಟ್ಟೈಸಿ ಮುತ್ತಿದರೆ
ಅಳುಕುವನೆ ಕಲಿ ಭೀಮನೆಡದಲಿ
ಕಲಕಿದನು ಬಲವಂಕದಲಿ ಕೈ
ವಳಿಸಿ ಕೊಂದನು ವರಪುರೋಭಾಗವ ವಿಭಾಡಿಸಿದ ೧೪
ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ ೧೫
ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು ೧೬
ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ ೧೭
ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ ೧೮
ಶಿವ ಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ ೧೯
ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರ ನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ ೨೦
ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ ೨೧
ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ ೨೨
ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ ೨೩
ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತುಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ ೨೪
ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ ೨೫
ದಳದೊಳಗೆ ದಳವುಳಿಸಿದನು ಕೆಲ
ಬಲನನೆಚ್ಚನು ಕೇಣವಿಲ್ಲದೆ
ನಿಲುಕಿದರಿಗಳು ಚಿಗಿದರಮರೀಜನದ ತೋಳಿನಲಿ
ತಲೆಗಳೊಟ್ಟಿಲ ತೋಳ ಕಡಿಗಳ
ತಳಿದ ಖಂಡದ ಕುಣಿವ ಮುಂಡದ
ಸುಳಿಯ ರಕುತದ ಕಡಲ ರೌಕುಳವಾಯ್ತು ನಿಮಿಷದಲಿ ೨೬
ಬಿಟ್ಟ ಸೂಠಿಯೊಳೊಗ್ಗು ಮುರಿಯದೆ
ಬಿಟ್ಟ ಕುದುರೆಯ ದಳವ ಕೊಂದನು
ಬೆಟ್ಟವನು ಬಲವೈರಿ ತರಿವವೊಲಿಭದ ಮೋಹರವ
ಥಟ್ಟುಗೆಡಹಿದನುರವಣಿಸಿ ಸಾ
ಲಿಟ್ಟು ರಥವಾಜಿಗಳ ನೆರೆ ಹುಡಿ
ಗುಟ್ಟಿದನು ಕಾಲಾಳ ಘಾಸಿಯನರಿಯೆ ನಾನೆಂದ ೨೭
ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ ೨೮
ಎಚ್ಚನರಸನ ಭುಜವ ಕೆಲ ಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ ೨೯
ಚೆಲ್ಲಿತವನೀಪತಿಯ ಮೋಹರ
ವೆಲ್ಲ ನೆರೆ ನುಗ್ಗಾಯ್ತು ರಾಯನ
ಘಲ್ಲಿಸಿದನೇಳೆಂಟು ಬಾಣದಲೀತನಡಿಗಡಿಗೆ
ಅಲ್ಲಿಯದುಭುತ ರಣವನಪ್ರತಿ
ಮಲ್ಲ ಮಾರುತಿ ಕೇಳಿದನು ಮಗು
ಳಲ್ಲಿಯೇ ಮೊಳಗಿದನು ನಿಮಿಷಕೆ ಕರ್ಣನಿದಿರಿನಲಿ ೩೦
ಅಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ ೩೧
ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈ ಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ದಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು ೩೨
ಅಖಿಳ ಬಲ ಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ ೩೩
ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ ಪುನರಪಿ
ಗುರುಸುತಾದಿ ಮಹಾರಥರನೆರ
ಡೆರಡರಲಿ ಮುರಿಯೆಚ್ಚು ವಿಮುಖರ ಮಾಡಿದನು ಭೀಮ ೩೪
ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕಿ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ ೩೫
ದ್ರೋಣ ಬರೆಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ ೩೬
ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡನೊಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕಯ ಪಂಚಪಾಂಡವ
ರಡಸಿದರು ಹೊದಿಸಿದರು ಕಣೆಯಲಿ ರವಿಸುತನ ರಥವ ೩೭
ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳೆಂದ ೩೮
ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನಪರಿಗತ ಬಾಣಶಿಖಿನಿಕರ ೩೯
ನಕುಳನನು ನೋಯಿಸಿದ ಸಹದೇ
ವಕನ ಘಾಯಂಬಡಿಸಿದನು ಸಾ
ತ್ಯಕಿಯ ಮಸೆಗಾಣಿಸಿದನಾ ಪಾಂಚಾಲ ಕೈಕಯರ
ವಿಕಳಗೊಳಿಸಿದನಾ ಮಹಾರಥ
ನಿಕರ ಸೈರಿಸಿ ಮತ್ತೆ ಮೇಳಾ
ಪಕದಲಂಘೈಸಿದರು ತಡೆದರು ಭಾನುನಂದನನ ೪೦
ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮರಿದನು ಹೂಣೆ ಹೊಗುವು
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ ೪೧
ಸರಳ ಹತಿಯಲಿ ನಕುಲ ಸಾತ್ಯಕಿ
ಬಿರುದ ಸಹದೇವಾದಿ ವೀರರು
ಪಿರಿದು ನೊಂದರು ಮತ್ತೆ ತರುಬಿದನವನಿಪಾಲಕನ
ಅರಸ ಹಿಡಿಹಿಡಿ ಧನುವನಿನ್ನೆರ
ಡರಸನಾನದು ಧರಣಿಯೊಬ್ಬನ
ಶಿರದ ಬರಹವ ತೊಡೆವೆನಿದೆಯೆಂದೆನುತ ತೆಗೆದೆಚ್ಚ ೪೨
ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರು ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ ೪೩
ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ ೪೪
ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ ೪೫|
ಮಂಡಳಿಸಿ ಬಲಜಲಧಿ ಸುಳಿ ಸುಳಿ
ಗೊಂಡು ಸಿಕ್ಕಿದ ಕೌರವೇಂದ್ರನ
ಕೊಂಡು ಹಿಂಗುವ ಜೋಕೆ ನೂಕದೆ ಡಗೆಯ ಡಾವರದ
ಗಂಡುಗುಂದಿನ ಬೀತ ಬಿರುದಿನ
ತೊಂಡುಗೇಡಿನ ಜಯದ ಜಾರಿನ
ಖಂಡ ಶೌರ್ಯದ ಧೀರರಿದ್ದುದು ನೃಪನ ಬಳಸಿನಲಿ ೪೬
ವಾಯದಲಿ ಕೌರವನ ವಿಜಯ
ಶ್ರೀಯ ಸೆಎವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ ೪೭
ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳರವವೇನದು ಸುಯೋಧನ ಸೈನ್ಯ ಮಧ್ಯದಲಿ
ಖೂಳ ಬಿಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ ೪೮
ಸಂಕ್ಷಿಪ್ತ ಭಾವ
ಧರ್ಮಜನನ್ನು ಅಡಿಗಡಿಗೆ ಮುತ್ತಿದ ಕರ್ಣನೊಂದಿಗೆ ಭೀಮನ ಯುದ್ಧ.
ಕೌರವನ ಸೇನೆ ದಿಕ್ಕೆಟ್ಟು ಒರಲಿತು. ನಾವು ಬದುಕಿದ್ದು ಪ್ರಯೋಜನವೇನು? ರಾಯನನ್ನು ಗೆಲಿಸದೆ ಎಂದು ಅಳಲಿತು. ಭಂಡರಾದೆವು ನಾವು ಎಂದು ಪರಿವಾರ ಕರ್ಣ ಮತ್ತು ದುರ್ಯೋಧನರ ಬಗ್ಗೆ ಅಪಾರವಾಗಿ ಚಿಂತಿಸಿತು. ನಾಚಿಕೆಯಿಂದ ತಲೆ ತಗ್ಗಿಸಿದರು. ಮತ್ತೆ ಉತ್ಸಾಹ ತಂದುಕೊಂಡು ಎಲ್ಲರೂ ಒಂದಾಗಿ ಕರ್ಣನಿಗೆ ನೆರವಾದರು. ಭೀಮನನ್ನು ಹುಡುಕಿಕೊಂಡು ಮುಂದೆ ನಡೆದು ಮುತ್ತಿದರು. ಅವನಿಗೆ ಮತ್ತೆ ಸಹಾಯಕ್ಕಾಗಿ ನಕುಲ, ಸಹದೇವ, ಸಾತ್ಯಕಿಯರು ಬಂದರು. ಆದರೆ ಭೀಮನು ಕರ್ಣನ ಸೈನ್ಯಕ್ಕೆ ಅಂಜುವನೆ? ಕವಿದ ಪರಿವಾರವನ್ನು ಕೈಬೀಸಿ ತಡೆದನು. ರಥವನ್ನು ಇಳಿದು ಗದೆಯಿಂದ ಒಂದು ಕಡೆಯಿಂದ ಸದೆಯುತ್ತ ಬಂದನು. ಕೌರವನ ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಕರ್ಣನಿಗೆ ಅಪಮಾನವಾಯಿತು. ತನ್ನನ್ನು ದುರ್ಯೋಧನ ಸಾಕಿದ್ದು ವ್ಯರ್ಥವಾಯಿತು ಎಂದು ಹಲುಬಿದನು. ಆಗ ಶಲ್ಯನು ಅವನನ್ನು ಉತ್ತೇಜಿಸುತ್ತ ನೀನು ಇಷ್ಟಕ್ಕೆಲ್ಲ ಸೋಲಬಾರದು. ಅಳುಕದೆ ಬಿಲ್ಲನ್ನು ಹಿಡಿಯೆಂದನು. ಮತ್ತೆ ಉತ್ಸಾಹ ತಂದುಕೊಂಡು ಕರ್ಣ ಧರ್ಮಜನ ಕಡೆಗೆ ಬಂದನು.
ಮೊದಲೇ ನಿತ್ರಾಣನಾಗಿದ್ದ ಧರ್ಮಜನು ಇನ್ನೇನು ಕರ್ಣನಿಗೆ ಸೆರೆಸಿಕ್ಕನೆಂದು ಪಾಂಡವಸೈನ್ಯ ಕಳವಳಿಸಿತು. ಮತ್ತೆ ನಕುಲಾದಿ ಪ್ರಮುಖರು ಇತ್ತ ತಿರುಗಿದರು. ಭೀಮನು ಅಪಾರವಾದ ಕೋಪದಿಂದ ಕರ್ಣನನ್ನು ಅಡ್ಡಹಾಯ್ದನು. ಎರಡೂ ಪಕ್ಷದವರಿಗೆ ಪಡಿಬಲವೊದಗಿತು. ಸಮನಾಗಿ ಕಾದಿದರು. ನಿಮಿಷಾರ್ಧದಲ್ಲಿ ಹೆಣಗಳ ಬೆಟ್ಟ ಎದ್ದಿತು. ಕರ್ಣನು ಉರವಣಿಸಿ ಧರ್ಮಜನನ್ನು ಗಾಯಗೊಳಿಸಿದನು.
ಭೀಮನ ಮತ್ತು ಕರ್ಣನ ಯುದ್ಧ ಕಾವೇರಿತು. ಕೌರವರ ಕಡೆಯ ಪ್ರಮುಖರು ಧಾವಿಸಿ ಬಂದರು. ಮತ್ತೆ ಮೆಲ್ಲಗೆ ಧರ್ಮಜನೆಡೆಗೆ ನಡೆದನು ಕರ್ಣ. ಮೂದಲಿಸುತ್ತ ಸಾಗಿದನು. ನಕುಲನನ್ನು ನೋಯಿಸಿದ. ಸಹದೇವನನ್ನು ಗಾಯಗೊಳಿಸಿದನು. ಪಾಂಚಾಲ, ಕೈಕೆಯರನ್ನು ಧೃತಿಗೆಡಿಸಿದನು. ಕರ್ಣನ ಪರಾಕ್ರಮವನ್ನು ಹೇಳಲರಿಯೆನೆಂದನು ಸಂಜಯ.
ಶಲ್ಯನು ಕರ್ಣನಿಗೆ ನಕುಲ ಸಹದೇವರನ್ನು ಎದುರಿಸುವುದಕ್ಕಿಂತ ಭೀಮಾರ್ಜುನರನ್ನು ಎದುರಿಸು ಎಂದು ತಿಳಿಹೇಳಿದನು. ಅದಕ್ಕೆ ಒಪ್ಪಿದ ಕರ್ಣನು ಭೀಮಾರ್ಜುನರನ್ನು ತೋರು ನಡೆಯೆಂದನು. ಕದಳೀವನದಲ್ಲಿನ ಕಾಡಾನೆಯ ಆಟದಂತೆ ಭೀಮನು ಕಂಗೊಳಿಸಿದನು. ದುರ್ಯೋಧನನ ತಮ್ಮಂದಿರು ನಂದೋಪನಂದರನ್ನು ಭೀಮ ಸಾಯಿಸಿದ್ದರ ಬಗ್ಗೆ ಕೋಪ ಇತ್ತು. ಭೀಮಬಲದ ಮುಂದೆ ಕೌರವರ ಆಟ ನಡೆಯಲಿಲ್ಲ. ಸುಯೋದನನು ಸೆರೆಸಿಕ್ಕುವನೆಂದು ಶಲ್ಯನು ಕರ್ಣನ ರಥವನ್ನು ಭೀಮನಿಂದ ಹಿಂದೆ ತೆಗೆದನು.
ಕಾಮೆಂಟ್ಗಳು