ಭಾರತಕಥಾಮಂಜರಿ142
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಗದಾ ಪರ್ವ - ಎರಡನೆಯ ಸಂಧಿ
ಸೂ.
ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ೧
ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ೨
ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ ೩
ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ೪
ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ ೫
ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬
ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ೭
ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ೮
ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ೯
ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ೧೦
ಮಸಗಿದುದು ಪರಿವಾರ ಕೌರವ
ವಸುಮತೀಶ್ವನರಕೆಯಲಿ ದಳ
ಪಸರಿಸಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ೧೧
ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ ೧೨
ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದು ವಾಘೆಯಲಿ ಕೈ
ಬಿಗಿದುದಂಕಣೆದೊಡಕಿನಲಿ ಮರನಾದವಂಘ್ರಿಗಳು
ಬಗೆಯ ಮಡಿ ಮಸುಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ೧೩
ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ೧೪
ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರುಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ೧೫
ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ೧೬
ಮುತ್ತಿದವು ರಥವೇಳನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸಿದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭
ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ ೧೮
ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ೧೯
ಕಡಿವಡೆದವೇಳ್ನೂರು ರಥ ಮುರಿ
ವಡಿದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ ೨೦
ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧
ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ ೨೨
ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ೨೩
ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ೨೪
ಕೆಡಹಿ ದರ್ಯೋಧನನ ತಮ್ಮನ
ನಡಗುದರೆ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ೨೫
ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ ಸಹದೇವ ೨೬
ವ್ಯರ್ಥವೆಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ೨೭
ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ೨೮
ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ ೨೯
ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ೩೦
ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕೆ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧
ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ ೩೨
ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಖಂಡನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ ೩೩
ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ೩೪
ಧರಣಿಪನ ಧಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ೩೫
ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ೩೬
ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರನಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ೩೭
ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ೩೮
ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ೩೯
ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕರ್ಮುಕಬಾಣದಾಯಕರು ೪೦
ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪತಿ ಜಾ
ರುದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ ೪೧
ಸಂಕ್ಷಿಪ್ತ ಭಾವ
Lrphks Kolar
ಶಕುನಿ ಮತ್ತು ಸಮಸಪ್ತಕರ ಮರಣ. ಕೌರವಸೈನ್ಯದ ಇನ್ನಷ್ಟು ಅಳಿವು.
ಸಂಜಯನು ರಣಭೂಮಿಗೆ ಬಂದು ದುರ್ಯೋಧನನನ್ನು ಹುಡುಕತೊಡಗಿದನು. ಅಲ್ಲಿದ್ದ ಚಾಮರದವರು, ಹಡಪದವರು, ಇತ್ಯಾದಿ ಪರಿಚಾರಕರನ್ನು ವಿಚಾರಿಸಿದ. ಸಾತ್ಯಕಿಯು ಸಂಜಯನ ಮೇಲೆ ಯುದ್ಧ ಮಾಡಲು ಬಂದ. ಆಗ ಗುರುಸುತ, ಕೃಪರು ಬಿಡಿಸಿದರು. ಸಾತ್ಯಕಿಗೂ, ಇವರಿಗೂ ಯುದ್ಧ ಮೊದಲಾಯಿತು. ದ್ರುಪದ ನಂದನರು, ಸೃಂಜಯರು ಸಾತ್ಯಕಿಗೆ ನೆರವಾದರು. ಇವರೊಂದಿಗೆ ನಿಲ್ಲುವುದಕ್ಕಿಂತ ಅರಸನನ್ನು ಕಾಣಬೇಕು ಎಂದು ಗುರುಸುತಾದಿಗಳು ಹಿಂದಿರುಗಿದರು. ಪಾಂಡವರ ಪರಿವಾರ ಕೃತವರ್ಮ, ಸುಶರ್ಮಕರ ಮೇಲೆ ಎರಗಿತು. ಶಕುನಿಯು ಮುಂದೆ ಬಂದನು.
ದೊರೆಯನ್ನು ತೋರಿಸಿರೆಂದ ಪಾರ್ಥನ ಮೇಲೆ ಸುಶರ್ಮ ಸಮಸಪ್ತಕರ ಸಹಿತ ಎರಗಿದನು. ಹಾಗೆಯೇ ಶಕುನಿ ಸಹದೇವನನ್ನು, ಉಳೂಕನು ನಕುಲನನ್ನು, ಕುರುರಾಜನಂದನರು ಭೀಮನನ್ನು ಕೆಣಕಿದರು. ಸಮಸ್ತ ಚತುರಂಗಬಲವನ್ನು ಒಗ್ಗೂಡಿಸಿಕೊಂಡು ಕಾದಲು ಮೊದಲಿಟ್ಟರು. ರಥಗಳು ಮುರಿದವು. ಅರ್ಜುನನ ಬಗ್ಗೆ ಯುದ್ಧದ ಎರಡನೆಯ ದಿನದಿಂದಲೂ ಅಗ್ನಿ ಸಾಕ್ಷಿ ಇಟ್ಟು ದ್ವೇಷ ಸಾಧಿಸುತ್ತಿದ್ದ ಸಮಸಪ್ತಕರು ಈಗ ಅರ್ಜುನನ ಎದುರು ನಿಲ್ಲಲಾಗಲಿಲ್ಲ. ಅವರೆಲ್ಲರನ್ನೂ ಸುರನಗರಿಗೆ ಕಳಿಸಿದನು ಅರ್ಜುನ. ಭೀಮನನ್ನು ಗಜಸೈನ್ಯದೊಡನೆ ಸುದರ್ಶನನೆಂಬವನು ಎದುರಿಸಲು ಈ ಉತ್ತಮ ಗಜಗಳನ್ನು ಕೊಲ್ಲಲೆಂದೇ ತನ್ನನ್ನು ಹೆತ್ತಳೇ ತಾಯಿ ಎಂದು ಅಳಲಿದನು ಭೀಮ. ಆದರೆ ಕ್ಷಣಮಾತ್ರದಲ್ಲಿ ಎಲ್ಲವೂ ನೆಲಕ್ಕೊರಗಿದವು. ನಕುಲ ಉಳೂಕನನ್ನು ಮುರಿದನು. ಸಹದೇವನ ಸೈನ್ಯದ ಬಲದಲ್ಲಿ ಶಕುನಿಯ ಸೈನ್ಯ ಬಲಗುಂದಿತು. ಶಕುನಿ ಮತ್ತು ಸಹದೇವರು ಒಬ್ಬರನ್ನೊಬ್ಬರು ಮೂದಲಿಸಿದರು. ಆಯುಧಗಳು ಈಡಾಡಿದವು. ಶಕುನಿಯ ರಥ ಪುಡಿಯಾಯಿತು. ಕೈ ಚಳಕದಿಂದ ಶಕುನಿಯನ್ನು ಸಹದೇವ ಹೊಡೆದು ಸುರತರುಣಿಯರ ತೋಳಿಗೆ ಅಟ್ಟಿದನು. ಸೌಬಲನ ಬಲವು ನಂದಿತು.
ಕೌರವರಾಯ ಇನ್ನೊಂದು ಬಾರಿ ಪ್ರಯತ್ನ ಮಾಡಲೆಂಬಂತೆ ಧರ್ಮಜನ ದಳದಲ್ಲಿ ಬಂದು ಧರ್ಮಜನನ್ನು ಹೀನ ಮಾತುಗಳಲ್ಲಿ ಕೆಣಕಲು ಭೀಮನು ಕೆರಳಿ ಉಗ್ರ ರೋಷದಲ್ಲಿ ಬಂದನು.ಗಜಗಳನ್ನು ಒತ್ತಿ ಬಿಸುಟನು. ಪರಿಘದಲ್ಲಿ ಅಪ್ಪಳಿಸಿದನು.
ಇನ್ನು ಅಲ್ಲಿ ಉಳಿದವರು ಪರಿಚಾರಕರು. ಛತ್ರ ಚಾಮರದವರು, ಪಾಠಕರು, ಹಡಪಿಗರು, ರಥಕಾರ್ಮಿಕರು, ಪಾಕಶಾಲೆಯವರು ಇತ್ಯಾದಿ. ಕುದುರೆ, ರಾವುತರು, ರಥಾವಳಿ, ಗಜಗಳು ಇವು ಯಾವುವೂ ಅಲ್ಲಿ ಕಾಣಲಿಲ್ಲ. ವೀರನಾರಾಯಣನ ಕೃಪೆಯಲ್ಲಿ ಪಾಂಡವರ ಅಭ್ಯುದಯ ಮೂಡುತ್ತಿದ್ದಂತೆ ಕೌರವರಾಯ ಕಾಣದೆ ಜಾರಿದನು.
ಕಾಮೆಂಟ್ಗಳು