ಭಾರತಕಥಾಮಂಜರಿ141
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಗದಾ ಪರ್ವ - ಮೊದಲನೆಯ ಸಂಧಿ
ಸೂ.
ಶಲ್ಯನವಸಾನದಲಿ ಕೌರವ
ಮಲ್ಲ ದಳಪತಿಯಾಗಿ ರಣದಲಿ
ನಿಲ್ಲದಡಗಿದನಿತ್ತ ಸಂಜಯ ಬಂದನಾಹವಕೆ
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ
ಆಳೊಡನೆ ಬೆರಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿನ ಹಿಂಡ ಹರಿಗಡಿದ ೧
ಎಲವೊ ಕಪಟದ್ಯೂತಕೇಳೀ
ಕಲುಷಿತಾಂತಃಕರಣ ನಿನ್ನೀ
ಬಲಕೆ ಪತಿ ನೀನೋ ಕೃಪಾಚಾರಿಯನೊ ಗುರುಸುತನೊ
ಖಳ ಸುಶರ್ಮನೊ ಶಕುನಿಯೋ ನಿ
ನ್ನುಳಿದವೊಡವುಟ್ಟಿದರೊ ರಾಜಾ
ವಳಿಯೊಳಾರಳಲಿಗರೆನುತ ತೆಗೆದೆಚ್ಚನಾ ಪಾರ್ಥ ೨
ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು ೩
ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ ೪
ನೂರು ರಥವಿನ್ನೂರು ಗಜವೈ
ನೂರು ಹಯವೈಸಾಸಿರದ ಮೂ
ನೂರು ಸುಭಟರು ಸಹಿತ ಮೋಹರದೆರಡು ಬಾಹೆಯಲಿ
ತೋರಿದರು ಕೃತವರ್ಮ ಕೃಪರೈ
ನೂರು ಗಜ ಗುರುತನುಜ ಸಹಿತೀ
ಮೂರುದಳಕೊತ್ತಾಗಿ ನಿಂದನು ಕೌರವರರಾಯ ೫
ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು ೬
ರಣಪರಿಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭುತ ಬೊಬ್ಬೆಗಳ ಲಳಿಯ
ಕುಣಿದರರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ ೭
ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ ೮
ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ ೯
ಎಡದಲೌಕಿದ ಭಟರನಾ ವಂ
ಗಡದ ರಾವ್ತರ ಸಮ್ಮುಖದೊಳವ
ಗಡಿಸಿದಾನೆಯ ಥಟ್ಟಿನಾ ತೇರುಗಳ ಸಮರಥರ
ಕಡಿದನೊಂದೇ ಸರಳಿನಲಿ ಚಿನ
ಕಡಿಗಳೆದು ರುಧಿರಾಂಬುರಾಶಿಯೊ
ಳಡಗಿಸಿದ ಚತುರಂಗಬಲವನದೊಂದು ನಿಮಿಷದಲಿ ೧೦
ಅಳಿದವಿನ್ನೂರಾನೆ ಸರಳ
ಚ್ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ ೧೧
ರಥ ಮುರಿದುವೈನೂರು ತತ್ಸಾ
ರಥಿಗಳಳಿದುದು ನೂರು ಮಿಕ್ಕುದು
ರಥವನಿಳಿದೋಡಿದುದು ಸಮರಥರೆಂಟುನೂರೈದು
ಪೃಥವಿಗೊರಗಿದುವೆಂಟು ಸಾವಿರ
ಪೃಥುಳ ಹಯ ನುಗ್ಗಾಯ್ತು ಗಣನೆಯ
ರಥ ಪದಾತಿಯೊಳಿತ್ತಲೆನೆ ಸವರಿದನು ಪರಬಲವ ೧೨
ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ ೧೩
ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಚಾಹಿಯ ಚಮರಧಾರಿಗರ
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ ೧೪
ಬೆದರಿ ಗಜ ಮುಂಡಾಸನದಲೋ
ಡಿದುವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲುನೊಗನನಸಬಡಿದು
ಕುದುರೆಯೆಳೆದವು ಬರಿ ರಥವನೋ
ಡಿದ ಪದಾತಿಯು ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ ೧೫
ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ ೧೬
ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ ೧೭
ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದೊಳಗೆ ಜನನವು ನಿಮಗೆ ವೀರಕ್ಷತ್ರಿಯೋತ್ತಮರು
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವೆ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ ೧೮
ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನುಡಿವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ ೧೯
ಸೆರೆ ನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿ ಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮರೆದಿರಕಟೆಂದ ೨೦
ಇಲ್ಲಿ ಮನುಜಸ್ತ್ರೀಯ ಮೇಳವ
ವಲ್ಲಿ ಸುರನಾರಿಯರ ರತಿ ನಿಮ
ಗಿಲ್ಲಿ ಭೌಮವಿಭಿನ್ನರಸ ಪೀಯೂಷರಸವಲ್ಲಿ
ಇಲ್ಲಿಯಧ್ರುವ ವಿಭವವಮರತೆ
ಯಲ್ಲಿ ಕಿಲ್ಬಿಷವಿಲ್ಲಿ ಶಿವಮಯ
ವಲ್ಲಿ ನೀವಿಂದೇನ ನೆನೆದಿರಿ ಶಿವಶಿವಾ ಎಂದ ೨೧
ಆವ ಭವದಲಿ ನಿಮ್ಮ ರಾಜ್ಯವ
ದಾವ ಭವದಲಿ ಪುತ್ರಮಿತ್ರರ
ದಾವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು
ಈ ವಿಡಂಬನದೈಹಿಕವ ಸಂ
ಭಾವಿಸುತ ಪರಲೋಕಹಿತವನು
ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ ೨೨
ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ ೨೩
ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ ೨೪
ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ ೨೫
ದೂಪಿಸಿದ ಬಿಳಿದುಗುಳನುಟ್ಟರು
ಲೇಪನಂಗಳ ಪೂಸಿ ಮಧುರಾ
ಳಾಪದಲೆ ಬೋಳೈಸಿ ಸಾರಥಿ ಗಜ ಹಯಾವಳಿಯ
ಭೂಪತಿಯ ರಣಯಜ್ಞಮಖಕೆ ನಿ
ಜಾಪಘನಪೂರ್ಣಾಹುತಿಯಲೇ
ಶ್ರೀಪತಿಯ ಸಾಯುಜ್ಯವೆನುತಿದಿರಾಯ್ತು ನೃಪಕಟಕ ೨೬
ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ನಿರಿವೆ ನಾ ಮುನ್ನೆಂದು ತಮ್ಮೊಳು
ಜರಿದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು ೨೭
ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ ೨೮
ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಿಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು ೨೯
ನೆರೆ ಪರಿಚ್ಛೇದಿಸಿದ ಬಲ ಮು
ಕ್ಕುರಿಕಿತೋ ನಿಜಸೈನ್ಯಸಾಗರ
ಬೆರೆತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೆ
ಯ್ಮರಿದರೇ ಪಾಂಚಾಲಭಟರೆಂ
ದೊರಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ ೩೦
ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ ೩೧
ರಾಯದಳದಲಿ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ ೩೨
ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ ೩೩
ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ ೩೪
ಮೋಹಿದವು ಭರಿಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿದನೆನುತ ತಡೆದರು ರಥಿಕರೆಡಬಲನ
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ ೩೫
ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು ೩೬
ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳದ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ ೩೭
ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ ೩೮
ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರ ಗಣಿತ ಪಾಯದಳ ೩೯
ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು
ಪತ್ತಿ ಮರಳೈವತ್ತು ಗಜ ಮೂ
ವತ್ತು ರಥವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತಳಿದ ಪಾಯದಳ ೪೦
ಬಿರುದುಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರಳುದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ ೪೧
ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ ೪೨
ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯಿಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ ೪೩
ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲುಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ ೪೪
ಅರಸುಮೋಹರ ಸಿಲುಕಿದುದು ದೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ ೪೫
ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತು ಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ ೪೬
ನೂರು ರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ
ಮೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ ೪೭
ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತಗೆವ ತಮದ ವಿ
ತಾನದಂತಿರೆ ಕವಿದ ಕೌರವ
ಸೇನೆಯನು ಶರಜಾಲದಲಿ ಹರೆಗಡಿದನವನೀಶ ೪೮
ಆಳ ಕೊಂದನು ನೂರ ಪುನರಪಿ
ಸೀಳಿದನು ಮೂನೂರನುಕ್ಕಿನ
ಬೋಳೆಯಂಬಿಗೆ ಬೀರಿದನು ನಾಲ್ಕೈದು ಸಾವಿರವ
ಮೇಲೆ ಮೂಸಾವಿರದ ಸವಡಿಯ
ಸೀಳಿಸಿದನಿನ್ನೂರು ಕುದುರೆಗೆ
ಕಾಲನೂರಲಿ ಲಾಯ ನೀಡಿತು ನೃಪತಿ ಕೇಳೆಂದ ೪೯
ಚೆಲ್ಲಿದವು ರಥ ಗಾಲಿ ಮುರಿದವು
ಗೆಲ್ಲೆಗೆಡೆದವು ಕೂಡೆ ಕಂಬುಗೆ
ಯಲ್ಲಿ ಕಾಣೆನು ಕೊಚ್ಚಿದಚ್ಚಿನ ಕಡಿದ ಕೀಲುಗಳ
ಎಲ್ಲಿಯವು ರಥವಾಜಿ ವಾಜಿಗೆ
ತೆಲ್ಲಟಿಯಲೇ ರಥಿಕ ಸೂತರು
ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ ೫೦
ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮ
ಮ್ಮಳಿತವಾದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ ೫೧
ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬುಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ ೫೨
ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯದಿವಸದ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗೆ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ ೫೩
ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ ೫೪
ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ ೫೫
ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರೆ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ ೫೬
ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ದಡಿಸಹಿತ ನವರುಧಿರಾಂಬುಪೂರದಲಿ ೫೭
ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ ೫೮
ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ
ಜೋಡಿಗೆಡೆದವು ನೂರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ ೫೯
ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ ೬೦
ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ ೬೧
ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ ೬೨
ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ ೬೩
ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ ೬೪
ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ ೬೫
ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದು ಮತ್ತೆ ಕುರುಸೇನೆ ೬೬
ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ ೬೭
ಅರಸ ಕೇಳೈ ಕೌರವೇಂದ್ರನ
ನರಸುತರ್ಜುನ ಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಶೇಷ ಕೌರವನೃಪಚತುರ್ಬಲವ ೬೮
ಧರಣಿಪತಿ ಕೇಳಿನ್ನು ಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ
ಗುರುಸುತನು ಕೃಪ ಭೋಜ ಶಕುನಿಗ
ಳರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ ೬೯
ಸಂಕ್ಷಿಪ್ತ ಭಾವ
Lrphks Kolar
ದುರ್ಯೋಧನ ದಳಪತಿಯಾಗಿ ರಣದಲ್ಲಿ ನಿಲ್ಲದೆ ಅಡಗಿದ, ಸಂಜಯ ಮರಳಿ ರಣರಂಗಕ್ಕೆ ತೆರಳಿದ ಪ್ರಸಂಗ.
ದುರ್ಯೋಧನನು ರಣದಲ್ಲಿ ಬರಲು ಪಾರ್ಥ ಕೆಣಕಿದ. ನಿಮ್ಮಲ್ಲಿ ಯಾರು ದಳಪತಿ? ಎಂದು. ಅಕ್ಷೋಹಿಣಿ ಸೇನೆ ಕರಗುತ್ತ ಬಂದು ರಥ, ಗಜ, ಹಯ, ಪದಾತಿಗಳ ಸಂಖ್ಯೆ ಎರಡೂ ಕಡೆ ಇಳಿಯಿತು. ಇರುವುದನ್ನೇ ಒಟ್ಟು ಮಾಡಿಕೊಂಡು ಕಾದಾಟ ಮೊದಲಾಯಿತು. ಪಾರ್ಥನನ್ನು ಕೆಣಕಿ ಉಳಿದವರುಂಟೆ? ಚತುರಂಗಬಲ ನಿಮಿಷದಲ್ಲಿ ಚೂರಾಯಿತು. ಆನೆಗಳು ನೂರಾರು ಸಂಖ್ಯೆಯಲ್ಲಿ ಮಲಗಿದವು. ರಥಗಳು ಮುರಿದವು. ಸೈನ್ಯವು ಪಲಾಯನಗೈಯ್ದಿತು. ಮತ್ತೆ ಅವರನ್ನು ಹುರಿದುಂಬಿಸಿ ಕರೆತಂದನು ಕೌರವರಾಯ. ರಣದಲ್ಲಿ ಮಡಿದರೆ ವೀರಸ್ವರ್ಗ ಸಿಗುವುದು. ಹೇಡಿಗಳಾಗದಿರಿ ಎಂದು ನಾನಾವಿಧವಾಗಿ ಅವರಿಗೆ ಬುದ್ಧಿ ಹೇಳಿದ. ಮತ್ತೆ ಒಗ್ಗೂಡಿದರು.
ಎಲ್ಲರೂ ಸೇರಿ ಪಾರ್ಥನನ್ನು ಮುತ್ತಿದರು. ಹಾಗೆಯೇ ಯುಧಿಷ್ಠಿರನನ್ನು ಅರಸಿದರು. ಒಟ್ಟಿಗೇ ನೂರಾರು ಆನೆಗಳ ದಳ ಅವನನ್ನು ಅಡ್ಡಹಾಕಿದವು. ಆ ಸಮರವನ್ನು ವರ್ಣಿಸಲಾರೆನೆಂದ. ಮತ್ತೆಮತ್ತೆ ಮೇಲೆ ಬಂದ ಗಜದಳವನ್ನು ಸಾವಿರಾರು ಸಂಖ್ಯೆಯಲ್ಲಿ ಸಾಯಿಸಿದಾಗ ಹೆಣಮಯವಾಯಿತು ರಣಭೂಮಿ ಎನ್ನುತ್ತಾನೆ ಕುಮಾರವ್ಯಾಸ. ಪಾರ್ಥನು ದುರ್ಯೋಧನನನ್ನು ಕೊಲ್ಲದೆ ಭೀಮನಿಗೆ ಮೀಸಲು ಇವನು ಎಂದು ಬಿಟ್ಟನು.
ಪಾಂಚಾಲರು, ದ್ರೌಪದೇಯರು, ಸೃಂಜಯರು ಮುಂದೆ ಬಂದು ಕಾದಿದರು. ಎರಡೂ ಕಡೆ ಯುದ್ಧ ಬಿರುಸಾಯಿತು. ಧರ್ಮಜ ಮತ್ತು ದುರ್ಯೋಧನರ ನಡುವಿನ ಯುದ್ಧದಲ್ಲಿ ಮತ್ತೆ ಸಾವಿರಾರು ರಥ, ಕರಿ, ತುರಗಗಳು ಬಿದ್ದವು. ಗಜಬಲದಿಂದ ಧರ್ಮಜನನ್ನು ಸುತ್ತುವರಿಯಲು ಪಾಂಡವಸೇನೆ ಕಳವಳಿಸಿತು. ಭೀಮ ಅಲ್ಲಿಗೆ ಬಂದು ಆ ಗಜ ಸೈನ್ಯವನ್ನು ಚೆಲ್ಲಾಡಿದನು. ಒದೆದನು, ದಾಡೆಯ ಕಿತ್ತು ಬಿಸುಟನು, ಮೆಟ್ಟಿದನು, ತಿವಿದನು ಎನ್ನುವಲ್ಲಿ ಆ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಆಗ ಶಕುನಿ ನೆರವಿಗೆ ಬಂದು ದುರ್ಯೋಧನನಿಗೆ ನೀನೇಕೆ ಒಬ್ಬನೇ ಬಂದೆ? ಉಳಿದವರೇನಾದರು ಎಂದನು. ಮತ್ತೆ ಅಲ್ಲಲ್ಲಿ ಚದುರಿ ಓಡಿಹೋಗಿದ್ದ ಕುರುಸೇನೆ ಒಗ್ಗೂಡಿತು. ಅವರೆಲ್ಲ ಸೇರಿ ಬರುವ ವೇಳೆಗೆ ದುರ್ಯೋಧನನು ಕಾಣಿಸಲಿಲ್ಲ. ಅವನನ್ನು ಹುಡುಕುತ್ತ ಅರ್ಜುನ, ಭೀಮ, ಧರ್ಮಜ, ಸಾತ್ಯಕಿ ಮೊದಲಾದವರು ತಿರುಗಿದರು. ಉಳಿದ ಸೈನ್ಯವನ್ನು ದುಷ್ಟದ್ಯುಮ್ನ, ಸೃಂಜಯರು ತರಿದು ಹಾಕಿದರು.
ಇಷ್ಟು ಹೇಳಿದ ಸಂಜಯ ಮುಂದೆ ಏನಾಯಿತೋ ತಿಳಿಯದು. ನೀನು ಅಪ್ಪಣೆ ಕೊಟ್ಟರೆ ರಣರಂಗಕ್ಕೆ ಹೋಗಿ ಬರುವೆನೆನ್ನಲು ಧೃತರಾಷ್ಟ್ರನು ಒಪ್ಪಿ ಕಳಿಸಿಕೊಟ್ಟನು.
ಕಾಮೆಂಟ್ಗಳು