ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ139


 
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಶಲ್ಯಪರ್ವ - ಎರಡನೆಯ ಸಂಧಿ

ಸೂ.   
ಗಂಡುಗಲಿ ಕದನ ಪ್ರಚಂಡನ
ಖಂಡ ಭುಜಬಲ ಧರ‍್ಮಸುತ ಮುಂ
ಕೊಂಡು ರಣದಲಿ ಕಾದಿ ಗೆಲಿದನು ಮಾದ್ರ ಭೂಪತಿಯ  
 
 
ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ      ೧  
 
ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ      ೨  
 
ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕು ದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ      ೩  
 
ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ      ೪  
 
ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆ ಡವುಡೆಗಳ
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳೆಂದ      ೫  
 
ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ     ೬  
 
ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ      ೭  
 
ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು      ೮  
 
ಶಕುನಿ ಮೋಹರಿಸಿದನು ಸಮಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ      ೯  
 
ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದುವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ      ೧೦  
 
ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ      ೧೧  
 
ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯೂತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ      ೧೨  
 
ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನಿಂದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯ ಬೆರಸಿದುದುಭಯಬಲ ಬಲುಖತಿಯ ಬಿಂಕದಲಿ    ೧೩  
 
ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜ್ಯಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು      ೧೪  
 
ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು      ೧೫  
 
ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ      ೧೬  
 
ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ      ೧೭  
 
ನಿಲಿಸಿದರು ನಿನ್ನವರು ಬಲದ
ಗ್ಗಳೆಯರನು ಬಿರುದಾವಳಿಯ ಮೂ
ದಲಿಸಿದರು ವಿಮಲಾನ್ವಯಾಗತ ವಿಕ್ರಮೋನ್ನತರ
ಬಲನೆಡನ ಮಡಿವೆರಳ ಮುಡಿಮುಂ
ದಲೆಯ ಲಘುವಾಗದಿರಿ ಶಸ್ತ್ರಾ
ವಳಿಯ ಬಾಯ್ದುತ್ತುಗಳ ಸೆಳೆಯದಿರೆಂದರುಬ್ಬಿನಲಿ      ೧೮  
 
ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ    ೧೯  
 
ನೂಕಿದರು ನಿನ್ನವರು ಹಿನ್ನೆಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್‌ಬಯ್ದು ಚಪಲಾ
ನೀಕ ಚಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ      ೨೦  
 
ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣೆಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ      ೨೧  
 
ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾಱರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜು
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ     ೨೨  
 
ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರುಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು   ೨೩  
 
ಏರಿತೊಬ್ಬನ ಮೇಲೆ ರಿಪುರಥ
ವಾರು ಸಾವಿರ ಮತ್ತಗಜಘಟೆ
ಮೂರು ಸಾವಿರ ಹತ್ತು ಸಾವಿರ ತುರಗದಳ ಸಹಿತ
ತೂರುವಂಬಿನ ತುಂಡಿಸುವ ಬಿ
ಟ್ಟೇರುಗಳ ಚೂರಿಸುವ ಸಬಳದ
ಗೀರುಗಳ ಕಾಲಾಳು ಕವಿದುದು ಶಲ್ಯನಳವಿಯಲಿ      ೨೪  
 
ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ      ೨೫  
 
ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿಱುಬುಗಳ ತೇರಿನ
ಹತ್ತು ಸಾವಿರ ಹೊದರುದೆಗೆದವು ಶಲ್ಯನೆಡಬಲಕೆ      ೨೬  
 
ಮೂಱು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ      ೨೭  
 
ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ
ಅಪ್ಪಿದುದು ಕೆಂಧೂಳನೊಡ್ಡಿನ
ತರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳೆಂದ      ೨೮  
 
ತೆಗೆದರರ್ಜುನನನು ಸುಶರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ಕೂರಂಬಿನಲಿ ತೆರಳದೆ ಕೃಪಾಚಾರ‍್ಯ     ೨೯  
 
ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು      ೩೦  
 
ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ       ೩೧  
 
ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ      ೩೨  
 
ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ      ೩೩  
 
ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ      ೩೪  
 
ಪೂತುರೇ ಪಾಂಚಾಲಬಲ ಬಂ
ದಾತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ      ೩೫  
 
ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮ ರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ    ೩೬  
 
ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ      ೩೭  
 
ಅರಸ ಕೇಳೈ ಬಳಿಕ ಶಲ್ಯನ
ಶರಹತಿಗೆ ಬಿಚ್ಚಿದವು ಹೂಡಿದ
ಹರಿಗೆಯಿಬ್ಬಗಿಯಾದವಾ ಬದ್ದರದ ಬಂಡಿಗಳು
ಸರಳುಗಳ ಬಳಿಸರಳು ಬೆಂಬಳಿ
ಸರಳ ಹಿಂದಣ ಸರಳುಗಳ ಪಡಿ
ಸರಳ ಸಾರದ ಸೋನೆ ಸದೆದುದು ವೈರಿವಾಹಿನಿಯ     ೩೮   
 
ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟುದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ      ೩೯  
 
ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ       ೪೦  
 
ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು
ಪ್ರಳಯದಿನದಲಿ ಪಂಟಿಸುವ ಸಿಡಿ
ಲಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ      ೪೧  
 
ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ      ೪೨  
 
ತರಹರಿಸಿದುದು ಪಾಯದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಳಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಳನಾ ಶಲ್ಯನಿದಿರಿನಲಿ      ೪೩  
 
ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳ ಜು
ಜ್ಝಾರರೇರಿತು ಸರಳ ಧಾರಾ
ಸಾರದಲಿ ದಕ್ಕಡರು ಬಿಲ್ಲವರಾಂತರರಿಭಟನ      ೪೪  
 
ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ      ೪೫  
 
ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ       ೪೬  
 
ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸಹೇಳೆನುತ ತಾಗಿದನು ಕಲಿಪಾರ್ಥ     ೪೭  
 
ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಂಬರಧ್ವನಿಯ
ನಿರುಪಮಾಸ್ತ್ರಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ      ೪೮  
 
ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೊಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ      ೪೯  
 
ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ      ೫೦  
 
ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ‍್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾಱುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ      ೫೧  
 
ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯ್ದುಕೊಳ್ಳೆನುತೆಚ್ಚನಾ ಪಾರ್ಥ     ೫೨  
 
ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತೆಉಬಿದನು ಕುರುಪತಿಯನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ       ೫೩  
 
ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ‍್ಮಜನ
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ     ೫೪  
 
ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ
ನೀವು ಕೌರವ ಸರ‍್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ     ೫೫  
 
ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ      ೫೬  
 
ಕಡಿದು ಬಿಸುಟನು ಶಲ್ಯನಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ      ೫೭  
 
ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕದಂಜದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ      ೫೮  
 
ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ‍್ಮಪುತ್ರನ ರಣದ ಚೂಣಿಯಲಿ      ೫೯  
 
ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿಸ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ
ಬೊಬ್ಬಿಡಲು ಕುರುರಾಯನೀಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ      ೬೦  
 
ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ
ಉಳಿದರಿಬ್ಬರು ದೊರೆಗಳೆನೆ ಮು
ಮ್ಮಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ‍್ಮಸುತನೆನುತ      ೬೧  
 
ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ
ತೆತ್ತಿಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದುವು ಮಾದ್ರೇಶನಂಬುಗಳು      ೬೨  
 
ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ‍್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ      ೬೩

ಸಂಕ್ಷಿಪ್ತ ಭಾವ

ಶಲ್ಯನೊಂದಿಗೆ ಧರ್ಮಜನ ನೇರ ಕದನ. ಪಾಂಡವರ ಸಹಕಾರ.
ಈ ಕದನವನ್ನು ನೋಡಲೋ ಎಂಬಂತೆ ಸೂರ್ಯ ಉದಯಿಸಿದನು.ಕೌರವರಾಯನ ಮನದಲ್ಲಿ ಢಗೆ, ಹೊರಗೆ ನಗೆ, ಒಳಗೆ ಪರಾಭವದ ಹೆದರಿಕೆ, ಹೊರಗೆ ಕಲಿತನದ ಹಳಹಳಿಕೆ...ಹೀಗೆ ಅವನ ಸ್ಥಿತಿಯನ್ನು ಸೂಚಿಸುವ ಪದ್ಯ ಸೊಗಸಾಗಿದೆ. ಕೌರವಸೈನ್ಯ ಸಜ್ಜಾಯಿತು. ಸಾಕಷ್ಟು ಪ್ರಮಾಣದಲ್ಲಿ ಸೈನ್ಯ ಹಾನಿಯಾಗಿ ಈಗ ಬಹಳ ಕಡಿಮೆ ಪ್ರಮಾಣದಲ್ಲಿ ಉಳಿದಿತ್ತು. ಜೊತೆಗೆ ಮುರಿದ ರಥಗಳು, ಗಾಯಗೊಂಡ ಕುದುರೆಗಳು, ಆಯುಧಗಳ ಕೊರತೆ ಎಲ್ಲವೂ ಸೇರಿ ಹೀನಾಯ ಸ್ಥಿತಿಗೆ ಬಂದಿತ್ತು ಸೈನ್ಯ. ಅತ್ತ ಕಡೆ ಪಾಂಡವರ ಸೈನ್ಯವೂ ಸಾಕಷ್ಟು ಕಡಿಮೆಯಾಗಿತ್ತು. ಇದ್ದುದರಲ್ಲಿಯೇ ಜೋಡಿಸಿಕೊಂಡು ಶಲ್ಯ ಹೊರಡಲು ಇತರರು ಅವನಿಗೆ ಬೆಂಬಲಕ್ಕೆ ನಿಂತರು. ಎಡಬಲಗಳಲ್ಲಿ ನೆರೆದರು. ಧರ್ಮಜನ ಎಡಬಲಗಳಲ್ಲಿಯೂ ಅವನ ಮಕ್ಕಳು, ಅನುಜರು, ಪಾಂಚಾಲರು ಸೇರಿದರು. ರಣವಾದ್ಯಗಳು ಮೊರೆದವು. ಗಾಳಿಬೀಸಲು ಶಲ್ಯನ ರಥ ಮುಗ್ಗರಿಸಿತು. ಒಬ್ಬರ ಹಿಂದೊಬ್ಬರಂತೆ ಚತುರಂಗಬಲವು ಹೊರಟಿತು. ಯುದ್ಧ ಆರಂಭವಾಯಿತು.

ಶಲ್ಯನು ನಕುಲ ಸಹದೇವರನ್ನು ಧರ್ಮಜನನ್ನು ಕಳುಹಿಸಿರೆಂದನು. ಶಲ್ಯನ ಸೂಚನೆಯಂತೆ ಎಲ್ಲ ಬಲವೂ ಧರ್ಮಜನ ರಥದೆಡೆಗೆ ತಿರುಗಿತು. ಅರ್ಜುನಾದಿಗಳು ನೆರವಿಗೆ ಬಂದರು. ಶಲ್ಯನ ಕೋಪ ಕಾಲರುದ್ರನ ಹಣೆಯ ಹೆಗ್ಗಿಡಿಯಂತಿತ್ತು. ಒಂದರ ಹಿಂದೊಂದರಂತೆ ಅಂಬುಗಳು ಹೊರಟವು. ಪಾಂಚಾಲರ ಬಲ ಬಂದು ನಿಲ್ಲಲು ಇನ್ನಷ್ಟು ರೋಷದಿಂದ ಕಾದಿದನು ಶಲ್ಯ. ಬಾಣದ ಬಂಡಿಗಳು ಸಾಲುಗಟ್ಟಿದವು.

ಒಮ್ಮೆ ಧರ್ಮಜನ ಕಡೆಯವರು ನೊಂದರೆ ಮತ್ತೊಂದು ಕಡೆ ಶಲ್ಯನ ಕಡೆಯವರು ಹಿಂದೆ ಸರಿಯುವಂತಾಗುತ್ತಿತ್ತು. ಭೀಮನು ಶಲ್ಯನ ಮುಂದೆ ಬಂದು ಸಾಕಷ್ಟು ಸೈನ್ಯವನ್ನು ತರಿದನು. ರಕ್ತದ ಕಡಲಲ್ಲಿ ಅದ್ದಿದನು. ನಕುಲ ಸಹದೇವರನ್ನು ಶಲ್ಯ ಕಂಗೆಡಿಸಿದನು ದಂಡಿನಲಿ ಸೋದರಮಾವನೆ! ಯುದ್ಧ ಯುದ್ಧವೇ. ಶಲ್ಯನಿಗೆ ಜಯಲಕ್ಷ್ಮಿ ಒಲಿಯುವಳೆಂದು ಕೌರವರಾಯ ಹೊಗಳುತ್ತಿದ್ದನು. ಯುಧಿಷ್ಠಿರನನ್ನು ಮೂದಲಿಸುತ್ತಾ ಅವನ ರಥ, ಹಯ, ಸಾರಥಿಗಳನ್ನು ನೋಯಿಸಿದನು ಶಲ್ಯ. ಒಬ್ಬರನ್ನೊಬ್ಬರು ಮೂದಲಿಸಿದರು. ದಳಪತಿ ಶಲ್ಯನ ಶರೀರವನ್ನು ಧರ್ಮಜನ ಅಂಬುಗಳು ಮುತ್ತಿ ರಕ್ತದ ಓಕುಳಿಯಾಡಿದವು. ಇಬ್ಬರಿಗೂ ಸಾಕಷ್ಟು ಪೆಟ್ಟಾಗಿತ್ತು. ಹೀಗೆಯೇ ಯುದ್ಧ ಮುಂದುವರಿಯಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ