ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ140



 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಶಲ್ಯಪರ್ವ - ಮೂರನೆಯ ಸಂಧಿ


ಸೂ.   
ಸವೆದುದಗ್ಗದ ಪಾಂಡುಸುತ ಕೌ
ರವ ಬಲಾಂಬುಧಿ ಧರ್ಮತನುಜನ
ನವಗಡಿಸಿ ಸಮರದಲಿ ಮಡಿದನು ಮಾದ್ರಭೂಪಾಲ
 
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ               
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ 
೧  
 
ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು     ೨  
 
ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ‍್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ‍್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ       ೩  
 
ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ      ೪  
 
ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ಹೊಗರುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದುವು ಗುರುಸುತನಂಬಿನಂಬುಧಿಯ     ೫  
 
ಅರಸ ಕೇಳಡಹಾಯ್ದು ಪಾರ್ಥನ
ವರರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ      ೬  
 
ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ‍್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮಗೌತಮರು
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ      ೭  
 
ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು       ೮  
 
ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ      ೯  
 
ಆ ಸಮಯದಲಿ ಬಹಳ ಶೌರ‍್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ       ೧೦  
 
ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತಮೋಹರವ
ಗುಜರು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ    ೧೧  
 
ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ      ೧೨  
 
ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ      ೧೩  
 
ಪವನಜನನೆಂಟಂಬಿನಲಿ ಪಾಂ
ಡವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ      ೧೪  
 
ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪೇಚಕವ
ಭಾನುರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ    ೧೫  
 
ತಾಗಿದವು ಕಂದದಲಿ ನಾಳಿಕೆ
ಗಾಗಿ ಹೊರವಂಟಶ್ವನಿಕರವ
ನೀಗಿದವು ಶರವೊಂದು ಸಾವಿರ ರಥಹಯಾವಳಿಯ
ಬೀಗಿದವು ಕಾಲಾಳ ಕಬಳಿಸಿ
ತೇಗಿದವು ಚತುರಂಗವನು ವಿನಿ
ಯೋಗಿಸಿದವಂತಕನ ಮನೆಗಂಬುಗಳು ಗುರುಸುತನ     ೧೬  
 
ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ      ೧೭  
 
ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ      ೧೮  
 
ಇತ್ತ ಹೇಳಿಕೆಯಾಯ್ತು ಹಯವಿ
ಪ್ಪತ್ತು ಸಾವಿರ ದಂತಿಘಟೆಯೈ
ವತ್ತು ನಾನೂರೇಳು ರಥ ಸಾವಿರದ ನಾನೂರು
ತೆತ್ತಿಗರು ಕಾಲಾಳು ಲಕ್ಕವು
ಹತ್ತಿತಲ್ಲಿಯ ವಾದ್ಯರವ ಕೀ
ರಿತ್ತು ಕಮಲಭವಾಂಡ ವಿಪುಲ ಕಟಾಹಖರ್ಪರವ      ೧೯  
 
ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ      ೨೦  
 
ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳು
ನಿಲಲಿ ಶಕುನಿಯ ತುರಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ       ೨೧  
 
ಕೇಳು ಕೃಪ ಕೃತವರ್ಮ ಗುರುಸುತ
ಕೇಳು ಶಕುನಿ ಸುಶರ್ಮ ಸಾಲ್ವನೃ
ಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು
ಕೇಳಿರೈ ಭೀಷ್ಮಾದಿ ಸುಭಟರ
ಕಾಳೆಗವ ಕಂಡಿರಿ ಮದೀಯ ಕ
ರಾಳ ಕದನೋತ್ಸವವ ನೋಡುವುದೆಂದನಾ ಶಲ್ಯ     ೨೨  
 
ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ     ೨೩  
 
ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ      ೨೪  
 
ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ     ೨೫  
 
ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತೆ ಕೊಂಡಾಡಿತ್ತು ಕುರುಸೇನೆ      ೨೬  
 
ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇವ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು      ೨೭  
 
ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ      ೨೮  
 
ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲ ಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ      ೨೯  
 
ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಂದುದು ವಂದಿಜನಜಲಧಿ      ೩೦  
 
ಹರಿಗೆ ಹೊಡವಂಟಸ್ತ್ರಶಿಕ್ಷಾ
ಗುರುವ ಮನದಲಿ ನೆನೆದು ಹೊಸ ಬಿಲು
ದಿರುವನೇರಿಸಿ ಮಿಡಿದು ನಿಜ ಸಾರಥಿಯ ಬೋಳೈಸಿ
ವರ ರಥವ ನೂಕಿದನು ಪವನಜ
ನರ ನಕುಲ ಸಹದೇವ ಸಾತ್ಯಕಿ
ಬರಲು ಬಲನೆಡವಂಕದಲಿ ನರನಾಥನಿದಿರಾದ      ೩೧  
 
ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ      ೩೨  
 
ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಶಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ‍್ವದ ಗಾಢವೈಸೆನುತೆಚ್ಚನಾ ಶಲ್ಯ      ೩೩  
 
ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಂದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ      ೩೪  
 
ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ      ೩೫  
 
ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು
ನೀವು ತೋರಿರೆ ಸಾಕು ಸಾಮ
ರ್ಥ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ      ೩೬  
 
ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ       ೩೭  
 
ಸೈರಿಸಾದಡೆಯೆನುತ ಮುಳಿದು ಮ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ      ೩೮  
 
ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ      ೩೯  
 
ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರದುಕೂಲವನುಟ್ಟು ಕೊಂಡನು ನಗುತ ವೀಳೆಯವ      ೪೦  
 
ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ      ೪೧  
 
ನರನ ರಥವದೆ ಮರೆಯ ಹೊಗು ಮುರ
ಹರನ ಮರೆವೊಗು ಭೀಮಸೇನನ
ಕರೆಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ       ೪೨  
 
ಏನ ಹೇಳುವೆ ಭಟನ ಶರಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ‍್ಮಸುತನರು
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ      ೪೩  
 
ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ      ೪೪  
 
ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ರ್ಜ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ     ೪೫  
 
ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರದ
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ      ೪೬  
 
ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳೆಂದ     ೪೭  
 
ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಾರಥಿಯ      ೪೮  
 
ಮರವೆ ಮಸುಳಿತೆ ಭೂಮಿಪತಿ ಕಂ
ದೆರಿದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ      ೪೯  
 
ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ
ಮನನ ಶಾಸ್ತ್ರ ಶ್ರವಣ ನಿಯಮಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ      ೫೦  
 
ಉಡಿದು ಬಿದ್ದುದು ಚಾಪ ಸಾರಥಿ
ಕಡಿವಡೆದು ರಥ ನುಗ್ಗುನುಸಿಯಾ
ಯ್ತಡಗುದರಿಯಾಯ್ತಶ್ವಚಯ ಸಜ್ಜೋಡು ತಡಿ ಸಹಿತ
ನಡುಗಿತರಿಬಲವವನಿಪತಿ ಕಾ
ಲ್ನಡೆಗೆ ಬಂದನು ಮತ್ತೆ ರಥವಂ
ಗಡವ ಮೇಳೈಸಿದನು ನಗುತಡರಿದನು ಮಣಿರಥವ      ೫೧  
 
ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್‌ಕ್ಷತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ        ೫೨  
 
ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗಿವೆ ಸರಳು
ಕೈದುಕಾಱರೊಳುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ      ೫೩  
 
ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ      ೫೪  
 
ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಲೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನ ಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ    ೫೫  
 
ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕ ಸಾವಿರವ      ೫೬  
 
ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ            
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ [   ೫೭  
 
ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ      ೫೮  
 
ಅಕಟಕಟ ಧರ‍್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ    ೫೯  
 
ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ‍್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯಮ
ಹೀಶ ಮುರಿಯಲು ಹೊಸರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ     ೬೦  
 
ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವೃಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ‍್ಮಜನ      ೬೧  
 
ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡನೊಲೆದು
ಚೂರಿಸುವ ನಾರಾಚ ವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ      ೬೨  
 
ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ      ೬೩  
 
ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ      ೬೪  
 
ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ       ೬೫  
 
ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ
ಕುಡಿಮೊನೆಯ ಪಡಿಮುಖದಲೊದಱುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ       ೬೬  
 
ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ                
 ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ  ೬೭
 
ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ       ೬೮  
 
ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ      ೬೯  
 
ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು    ೭೦  
 
ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ      ೭೧  
 
ಆರಿ ಹೊಕ್ಕುದು ಶಲ್ಯನೃಪಪರಿ
ವಾರ ಮಾದ್ರದ ನಾಯಕರು ಜು
ಜ್ಝಾರ ಮನ್ನೆಯ ಮಂಡಳಿಕ ಸಾಮಂತಸಂದೋಹ
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ      ೭೨  
 
ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ಯೆನುತ ಹೊಕ್ಕನು ಲಳಿಯ ಲಗ್ಗೆಯಲಿ    ೭೩   
 
ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ      ೭೪  
 
ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ      ೭೫  
 
ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸಱದೆ ಕುರುರಾಯ      ೭೬  
 
ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ    ೭೭

ಸಂಕ್ಷಿಪ್ತ ಭಾವ
Lrphks Kolar

ಪರಾಕ್ರಮದಿಂದ ಕಾದಾಟ ನಡೆಸಿದ ಶಲ್ಯನ ಮರಣ.

ಧರ್ಮಜ ಮತ್ತು ಶಲ್ಯರ ಸಮರಕ್ಕೆ ಎರಡು ಕಡೆಯ ಪ್ರಮುಖರೂ ಜೊತೆಗೆ ನಿಂತರು. ಒಂದು ಕಡೆ ಅರ್ಜುನ ಮತ್ತೊಂದು ಕಡೆ ದ್ರೌಪದೀಸುತರು ಕೌರವರ ಸೈನ್ಯವನ್ನು ತರಿಯುತ್ತ ಬಂದರು. ಹಾಗೆಯೇ ಇತ್ತ ಕಡೆಯಿಂದ ಗುರುಸುತ, ಕೃಪ, ಸುಶರ್ಮಕರು ಪಾಂಡವರ ಸೈನ್ಯವನ್ನು ಹುಡಿಗೆಯ್ದರು. ಅಶ್ವತ್ಥಾಮ ಪಾರ್ಥನ ಮೇಲೆ ಬಾಣಗಳ ಮಳೆಗರೆದನು. ಭೀಮನನ್ನು ಹಿಂದಿಕ್ಕಿ ಧರ್ಮಜನ ಕಡೆಗೆ ನುಗ್ಗಿದನು ಶಲ್ಯ. ಶಕುನಿ ತುರಗದಳಸಹಿತ ಹೋರಾಡಲು ಮುನ್ನಡೆದ. ಭೀಮ ಹೆದರುವನೆ? ಅವನ ಬಲವನ್ನು ಕ್ಷಣದಲ್ಲಿ ಮುರಿದ. ಅಶ್ವತ್ಥಾಮ ನಕುಲ ಸಹದೇವರನ್ನು ನಡುಗಿಸಿದ. ಹೀಗೇ ಸಾಗುತ್ತ ಎರಡೂ ಕಡೆ ಚತುರಂಗಬಲ ಸವೆಯಿತು.

ನೀವೆಲ್ಲ ನಿಂತು ನನ್ನ ಕದನವನ್ನು ನೋಡಿರಿ ಎಂದು ಶಲ್ಯ ಗುರುಸುತಾದಿಗಳಿಗೆ ಹೇಳಿದನು. ಕೌರವರಾಯನಿಗೆ ಬಹಳ ಹರ್ಷವಾಯಿತು. ಶಲ್ಯನನ್ನು ಕೊಂಡಾಡಿದನು. ಧರ್ಮಜನಿಗೂ ಶಲ್ಯನಿಗೂ ಹಣಾಹಣಿಯಾಯಿತು. ಒಂದು ಹಂತದಲ್ಲಿ ಶಲ್ಯ ಮೂರ್ಛೆ ಹೋದನು. ಮತ್ತೆ ಎದ್ದು ಚೇತರಿಸಿಕೊಂಡು ತಾಂಬೂಲ ಮೆದ್ದು ಸಿದ್ಧವಾದನು. ಇನ್ನಷ್ಟು ರೋಷದಿಂದ ಕಾದಿದನು. ಧರ್ಮಜನ ಕವಚ ಹರಿದು ಮೈಯೆಲ್ಲ ಗಾಯವಾಗಿ ಮೈ ಮರೆದನು. ಪಾಂಡವಸೈನ್ಯ ಕಂಗೆಟ್ಟಿತು. ಕೌರವರು ಕುಣಿದಾಡಿದರು. ಮತ್ತೆ ಚೇತರಿಸಿಕೊಂಡು ಬಂದ ಧರ್ಮಜ. ಧರ್ಮಚಿಂತನೆ ಸಾಕು ನಿನಗೆ. ರಣವೇಕೆ ಎಂದು ಮೂದಲಿಸುತ್ತ ಸರಳ ಮಳೆಗರೆದನು ಶಲ್ಯ.

ಇಬ್ಬರ ರಥಗಳೂ ಪುಡಿಪುಡಿಯಾದವು. ಮತ್ತೆ ಮತ್ತೆ ಇದು ಮರುಕಳಿಸಿತು. ಭೀಮನಿಗೆ ಸಿಟ್ಟು ಬಂದಿತು. ಅವನು ಧರ್ಮಜನ ನೆರವಿಗೆ ಬಂದನು. ಹಿಂದೆ ಕರ್ಣಾರ್ಜುನರ ಸಮರಕ್ಕೆ ಸರಿಸಮವಾಗಿ ಇಂದು ಶಲ್ಯ ಧರ್ಮಜರು ಕಾದಿದರು. ಕೃಷ್ಣನು ಧರ್ಮಜನಿಗೆ ನಿಜ ಶಕ್ತಿಪ್ರಯೋಗವನ್ನು ಸೂಚಿಸಿದನು. ಅದರಂತೆ ಧರ್ಮಜನು ಶಕ್ತ್ಯಾಯುಧವನ್ನು ಪ್ರಯೋಗಿಸಲು ಶಲ್ಯನ ಹೋರಾಟ ಮುಕ್ತಾಯವಾಯಿತು. ಭೂಮಿಗೆ ಬಿದ್ದು ಅಸುನೀಗಿದನು. ಸತತವಾಗಿ ಸರಳನ್ನು ಪ್ರಯೋಗಿಸಲು ಕೌರವರ ಸೈನ್ಯ ಹಿಂದೆ ಸರಿಯಿತು.

ಆಗ ಶಲ್ಯನ ಅನುಜನು ಸೈನ್ಯವನ್ನು ಒಟ್ಟುಗೂಡಿಸಿ ಸೇಡುತೀರಿಸಲೆಂಬಂತೆ ಯುಧಿಷ್ಠಿರನ ಮೇಲೆ ಬರಲು ಅವನನ್ನೂ ಸ್ವರ್ಗಕ್ಕೆ ಕಳಿಸಿದನು. ಕೊನೆಯಲ್ಲಿ ದುರ್ಯೋಧನನು ತಾನೇ ಮುಂದೆ ಬಂದು ಹೋರಾಟಕ್ಕೆ ನಿಂತನು. ನಕುಲ ಸಹದೇವರನ್ನು ಹಿಮ್ಮೆಟ್ಟಿಸಿ, ದ್ರೌಪದೇಯರನ್ನು ಕಂಗೆಡಿಸಿ ಭೀಮಾದಿಗಳಿಗೆ ಭೀತಿಯ ಬೆಂಕಿಯಾದನು. ಪಾಂಡವರ ಸೈನ್ಯವು ಮೌನವಾಗಲು ಕೃಷ್ಣನು ಪಾರ್ಥನಿಗೆ ದಿವ್ಯಾಸ್ತ್ರಗಳನ್ನು ಉಪಯೋಗಿಸಲು ಹೇಳಿದನು.

ಇಲ್ಲಿಗೆ ಶಲ್ಯ ಪರ್ವ ಮುಕ್ತಾಯವಾಯಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ