ಬಾಂಬೆ ಜಯಶ್ರೀ
ಬಾಂಬೆ ಜಯಶ್ರೀ
ವಿದುಷಿ ಬಾಂಬೆ ಜಯಶ್ರೀ ನಮ್ಮ ಯುಗದ ಮಹಾನ್ ಸಂಗೀತಗಾರ್ತಿ. ಇವರ ಹುಟ್ಟು ಹಬ್ಬದ ಕುರಿತು ಎಲ್ಲೂ ಉಲ್ಲೇಖವಿಲ್ಲ. ಸಾಮಾನ್ಯವಾಗಿ ಹುಟ್ಟುಗಳ ಸಂದರ್ಭದಲ್ಲಿ ಬರೆಯುವ ನನಗೆ ಇವರ ಕುರಿತು ಬರೆಯುವದೇ ಒಂದು ವಿಶೇಷ ಭಾವ.
"ಜಯಶ್ರೀ ಅವರ ಚಿಂತನಶೀಲ ಗುಣಮಟ್ಟ ಮತ್ತು ನಿರೂಪಣಾ ಕೌಶಲ್ಯ ಅವರ ಸೃಜನಶೀಲತೆಗೆ ಮೆರುಗು ತಂದಿದೆ. ಅವರದ್ದೊಂದು ಅರ್ಥಗರ್ಭಿತ ಸುಮಧುರ ವಿಧಾನ; ಹೀಗೆ ಬಾಂಬೆ ಜಯಶ್ರೀ ಅವರ ಪ್ರಸ್ತುತಿಗಳು ಸಂಗೀತಕ್ಕೆ ಆಧ್ಯಾತ್ಮಿಕ ಸ್ವರವನ್ನು ನೀಡುವಂತದ್ದು” ಎಂದು ದಿ ಹಿಂದೂ ಪತ್ರಿಕೆಯ ಖ್ಯಾತ ವಿಮರ್ಶಕರೊಬ್ಬರು ಹೇಳುತ್ತಾರೆ.
ಜಯಶ್ರೀ ಅವರು 1965ರ ವರ್ಷ ಕೋಲ್ಕತ್ತಾದಲ್ಲಿ ಜನಿಸಿದರು. ಬಾಂಬೆ ಜಯಶ್ರೀ ರಾಮನಾಥ್ ತಮ್ಮ ವಂಶಾವಳಿಯ ನಾಲ್ಕನೇ ತಲೆಮಾರಿನ ಸಂಗೀತ ಸಾಧಕಿ. ಜಯಶ್ರೀ ಅವರು ಲಾಲ್ಗುಡಿ ಜಿ. ಜಯರಾಮನ್ ಮತ್ತು ಶ್ರೀಮತಿ ಟಿ. ಆರ್. ಬಾಲಾಮಣಿ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತಕ್ಕೆ ಔನ್ನತ್ಯ ತಂದುಕೊಂಡವರು. ಜಯಶ್ರೀ ಇಂದು ಲಾಲ್ಗುಡಿ ಸಂಪ್ರದಾಯದ ಜ್ಯೋತಿಯನ್ನು ಹೊತ್ತಿದ್ದಾರೆ ಮಾತ್ರವಲ್ಲದೆ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿದ್ದಾರೆ. ವಿಭಿನ್ನ ಪ್ರಕಾರಗಳ ಸಂಗೀತ ಸೂಕ್ಷ್ಮಜ್ಞತೆಗಳನ್ನು ಅಂತರ್ಗತಗೊಳಿಸಿಕೊಂಡಿರುವ ಅವರ ಸಾಧನೆಗಳು ಸಂಗೀತದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿದೆ. ಉತ್ತರ ಭಾರತೀಯ ಶಾಸ್ತ್ರೀಯ ಸಂಗೀತ ಸಂಪ್ರದಾಯದಲ್ಲಿ ಸಹಾ ಅವರು ಸಾಧಿಸಿರುವ ಪರಿಶ್ರಮವು ಅವರ ಸಂಗೀತಕ್ಕೆ ಮತ್ತಷ್ಟು ವ್ಯಾಪ್ತಿ ತಂದಿದೆ. ಸಂಗೀತದ ಮುಖೇನ ಮನಗಳನ್ನು ದಿವ್ಯತೆಗೆ ಶರಣಾಗಿಸುವ ಅವರ ಪ್ರಸ್ತುತಿಗಳು ಶ್ರೋತೃವನ್ನು, ವಿವರಿಸಲಾಗದ ಅನುಭವದ ಆಳಕ್ಕೆ ಕೊಂಡೊಯ್ಯುತ್ತದೆ.
ಜಯಶ್ರೀ ಇಂದು ಹೆಚ್ಚು ಬೇಡಿಕೆಯಿರುವ ಭಾರತೀಯ ಸಂಗೀತಗಾರ್ತಿಯರಲ್ಲಿ ಒಬ್ಬರು. ಭಾರತದ ಶ್ರೀಮಂತ ಪರಂಪರೆಯ ಸಾಂಸ್ಕೃತಿಕ ರಾಯಭಾರಿಯಾಗಿ ಜಯಶ್ರೀ ಅವರು ಭಾರತ ಮತ್ತು ವಿದೇಶಗಳಲ್ಲಿನ ಅತ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ವ್ಯಾಪಕವಾಗಿ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಅವರು ಪ್ರದರ್ಶನ ನೀಡಿದಲ್ಲೆಲ್ಲಾ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಡರ್ಬನ್ನ ಒಪೇರಾ ಹೌಸ್ ಮತ್ತು ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿರುವ ರಷ್ಯನ್ ಒಪೇರಾ ಹೌಸ್ನಲ್ಲಿ ಮೊದಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೀಡಿದವರೆಂಬ ಹಿರಿಮೆ ಅವರದಾಗಿದೆ. ಜಯಶ್ರೀ ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ತಂಡಗಳೊಂದಿಗೆ ಸಹಾ ವ್ಯಾಪಕವಾಗಿ ಕಾರ್ಯಕ್ರಮ ನೀಡಿದ್ದಾರೆ.
ಜಯಶ್ರೀ ಅವರು ಸೃಜನಶೀಲ ಅನ್ವೇಷಕಿಯಾಗಿ "ಮೀರಾ-ದಿ ಸೋಲ್ ಡಿವೈನ್" ಮತ್ತು "ಮೇಘದೂತಂ" ಮುಂತಾದ ವಿಶಿಷ್ಟ ನೃತ್ಯ ನಿರ್ಮಾಣಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ. ತಮಿಳು ಮಹಾಕಾವ್ಯವನ್ನು ಆಧರಿಸಿದ ಬ್ಯಾಲೆಯ ಅನುರೂಪವಾದ ಅವರ ಸಂಯೋಜನೆ 'ಸಿಲಪಧಿಕಾರಮ್' ಸಹಾ ಪ್ರಸಿದ್ಧಗೊಂಡಿದೆ.
ಜಯಶ್ರೀ ಅವರು ಗಮನಹರಿಸಿರುವ ಸಂಗೀತದ ಮತ್ತೊಂದು ಆಯಾಮವೆಂದರೆ ಸಂಗೀತದಲ್ಲಿನ ಚಿಕಿತ್ಸಕ ಮತ್ತು ಗುಣಪಡಿಸುವ ಮೌಲ್ಯಗಳ ಅನ್ವೇಷಣೆ. ನಮ್ಮ ಶ್ರೀಮಂತ ಸಂಗೀತ ಸಂಪ್ರದಾಯದ ಕುರಿತು ಶಾಲಾ ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು ಅವರು ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಸಂಗೀತದ ಕುರಿತಾದ ಅವರ ಸಂಶೋಧನೆಗಳಲ್ಲಿ ಸಹ ಲೇಖಕರ ಪಾಂಡಿತ್ಯ ಹಾಗೂ ಏಳು ಪೌರಾಣಿಕ ಸಂಗೀತಗಾರರು ಮತ್ತು ಸಂಗೀತಶಾಸ್ತ್ರಜ್ಞರ ಕುರಿತು ರಚಿಸಿದ ಕೃತಿಗಳು ಸೇರಿವೆ. ಜೊತೆಗೆ, ಜಯಶ್ರೀ ಅವರು ಸಂಗೀತದ ಸ್ವರೂಪವನ್ನು ಮೀರಿದ ಮಾರ್ಗಗಳ ಅನ್ವೇಷಣೆಯಲ್ಲಿಯೂ ಶಾಸ್ತ್ರೀಯ ಭಾಷಾವೈಶಿಷ್ಟ್ಯದ ಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಯೋಜಿಸಿದ್ದಾರೆ.
ಜಯಶ್ರೀ ಅವರ ಚಲನಚಿತ್ರ ಸಂಗೀತದಲ್ಲಿನ ಪಾಲ್ಗೊಳ್ಳುವಿಕೆ ಹೊಸ ವರ್ಗದ ಕೇಳುಗರನ್ನು ಶಾಸ್ತ್ರೀಯ ಸಂಗೀತದ ಜಗತ್ತಿನತ್ತ ಸೆಳೆದಿದೆ.
ಭಾರತವೇ ಹೆಮ್ಮೆಪಡುವ ಮಾದರಿ ಉದಯೋನ್ಮುಖ ಹೊಸ ತಲೆಮಾರಿನ ಸಂಗೀತಗಾರ್ತಿಯರನ್ನು ಜಯಶ್ರೀ ಪ್ರತಿನಿಧಿಸುತ್ತಾರೆ. ಶಾಸ್ತ್ರೀಯ ಕರ್ನಾಟಕ ಸಂಗೀತದ ಮೂಲ ಸಂಪ್ರದಾಯಕ್ಕೆ ರಾಜಿಯಾಗದ ಅನುಸರಣೆ ಮತ್ತು ನಿರಂತರ ಅನ್ವೇಷಣೆಯ ನವ್ಯ ಸಂಯೋಗ ಜಯಶ್ರೀ ಅವರ ಸಾಧನೆಗಳಲ್ಲಿ ಮಿಳಿತಗೊಂಡಿವೆ.
ಬಾಂಬೆ ಜಯಶ್ರೀ ಅವರಿಗೆ ಸಂಗೀತ ಸಾಧನೆಗಾಗಿ ಪದ್ಮಶ್ರೀ, ನಾದರತ್ನ, ಕಲೈಮಾಮಣಿ, ಚೌಡಯ್ಯ ಸ್ಮಾರಕ ಪ್ರಶಸ್ತಿ, ಲೈಫ್ ಆಫ್ ಪೈ ಚಿತ್ರದ ಜೋಗುಳ ಧ್ವನಿಗೆ ಆಸ್ಕರ್ ನಾಮಾಂಕಣ, ಫಿಲಂಫೇರ್ ಅಂತಹ ಚಲನಚಿತ್ರ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಅರಸಿ ಬಂದಿವೆ.
ಬಾಂಬೆ ಜಯಶ್ರೀ 2023ರಲ್ಲಿ ಅನಿರೀಕ್ಷಿತ ಅನಾರೋಗ್ಯಕ್ಕೆ ಒಳಗಾದರು. ತಾವು ಐಸಿಯುನಲ್ಲಿದ್ದಾಗ ತಮ್ಮ ಪುತ್ರ ಅಮೃತ್ ಹಾಡುತ್ತಿದ್ದ ತಮ್ಮ ಗುರು ಕೀರ್ತನೆಗಳು ತಮಗೆ ಪುನಃ ಜೀವ ತಂದವು ಎಂಬುದು ಜಯಶ್ರೀ ಅವರ ಕೃತಜ್ಞತಾ ಧನ್ಯ ಭಾವ. 2023ನೇ ಸಾಲಿನ ಪ್ರತಿಷ್ಠಿತ ಸಂಗೀತ ಕಲಾನಿಧಿ ಗೌರವವನ್ನು ಅವರು ಈ ವರ್ಷ ಸ್ವಯಂ ಸ್ವೀಕರಿಸಿದರು ಎಂಬುದು ಅವರ ಅಭಿಮಾನಿಗಳಿಗೂ ಸಂತಸದ ಧನ್ಯಭಾವ ತಂದಿದೆ.
ತಾವು ಗಳಿಸಿದ ಬಹುಪಾಲನ್ನು ಇಲ್ಲದಿರುವವರಿಗೆ ನೀಡುತ್ತಿರುವ ಈ ಸಂಗೀತ ಸರಸ್ವತಿಯ ಬದುಕು ಸುಖ ಸೌಖ್ಯ ಉತ್ಸಾಹಗಳಿಂದ ತುಂಬಿರಲಿ. ಅವರ ಗಾನಸುಧೆ ನಮ್ಮನ್ನು ಸುದೀರ್ಘಕಾಲದವರೆಗೆ ಪುನೀತರನ್ನಾಗಿಸುತ್ತಿರಲಿ 🌷🙏🌷
My favorite classical vocalist Bombay Jayashri Ramnath
ಕಾಮೆಂಟ್ಗಳು