ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜ್ಯೋತಿಬಸು


  ಜ್ಯೋತಿಬಸು


ಜ್ಯೋತಿಬಸು ಭಾರತೀಯ ರಾಜಕಾರಣದಲ್ಲಿದ್ದ ಪ್ರಸಿದ್ಧ ಕಮ್ಯುನಿಸ್ಟ್ ನಾಯಕರಾಗಿ ಅತಿ ಹೆಚ್ಚು ಅವಧಿಯವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದವರು.

ಜ್ಯೋತಿಬಸು 1914ರ ಜುಲೈ 8ರಂದು ಜನಿಸಿದರು.  ತೊಂಭತ್ತಾರು ವರ್ಷಗಳು ಬದುಕಿದ್ದ ಜ್ಯೋತಿಬಸು ಅಂದಿನ ದಿನದಲ್ಲಿ ಬ್ಯಾರಿಸ್ಟರ್ ಆಗಿದ್ದರೂ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಒಲಿದು ರೈಲ್ವೆ ನೌಕರರ ಜೊತೆ ನಿಂತರು.  

ಶಿಸ್ತುಬದ್ಧ ಕಾರ್ಮಿಕ ನಾಯಕ, ಪಕ್ಷದ ಕಟ್ಟಾಳು, ಅತ್ಯಂತ ಸಾಮಾನ್ಯನಂತೆ ಸರಳ ಜೀವನ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ, ಇಪ್ಪತ್ಮೂರು ವರ್ಷ ಭಿನ್ನಮತ ಎದುರಿಸದ ಮುಖ್ಯಮಂತ್ರಿತ್ವ ಇವೆಲ್ಲ ಅಚ್ಚರಿಮೂಡಿಸುತ್ತದೆ.  ಕಮ್ಯೂನಿಸ್ಟ್ ಸಿದ್ಧಾಂತಗಳಿಗೆ ಬದ್ಧರಾಗಿದ್ದರೂ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಕುಂದು ಬರದಂತೆ ನಡೆದವರು ಬಸು.  ನಿಷ್ಠುರವಾದಿ, ಒಳಗೊಂದು, ಹೊರಗೊಂದು ಗುಣವಿಲ್ಲ.  ಉತ್ತಮ ಓದುಗಾರ, ಜ್ಞಾನ ಭಂಡಾರಿ, ಸಮಾಜದ ಹಿತಚಿಂತಕ ಹೀಗೆ ಮೇರುಮಟ್ಟದ ವ್ಯಕ್ತಿತ್ವದವರು.  ಮಿಶ್ರಪಕ್ಷಗಳು ಅಧಿಕಾರಕ್ಕೆ ಬಂದ ಸಮಯದಲ್ಲಿ ಪ್ರಧಾನಿ ಆಗಬಹುದಿತ್ತು ಎಂದು ಅವರಿಗನ್ನಿಸಿತು.  ಪಕ್ಷ ಬೇಡ ಎಂದಾಗ ಅದರ ವಿರುದ್ಧ ಹೋಗುವುದು ಅವರಿಗೆ ಕಷ್ಟವಿರಲಿಲ್ಲವೇನೋ.  ಆದರೆ ಬೇಡ ಎಂದು ಪಕ್ಷ ತೀರ್ಮಾನ ಮಾಡಿದಾಗ ಅದಕ್ಕೆ ಬದ್ಧರಾದರು.  ಆದರೆ ಅದು ಭಾರತೀಯ ಕಮ್ಮ್ಯೂನಿಸ್ಟ್ ಪಕ್ಷಗಳು ಮಾಡಿದ ಅತ್ಯಂತ ದೊಡ್ಡ ಮುಟ್ಟಾಳತನ  ಎಂದು ನೇರವಾಗಿ ಹೇಳಿದರು.  ಕಮ್ಮ್ಯೂನಿಸ್ಟ್ ಪಕ್ಷ ಇಂದು ಮೂಲೆಗುಂಪಾಗಿರುವುದು ಬೇರೆಯದೇ ವಿಷಯ.  

ಬಸು ಅವರು ತಮ್ಮ ಆಡಳಿತಾವಧಿಯಲ್ಲಿ ಹೊರಗಿನಿಂದ ಹೆಚ್ಚು ಬಂಡವಾಳ ತರುವಂತಹ ಕೆಲಸ ಮಾಡಲಿಲ್ಲ ಎಂಬ ಮಾತಿದೆ.  ಆದರೆ ಪಂಚಾಯತ್ ರಾಜ್ ವ್ಯವಸ್ಥೆ, ಹಳ್ಳಿಗಳ ಕುರಿತಾದ ನಿಗಾ, ಪರಿಸರ ಕಾಳಜಿ ಮತ್ತು ಸಾಮಾಜಿಕ ಹಿತ ಚಿಂತನೆಗಳಲ್ಲಿ ಅವರ ಅಧಿಕಾರಾವಧಿ ಹಿಂದೆ ಬೀಳಲಿಲ್ಲ ಎಂಬ ಮಾತೂ ಇದೆ.  ಕಲ್ಕತ್ತೆಯಲ್ಲಿ ಮೆಟ್ರೋದಂತಹ ವ್ಯವಸ್ಥೆ ಉಳಿದೆಲ್ಲ ಕಡೆಗಳಿಗಿಂತ ಮೊದಲೇ ಆಯ್ತು ಎಂಬುದು ಕೂಡಾ ಅಷ್ಟೇ ನಿಜ.  ಜಾತಿ ಧರ್ಮದ ಕಲಹಗಳು ಅವರ ಆಡಳಿತದಲ್ಲಿ ಇಲ್ಲವೇ ಇಲ್ಲ ಎಂಬ ಮಟ್ಟದಲ್ಲಿದ್ದವು.

ಬಸು ಅವರ ಒಂದು ವೈಯಕ್ತಿಕ ಶಕ್ತಿ ಅಂದರೆ ಯಾವುದೇ ಕೆಲಸವನ್ನು ಮುಂದೆ ಹಾಕದಿರುವುದು.  ಒಂದು ಕೆಲಸ ಆಗುತ್ತದೆ ಇಲ್ಲ ಎಂಬ ಬಗೆಗಿನ ನಿರ್ಧಾರ ಅವರಲ್ಲಿ ತತ್ಕ್ಷಣದಲ್ಲಿ ಆಗಬೇಕಿತ್ತು. 

2010ರ ಜನವರಿ 17ರಂದು ತನ್ನ ದೇಹವನ್ನೂ ಈ ಲೋಕದ ಮುಂದಿನ ಪ್ರಯೋಗಗಳಿಗೆ ಬಿಟ್ಟು ಹೋದ ಜ್ಯೋತಿಬಸು ಅವರ ಸ್ಮರಣೆ ಹತ್ತು ಹಲವು ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು.

On the birth anniversary of Jyothi Basu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ