ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪರಿಮಳ ಗೆಳೆಯರ ಬಳಗ


 ಪರಿಮಳ ಗೆಳೆಯರ ಬಳಗ

ಪರಿಮಳ ಎಂದರೆ ತಕ್ಷಣ ಶ್ರೀರಾಘವೇಂದ್ರ ಸ್ವಾಮಿಗಳು ನೆನಪಾಗುತ್ತಾರೆ.‍ ಈ ಹೆಸರಿನಲ್ಲಿ ಕಳೆದ 49 ವರ್ಷಗಳಿಗೂ ಮೀರಿ ಕೈಂಕರ್ಯ ನಡೆಸುತ್ತಿರುವ ತಂಡ 'ಪರಿಮಳ ಗೆಳೆಯರ ಬಳಗ'ದ ಕೈಂಕರ್ಯ ನೆನೆಯಲರ್ಹವಾದುದು. 

ಶ್ರೀರಾಘವೇಂದ್ರ ಗುರುಸಾರ್ವಭೌಮರ ಚರಣಸೇವೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡಿರುವ ಪರಿಮಳ ಗೆಳೆಯರ ಬಳಗ 1976ರಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಗಳೂರಿನ ಶ್ರೀನಗರ ಬಡಾವಣೆಯಲ್ಲಿ ಉದಯವಾಯಿತು. ‘ಪರಿಮಳ ಗೆಳೆಯರ ಬಳಗ’ದ ವೈಶಿಷ್ಟ್ಯವೆಂದರೆ ಯಾವುದೇ ಸಂಘ-ಸಂಸ್ಥೆಗಳಲ್ಲಿರುವಂತೆ ಬಳಗದಲ್ಲಿ ಯಾವುದೇ ಸಮಿತಿಯಾಗಲೀ, ಪದಾಧಿಕಾರಿಗಳ ಮಂಡಲಿಯಾಗಲಿ ಇಲ್ಲ. ಸದಸ್ಯತ್ವ ಪಡೆಯಲು ಶುಲ್ಕವನ್ನೂ ತೆರಬೇಕಾಗಿಲ್ಲ. ವಾತ್ಸಲ್ಯಮಯಿಗಳಾದ ಶ್ರೀರಾಘವೇಂದ್ರರೇ ಪರಿಮಳ ಗೆಳೆಯರ ಬಳಗದ ಸರ್ವೋಚ್ಚ ನೇತಾರರು. ಅವರೇ ಅಧ್ಯಕ್ಷರು, ಅವರೇ ಕಾರ್ಯದರ್ಶಿಗಳು, ಅವರೇ ಖಜಾಂಚಿಗಳು. ರಾಯರ ಅಡಿಯಲ್ಲಿ ಅವರ ಮಾನವತೆಯ ದಿವ್ಯ ಸಂದೇಶವನ್ನು ಸಾರಲು ಕಟಿಬದ್ಧವಾಗಿರುವ ಬಳಗಕ್ಕೆ ಸೇರಿದ ಪ್ರತಿಯೊಬ್ಬರೂ ’ಪರಿಮಳಾಚಾರ್ಯರ ಸೇವಕರು’. ಶ್ರೀರಾಯರಲ್ಲಿ ಮಾಡುವ ನಿರ್ಮಲ ಮತ್ತು ಸದೃಢಭಕ್ತಿಯೇ ಸದಸ್ಯತ್ವವನ್ನು ಪಡೆಯಲು ತೆರಬೇಕಾದ ಶುಲ್ಕ; ಗುರುರಾಜರಲ್ಲಿ ಇರುವ ಅದಮ್ಯ ವಿಶ್ವಾಸವೇ ಬಳಗದ ಗೆಳೆತನವನ್ನು ರಕ್ಷಿಸಿ ಪೋಷಿಸುವ ವಜ್ರಕವಚ. ಶ್ರೀರಾಯರ ಚರಣಸೇವೆಯನ್ನು ಅಜೀವ ಪರ್ಯಂತ ಮಾಡುವ ಪವಿತ್ರ ದೀಕ್ಷೆಯ ಸಂಕೇತವಾಗಿ ‘ರಾಯರ ಸೇವೆಗಾಗಿ ಮೀಸಲಾಗಿರುವ’ ಬಳಗದ ಗೆಳೆಯರು ಗುರುಗಳ ಪವಿತ್ರ ಶೇಷವಸ್ತ್ರವನ್ನು ಪಡೆಯುತ್ತಾರೆ. ಇಲ್ಲಿಯತನಕ ಸುಮಾರು ಇನ್ನೂರಕ್ಕೂ ಹೆಚ್ಚು ಗೆಳೆಯರು ಗುರುಸೇವೆಯ ಪವಿತ್ರ ದೀಕ್ಷೆ ಹೊಂದಿದ್ದಾರೆ.

ಗುರುಗಳು ಎಂದಾಕ್ಷಣ ಎಲ್ಲರಿಗೂ ತಟ್ಟನೆ ನೆನಪಾಗುವುದು ಒಂದೇ ಹೆಸರು – ಶ್ರೀರಾಘವೇಂದ್ರ ಸ್ವಾಮಿಗಳು! ಗುರುವಾರ ಬಂದ ಕೂಡಲೇ ಆಸ್ತಿಕರ ಮನಸ್ಸು ತವಕಿಸುವುದು ಶ್ರೀರಾಘವೇಂದ್ರ ಗುರುಗಳ ದರ್ಶನವನ್ನು ಪಡೆಯಲು! ಜಾತಿ, ಮತ, ಮಠ, ಪಂಗಡ, ಒಳಪಂಗಡಗಳಾವುವೂ ಈ ಭಾವನೆಗೆ ಅಡ್ಡಬರುವುದಿಲ್ಲ. ಎಂತಹ ನಾಸ್ತಿಕನೇ ಆಗಿರಲಿ ಶ್ರೀರಾಘವೇಂದ್ರರ ಹೆಸರನ್ನು ಕೇಳಿದಾಕ್ಷಣ ಮೃದುವಾಗುವುದನ್ನು ನಾವು ನೋಡುತ್ತಿದ್ದೇವೆ. ದೇಶ, ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯಾತ ಭಾರತೀಯರ ಗುರುಭಕ್ತರ ಮನೆಯಲ್ಲಿ ಶ್ರೀರಾಘವೇಂದ್ರರ ಪ್ರಸನ್ನ ನಿಲುವಿನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅಪರೋಕ್ಷೀಕೃತ ಶ್ರೀಶರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಆಸೀಮ ಕಾರುಣ್ಯ. ‘ರಾಯರು‘ ಎಂದೇ ಜನಪ್ರಿಯರಾಗಿರುವ ಈ ಮಹನೀಯರು ಇಲ್ಲಿಯ ತನಕ ಜಗತ್ತು ಕಂಡರಿಯದ ವಾತ್ಸಲ್ಯದ ಕೋಡಿಯನ್ನು ತಮ್ಮ ಭಕ್ತವರ್ಗದ ಮೇಲೆ ಹರಿಸುತ್ತಿದ್ದಾರೆ. ಎಂಥ ಜಡ ಹೃದಯವೂ ಕರಗಬಲ್ಲ ಮಾನವತೆ, ಭೂತದಯೆ ರಾಯರಲ್ಲಿದೆ. ಹಾಗೆಂದೇ ಶ್ರೀರಾಘವೇಂದ್ರರು ಗುರುಸಾರ್ವಭೌಮರಾಗಿ; ಕಲಿಯುಗದ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಾಗಿ ಮೆರೆಯುತ್ತಿದ್ದಾರೆ. ವಿಶ್ವಶಾಂತಿ ಹಾಗೂ ಮನುಕುಲದ ಸಂರಕ್ಷಣೆಯ ದಿಸೆಯಲ್ಲಿ ಆಶಾಕಿರಣವಾಗಿ ಗೋಚರಿಸುತ್ತಿರುವ ಈ ಮಮತಾವಾರಿಧಿಯ ಸೇವೆಯಲ್ಲಿ ಪಾಲ್ಗೊಳ್ಳಲು ಪರಿಮಳ ಗೆಳೆಯರ ಬಳಗ ಎಲ್ಲರನ್ನೂ ತನ್ನ ಜೊತೆಗಿರಿಸಿಕೊಂಡಿದೆ.

ಪರಿಮಳ ಗೆಳೆಯರ ಬಳಗ ಆಧ್ಯಾತ್ಮದ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ.  ಸಮಾಜದ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುತ್ತ ಬಂದಿದೆ.
 
ಬಳಗದ ಸ್ಥಾಪಕರು

ಪರಿಮಳ ಗೆಳೆಯರ ಬಳಗದ ಸ್ಥಾಪಕರು ಡಾ.  ಜಯಸಿಂಹ ಅವರು. 

ಶ್ರೀರಾಘವೇಂದ್ರ ಗುರುಸಾರ್ವಭೌಮರ ಚರಣಸೇವೆಯ ಸುವರ್ಣಾವಕಾಶವನ್ನು ಕಲ್ಪಿಸಿ ಗುರುಭಕ್ತರಿಗೆ ಸಾಧನಾ ಪಥವನ್ನು ತೋರುತ್ತಿರುವ ಜಯಸಿಂಹ ಅವರು ತಮ್ಮ ಬಾಲ್ಯದಲ್ಲಿ ನಡೆದ ಒಂದು ವಿಚಿತ್ರ ಸನ್ನಿವೇಶವೊಂದರಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು. ಗುರುರಾಜರ ಕಾರುಣ್ಯದ ಸವಿಯನ್ನು ಪಡೆದ ಜಯಸಿಂಹ ಅವರು ತಮ್ಮ ಬದುಕನ್ನು ರಾಯರ ಸೇವೆಗಾಗಿ ಮುಡಿಪಿಡಲು ನಿಶ್ಚಯಿಸಿ ಈ ಸಂಘಟನೆಯನ್ನು ಕಟ್ಟಿದರು. ಗುರುರಾಜರ ಸೇವೆಗಾಗಿ ಕಟ್ಟಿಬದ್ಧರಾದ ನೂರಾರು ಗುರುಭಕ್ತರನ್ನು ಇವರು ಸಂಘಟಿಸಿದ್ದಾರೆ.

ಜಯಸಿಂಹ ಅವರು ಶ್ರೀಪುರಂದರದಾಸರ ಪಾವನ ಪರಂಪರೆಯಲ್ಲಿ ಬಂದಿರುವ ‘ಹರಿದಾಸ ಕುಲತಿಲಕ’ ಶ್ರೀಗುರುಗೋವಿಂದ ವಿಠಲದಾಸರಿಂದ ಅಂಕಿತ ದೀಕ್ಷೆಯನ್ನು ಪಡೆದಿರುವ ಹರಿದಾಸರು. ಶ್ರೀತಿರುಮಲೇಶ ಹರಿವಿಠಲ ಎಂಬ ಅಂಕಿತದಿಂದ ಅವರು ಈಗಾಗಲೇ ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಜಯಸಿಂಹ ಅವರು ನೂರಕ್ಕೂ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. 

ತಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ತಿರುವಿಗೆ ಕಾರಣರಾದ ಶ್ರೀರಾಘವೇಂದ್ರ ಸ್ವಾಮಿಗಳನ್ನು ಕುರಿತು ಜಯಸಿಂಹ ಅವರು ತಮ್ಮ 23ನೇ ವಯಸ್ಸಿನಲ್ಲಿ ಪ್ರಕಟಿಸಿದ ಮೊಟ್ಟಮೊದಲು ಕನ್ನಡದಲ್ಲಿ ಬರೆದ ಪುಸ್ತಕ “ಗುರು ರಾಘವೇಂದ್ರರು”. ಇದು ಇಲ್ಲಿಯ ತನಕ ಅನೇಕ ಮುದ್ರಣಗಳನ್ನು ಕಂಡಿದ್ದು, ಕನ್ನಡ ಭಾಷೆಯಿಂದ ಇಂಗ್ಲೀಷ್‌ ತಮಿಳು, ಮತ್ತು ಮರಾಠಿ ಭಾಷೆಗಳಿಗೆ ತರ್ಜುಮೆಗೊಂಡಿದೆ. ವೃತ್ತಿಯಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿರುವ ಡಾ. ಜಯಸಿಂಹ ಅವರು ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ.



Parimala Geleyara Balaga 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ