ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಕೆ. ಸುಬ್ಬಲಕ್ಷ್ಮಿ


 ಎಚ್. ಕೆ. ಸುಬ್ಬಲಕ್ಷ್ಮಿ 


ಎಚ್. ಕೆ. ಸುಬ್ಬಲಕ್ಷ್ಮಿ ಕನ್ನಡದ ಶ್ರೇಷ್ಠ ಜ್ಞಾನಿ. ಅವರಿಗಿರುವ ಸಾಹಿತ್ಯಕ ಪರಿಜ್ಞಾನ ಅನುಪಮವಾದದ್ದು.

ಜೂನ್ 19, ಎಚ್. ಕೆ. ಸುಬ್ಬಲಕ್ಷ್ಮಿ ಅವರ ಜನ್ಮದಿನ.  ಮೂಲತಃ ಅವರು ಹೊಳಲ್ಕೆರೆಯವರು.  ಬಡತನದ ಬದುಕು ಅವರ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರಿತು.  ಏಳನೆಯ ತರಗತಿಯ ಓದಿನ ನಂತರ ಶಾಲೆಯ ಬದುಕೇ  ಸಿಗದಾಯಿತು. ನಾಲ್ಕು ವರ್ಷಗಳ ನಂತರ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ನಂತರ ಟಿ ಸಿ ಎಚ್ ಮಾಡಿ ಶಿಕ್ಷಕಿ ಆದರು. ಶಿಕ್ಷಕಿಯಾಗಿ ನಂತರದಲ್ಲಿ ಬಿ.ಎ., ಎಂ.ಎ., ಬಿ.ಎಡ್, ಎನ್ಇಟಿ, ಎಸ್ಇಟಿ  ಮುಂತಾದ ವಿದ್ಯಾರ್ಹತೆ  ಗಳಿಸಿದರು.

ಸುಬ್ಬುಲಕ್ಷ್ಮಿ ಅವರು ಹೇಳುತ್ತಾರೆ:  "ಜೀವನ ಕಲಿಸುತ್ತಾ ಹೋಯಿತು. ಓದು, ಬರಹಗಳೇ ನನ್ನ ಬದುಕು. ಪುಸ್ತಕಗಳೇ ಆಸ್ತಿ". ಮಲ್ಲಾಡಿಹಳ್ಳಿ ಸರ್ಕಾರಿ  ಶಾಲೆಯಲ್ಲಿ ಅವರು  ಇಪ್ಪತ್ತು ವರ್ಷಗಳ ಸೇವೆಯ ನಂತರ ಅಕ್ಕನನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಿಂದ  ಸ್ವಯಂನಿವೃತ್ತಿ ಪಡೆದರು.

ಸುಬ್ಬುಲಕ್ಷ್ಮಿ ಅವರ ವೈವಿಧ್ಯ ಬರಹಗಳು ಅನೇಕ ಕಡೆ ಮೂಡಿವೆ.  ಅವರ ಓದಿನ ಆಳವಂತೂ ಅಪಾರವಾದದ್ದು.  ಅವರ ಮನೆ ಮತ್ತು ಮನ ಪುಸ್ತಕಗಳು ತುಂಬಿದ ಸರಸ್ವತಿ ಮಂದಿರವೇ ಆಗಿದೆ. 

ಸುಬ್ಬುಲಕ್ಷ್ಮಿ ಅವರ ಸಾಮರ್ಥ್ಯ ಮತ್ತು ಪಾಂಡಿತ್ಯಕ್ಕೆ ಉತ್ತಮ ಗ್ರಂಥಗಳನ್ನೇ ನಿರ್ಮಿಸುವ ಶಕ್ತಿ ಇದೆ. ಅವರಿಗಿರುವ  ಹೊಸಗನ್ನಡ, ಹಳಗನ್ನಡ, ಗದ್ಯ, ಕಾವ್ಯ ಮತ್ತು ವ್ಯಾಕರಣ ಜ್ಞಾನ ಅನುಪಮವಾದದ್ದು.  

ನನಗೆ ಕನ್ನಡದ ಯಾವ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವ ಹೆಸರು ಸುಬ್ಬುಲಕ್ಷ್ಮಿ.  ನಾನು ಅಂತರಜಾಲದಲ್ಲಿ ಪ್ರಕಟಿಸಿದ ಕುಮಾರವ್ಯಾಸ ಭಾರತಕ್ಕೆ ಸಂಕ್ಷಿಪ್ತ ವ್ಯಾಖ್ಯಾನ ಬರೆದವರು ಇವರೇ.  ಜಯದೇವ ಕವಿಯ ಗೀತಗೋವಿಂದ ಮತ್ತು  ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಗೀತಗೋವಿಂದ ರೂಪಕಗಳ ಸಂಗಮಕ್ಕೆ  ಅವರು ಸಂಕ್ಷಿಪ್ತ ಭಾವಾರ್ಥ ಬರೆದಿದ್ದನ್ನು ಸಹಾ  ಪ್ರಕಟಿಸಿರುವೆ.  ಅವರು 'ಸೋಮೇಶ್ವರ ಶತಕ 'ಮತ್ತು ಪುತಿನ ಅವರ 'ಗೋಕುಲ ನಿರ್ಗಮನ' ಕುರಿತಾದ ಸಂಕ್ಷಿಪ್ತ ವ್ಯಾಖ್ಯಾನ, ಇಂದು ಅಲಭ್ಯವಾಗಿರುವ ಅಪರೂಪದ ಗ್ರಂಥವಾದ ಡಿ. ಎಲ್. ನರಸಿಂಹಾಚಾರ್ ಅವರು ಸಂಪಾದಿಸಿದ ಗೋವಿನ ಕಥೆಯ ಪದ್ಯಗಳು ಮತ್ತು  ಪ್ರೊ. ಟಿ. ಕೇಶವಭಟ್ಟರು ಸಂಪಾದಿಸಿದ ಕೃತಿ ಆದರಿಸಿ 'ಗೋವಿನ  ಕಥೆ' ಕುರಿತಾದ ವ್ಯಾಖ್ಯಾನಗಳು ಕನ್ನಡಿಗರಿಗೆ ನನ್ನ ಫೆಸ್ಬುಕ್ ಗೋಡೆ ಮತ್ತು ನನ್ನ ಕನ್ನಡ ಸಂಪದದ ಗೋಡೆ ಮೇಲೆ ಲಭ್ಯವಾಗಿದ್ದೇ ಇವರಿಂದ. ಇವಿಷ್ಟೇ ಅಲ್ಲದೆ ಅನೇಕ ವ್ಯಕ್ತಿ ಚಿತ್ರಣಗಳು, ಕಾವ್ಯಗಳಿಗೆ ಸುಬ್ಬುಲಕ್ಷ್ಮಿ ಅವರು ನನಗೆ ನೀಡಿರುವ ಸಹಕಾರ ಮತ್ತು ಬೆಂಬಲ ಅಪಾರವಾದದ್ದು.

ಆತ್ಮೀಯರೂ, ಅನುಪಮ ಕನ್ನಡ ಸಾಹಿತ್ಯಾರಾಧಕರೂ, ಅಸಾಮಾನ್ಯ ಪ್ರತಿಭಾವಂತರೂ ಆದ ಸುಬ್ಬುಲಕ್ಷ್ಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Lrphks Kolar 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ