ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕ್ಷಮೆ


ಕ್ಷಮೆ

Forgiveness : On Global Forgiveness Day 


ಕ್ಷಮೆ ಅಂದರೇನು?  ನಾನು ಮತ್ತೊಬ್ಬರನ್ನು ಕ್ಷಮಿಸಿದ್ದೀನಿ ಅನ್ನೋ ಭಾವವೇ ಅಹಂಕಾರ ಜನ್ಯವಾದದ್ದು. "ಹೋಗು ಬಿಟ್ಟಿದ್ದೀನಿ, ಎಲ್ಲಾದರೂ ಬದುಕಿಕೊ" ಎಂಬ ಕಥೆ, ಸಿನಿಮಾಗಳಲ್ಲಿನ ಮಾತೇ ಮತ್ತೊಬ್ಬನಿಗೆ ಆಂತರ್ಯದಲ್ಲಿ ಅವಮಾನ‍ದ‍ ಅನುಭವ ಹುಟ್ಟಿಸುತ್ತೇನೊ!

ಪ್ರತಿ ನಿತ್ಯ ಯಾರಿಂದಲೋ ಬೇಸರ ಆಗುತ್ತೆ.  ನಾವೂ ಮತ್ತೊಬ್ಬರ ಬೇಸರಕ್ಕೆ ಕಾರಣ ಆಗಿರುತ್ತೇವೆ.  “ನಮ್ಮ ಬೇಸರಕ್ಕೆ ಮತ್ತೊಬ್ಬರು ಕಾರಣ ಎಂಬ ಭಾವವೇ ನಮ್ಮಲ್ಲಿ ಬರದಂತೆ ಅರಿವು ಮೂಡಿಸಿಕೊಳ್ಳುವುದು” ಕ್ಷಮೆಯ ಮೂಲತತ್ವ ಆಗಬೇಕೇನೊ!

ನಾವು ಯಾವುದೋ ಕಾರಣಕ್ಕೆ ಕಿತ್ತಾಡಿ ಕೈಕುಲುಕಿ ಮಾಡಿಕೊಳ್ಳುವ compromise ಅನ್ನೋದು ಪೂರ್ತಿ ಕ್ಷಮೆಯ ಆಳವನ್ನು ಸ್ಫುರಿಸುವುದಿಲ್ಲ.    ಆ ವಿಚಾರವನ್ನು ಎರಡೂ ಪಕ್ಷದವರೂ  ಮತ್ತೊಬ್ಬರ ಬಳಿ ಹೋಗಿ, "ಹೀಗೆ, ಹೀಗೆ,  ಆಯ್ತು ಹೋಕ್ಕೊಳ್ಳಿ ಅಂತ ಬಿಟ್ಟು ಬಿಟ್ಟೆ" ಎಂದು ಹೇಳಿಕೊಳ್ಳುತ್ತಾ  ಕಾಡಿನ ಬೆಂಕಿಯಂತಾ ವಿಸ್ತಾರ ಪಡೆಯುತ್ತಲೇ ಇರುತ್ತೆ.

ಕ್ಷಮೆಯ ಮೂಲ ತತ್ವಗಳು ಇಲ್ಲಿರಬಹುದೇನೋ:


1. ನಾನೂ ತಪ್ಪು ಮಾಡುವ ಸಾಧ್ಯತೆ ಇದೆ ಎಂಬ ಅರಿವು

2. ಒಂದು ಭಿನ್ನಾಭಿಪ್ರಾಯ ಬಂದಾಗ, ನಾವು ಚರ್ಚೆಯಲ್ಲಿ ಗೆಲುವು ಸಾಧಿಸುವುದರತ್ತ ಗಮನ ಹರಿಸದಿರುವುದು

3. ವಾದಗಳಲ್ಲಿ ಜಯದ ಅಪೇಕ್ಷೆ ಹೊಂದದಿರುವಾಗ ನಮ್ಮಲ್ಲಿ ಅಹಂ ಬದಲು ಮತ್ತೊಬ್ಬನನ್ನು ಕೇಳಿಸಿಕೊಳ್ಳುವ ಸೌಜನ್ಯ ನಿರ್ಮಾಣ ಆಗುತ್ತೆ

4. ಅಲ್ಲಿ ಸಮಾನ ಭಾವವಿರುತ್ತೆ, ಆಪ್ತತೆ ಹೆಚ್ಚಾಗುತ್ತೆ

 

ಒಮ್ಮೆ ಒಬ್ಬರ ಬಳಿ ಅಪ್ತ ಮಾತುಕತೆ ಸಂದರ್ಭದಲ್ಲಿ, ತಮಾಷೆ-ಆಪ್ತತೆಯ ಸೂಕ್ಷ್ಮತೆಗಳು ಸಡಿಲಾದ ಒಂದು ಕ್ಷಣ ಆ ವ್ಯಕ್ತಿಯಲ್ಲಿ ನನ್ನ ಕುರಿತು ಅಸಮಾಧಾನ ಹುಟ್ಟಿಸಿತು ಎಂದು ಅರಿವಿಗೆ ಬರಲಿಕ್ಕೆ ನನಗೆ ತಡವಾಗಲಿಲ್ಲ. ನಾನು ಅವರಿಗೆ ಹೃದಯಾಂತರಾಳದಿಂದ ಅಗತ್ಯವಾದ ಬೆಂಬಲ ನೀಡಿದ್ದೆ,  ಆದರೂ ಹೀಗೆ ಆಯ್ತಲ್ಲ ಎಂಬ ಹಲವು ಸಮ್ಮಿಶ್ರ ಭಾವಗಳು ಎದುರಾದವು. 

ನಮಗೆ ನೋವು ಎಂಬುದಾದಾಗ ನಿನ್ನೆ ಜೊತೆಯಾಗಿ ಸಿಹಿ ತಿಂದಿದ್ದೆವು ಎಂದು ನೆನಪಿರುತ್ತದೆ ಎನ್ನಲಿಕ್ಕಾಗುವುದಿಲ್ಲ.  ಹೀಗಾಗಿ ನಾವು ಕೊಟ್ಟ ಮತ್ತೊಂದು ಬೆಂಬಲ, ನಾವು  ಅವರ ಮನಸ್ಸಿನ ಮೇಲೆ ಹಾಕಿದ ಗೀರಿಗೆ ಸಮಜಾಯಿಷಿ ಆಗಬಾರದು.  ನನ್ನಿಂದ ಆದ  ಗೀರಿನ ದೆಸೆಯಿಂದ ಅವರಿಗೆ ನಮ್ಮಲ್ಲಿ ಮೊದಲಿನ ಆಪ್ತತೆ ಹಿಂದಿರುಗದಿದ್ದರೂ ಅಚ್ಚರಿಯಿಲ್ಲ.  'ಇದೇನು ಮಹಾ ನಾ ಮಾಡಿದ ತಪ್ಪು?' ಎಂದುಕೊಳ್ಳುವುದೇ ನನ್ನ ಅಹಂಕಾರ.  ಅವರು ನನ್ನ ಸ್ನೇಹಕ್ಕೆ ಹಿಂದಿರುಗದಿದ್ದರೂ, ಅವರೂ ಮನುಷ್ಯರು ಎಂಬ ಅರಿವು ನನ್ನಲ್ಲಿರುವುದು ಮುಖ್ಯ.  ಹೀಗಿದ್ದಾಗ ಮಾತ್ರಾ ಸಂಬಂಧಗಳ ಎಳೆಗಳ ಕುರಿತು ನನ್ನ ಅಂತರಂಗದಲ್ಲಿ ಒಂದು ಸ್ವಚ್ಛತೆ ಮೂಡೀತೇನೊ! ಆ ಸ್ವಚ್ಛತೆಯ ಆಳದೊಳಗೆ ನೆಲೆಸಿರುವುದು ಸಾಧ್ಯವಾದರೆ ಮಾತ್ರಾ  ಕ್ಷಮೆ ಎಂಬ ಅಂತಃಕರಣದ ಕಿಂಚಿತ್ ಅನುಭವವಾದರೂ  ಅಂತರಂಗದಲ್ಲಿ ಮೂಡಬಹುದೇನೊ.

ಒಂದು ಮಾತುಕತೆಯಲ್ಲಿ ಒಂದು ಅಭಿವ್ಯಕ್ತಿ  ನನ್ನಿಂದ ಮೂಡುವಲ್ಲಿ ಮತ್ತು ಇನ್ನೊಂದೆಡೆ ಅದು ಸ್ವೀಕೃತವಾಗುವಲ್ಲಿ ವೈಪರೀತ್ಯತೆ ಮೂಡಿ, ಮತ್ತೊಬ್ಬರು ನೀನು ಎಲ್ಲೆಡೆಯೂ ಹೀಗೇ ಎಂದಾಗ ಅಲುಗಾಡಿ ಹೋದೆ. ಅಹಂ ಚುಚ್ಚಲಿಲ್ಲ ಎನ್ನಲಾರೆ, ಹಲವು ಮಾನುಷೀಯ ಸಹಜ ಕೀಳರಿಮೆಗಳು ಚಿಗುರಿರಲಿಲ್ಲ ಎನ್ನಲಾರೆ.  ಆದರೆ ಅಂತಃಮಥನದಲ್ಲಿ ಈ ವ್ಯಕ್ತಿಯೇನೋ ಹೇಳಿದರು, ಹಾಗೆ ಹೇಳದೆ ಮನಸ್ಸಲ್ಲಿ ಉಳಿಸಿಕೊಂಡಿರುವವರು ಎಷ್ಟು ಜನವೊ ಎನಿಸಿದಾಗ, ಆ ವ್ಯಕ್ತಿ ನೀಡಿದ್ದು ನಿಜವಾದ ಬೆಳಕು ಅನಿಸಿತು. ಒಬ್ಬರು ಹೇಳುವುದು ಕಟುವಾಗಿದ್ದಾಗ ಅದರಲ್ಲಿ ಏನೋ ಮಹತ್ವದ್ದಿರಬಹುದು.  ಅವರು ಹಾಗೆಲ್ಲಾ ಹೇಳಿದರು; ಆದರೂ ಕ್ಷಮೆ ಹೊಂದಿದ್ದೇ ಎಂಬುದೇ ಹುಂಬತನ.  ಇಲ್ಲಿ ಕ್ಷಮೆ ಎಂಬ ಪದವೆಲ್ಲಿಯದು, ಯಾವುದೋ ಒಂದು ಮೂಲದ ಮೂಲಕ, ನಮಗೆ ಬೆಳಕು ಸಂದ ಕೃಪೆಯ ಕುರಿತು ನಮಗೆ ಇರಬೇಕಾದದ್ದು ನಮನಭಾವ.

ಕೆಲವೊಂದು ವ್ಯಕ್ತಿಗಳು ನನ್ನ ಬಳಿ ಮಾತನಾಡಲು ಎದುರು ಬಂದೊಡನೆಯೇ, ಅವರಿಂದ ಕಿರಿ ಕಿರಿ ಖಂಡಿತ ಎಂದೆನಿಸಿಬಿಡುತ್ತೆ.  ಅವರು ಮಾತನಾಡುವ ರೀತಿಯೇ, ನನ್ನನ್ನು ಪ್ರಶ್ನಿಸುತ್ತಿದೆ, ನನ್ನ ಅವಮಾನಿಸುತ್ತಿದೆ, ಅವರು ಅನಪೇಕ್ಷಿತ ರೀತಿಯಲ್ಲಿ ನನ್ನ ಮೇಲೆ ಅಧಿಕಾರ ಚಲಾಯಿಸಲು ತೊಡಗಿದ್ದಾರೆ, ಅವರ ಗುಣವೇ ಹೀಗೆ ಅಹಂಯುಕ್ತ, ಅವರು ಯಾವುದೋ ತಮ್ಮ ಸ್ವಂತ ಜೀತಕ್ಕೆ ಹೊಂದಿರುವ ವ್ಯಕ್ತಿಯಂತೆ ನನ್ನ ಕೀಳಾಗಿ ಮಾತಾಡಿಸುತ್ತಾರೆ ಎಂಬ ಅನಿಸಿಕೆ ನನ್ನ ಅಪಾರವಾಗಿ ಕಾಡುವುದಿದೆ. ಇಂತಹ ಮನೋಭಾವನೆ ಮೂಡುವಾಗ 'ಕ್ಷಮೆ' ನನ್ನಲ್ಲಿ ಮೂಡುವುದಾದರೂ ಹೇಗೆ? ಇಂಥ ಸನ್ನಿವೇಶ ನಡೆದು ನನಗೆ ಬೇಡದ ಯುದ್ಧ ಕೆಲವು ದಿನಗಳ ಹಿಂದೆ ನನ್ನ ವೃತ್ತಿ ಜೀವನದಲ್ಲಿ ಎದುರಾಯಿತು. ಅದು ಎಷ್ಟು ವ್ಯಾಪ್ತಿ ಪಡೆದುಕೊಂಡಿತೆಂದರೆ ಅದರಿಂದ ಮತ್ತಷ್ಟು ಯುದ್ಧಗಳು ಆ ವ್ಯಕ್ತಿಯೊಡನೆ ಮತ್ತು ಆ ವ್ಯಕ್ತಿಯ ಉನ್ನತ ಅಧಿಕಾರಿಗಳೊಡನೆ ಹಾಗೂ ಸಂಸ್ಥೆಯ ಆಡಳಿತ ವರ್ಗದೊಡನೆಯೂ ವಾಗ್ವಾದ ನಡೆಯುವ ಸಾಧ್ಯತೆಗಳು ಮತ್ತು ಅದಕ್ಕೆ ನನ್ನ ಪ್ರತಿಕ್ರಿಯಾತ್ಮಕ ಮಾನಸಿಕ ನಿಲುವುಗಳು ನನ್ನೊಳಗೆ ಬೇಯಲಾರಂಭಿಸಿ ನಾನು ಮಾನಸಿಕ ಅಸ್ವಸ್ಥತೆಯ ಮೇರುತುದಿಯಲ್ಲಿರುವುದು ನನ್ನ ಅನುಭವಕ್ಕೆ ನಿಚ್ಚಳವಾಗಿ ಗೋಚರಿಸುತ್ತಿತ್ತು.  

ಈ ಸಂದರ್ಭದಲ್ಲಿ ನನ್ನಲ್ಲಿ ಸಮತ್ವವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಗಮನ ಹರಿಸಿದೆ.   ನನ್ನೊಳಗೆ ನಡೆಯುತ್ತಿದ್ದ ಅಂತಃಯುದ್ಧವನ್ನೆಲ್ಲ ಬರಹದಲ್ಲಿ ಕಕ್ಕಿಕೊಂಡೆ. ಎಲ್ಲೋ ಒಂದೆಡೆ ಇರುವ ಸ್ವಯಂ ಮಿತಿಗಳು, ಕೀಳರಿಮೆಗಳು ಮತ್ತು ಭಯಗಳು ಇಂತಹ ಅಂತಃಯುದ್ಧಕ್ಕೆ ಕಾರಣವಾಗುತ್ತವೆ ಎಂಬುದು ಸ್ಪಷ್ಟವಾಗತೊಡಗಿತು.  ಇತರರು ಅವರದೇ ಸ್ವಯಂ ಹಿನ್ನೆಲೆಯಲ್ಲಿ ನಮ್ಮ ಮೇಲೆ ಮುಗಿಬೀಳುವುದು ಅವರ ವೈಯಕ್ತಿಕ ಸಂಸ್ಕೃತಿಗಳ ಪರಿಧಿಯದಾಗಿದ್ದು ಅದನ್ನು ನಿಯಂತ್ರಿಸುವುದು ನಮ್ಮ ಸಾಮರ್ಥ್ಯಕ್ಕೆ ಸಿಲುಕುವಂತದ್ದಲ್ಲ.  ಮತ್ತೊಬ್ಬರು ನನ್ನ ಎದುರು ವಾಗ್ವಾದಕ್ಕೆ ತೊಡಗಿದಾಗ "ನನ್ನ ಮಿತಿಗೆ ಸಾಧ್ಯವಾಗುವುದು ಇಷ್ಟು.  ನಾನು ಸಧ್ಯಕ್ಕೆ ಒಂದು ಸಭೆಗೆ ಅಣಿಯಾಗಬೇಕಿರುವುದರಿಂದ ಅದರ ಕುರಿತು ತಾವು ಸ್ವಲ್ಪ ಕಾಲದ ನಂತರ ಕರೆ ಮಾಡಿ.  ಈ ಕುರಿತು ತಮಗೆ ಇನ್ನೂ ಹೆಚ್ಚಿನ ಅಭಿಪ್ರಾಯವಿದ್ದರೆ ಅದನ್ನು ಕಳಿಸಿಕೊಡಿ ಮೇಲಿನವರ ಪರಾಮರ್ಶೆಗೆ ಕಳಿಸಿಕೊಡುತ್ತೇನೆ. ಅವರು ಇದಕ್ಕೆ ಸೂಕ್ತ ಪರಿಹಾರ ಸೂಚಿಸಲಿ" ಎಂದು ಮಾತು ಮುಕ್ತಾಯಗೊಳಿಸುವುದು.  ಅಧಿಕಾರ ವರ್ಗ ತೆಗೆದುಕೊಳ್ಳುವ ಪರ್ಯಾಯ ವ್ಯವಸ್ಥೆ ನನಗೆ ಬದಲಿಯಾಗುವಂತಿದ್ದರೂ ಅದರ ಕುರಿತು ನಾನು ಭಯ ಹೊಂದುವುದು ಅನಪೇಕ್ಷಿತ ಅನಿಸಿತು.  ಹೀಗೆ ಅನಿಸಿದಾಗ ನನ್ನ ಅಂತಃಯುದ್ಧಗಳು ತಾನೇ ತಾನಾಗಿ ನಿಂತವು ಅನಿಸಿತು. ಈ ಒಂದು ಅನುಭವದಲ್ಲಿ ಹೇಳುವುದಾದರೆ ಕ್ಷಮೆ ಎಂಬುವುದು ನಾವು ಇತರರಿಗೆ ತೋರುವ ಉದಾರ ಭಾವಕ್ಕಿಂತ ಮೀರಿ, ನಮ್ಮ ಮುಂದೆ ಮೂಡಬಹುದಾದ ವೈರುಧ್ಯ ಪರಿಸ್ಥಿತಿಗಳನ್ನು ನಿರ್ವಹಿಸುವ ಶಕ್ತಿಯನ್ನು, ಆಂತರಿಕ ಸಮತ್ವ ಭಾವದಲ್ಲಿ ನಮ್ಮೊಳಗೆ ನಾವೇ ಹೇಗೆ ನಿರ್ಮಿಸಿಕೊಳ್ಳುತ್ತೇವೆ ಎಂಬುದು ಮುಖ್ಯ ಅನಿಸುತ್ತದೆ.

ಇನ್ನೂ ಒಂದು ವಿಚಾರ ಕೂಡ ಎದುರಾಯ್ತು.  ಅಯೋಗ್ಯ ವ್ಯಕ್ತಿಯೊಡನೆ ಹಿಂಸಾತ್ಮಕ ಸನ್ನಿವೇಶದಲ್ಲಿ 'ಕ್ಷಮೆ' ಎಂಬ ಪದ ಎಷ್ಟು ಸರಿ. ನಮ್ಮ ಅಂತಃಸಾಕ್ಷಿ ಇಲ್ಲಿ ಮುಖ್ಯವೇನೋ. ನಮ್ಮ ಅಂತಃಸಾಕ್ಷಿಯಲ್ಲಿ ನಾವು ತೆಗೆದುಕೊಳ್ಳುವ ನಿಲುವು ಸರಿಯಾಗಿದ್ದು, ಸಹಬಾಳ್ವೆ ಸಾಧ್ಯವಿಲ್ಲ ಎನಿಸಿದಾಗ ವಿದಾಯ ಹೇಳಿ ಮನಸ್ಸಿನಲ್ಲಿ ಕಹಿ ಕಳೆದುಕೊಂಡು ಬದುಕುವುದು ಕೂಡಾ ಕ್ಷಮೆಯ ಒಂದು ಮಾರ್ಗ ಆಗಬಾರದು ಎಂದೇನೂ ಇಲ್ಲ. 

ಮನಃಶಾಂತಿ ಮತ್ತು ಆತ್ಮಸಂತೋಷ ಬದುಕಿನ ಸೂತ್ರವಾಗುವ ಹಾದಿಯಲ್ಲೇ ಕ್ಷಮೆ ಎಂಬ ತತ್ವವನ್ನೂ  ಕಂಡುಕೊಳ್ಳಬೇಕು. 




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ