ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧರ್ಮೇಂದ್ರ ಕುಮಾರ್

 

ಎ. ಎಸ್. ಧರ್ಮೇಂದ್ರ ಕುಮಾರ್

ಅರೇನಹಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಅವರು ವಿಡಿಯೋಗಳಲ್ಲಿ  ಸೋಷಿಯಲ್ ಮೀಡಿಯಾಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಮತ್ತು ವೇದಿಕೆಗಳಲ್ಲಿ ಕನ್ನಡ ನಾಡಿನ ಚರಿತ್ರೆಯನ್ನು ಸುಲಲಿತ ಕನ್ನಡದಲ್ಲಿ ಆಪ್ತವಾಗಿ ಜನರ ಮನಸ್ಸಿನೊಳಕ್ಕೆ ತಲುಪಿಸುತ್ತಿರುವಂತಹ ಕರ್ಮಯೋಗಿ.

ಮೈಸೂರಿನವರಾದ ನಮ್ಮ ಹೀರೋ ಎ.ಎಸ್. ಧರ್ಮೇಂದ್ರ ಕುಮಾರ್ ಅವರು ಜನಿಸಿದ್ದು 1968ರ ಆಗಸ್ಟ್ 11ರಂದು.  ಅವರದ್ದು ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಸಾಧನೆ.  ಸಿವಿಲ್ ಇಂಜಿನಿಯರ್ ಆಗಿ ಅವರು ಮಧ್ಯಪ್ರಾಚ್ಯ ದೇಶಗಳಲ್ಲಿ ಎರಡು ದಶಕಗಳ ಕಾಲ ಇದ್ದು ಬಂದರೂ ಅವರ ಕನ್ನಡ ಮತ್ತು ಕನ್ನಡ ನಾಡಿನ ಚರಿತ್ರೆಯ ಪ್ರೀತಿ ಕಿಂಚಿತ್ತೂ ಕದಲಿಲ್ಲ. 

ಧರ್ಮೇಂದ್ರ ಕುಮಾರ್ ತಮ್ಮ ಅಜ್ಜಿಯಿಂದ ಮೈಸೂರಿನ ರಾಜ-ರಾಣಿಯರ ಕಥೆಗಳನ್ನು ಕೇಳುತ್ತಾ ಬೆಳೆದರು. ಇದು ಇವರಿಗೆ ಆ ಕಾಲದ ಜೀವನದ ಬಗ್ಗೆ ಆಳವಾಗಿ ಒಳಹೊಕ್ಕಲು ಆಸಕ್ತಿಯನ್ನು ಹುಟ್ಟುಹಾಕಿತು. ಅವರು ತಮ್ಮ ಮೊದಲ ಪುಸ್ತಕವನ್ನು "ಮರೆತು ಹೋದ ಮೈಸೂರಿನ ಪುಟಗಳು" ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. 

ಧರ್ಮೇಂದ್ರ ಕುಮಾರ್ ಅವರು ಇತಿಹಾಸದ ಕುರಿತಾಗಿ ಮೂಡಿಸಿರುವ ವಿಡಿಯೋಗಳು ಯೂ ಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಮತ್ತು ಇತರ ಸಮೂಹ ಮಾಧ್ಯಮಗಳಲ್ಲಿ ಅಪಾರ ಜನರಿಗೆ ತಲುಪುತ್ತಿವೆ.  ಅವರ ನಿರೂಪಣಾ ಶೈಲಿ, ಶುದ್ಧ ಕನ್ನಡ, ನಲಿವಿನ ಸ್ನೇಹಯುಕ್ತ ನಗೆಮೊಗ ಜನರಿಗೆ ಅಚ್ಚುಮೆಚ್ಚು.

ಧರ್ಮೇಂದ್ರ ಕುಮಾರ್ ಶ್ರೀರಂಗಪಟ್ಟಣದ ಸರ್ಕಾರಿ ಶಾಲಾ ಕಾಲೇಜು ಶಿಕ್ಷಕರಿಗೆ ಮೈಸೂರು ರಾಜ್ಯ ಇತಿಹಾಸದ ಕುರಿತು ಕಾರ್ಯಾಗಾರಗಳನ್ನು ನಡೆಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಅವರ ಫೇಸ್‌ಬುಕ್ ಪುಟ 'ಮೈಸೂರಿನ ಕಥೆಗಳು' ಅಪಾರವಾಗಿ ಜನರನ್ನು ಆಕರ್ಷಿಸುತ್ತಿರುವ ರಮ್ಯತಾಣ. ನಾಡಿನಾದ್ಯಂತ ಸರ್ಕಾರಿ ಶಾಲಾಕಾಲೇಜುಗಳಲ್ಲಿ ಮಕ್ಕಳಿಗಾಗಿ ಚರಿತ್ರೆಯ ಕುರಿತು ಆಸಕ್ತಿ ಹುಟ್ಟಿಸುವ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದಾರೆ.  ಗೋಕರ್ಣದಲ್ಲಿ ಶ್ರೀ ರಾಘವೇಶ ಭಾರತಿ ಸ್ವಾಮೀಜಿಗಳು ನಡೆಸುತ್ತಿರುವ ವೇದಪಾಠಶಾಲೆಯಲ್ಲೂ ಇವರ ಇತಿಹಾಸ ತಿಳುವಳಿಕಾ ಕಾರ್ಯಾಗಾರಗಳು ನಡೆಯುತ್ತಿವೆ.

ಧರ್ಮೇಂದ್ರ ಕುಮಾರ್ ಹಳೆಯ ಮೈಸೂರು ಸಂಸ್ಥಾನದ ಭಾಗವಾಗಿದ್ದ ವಿವಿಧ ಸ್ಥಳಗಳ ಆಸಕ್ತಿದಾಯಕ ಸಂಗತಿಗಳ ಕುರಿತು ವೀಡಿಯೊಗಳನ್ನು ಜನರೊಂದಿಗೆ ತೆರೆದಿಟ್ಟಿದ್ದಾರೆ.  ಮಾಹಿತಿಯುಕ್ತ ಲೇಖನಗಳನ್ನು ಬರೆದಿದ್ದಾರೆ. ಉಪನ್ಯಾಸಗಳನ್ನು ನೀಡುತ್ತ ಬಂದಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಅವರು ಪ್ರಧಾನ ಉಪನ್ಯಾಸಕರಲ್ಲೊಬ್ಬರಾಗಿದ್ದರು. 'ದಿಗ್ವಿಜಯ ನ್ಯೂಸ್' ಕನ್ನಡ ವಾಹಿನಿಯಲ್ಲಿ ಮೈಸೂರು ಇತಿಹಾಸದ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಧರ್ಮೇಂದ್ರ ಕುಮಾರ್ "ಇತಿಹಾಸ ಗೊತ್ತಿಲ್ಲದವನು ಇತಿಹಾಸವನ್ನು ಸೃಷ್ಟಿಸಲಾರ" ಎನ್ನುವ ಮಾತನ್ನು ಅಕ್ಷರಶ: ಬದುಕಾಗಿಸಿಕೊಂಡವರು. ಇತಿಹಾಸವನ್ನು ಪ್ರವೃತ್ತಿಯಾಗಿಸಿಕೊಂಡಿರುವ ಇವರಿಗೆ ಇತಿಹಾಸ ಎಂದರೆ ಬರಿ ಮಹಾಯುದ್ಧಗಳ ಕತೆಯಲ್ಲ.  ಪಠ್ಯ ಪುಸ್ತಕಗಳಲ್ಲಿರುವ ಘಟನೆಗಳನ್ನು ತಿಳಿದುಕೊಳ್ಳುವುದು ಮಾತ್ರವಲ್ಲ.  ನಮಗೆ ನಮ್ಮ ಊರು, ನಾವು ಹೋಗುವ ಊರಿನ ಕುರಿತು ತಿಳಿದುಕೊಳ್ಳುವ ಆಸಕ್ತಿ ಇರಬೇಕು.  ಅದನ್ನು ಗೌರವಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಕೂಡ ನಮ್ಮದಾಗಬೇಕು ಎಂಬ ಆಳವಾದ ಭಾವವಿದೆ. 

ಧರ್ಮೇಂದ್ರ ಕುಮಾರ್ ಇತಿಹಾಸವನ್ನು ಜನರಿಗೆ ತಲುಪಿಸುವ ರೀತಿಯೇ ಆಪ್ತವಾದದ್ದು. ಒಂದು ರಸ್ತೆ, ಒಂದು ಕಟ್ಟಡ ಯಾವುದೋ ಒಂದು ಚಿಕ್ಕ ಹಳ್ಳಿ ಅವುಗಳ ಹಿಂದೆ ಇರುವ ಇತಿಹಾಸವನ್ನು ಅವರು ತಿಳಿಸುವ ಪರಿಗೆ ಇತಿಹಾಸದಲ್ಲಿ ಆಸಕ್ತಿ ಇರದವರೂ, ಇತಿಹಾಸವನ್ನು ಪ್ರೀತಿಸಲು ಆರಂಭಿಸುತ್ತಾರೆ. ರಾಜ ಮಹಾರಾಜರ ಬಗೆಗಲ್ಲದೆ, ನಾವು ಹುಟ್ಟಿ ಬೆಳೆದ ಪ್ರದೇಶ, ನಾವು ವಾಸಿಸುತ್ತಿರುವ ಊರು, ಹಳ್ಳಿ, ಓಡಾಡುವ ರಸ್ತೆ ಇಂತಹ ವಿಷಯಗಳನ್ನು ಆಯ್ದುಕೊಳ್ಳುವ ಧರ್ಮೇಂದ್ರ ಕುಮಾರ್, "ಇಷ್ಟೊಂದು ಇತಿಹಾಸ ಇಲ್ಲಿದೆಯೇ, ನಮಗೆ ಗೊತ್ತೇ ಇಲ್ಲವಲ್ಲ!" ಅನ್ನಿಸುವಂತೆ ಮಾಡುತ್ತಾರೆ.

ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಇತಿಹಾಸಕಾರ, ಸಂಶೋಧಕ, ಲೇಖಕರಾದ ಧರ್ಮೇಂದ್ರ ಕುಮಾರ್ 'ಸವಿನೆನಪೇ ಮನದಲ್ಲಿ ಆರಾಧನೆ' (ಅನುಭವ ಕಥನಗಳು) ಮತ್ತು 'ಮರೆತು ಹೋದ ಮೈಸೂರಿನ ಪುಟಗಳು' (ಮೈಸೂರು ಇತಿಹಾಸ ಕುರಿತ ಲೇಖನಗಳು) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಸುಶ್ರಾವ್ಯವಾಗಿ ನಲಿ ನಲಿಯುತ್ತಾ ಹಾಡುತ್ತಾರೆ.  ಅವರ ನಿಷ್ಕಲ್ಮಶ ಮುಗ್ದ ನಗೆಯಂತೂ ಮನಮೋಹಕ.

ಅಪ್ರತಿಮ ಉತ್ಸಾಹಿ, ಕನ್ನಡದ ನಿಷ್ಠಾವಂತ ಸೇವಕ, ಚರಿತ್ರೆಯ ಮಿತ್ರ, ಚರಿತ್ರೆಯನ್ನು ಮನೆ - ಮನಗಳಿಗೆ ತಲುಪಿಸುತ್ತಿರುವ ಸಹೃದಯಿ, ನಮ್ಮೆಲ್ಲರ ಆಪ್ತಮಿತ್ರ ಅರೇನಹಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Arenalli Shivashankar Dharmendra Kumar Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ