ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

‘ಚೋ’ ರಾಮಸ್ವಾಮಿ


 ‘ಚೋ’ ರಾಮಸ್ವಾಮಿ


'ಚೋ’ ರಾಮಸ್ವಾಮಿ ವಿಶಿಷ್ಟ ಪತ್ರಕರ್ತ, ವಕೀಲ, ನಟ, ನಾಟಕಕಾರ, ವ್ಯಾಖ್ಯಾನಕಾರ, ರಾಜಕೀಯ ಸಂಧಾನಕಾರ- ಸೂತ್ರಧಾರ... ಹೀಗೆ ಬಹುಮುಖಿ ವ್ಯಕ್ತಿ.

‘ಚೋ’ ರಾಮಸ್ವಾಮಿ ಅಯ್ಯರ್ ಅವರು 1934ರ ಅಕ್ಟೋಬರ್ 5ರಂದು ಜನಿಸಿದರು.  ಅವರ ತಾತ ಅರುಣಾಚಲ ಅಯ್ಯರ್ ಮತ್ತು ತಂದೆ ಶ್ರೀನಿವಾಸ ಅಯ್ಯರ್ ಆಗಿನ ಮದ್ರಾಸಿನಲ್ಲಿ ಪ್ರಖ್ಯಾತ ವಕೀಲರಾಗಿದ್ದರು.  ರಾಮಸ್ವಾಮಿ ಅಯ್ಯರ್ ಅವರೂ ವಕೀಲಿಯೊಂದಿಗೆ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕೆಲಕಾಲ ಸುಪ್ರಸಿದ್ಧ ‘ಟಿಟಿಕೆ’ ಕಂಪೆನಿಯ ಸಲಹೆಗಾರರಾಗಿದ್ದರು.  ಹಲವು ರೀತಿಗಳಲ್ಲಿ ಆಸಕ್ತಿ ಹೊಂದಿದ್ದ ಅವರು ರಂಗಭೂಮಿ, ಬೆಳ್ಳಿತೆರೆ ಮತ್ತು ಪತ್ರಿಕೋದ್ಯಮಗಳಲ್ಲಿ ಮಿಂಚಿದರು. ‘ಚೋ’ ಎಂಬುದು ನಾಟಕವೊಂದರ ಪಾತ್ರ. ಆ ಪಾತ್ರದಲ್ಲಿ ರಾಮಸ್ವಾಮಿಯವರ ಅಮೋಘ ಅಭಿನಯ ಕಂಡು ಬೆರಗಾದ ಅಭಿಮಾನಿಗಳು ಅವರ ಹೆಸರಿಗೆ ‘ಚೋ’ ವಿಶೇಷಣ ಅಂಟಿಸಿದರು. ಹೀಗೆ ಅಂಟಿಕೊಂಡದ್ದು ಇತಿಹಾಸದಲ್ಲಿ ‘ಚೋ’ ರಾಮಸ್ವಾಮಿಯಾಗಿ ಚಿರದಾಖಲೆಯಾಗಿ ಉಳಿಯಿತು.

'ಚೋ' ರಾಮಸ್ವಾಮಿ ಅವರಿಗೆ 1969ರ ಡಿಸೆಂಬರಿನಲ್ಲಿ ತಿರಿಚ್ಚಿನಾಪಳ್ಳಿಯಲ್ಲಿ ‘ತುಘಲಕ್’ ನಾಟಕ ಪ್ರದರ್ಶನ ಮುಗಿಸಿ ಮದ್ರಾಸಿಗೆ ವಾಪಸಾಗುತ್ತಿದ್ದಾಗ,  ಯಾರಿಗೋ ಉದ್ಯೋಗ ಸೃಷ್ಟಿಸುವ ಆಶಯದಲ್ಲಿ, ಅದೇ ಹೆಸರಿನ ಪತ್ರಿಕೆಯೊಂದನ್ನು ಹೊರತರುವ ವಿಚಾರ ಮನಸ್ಸಿನಲ್ಲಿ ಹೊರಹೊಮ್ಮಿತು.  ಹಾಗೆ ಮನಸ್ಸಿಗೆ ಬಂದೊಡನೆಯೇ,  ಓದುಗರ ಮನಸ್ಸನ್ನು ತಿಳಿಯುವ ಸಲುವಾಗಿ, ಇಂಥದೊಂದು ಪತ್ರಿಕೆ ಪ್ರಕಟಿಸುವ ಇರಾದೆ ಇದೆ, ನಿಮಗೆ ಬೇಕೋ ಬೇಡವೋ ತಿಳಿಸಿ ಎಂದು ಜನಾಭಿಪ್ರಾಯ ತಿಳಿಯಲು ಪ್ರಕಟನೆಯಿತ್ತರು. ಐದು ಸಾವಿರಕ್ಕೂ ಹೆಚ್ಚು ಜನರು ಬೇಕೆಂದರು. ಆ ವೇಳೆಗಾಗಲೇ ಅವರು ನಟರಾಗಿ, ನಾಟಕಕಾರರಾಗಿ ತಮಿಳು ರಸಿಕರಿಗೆ ಚಿರಪರಿಚಿತರಾಗಿದ್ದರು. ಹೀಗೆ 1970ರ ಜನವರಿ 14ರಂದು ಪ್ರಥಮ ಸಂಚಿಕೆಯ ಮೂಲಕ ಪ್ರಕಟಣೆ ಆರಂಭಿಸಿದ 'ತುಘಲಕ್’ ಪತ್ರಿಕೆಯ ಮೂಲಕ ಅವರ ಜನಪ್ರಿಯತೆ ಏರಿತು. 'ಚೋ' ರಾಮಸ್ವಾಮಿ ಪತ್ರಿಕೆಯ ಸಂಪಾದಕ, ಲೇಖಕ, ವ್ಯಂಗ್ಯ ಚಿತ್ರಕಾರ, ಮಾರಾಟಗಾರ ಎಲ್ಲವೂ ಆದರು. 

ಚುನಾವಣಾ ಸಮಯದಲ್ಲಿ ಪೆರಿಯಾರ್ ನಾಯಕರು ಸೇಲಂನ ಬೀದಿಯಲ್ಲಿ ದೇವರುಗಳ ನಗ್ನ ಮೂರ್ತಿಗಳ ಮೆರವಣಿಗೆ ಮಾಡಿದ ಸಂದರ್ಭದಲ್ಲಿ,  ವಕೀಲ ಪತ್ರಕರ್ತ ‘ಚೋ’ ದೇವರ ಪರ ವಕಾಲತ್ತು ವಹಿಸಿದರು. ಅಸಭ್ಯವೂ ಅವಹೇಳನಕರವೂ ಆದ ಮೆರವಣಿಗೆಯ ಚಿತ್ರಗಳು, ಪ್ರತ್ಯಕ್ಷದರ್ಶಿಯ ವರದಿಗಳು ‘ತುಘಲಕ್’ ನಲ್ಲಿ ಪ್ರಕಟವಾದವು. ಈ ನಗ್ನ ಸತ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಪ್ರಕಟಿಸಿದ್ದಕ್ಕಾಗಿ ‘ಚೋ’ ಅವರ ಪತ್ರಿಕೆ ಅಂದಿನ ಸರಕಾರದ ಕೋಪಕ್ಕೆ ತುತ್ತಾಯಿತು. ಅವರ ನಾಟಕಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಡಂಬನೆ ಪ್ರಧಾನವಾಗಿರುತ್ತಿದ್ದವು. 'ಸಂಭವಾಮಿ ಯುಗೇಯುಗೇ’ ಎಂಬುದು ಅಂಥದೊಂದು ರಾಜಕೀಯ ವಿಡಂಬನೆ. ಈ ವಿಡಂಬನೆಯ ಮೊನಚನ್ನು ತಡೆಯಲಾಗದೆ ಅಂದಿನ (1960) ಭಕ್ತವತ್ಸಲಂ ನಾಯಕತ್ವದ ಕಾಂಗ್ರೆಸ್ ಸರಕಾರ ಈ ನಾಟಕದ ಮೇಲೆ ಸೆನ್ಸಾರ್ ಅಸ್ತ್ರ ಪ್ರಯೋಗಿಸುವ ಪ್ರಯತ್ನ ನಡೆಸಿತು. ಇದರಿಂದ ‘ಚೋ’ ಅವರ ನಾಟಕಗಳಲ್ಲಿ ಜನರ ಆಸಕ್ತಿ ಇನ್ನಷ್ಟು ಹೆಚ್ಚಿತು. ತುಘಲಕ್ ನಾಟಕದಲ್ಲಿ ಅವರ ಜನಪ್ರಿಯತೆ ಶೃಂಗ ಮುಟ್ಟಿತು. ಮುಂದೆ ‘ಚೋ’ ಇದೇ ನಾಟಕವನ್ನು ಸಿನೆಮಾ ಮಾಡಿದ ಸಮಯದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಅಧಿಕಾರದಲ್ಲಿತ್ತು. ‘ತುಘಲಕ್’ ಚಿತ್ರದ ನಿರ್ಮಾಣ ನಿಲ್ಲಿಸಲು ಡಿಎಂಕೆ ಶತಾಯಗತಾಯ ಪ್ರಯತ್ನಿಸಿತು. ಈ ಅಡೆತಡೆಗಳನ್ನೆಲ್ಲ ಮೀರಿ ಚೋ ‘ತುಘಲಕ್’ ಚಿತ್ರ ತಯಾರಿಸಿದರು.  ಕೇಂದ್ರ ಮತ್ತು ರಾಜ್ಯದಲ್ಲಿನ ಆಳುವ ಪಕ್ಷಗಳ ವಿರುದ್ಧ ಟೀಕೆ-ವಿಡಂಬನೆಗಳನ್ನೊಳಗೊಂಡ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿಯೇ ಸೆನ್ಸಾರ್ ಪ್ರದರ್ಶನಕ್ಕೆ ಅನುಮತಿ ನೀಡಿತು. ಕೆಲವು ಕಡೆಗಳಲ್ಲಿ ಡಿಎಂಕೆ ಕಾರ್ಯಕರ್ತರು ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಪ್ರದರ್ಶನಗೊಂಡ ಚಿತ್ರಮಂದಿರಗಳ ಪರದೆಯನ್ನು ಹರಿದು ಗೂಂಡಾಗಿರಿ ನಡೆಸಿದರು.

‘ತುಘಲಕ್’ ಪತ್ರಿಕೆ ಪ್ರಾರಂಭಿಸುವ ವೇಳೆಗಾಗಲೇ ‘ಚೋ’ ರಂಗಭೂಮಿ ಮತ್ತು ಸಿನೆಮಾ ನಟರಾಗಿ ಜನಮನ ಗೆದ್ದಿದ್ದರು. ಅವರ ಹರಿತವಾದ ಲೇಖನಗಳು ಮತ್ತು ವ್ಯಂಗ್ಯಚಿತ್ರಗಳು ‘ತುಘಲಕ್’ ಪತ್ರಿಕೆಯ ಮುಖ್ಯ ಬಂಡವಾಳವಾಗಿದ್ದವು. ಜನಸಾಮಾನ್ಯರ ದೃಷ್ಟಿಕೋನದಿಂದ ಬರೆಯುತ್ತಿದ್ದುದು ‘ಚೋ’ ಅವರ ಲೇಖನಗಳ ವೈಶಿಷ್ಟ್ಯವಾಗಿತ್ತು. ಹೀಗಾಗಿ ದಮನಿತರು ಹಾಗೂ ಬಡ ಮಧ್ಯಮವರ್ಗದ ಜನರು ‘ತುಘಲಕ್’ನಲ್ಲಿ ತಮ್ಮ ದನಿಗಳನ್ನು ಗುರುತಿಸಿಕೊಂಡರು. ಇದು ‘ಚೋ’ ಅವರ ಪತ್ರಿಕೆ ಗಳಿಸಿದ ಜನಪ್ರಿಯತೆಯ ಗುಟ್ಟು.  ಹೀಗೆ ಶ್ರೀಸಾಮಾನ್ಯರ ದನಿಯಾದ ಪತ್ರಿಕೆ ರಾಜಕಾರಣಿಗಳಿಗೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಗ್ಗುಲುಮುಳ್ಳಾಯಿತು. ದೊಡ್ಡ ಸವಾಲಾಗಿ ಪರಿಣಮಿಸಿತು. ಆದರೆ ಏನೂ ಮಾಡಲಾಗದೆ ಚಡಪಡಿಸಿದರು.

‘ತುಘಲಕ್’ ಕೂರಂಬು ವಿಡಂಬನೆಗಳ ಮಧ್ಯೆಯೂ ರಾಜಕಾರಣಿಗಳು ಮತ್ತು ‘ಚೋ’ ರಾಮಸ್ವಾಮಿಯವರ ನಡುವೆ ಒಂದು ಬಗೆಯ ವಿಚಿತ್ರ ನಂಟಿತ್ತು. ಕೆಲವೊಮ್ಮೆ ರಾಜಕಾರಣಿಗಳು ಸಲಹೆ ಸೂಚನೆಗಳಿಗಾಗಿ ‘ಚೋ’ ಜೊತೆ ಸಮಾಲೋಚಿಸುತ್ತಿದ್ದುದುಂಟು. ‘ಚೋ’ ಅನೇಕ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಎರಡು ಬಣಗಳ ನಡುವೆ ಸೂತ್ರಧಾರನ ಕಾರ್ಯನಿರ್ವಹಿಸಿದ್ದುದೂ ಉಂಟು. ‘ಚೋ’ ಕಾಮರಾಜರಿಗೆ ನಿಕಟರಾಗಿದ್ದರು. 1971ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದರು. ಪ್ರಚಾರ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆದರೂ ಕಾಮರಾಜರು ಸೋತರು. ‘ತುಘಲಕ್’ನಲ್ಲಿ ಸ್ವನಿಂದನೀಯ ಸಂಪಾದಕೀಯ ಬರೆದು ‘ಚೋ’ ಪ್ರಾಯಶ್ಚಿತ್ತ ಮಾಡಿಕೊಂಡರು.

1983ರಲ್ಲಿ ಜನತಾ ಪಕ್ಷದ ಮೂಲಕ ವಿಧ್ಯುಕ್ತವಾಗಿ ರಾಜಕೀಯ ಪ್ರವೇಶಿಸಿದ ರಾಮಸ್ವಾಮಿ ಮೊರಾರ್ಜಿ ದೇಸಾಯಿ, ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಎಲ್.ಕೆ. ಅಡ್ವಾಣಿ, ಜಯಪ್ರಕಾಶ್ ನಾರಾಯಣ್ ಇವರೆಲ್ಲರ ಸಖ್ಯವನ್ನೂ ಬೆಳೆಸಿಕೊಂಡಿದ್ದರು. ಹದಿನೆಂಟು ತಿಂಗಳ ನಂತರ ಆ ಪಕ್ಷ ತೊರೆದರು. ಮತ್ತೆ ಅವರು ವಿಧ್ಯುಕ್ತವಾಗಿ ಯಾವುದೇ ರಾಜಕೀಯ ಪಕ್ಷ ಸೇರಲಿಲ್ಲವಾದರೂ ರಾಜಕಾರಣಿಗಳೊಂದಿಗಿನ ಅವರ ಸ್ನೇಹಸೌಹಾರ್ದಗಳು ಮುಂದುವರಿದಿದ್ದವು.

1984ರಲ್ಲಿ ಆಗಿನ ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಎನ್.ಟಿ. ರಾಮ ರಾವ್ ಅವರನ್ನು ಕೇಂದ್ರ ಸರಕಾರ ವಜಾಮಾಡಿದಾಗ ‘ಚೋ’ ದಿಲ್ಲಿಗೆ ಧಾವಿಸಿ ಅವರ ಪರ ವಕಾಲತ್ತು ವಹಿಸಿದರು. ರಾಮರಾಯರನ್ನು ಮತ್ತೆ ಮುಖ್ಯ ಮಂತ್ರಿ ಗದ್ದುಗೆಗೆ ತರುವ ಕಾಂಗ್ರೆಸ್ಸೇತರ ನಾಯಕರ ಜೊತೆ ಸೇರಿಕೊಂಡು ಯಶಸ್ವಿಯಾದರು. 

ಎಂಜಿಆರ್ ನಿಧನಾನಂತರ ಜಯಲಲಿತಾ ಅವರನ್ನು ಬೆಂಬಲಿಸುವ ಬಗ್ಗೆ ‘ಚೋ’ ಅವರ ಸಂಪೂರ್ಣ ಸಮ್ಮತಿ ಇರಲಿಲ್ಲ. ಎಂಜಿಆರ್ ಸ್ಥಾನಕ್ಕೆ ಬಂದ ಅವರ ಪತ್ನಿ ಜಾನಕಿ ರಾಮಚಂದ್ರನ್ ಅಧಿಕಾರದಲ್ಲಿ ಉಳಿಯಬೇಕೆಂಬುದು ಅವರ ಪ್ರಬಲ ಇಚ್ಛೆಯಾಗಿತ್ತು. ಆದರೆ ರಾಜೀವ್ ಗಾಂಧಿಯವರ ಒಲವು ಜಯಲಲಿತಾ ಕಡೆ ವಾಲಿದ್ದರಿಂದಾಗಿ ಜಾನಕಿಯವರ ಸರಕಾರ 1988ರ ಜನವರಿಯಲ್ಲಿ ಪತನ ಹೊಂದಿತು.
ಜಯಲಲಿತಾ ಮುಖ್ಯ ಮಂತ್ರಿಯಾದಾಗ ‘ಚೋ’ ಅವರ ಕಡು ವಿರೋಧಿಗಳಾಗಿದ್ದರು. ಜಿ.ಕೆ.ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್ ನೂತನ ಪಕ್ಷ ಕಟ್ಟಿದಾಗ, ಎಐಎಡಿಎಂಕೆ ಮತ್ತು ಕೇಂದ್ರದ ಪಿ.ವಿ.ನರಸಿಂಹ ರಾವ್ ಸರಕಾರದ ವಿರುದ್ಧ ಡಿಎಂಕೆ ಮತ್ತು ಹೊಸ ಪಕ್ಷದ ನಡುವೆ ಮೈತ್ರಿ ಬೆಸೆಯುವುದರಲ್ಲಿ ‘ಚೋ’ ಮಹತ್ವದ ಪಾತ್ರವಹಿಸಿದರು.

1998ರ ಲೋಕಸಭೆ ಚುನಾವಣೆಯಲ್ಲಿ ಜಯಲಲಿತಾ ಅವರೊಂದಿಗೆ ಮೈತ್ರಿ ಸಲ್ಲದೆಂದು ಬಿಜೆಪಿಯನ್ನು ಎಚ್ಚರಿಸಿದ್ದರು. ಅವರ ಎಚ್ಚರಿಕೆ ನಿಜವಾಯಿತು. ಚುನಾವಣೆ ನಡೆದ ಒಂದೇ ವರ್ಷದಲ್ಲಿ ಜಯಲಲಿತಾ ವಾಜಪೇಯಿ ಸರಕಾರಕ್ಕೆ ಬೆಂಬಲ ವಾಪಸು ಪಡೆದುಕೊಂಡರು. ಜಯಲಲಿತಾ ಎಂದರೆ ಮುಟ್ಟಿದರೆ ಮುನಿಯಾಗುತ್ತಿದ್ದ ‘ಚೋ’ 2001ರಲ್ಲಿ ಅವರ ಆಪ್ತರಾದರು.  ಕೊನೆಯ ದಿನಗಳವರೆಗೆ ‘ಚೋ’ ಮತ್ತು ಜಯಲಲಿತಾ ನಿಕಟ ಮೈತ್ರಿ ಹೊಂದಿದ್ದರು. 

‘ಚೋ’ ರಾಮಸ್ವಾಮಿಯವರು 1999ರಿಂದ 2005ರವರೆಗೆ ರಾಜ್ಯ ಸಭೆ ಸದಸ್ಯರಾಗಿದ್ದರು. ಬಿಜೆಪಿ ಸರಕಾರ ಅವರನ್ನು ನಾಮಕರಣ ಮಾಡಿತ್ತು. ಅವರು ಪತ್ರಿಕೋದ್ಯಮದಲ್ಲಿನ ‘ಘನ’ಸಾಧನೆಗಾಗಿ ನೀಡುವ ಪ್ರತಿಷ್ಠಿತ ಗೋಯಂಕ ಪ್ರಶಸ್ತಿಗೆ ಪಾತ್ರರಾಗಿದ್ದರು.  2017ರಲ್ಲಿ ಮರಣಾನಂತರ ಪದ್ಮಭೂಷಣ ಪ್ರಶಸ್ತಿ ಸಲ್ಲಿಸಲಾಯಿತು. 

‘ಚೋ’ ರಾಮಸ್ವಾಮಿಯವರು 2016 ಡಿಸೆಂಬರ್ 7ರಂದು ನಿಧನರಾದರು. 

On the birth anniversary of great journalist, dramatist and multifaceted Cho Ramaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ