ವತ್ಸಲಾ ಮೋಹನ್
ವತ್ಸಲಾ ಮೋಹನ್
ಡಾ. ವತ್ಸಲ ಮೋಹನ್ ಜಾನಪದ, ನವ್ಯ ಸಾಹಿತ್ಯ, ರಂಗಭೂಮಿ, ಕಿರುತೆರೆ, ಸಿನಿಮಾ, ಸಾಂಸ್ಕೃತಿಕ ಸಂಘಟನೆ, ಶಿಕ್ಷಣ, ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಯೊಂದು ಆಯಾಮಗಳಲ್ಲೂ, ತಮ್ಮ ಅಚ್ಚಳಿಯದ ಪ್ರತಿಭೆಯನ್ನು ಸಂಸ್ಥಾಪಿಸಿ, ನಿರಂತರವಾದ ಶ್ರದ್ಧೆಯಿಂದ ಅವುಗಳನ್ನು ಪೋಷಿಸಿಕೊಂಡು ಮುನ್ನಡೆದವರು. ಜೊತೆಗೆ ಅವರು ತಾವಿರುವ ಶೈಕ್ಷಣಿಕ ಪರಿಸರ ಮತ್ತು ಸಮುದಾಯದಲ್ಲಿ ಕನ್ನಡದ ಈ ಸಾಂಸ್ಕೃತಿಕ ಆಸಕ್ತಿಗಳನ್ನು ಆಪ್ತವಾಗಿ ಪಸರಿಸಿದವರು.
ಅಕ್ಟೋಬರ್ 27, ವತ್ಸಲಾ ಅವರ ಜನ್ಮದಿನ. ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಇವರು ಸಾಂಸ್ಕೃತಿಕ ಹಿನ್ನೆಲೆಯ ಕುಟುಂಬದಿಂದ ಬಂದವರು. ದಾಸ ಸಾಹಿತ್ಯದ ಮಹಾನ್ ಆಚಾರ್ಯರಲ್ಲಿ ಒಬ್ಬರಾದ ಪ್ರಸನ್ನತೀರ್ಥರು ಇವರ ಪೂರ್ವಜರು. ತಾತಾ ಶ್ಯಾಮರಾವ್ ಅವರು ನಾಟಕ ಶಿರೋಮಣಿ ಎ. ವಿ.ವರದಾಚಾರ್ಯರ ಕಂಪನಿಯಲ್ಲಿ ಕಲಾವಿದರಾಗಿದ್ದವರು. ಮೈಸೂರಿನ ಮೂಲದವರಾದ ತಂದೆ ಎಂ. ಎಸ್. ಕೇಶವರಾವ್ ಅವರು ಅಗರಬತ್ತಿ ಉದ್ಯಮದಲ್ಲಿದ್ದರೂ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನೀ ಸಂಗೀತ ಪ್ರಕಾರಗಳಲ್ಲಿ ಅಭ್ಯಾಸ ಹೊಂದಿದ್ದವರು. ತಾಯಿ ಪದ್ಮ ಮಂಡ್ಯದ ಮೂಲದವರು. ತಂದೆ ತಾಯಿ ಇಬ್ಬರೂ ಅಂದಿನ ದಿನಗಳಲ್ಲೇ ಪದವೀಧರರಾಗಿದ್ದು ಸಾಂಸ್ಕೃತಿಕ ವಾತಾವರಣದ ಬದುಕಿನಲ್ಲಿ ಆಸಕ್ತರಾಗಿದ್ದವರು.
ಕನ್ನಡ ಮಾಧ್ಯಮದಲ್ಲಿ ಓದಿ ಬೆಳೆದ ವತ್ಸಲಾ ಶಾಲೆಯಲ್ಲಿ ಜನಪದಗೀತೆ, ಭಾವಗೀತೆ ಮತ್ತು ಸಿನಿಮಾ ಹಾಡುಗಳಿಗೆ ಮತ್ತು ಚರ್ಚಾ ಸ್ಪರ್ಧೆಗಳಲ್ಲಿನ ವಿಚಾರ ಮಂಡನೆಗೆ ಪಡೆದ ಬಹುಮಾನ ಅನೇಕ. ಅವರು ಚಿಕ್ಕಂದಿನಲ್ಲೇ ತಾವಿದ್ದ ವಠಾರದಲ್ಲಿದ್ದ ಜಾನಪದ ಗಾಯಕ ಸುಭಾಷ್ ಮುಖಿಹಾಳ್ ಅವರ ಜೊತೆ ಜಾನಪದ ಗಾಯನದಲ್ಲಿ ಪಾಲ್ಗೊಳುತ್ತಿದ್ದು, ನಟರಂಗದ ಶ್ರೀನಿವಾಸ್ ಜಿ. ಕಪ್ಪಣ್ಣ ಅವರ ಗಮನಕ್ಕೆ ಬಂದರು. ಹೀಗೆ ಅವರು ಮಾಸ್ತಿ ಅವರ ಜ್ಞಾನಪೀಠ ಪ್ರಶಸ್ತಿ ಕಾದಂಬರಿ 'ಚಿಕ್ಕವೀರ ರಾಜೇಂದ್ರ'ದ ರಂಗ ಅವತರಣಿಕೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ ದಿನಗಳಲ್ಲೇ ಪಾತ್ರವಹಿಸಿದರು. ಸುಭಾಷ್ ಮುಖಿಹಾಳ್ ಮತ್ತು ವಿ. ಎನ್. ಶಿವರಾಮ್ ಅವರ ಜೊತೆಗಿನ ಗಾಯನದ ಸಂಪರ್ಕ, ಅವರನ್ನು ಜಾನಪದ ಸೊಗಡನ್ನು ಧ್ವನಿಮುದ್ರಣ ಮತ್ತು ವಿಡಿಯೋ ರೂಪದಲ್ಲಿ ನೆಲೆಗಾಣಲು ಪ್ರಮುಖ ಪಾತ್ರವಹಿಸಿದ ಶ್ರೀನಿವಾಸಮೂರ್ತಿ ಹಾಗೂ ಅಲ್ಲಿಂದ ಜಾನಪದ ಲೋಕದ ಮಹಾನುಭಾವರಾದ ಡಾ. ಎಚ್. ಎಲ್. ನಾಗೇಗೌಡರ ಕಾರ್ಯಕ್ಷೇತ್ರ ಪರಿಧಿಗೆ ತಂದಿತು. ಗೌಡರ ನೇತೃತ್ವದ ಕರ್ನಾಟಕ ಜಾನಪದ ಕಲಾಪರಿಷತ್ತಿನ ವೈವಿಧ್ಯಪೂರ್ಣ ಜಾನಪದ ಕಾರ್ಯಕ್ರಮಗಳ ಪೂರ್ವಭಾವಿ ಪರಿಚಯ ಮಾಡುತ್ತಿದ್ದುದು ವತ್ಸಲಾ ಅವರು. ಕನ್ನಡ ನಾಡಿನ ಅಮೂಲ್ಯ ಜಾನಪದ ಸಂಪತ್ತನ್ನು ಧ್ವನಿಮುದ್ರಿಸಿದ ಪ್ರಥಮ ಕಾರ್ಯದಲ್ಲಿ ಇವರು ಭಾಗಿಯಾದರು. ಈ ಜಾನಪದ ಸೊಬಗು ಬೆಂಗಳೂರು ದೂರದರ್ಶನದ 'ಸಿರಿಗಂಧ' ಕಾರ್ಯಕ್ರಮದಲ್ಲಿ 165 ಸಂಚಿಕೆಗಳಲ್ಲಿ ಹೊರಹೊಮ್ಮಿದ ಅದ್ಭುತ ಕಾರ್ಯಕ್ರಮವಾಯಿತು. ಈ ಸಂಚಿಕೆಗಳಿಗೆ ನಾಡಿನೆಲ್ಲೆಡೆಯಿಂದ ಪಡೆದ ಮಾಹಿತಿಯ ಟಿಪ್ಪಣಿ ನಿರ್ವಹಣೆ, ನಿರೂಪಣೆ, ಸಹಾಯಕ ನಿರ್ದೇಶನದ ಮಹತ್ವದ ಕೆಲಸದಲ್ಲಿ ವತ್ಸಲಾ ಪಾಲ್ಗೊಂಡರು. 'ಸಿರಿಗಂಧ' ಕಾರ್ಯಕ್ರಮಗಳ ಜೊತೆಯಲ್ಲೇ ವತ್ಸಲಾ ಅವರ ರಂಗಪಯಣ, ದೂರದರ್ಶನಗಳ ನಾಟಕಗಳು, ಬೆಳಗು ಕಾರ್ಯಕ್ರಮ, ಕಾರ್ಯಕ್ರಮ ನಿರೂಪಣೆಗಳು, ಸಂದರ್ಶನ ನಿರ್ವಹಣೆಗಳು ಮುಂತಾದವು ಜೊತೆಗೂಡಿದವು. ಹನ್ನೊಂದು ವರ್ಷಗಳ ಕಾಲ ಹಂಪಿ ಉತ್ಸವ ಕಾರ್ಯಕ್ರಮವನ್ನು ನಿರೂಪಿಸಿದ ಕೀರ್ತಿ ಇವರದು. ಓದಿನಲ್ಲೂ ಮುಂದುವರೆದು ಬಿ.ಕಾಂ. ಪದವಿ ಪಡೆದರು. ಕಾಲೇಜಿನ ಗೀತನಾಟಕಗಳಲ್ಲೂ ಭಾಗಿಯಾಗಿ ಹೆಸರಾದರು. ಮುಂದೆ ಅವರು ಬದುಕಿನ ವಿಸ್ತೃತ ಕಾಲಘಟ್ಟದಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ "ಜನಪದ ಕಲಾವಿದ ಕಂಸಾಳೆ ಹೆಬ್ಬಣಿ ಮಾದಯ್ಯ ಸಾಂಸ್ಕೃತಿಕ ಅಧ್ಯಯನ" ಮಹಾಪ್ರಬಂಧಕ್ಕೆ ಪಿಎಚ್.ಡಿ ಗೌರವ ಗಳಿಸಿದ್ದನ್ನು ಕಾಣುತ್ತೇವೆ.
'ನಟರಂಗ' ತಂಡದ ಸದಸ್ಯೆಯಾಗಿ ಗುಣಮುಖ, ತಲೆದಂಡ, ಮೋಟೆರಾಮನ ಸತ್ಯಾಗ್ರಹ, ನಮ್ಮೊಳಗೊಬ್ಬ ನಾಜೂಕಯ್ಯ, ಕಾಕನಕೋಟೆ ಅಂತಹ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದಲ್ಲದೆ ಮೇಳದ ಗಾಯಕಿಯಾಗಿಯೂ ಇಂಪು ಹರಡಿದರು.
ವತ್ಸಲಾ ಅವರು ರಂಗಕರ್ಮಿ ಮೋಹನ್ ಅವರನ್ನು ವರಿಸಿದರು. ಮದುವೆ ಮತ್ತು ತಾಯ್ತನದ ಜವಾಬ್ದಾರಿಯ ನಿರ್ವಹಣೆಗಾಗಿ ಅನಿವಾರ್ಯವಾಗಿದ್ದ ವೃತ್ತಿಗೆ ನೀಡಿದ್ದ ಕೆಲ ಕಾಲದ ವಿರಾಮದ ನಂತರ ವತ್ಸಲಾ ಅವರು ಕನ್ನಡ ಎಂ.ಎ. ವ್ಯಾಸಂಗ ಕೈಗೊಂಡು ಸುರಾನಾ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಕೈಗೊಂಡರು.
ಸುರಾನಾ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ, ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿರುವುದು ವತ್ಸಲಾ ಅವರ ಒಂದು ಮುಖ. ಜೊತೆಗೆ ರಂಗಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಪ್ರತಿಭಾನ್ವೇಷಣೆಯಲ್ಲಿ, ಶ್ರೇಷ್ಠಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿರುವುದರಲ್ಲಿ, ಹೀಗೆ ಎದ್ದು ಕಾಣುವಂತಹ ಸಂಸ್ಥೆಯಾಗಿ ಸುರಾನಾ ಕಾಲೇಜು ರೂಪುಗೊಂಡಿರುವುದರಲ್ಲಿ ವತ್ಸಲಾ ಮೋಹನ್ ಅವರ ಕೊಡುಗೆ ಅಪಾರ.
ವತ್ಸಲಾ ಅವರು ಬೆಂಗಳೂರು ದೂರದರ್ಶನ 'ಚಂದನ', ಈಟಿವಿ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮ ನಿರೂಪಿಸಿದ್ದಾರೆ. ಅನೇಕ ಸಂದರ್ಶನಗಳನ್ನು ಮಾಡಿದ್ದಾರೆ. ಈ ಬದುಕು, ಮುಕ್ತ ಧಾರಾವಾಹಿಗಳಿಂದ ಆರಂಭಗೊಂಡು ಅನೇಕ ಪ್ರಸಿದ್ಧ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ (ಮ್ಯಾಕ್ಸಿಂಗಾರ್ಕಿ 'ಮದರ್' ಕೃತಿಯ ಕನ್ನಡರೂಪ) 'ತಾಯಿ' ಕೃತಿಯನ್ನು ಆಧರಿಸಿದ ಚಲನಚಿತ್ರದಿಂದ ಆರಂಭಗೊಂಡಂತೆ 'ಕಟ್ಟಿಂಗ್ ಶಾಪ್', 'ಕಸ್ತೂರಿ ಮಹಲ್', 'ಅಮೃತಮತಿ', 'ಮಮ್ಮಿ ಸೇವ್ ಮಿ', 'ಅಂಗುಲಿಮಾಲ', 'ಡೈರೆಕ್ಟರ್ಸ್ ಸ್ಪೆಷಲ್' ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕದೊಂದಿಗೂ ಅವಿನಾವ ಒಡನಾಟ ಹೊಂದಿರುವ ವತ್ಸಲಾ ಮೋಹನ್ ಬಹಳಷ್ಟು ಬರಹಗಳನ್ನೂ ಮಾಡಿದ್ದು 'ಲಕ್ಮೀಬಾಯಿ ಕಮಲಾಬಾಯಿ' ವ್ಯಕ್ತಿಚಿತ್ರಣ ಕೃತಿ ಪ್ರಕಟಿಸಿದ್ದಾರೆ. ಇವರು ಮೂಡಿಸಿದ 'ಸಜ್ಜಾದನಾ ಗಣೇಶ' ಕಿರುಕಾದಂಬರಿಯಾಗಿ ಪ್ರಕಟಗೊಂಡಿರುವುದರ ಜೊತೆಗೆ, ವತ್ಸಲಾ ಅವರ ಪತಿ ಮೋಹನ್ ಅವರ ನಿರ್ದೇಶನದಲ್ಲಿ 'ಬೊಂಬೆಯಾಟ' ಎಂಬ ಚಲನಚಿತ್ರವಾಗಿ ಮೂಡಿ ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವೂ ಸೇರಿದಂತೆ, ಅನೇಕ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಬಹಮಾನಗಳನ್ನೂ ಗೆದ್ದಿದೆ. 'ವಚನ ಚಿಂತನ ಮಾಲೆ'ಯಲ್ಲಿ ವತ್ಸಲಾ ಮೋಹನ್ ಅವರ 'ಅಕ್ಕಮಹಾದೇವಿ' ಕೃತಿ ಪ್ರಕಟಗೊಂಡಿದೆ. ವತ್ಸಲಾ ಅವರ ಧ್ವನಿಯಲ್ಲಿ ಹಲವು ಧ್ವನಿಪುಸ್ತಕಗಳೂ ಪ್ರಕಟಗೊಂಡಿವೆ. ಈ ಹಿಂದೆ ಅವರು ಪ್ರಕಾಶನ ಸಂಸ್ಥೆಗಾಗಿಯೂ ದುಡಿದಿದ್ದರು. ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ "ಜನಪದ ಕಲಾವಿದ ಕಂಸಾಳೆ ಹೆಬ್ಬಣಿ ಮಾದಯ್ಯ ಸಾಂಸ್ಕೃತಿಕ ಅಧ್ಯಯನ" ಮಹಾಪ್ರಬಂಧಕ್ಕೆ ಪಿಎಚ್.ಡಿ ಗೌರವ ಪಡೆದದ್ದು ಇವರ ಅಧ್ಯಯನಾಸಕ್ತಿ ಮತ್ತು ಕ್ರಿಯಾಶೀಲ ಚಿಂತನೆಗಳಿಗೆ ಮತ್ತೊಂದು ದ್ಯೋತಕ.
ಹೀಗೆ ಬಹುಮುಖಿ ನೆಲೆಯ,ನಮ್ಮ ನಡುವಿನ ಮಹತ್ವದ ಸಾಧಕಿ ವತ್ಸಲಾ ಮೋಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday day to Artiste, Compere, Writer, Co-ordinator and Professor. Vathsala Mohan 🌷🙏🌷
ಕಾಮೆಂಟ್ಗಳು