ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ9


 ಸೋಮೇಶ್ವರ ಶತಕ 9 ನೇ ದಿನ

ಪದ್ಯ 41

*ಕೃತ ಶಾಪಾನ್ವಿತನಾ ಹಿಮಾಂಶು ಗುರುವಿಂ, ಗೋತ್ರಾದಿ ಭಂಗಾಂಗ ದ್ರೌ , ಪದಿಯಂ ಕೀಚಕನಂ ಬಕಾರಿ ಮುರಿದಂ ಸುಗ್ರೀವನಿಂ ವಾಲಿ ತಾಂ , ಹತನಾದಂ ದಶಕಂಠನಾ ಹರಿಶರಕ್ಕೀಡಾದನೇ ವೇಳ್ಪೆನಾ / ನತಿಕಾಮರ್ಗತಿ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ಪರಸ್ತ್ರೀಯನ್ನು ಬಯಸಿದ್ದರಿಂದ ಚಂದ್ರನು ಗುರು ಬೃಹಸ್ಪತಿಯ ಶಾಪಕ್ಕೆ ಒಳಗಾದನು. ಇಂದ್ರನು ಅನ್ಯ ಸ್ತ್ರೀಯನ್ನು ಬಯಸಿ ಶಾಪಕ್ಕೆ ಒಳಗಾದನು. ಹಾಗೆಯೇ ಕೀಚಕನು ಭೀಮನಿಂದಲೂ, ರಾವಣನು ರಾಮನಿಂದಲೂ ಹತರಾದರು ಆದುದರಿಂದ ಪರಸ್ತ್ರೀಯರ ಮೇಲೆ ಕಾಮವು ಸಲ್ಲದು.

ಪದ್ಯ  42

*ಬಲವಂತರ್ ಬಲವಾಗಲಿಕ್ಕೆಲದವರ್ ಮಿತ್ರತ್ತ್ವಮಂ ಮಾಡಲು ,  ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ ,  ಕೊಳದೆಲ್ಲರ್ ಸುಖರಾಗೆ ನಂಬುಗೆಪೋಹಂ ಬಾರದಾಳಲ್ನಿಜಂ ,  ಬಲುಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.* 

ಒಬ್ಬ ರಾಜನಿಗೆ ಎಲ್ಲ ಕಡೆಗಳಲ್ಲಿಯೂ ಬಲವಂತರ ಸಹಾಯವಿದ್ದು, ಅಕ್ಕಪಕ್ಕದ ರಾಜರುಗಳು ಸ್ನೇಹದಿಂದಿದ್ದು,  ಸಮೃದ್ಧವಾಗಿ ಬೆಳೆಯಾಗಿ ಸುಭಿಕ್ಷವಾಗಿದ್ದು, ಪ್ರಜೆಗಳಿಗೆ ಹೆಚ್ಚಿನ ದಂಡವನ್ನು ಹಾಕದೆ ಅವರು ಸುಖವಾಗಿರುವಂತೆ ನೋಡಿಕೊಂಡಿದ್ದು, ನಂಬಿಕೆಯುಳ್ಳ ಚಾರರನ್ನು ಹೊಂದಿದ್ದರೆ ಅವನು ಭಾಗ್ಯಶಾಲಿಯೆನಿಸಿಕೊಳ್ಳುವನು.

ಪದ್ಯ  43

*ಧುರದೊಳ್ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದ್ಯರೊಳ್ ಭೃತ್ಯರೊಳ್ , ಪುರದೊಳ್ ಬಂಧುಗಳೊಳ್ ಸ್ವಜನರೊಳ್ ವೈದ್ಯಾಳಿಯೊಳ್ ಮಂತ್ರಿಯೊಳ್ ,  ಅರಿಯೊಳ್ ಜ್ಯೋತಿಷ ಮಂತ್ರವಾದಿ ಕುಹನಾ ವಿದ್ವಾಂಸರೊಳ್ ಸ್ತ್ರೀಯರೊಳ್ , ಅರಸಿಂಗೆಚ್ಚರು ಬೇಕೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಯುದ್ಧಗಳಲ್ಲಿ, ತನ್ನ ಸೈನ್ಯದ ವೀರರಲ್ಲಿ, ಪ್ರಜೆಗಳಲ್ಲಿ, ದಾಯಾದಿಗಳಲ್ಲಿ, ಸೇವಕರಲ್ಲಿ, ಪಟ್ಟಣದಲ್ಲಿ, ಬಂಧುಗಳಲ್ಲಿ, ಸ್ವಜನರಲ್ಲಿ, ವೈದ್ಯರಲ್ಲಿ, ಮಂತ್ರಿಗಳಲ್ಲಿ, ಶತ್ರುಗಳಲ್ಲಿ, ಜ್ಯೋತಿಷಿ, ಮಂತ್ರವಾದಿಗಳಲ್ಲಿ, ಕುಹಕರಲ್ಲಿ ವಿದ್ವಾಂಸರಲ್ಲಿ, ಸ್ತ್ರೀಯರಲ್ಲಿ ಅರಸನಾದವನಿಗೆ ಸದಾ ಎಚ್ಚರಿಕೆ, ಜಾಗರೂಕತೆ ಇರಬೇಕು.

ಪದ್ಯ  44

*ವರವಿದ್ವಾಂಸ ಕವೀಂದ್ರ ಗಾಯಕ ಪುರಾಣಿಕರ್ ಮಹಾಪಾಠಕರ್,  ಪರಿಹಾಸರ್ ಸ್ವರ ಶಾಸ್ತ್ರಮಂತ್ರ ಶಕುನಜ್ಞರ್ಕೋವಿದರ್ ವೇಶ್ಯೆಯರ್ ,  ಸ್ಮರಶಸ್ತ್ರಾದಿ ಸಮಸ್ತ ವಿದ್ಯೆಯರಿತರ್ ಕಾಲಾಳು ಮೇಲಾಳಿರಲ್ ದೊರೆಯೊಡ್ಡೋಲಗ ಚೆಲ್ವರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ದೊರೆಯ ಒಡ್ಡೋಲಗವು ಚೆಲುವೆನಿಸಬೇಕಾದರೆ ಈ ಎಲ್ಲರೂ ಅಲ್ಲಿ ಇರಬೇಕು ಎಂದು ಒಂದು ಪಟ್ಟಿ ಕೊಡಲಾಗಿದೆ. ವಿದ್ವಾಂಸರು, ಕವಿಗಳು, ಗಾಯಕರು, ಪುರಾಣಿಕರು, ಮಹಾಪಾಠಕರು, ವಿದೂಷಕರು, ಸ್ವರ, ಶಾಸ್ತ್ರ, ಮಂತ್ರ, ಶಕುನಗಳನ್ನು ಬಲ್ಲ ಪಂಡಿತರು, ವೇಶ್ಯೆಯರು, ಸಮಸ್ತ ವಿದ್ಯೆಗಳನ್ನು ಬಲ್ಲವರು, ಕಾಲಾಳು ಮೇಲಾಳುಗಳು ಇವರೆಲ್ಲರೂ ಅಲ್ಲಿದ್ದರೆ ಚಂದ. 

ಪದ್ಯ  45

*ಪುರದುರ್ಗಂಗಳ ಬಲ್ಮೆಮಾಡದೆ ಪ್ರಜಾಕ್ಷೋಭಂಗಳಂ ನೋಡನೆ_ , ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ ,  ತುರದಿಂದುಂಡತಿ ನಿದ್ರೆಗೆಯ್ದು ಮದನಂಗಾಳಾಗಿಹಂ ಲೋಕದೊಳ್ , ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ತನ್ನ ಪುರ, ಕೋಟೆಗಳನ್ನು ಗಮನಿಸದೆ, ಪ್ರಜೆಗಳ ಕಷ್ಟಗಳನ್ನು ನೋಡದೆ, ಎಲ್ಲರನ್ನೂ ವಿಶ್ವಾಸಿಗಳೆಂದು ನಂಬಿ ಆಯವ್ಯಯಗಳನ್ನು ಗಮನಿಸದೆ, ಆತುರದಲ್ಲಿ ತಿಂದು ಅತಿಯಾದ ನಿದ್ರೆ ಮಾಡುತ್ತ ಕಾಮಾತುರನಾಗಿರುವ ರಾಜನು ಸೊಕ್ಕಿದ ಕೋಣವೇ ಸರಿ.


ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ