ಲಕ್ಷ್ಮೀಶ ತೋಳ್ಪಾಡಿ
ಲಕ್ಷ್ಮೀಶ ತೋಳ್ಪಾಡಿ
ಲಕ್ಷ್ಮೀಶ ತೋಳ್ಪಾಡಿ ಅವರು ನಾಡಿನ ಮಹಾನ್ ವಿದ್ವಾಂಸರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಬರಹಗಾರರು. 76 ವರ್ಷ ಹಿರಿಯರಾದ ಇವರು ಕೃಷಿಕರು, ರೈತಪರ ಹೋರಾಟಕ್ಕೆ ನಿಂತವರು, ಚಿಂತಕರು ಮತ್ತು ವಿದ್ವಾಂಸರು. ವೈದಿಕ ಮತ್ತು ವೈಚಾರಿಕ ನಿಲುವುಗಳ ಪರಸ್ಪರ ಮುಖಾಮುಖಿ, ಲಕ್ಷ್ಮೀಶ ತೋಳ್ಪಾಡಿ ಅವರ ಬರಹಗಳ ವೈಶಿಷ್ಟ್ಯ.
ಲಕ್ಷ್ಮೀಶ ತೋಳ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ತೋಳ್ಳಾಡಿತ್ತಾಯ ವೈದಿಕ ಮನೆತನದ ಇವರದು ಉತ್ತುಬಿತ್ತು ಗೇಯುವ ಕಾಯಕ. ಆಡುಭಾಷೆ ತುಳು.
ಲಕ್ಷ್ಮೀಶ ತೋಳ್ಪಾಡಿ ಅವರು ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಕಿ.ರಂ. ನಾಗರಾಜ ಅವರ ಒಡನಾಟ ಇವರಿಗೆ ದಕ್ಕಿತ್ತು. ಭಕ್ತಿ-ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ತೀವ್ರಗೊಂಡು ಶಿವಮೊಗ್ಗಕ್ಕೆ ತೆರಳಿದಾಗ, ಅಲ್ಲಿ ಸತ್ಯಕಾಮರ ಒಡನಾಟ ದಕ್ಕಿತು. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು, ಕೆಲಕಾಲ ಇವರನ್ನು ಕೈಹಿಡಿದು ನಡೆಸಿತು. ಬುದ್ಧ, ಗಾಂಧಿಯವರ ಮಧ್ಯಮ ಮಾರ್ಗದ ಬೆರಗು ಇವರನ್ನು ಆವರಿಸಿತ್ತು. ಈ ಮಧ್ಯೆ ಸಿಕ್ಕಿದವರು ಸೂಫಿ ಬ್ಯಾರಿಗಳು. "ಒಂದು ಗಿಡ ತನಗೆ ಬೇಕಾದ್ದನ್ನು ಮಣ್ಣಿನಿಂದ ಪಡೆದುಕೊಂಡು, ಅದು ಏನು ಕೊಡಬೇಕೆಂದಿದೆಯೋ ಅದನ್ನು ಕೊಟ್ಟೇ ಕೊಡುತ್ತದೆ" ಎಂಬ ಸೂಫಿ ಬ್ಯಾರಿಯವರ ಮಾತುಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು.
ಲಕ್ಷ್ಮೀಶ ತೋಳ್ಪಾಡಿ ಅವರಿಗೆ, ಕುಮಾರಧಾರೆಗೆ ಅಣೆಕಟ್ಟು ಕಟ್ಟುವುದು ಸ್ಥಳೀಯ ರೈತರಿಗೆ ಹಾನಿಕಾರಕವೆನ್ನಿಸಿದಾಗ, ಕಿಸಾನ್ ಸಂಘದ ಮೂಲಕ ಪ್ರತಿಭಟಿಸಿ, ಯೋಜನೆಯನ್ನು ಹಿಮ್ಮೆಟ್ಟಿಸಲು ಕಾರಣರಾದರು. ರೈತಪರ, ಸ್ವದೇಶಿ ಚಳವಳಿಗಳಲ್ಲಿ ಭಾಗಿಯಾದರು. ಗ್ರಾಮಸ್ವರಾಜ್ಯದ ನಿರಂತರ ಕನಸು ಅವರದಾಗಿದೆ.
ಆಧ್ಯಾತ್ಮಿಕ ನಿಗೂಢತೆಯನ್ನು ಜೀವನಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಲಕ್ಷ್ಮೀಶ ತೋಳ್ಪಾಡಿ ಅವರ ಮಾತು, ಮೌನ, ಓದು, ಬರಹಗಳು ಮೂಡುತ್ತ ಬಂದಿವೆ. ಇದೇ ಕಾರಣಕ್ಕಾಗಿ ವೇದ, ಉಪನಿಷತ್ತು, ಪೌರಾಣಿಕ ಮಹಾಕಾವ್ಯಗಳ ಪದಗಳ ನಡುವಿನ ಮೌನವನ್ನು ಅವರಿಗೆ ಓದುವುದಕ್ಕೆ ಸಾಧ್ಯವಾಗಿದೆ. "ಗೋತ್ರಗಳು ಹುಟ್ಟಿನಿಂದ ಬರುವುದಿಲ್ಲ" ಎಂಬ ಸಮರ್ಥನೆಗಾಗಿ ಉಪನಿಷತ್ಗಳ ವಾಕ್ಯಗಳನ್ನು ಬಳಸುವುದು, "ಬಂಧುಮೋಹ ತೊರೆದ ಅರ್ಜುನನೇಕೆ, ಅಭಿಮನ್ಯು ಅಳಿದಾಗ ಅಳುತ್ತಾನೆ?" ಎಂಬ ಜಿಜ್ಞಾಸೆ ವ್ಯಕ್ತಪಡಿಸಲು ಅವರಿಗಷ್ಟೇ ಸಾಧ್ಯ. ಪುರಾಣವನ್ನು ಬಗೆಯುತ್ತ ಪೌರಾಣಿಕ ಬಿಂಬಗಳನ್ನು ಸಮಕಾಲೀನ ಕನ್ನಡಿಯ ಮುಂದೆ ತಂದು ನಿಲ್ಲಿಸುತ್ತ, ಅವರು ಚಿಂತನೆಯ ಹಾರವನ್ನು ಪೋಣಿಸುತ್ತಾರೆ. ಆರ್ಷೇಯ ಜ್ಞಾನ ಮತ್ತು ಸಮಕಾಲೀನ ಅರಿವುಗಳ ಸಮಪಾಕದಲ್ಲಿ ಅವರ ವಚನಗಳು ಸಮನ್ವಯ ಪ್ರತಿಪಾದನೆಯ ಪ್ರವಚನಗಳಾಗುತ್ತವೆ.
ಲಕ್ಷ್ಮೀಶ ತೋಳ್ಪಾಡಿ ಅವರದು ಕವಿ ಹೃದಯ, ಮಾತಿನಲ್ಲಿಯೂ ಮೌನದಲ್ಲಿಯೂ ಕಥನಕ್ಕಿಂತ ಕಾವ್ಯವೇ ಅವರಿಗೆ ಹೆಚ್ಚು ಪ್ರಿಯ. ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಭಗವದ್ಗೀತೆಯ ಬಗೆಗಿನ 'ಮಹಾಯುದ್ದಕ್ಕೆ ಮುನ್ನ' ಇವರ ಮೊದಲ ಪ್ರಕಟಿತ ಕೃತಿ. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ 'ಸಂಪಿಗೆ ಭಾಗವತ'. 'ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ', 'ಭವ ತಲ್ಲಣ' (ತಾಳಮದ್ದಲೆ ಕುರಿತು), 'ಬಾಳು ಸಾವು ಒಡ್ಡುವ ಆಮಿಷ', 'ಮಹಾಭಾರತ ಅನುಸಂಧಾನದ ಭಾರತಯಾತ್ರೆ', 'ಆನಂದಲಹರೀ ಸ್ಪಂದಸಮಯ' (ಸೌಂದರ್ಯಲಹರಿಯ ಪೂರ್ವಭಾಗ) ಮುಂತಾದ ಇವರ ಇತರ ಕೃತಿಗಳು ಪ್ರಕಟವಾಗಿವೆ.
ಲಕ್ಷ್ಮೀಶ ತೋಳ್ಪಾಡಿ ಅವರ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಕೃತಿಗೆ 2023 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ. ‘ಭಾರತ ಯಾತ್ರೆ’ ಕೃತಿಯು ‘ಪ್ರಜಾವಾಣಿ’ಯ ಸಾಹಿತ್ಯ ಪುರವಣಿ ‘ಮುಕ್ತಛಂದ’ದಲ್ಲಿ ಪ್ರಕಟವಾಗುತ್ತಿದ್ದ ‘ಮಹಾಭಾರತ ಅನುಸಂಧಾನ’ದ ಅಂಕಣ ಬರಹಗಳ ಸಂಗ್ರಹವಾಗಿದೆ.
ಮಹಾನ್ ವಿದ್ವಾಂಸರಾದ ಪೂಜ್ಯ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಹೃತ್ಪೂರ್ವಕ ನಮನಗಳು. ನಮಸ್ಕಾರ.
Lakshmeesha Tolpadi
ಕಾಮೆಂಟ್ಗಳು