ರಾಜಶ್ರೀ ಪೆರ್ಲ
ರಾಜಶ್ರೀ ಪೆರ್ಲ
ರಾಜಶ್ರೀ ಪೆರ್ಲ ಕನ್ನಡ ಮತ್ತು ತುಳು ಬರೆಹಗಾರ್ತಿ ಮತ್ತು ಸಂಶೋಧಕಿ.
ಜನವರಿ 31, ರಾಜಶ್ರೀ ಅವರ ಜನ್ಮದಿನ. ಇವರು ಹುಟ್ಟಿದ ಊರು ಕಾಸರಗೋಡು ಜಿಲ್ಲೆಯ, ಪೆರ್ಲ ಸಮೀಪದ ಅರೆಮಂಗಿಲ. ತಂದೆ ಬಂಬ್ರಾಣ ಮುಗೇರು ಗುತ್ತು ನಾರಾಯಣ ರೈ ಅರೆಮಂಗಿಲ ಅವರು. ತಾಯಿ ಕೊಡ್ಯಮ್ಮೆ ಗುತ್ತು ಲೀಲಾವತಿ ರೈ ಅವರು. ರಾಜಶ್ರೀ ಓದಿದ್ದು ವಿಜ್ಞಾನ ಪದವಿ. ಕೂಡು ಕುಟುಂಬದ ಸೊಸೆಯಾದ ಇವರ ವ್ಯಾಸಂಗ ಬರೆಹ ಮುಂದೆಯೂ ನಿರಂತರವಾಗಿ ಸಾಗಿತು.
ರಾಜಶ್ರೀ ಅವರ ಬಹುಮುಖಿ ಹವ್ಯಾಸಗಳಲ್ಲಿ ಸಾಹಿತ್ಯ, ಸಂಶೋಧನೆ, ಅಧ್ಯಯನ, ಪ್ರವಾಸ ಸೇರಿವೆ. ಬಾಲ್ಯದಿಂದಲೇ ಕತೆ- ಕವನ ರಚನೆಯಲ್ಲಿ ಆಸಕ್ತಿ ಮೂಡಿಸಿಕೊಂಡ ಇವರು ನಂತರದಲ್ಲಿ ನಿರಂತರ ಓದುವಿಕೆಯಲ್ಲಿ ತೊಡಗಿಕೊಂಡರು. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕತೆಗಳು ಪ್ರಕಟಗೊಂಡವು. 19 ನೇ ವಯಸ್ಸಿನಲ್ಲಿ, ಸ್ಥಳೀಯ ಪತ್ರಿಕೆಯಲ್ಲಿ ಇವರ ಪ್ರಥಮ ತುಳು ಧಾರಾವಾಹಿ ಪ್ರಕಟಣೆ ಕಂಡಿತು. ಅದೇ ವರ್ಷ ನಾಟಕ ಹಸ್ತಪ್ರತಿಗೆ ಬಹುಮಾನ ದೊರೆತ ನಂತರ ಬರವಣಿಗೆಯ ಹಾದಿಯಲ್ಲಿ ಸಕ್ರಿಯರಾದರು.
ರಾಜಶ್ರೀ ಅವರ ತುಳು ಕೃತಿಗಳಲ್ಲಿ ಪಣಿಯಾರ, ಬಣಿಲಜ್ಜೆ, ಕೊಂಬು, ಚೌಕಿ, ಮುಸ್ರಾಲೊ ಪಟ್ಟ ಕಾದಂಬರಿಗಳು; ಮಮಿನದೊ (ಆಕೃತಿ ಆಶಯ) ಕವನ ಸಂಕಲನ; ಚವಳೊ ಕಥಾಸಂಕಲನ. ಬದಿ ಏತ್ ಕೊರ್ಪರ್?, ಪುಂಚದ ಮಣ್, ತತ್ರಮೋಸದ ಬಾಲೆ ನಾಟಕಗಳು; ಬಸವ ಮಕ್ಕಳ ನಾಟಕ; ರಡ್ಡ್ ಕವುಲೆ ಅಂಕಣ ಬರಹಗಳ ಸಂಕಲನ ಮುಂತಾದವು ಸೇರಿವೆ.
ರಾಜಶ್ರೀ ಅವರ ಕನ್ನಡ ಬರಹಗಳಲ್ಲಿ 'ತುಳುನಾಡಿನ ಮೂರಿಗಳ ಆರಾಧನೆ' ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಗೊಂಡಿದೆ. 'ಅಗ್ಗಿಷ್ಟಿಕೆ' ಕಥಾಸಂಕಲನ. 'ಕಲ್ಪತರು' ಕಾಸರಗೋಡಿನ ನಾಟಿ ಔಷಧೀಯ ಪರಂಪರೆ ಪ್ರಾದೇಶಿಕ ಅಧ್ಯಯನ ಕೃತಿ. 'ಸ್ವರ್ಣಕದಿರು' ಸಂಪಾದಿತ ಕೃತಿ. ಗಣ್ಯ ಸಾಹಿತಿ ಹರೀಶ್ ಪೆರ್ಲ ವ್ಯಕ್ತಿ ಚಿತ್ರಣ. ಚೇಕತ್ತಿ ನಾಟಕ.
ಮಂಗಳೂರು ಮತ್ತು ಮೈಸೂರು ಆಕಾಶವಾಣಿಯಲ್ಲಿ ರಾಜಶ್ರೀ ಅವರ ಕಥೆ, ಭಾಷಣ, ನಾಟಕಗಳು ಪ್ರಸಾರಗೊಂಡಿವೆ.
ರಾಜಶ್ರೀ ಪೆರ್ಲ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ತತ್ವ ಚಿಂತನೆಗಳ ಬಗ್ಗೆ ಬರೆದ ಸಂಶೋಧನಾ ಕೃತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಶಸ್ತಿ, ಮೈಸೂರು ಅಸೋಸಿಯೇಶನ್ ಮುಂಬೈ ಅವರ ಜಾಗತಿಕ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಹುಮಾನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಎಸ್ ಯು ಪಣಿಯಾಡಿ ಕಾದಂಬರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಧತ್ತಿನಿಧಿ ಪ್ರಶಸ್ತಿ, ಶ್ರೀ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ ( ಸತತ ಎರಡು ಸಲ), ಕೇರಳ ಸರಕಾರದ ರಾಜ್ಯೋದಯ ಪುರಸ್ಕಾರ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಹವ್ಯಕ ಕಥಾ ಸ್ಪರ್ಧೆಯ ಬಹುಮಾನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ "ಬರವುದ ಬಿರ್ಸೆದಿ" ಬಿರುದು, ಕೇಮಾರ ಬಲ್ಲಾಳ ಕಥಾ ಪ್ರಶಸ್ತಿ,
ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಎರಡು ಸರ್ತಿ ಬಹುಮಾನ, ಕರ್ಮವೀರ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಸೇರಿದಂತೆ ಅನೇಕ ಪ್ರಶಸ್ತಿ, ಬಹುಮಾನ ಗೌರವಗಳು ಸಂದಿವೆ. ಇವರು ತುಳು ಭಾಷೆ ಜಾನಪದ ವಿಚಾರದ ರಾಜ್ಯ ಮಟ್ಟದ ಗೋಷ್ಠಿಗಳಲ್ಲಿ ಆಹ್ವಾನಿತ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.
ರಾಜಶ್ರೀ ಅವರ ಪತಿ ಉದ್ಯಮಿ ತಾರಾನಾಥ ರೈ ಪಡ್ಡಂಬೈಲು ಗುತ್ತು ಗ್ರಾಮ ದೇವಸ್ಥಾನದ ಆಡಳಿತ ಮಂಡಳಿ ಚೇರ್ಮನ್ನರಾಗಿ ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಮಗಳು ಸನ್ನಿಧಿ ಪೆರ್ಲ, ಹತ್ತನೇ ವಯಸ್ಸಿನಲ್ಲೇ ಕನ್ನಡ ಕವನ ಸಂಕಲನ ಪ್ರಕಟಣೆ ಮಾಡಿದ ಪ್ರತಿಭೆ. ಈಗಾಗಲೇ ಈಕೆಯ ನಾಲ್ಕು ಪುಸ್ತಕಗಳು ಪ್ರಕಟಣೆ ಕಂಡಿದ್ದು,, ಇದೀಗ ಕಲ್ಕತ್ತಾ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ತತ್ವ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ. ಧ್ರುವ ಕಾರ್ತಿಕೇಯ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಹಿರಿಯರಿಂದ ಬಂದ ಕೃಷಿ ಭೂಮಿ ಮತ್ತು ಸ್ವಂತ ಕಟ್ಟಿದ ಉದ್ಯಮ ಎರಡನ್ನೂ ಸರಿತೂಗಿಸಿಗೊಂಡು ಈ ಕುಟುಂಬದ ಬದುಕು ಸಾಗುತ್ತಿದೆ. ಪೇಟೆಯಲ್ಲಿರುವ ಇವರ ಮನೆಯಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಅಲ್ಲಿ ತಮ್ಮೂರಿನ ಪುಟಾಣಿಗಳಿಗಾಗಿ ಸಾಹಿತ್ಯ ಚಟುವಟಿಕೆಯನ್ನು ನಡೆಸಬೇಕು ಎನ್ನುವ ಆಸೆ ಇವರಿಗಿದೆ.
ಉತ್ಸಾಹಿ ಸಾಧಕಿ ರಾಜಶ್ರೀ ಪೆರ್ಲ ಅವರಿಗೆ ಹುಟ್ಟು ಹಬ್ಬದ ಶುಭಹಾರೈಕೆಗಳು.
Happy birthday Rajashri Perla 🌷🌷🌷
ಕಾಮೆಂಟ್ಗಳು