ನೀಲಕಂಠ ಸೋಮಯಾಜಿ
ನೀಲಕಂಠ ಸೋಮಯಾಜಿ
ಭಾರತೀಯ ಖಗೋಲ ವಿಜ್ಞಾನ ಮತ್ತು ಗಣಿತಶಾಸ್ತ್ರಗಳಲ್ಲಿ ನೀಲಕಂಠ ಸೋಮಯಾಜಿ ಬಲು ದೊಡ್ಡ ಹೆಸರು.
ನೀಲಕಂಠ ಸೋಮಯಾಜಿ ಜನಿಸಿದ್ದು 1444ನೇ ವರ್ಷದ ಜೂನ್ 14ರಂದು ಎಂದು ಇಂಗ್ಲಿಷ್ ವಿಕಿಪೀಡಿಯ ತಿಳಿಸುತ್ತಿದೆ.
ಹೀಗಾಗಿ ಭಾರತೀಯ ಖಗೋಲ ಶಾಸ್ತ್ರದ ಕುರಿತು ಭವ್ಯ ಗ್ರಂಥಗಳನ್ನು ಬರೆದಿರುವ ನಮ್ಮವರೇ ಆದ ಪೂಜ್ಯ ಪ್ರೊ. ಬಾಲಚಂದ್ರರಾವ್ ಅವರನ್ನು ಕೋರಿದಾಗ ಅವರು ತಕ್ಷಣವೇ ತಮ್ಮ ಜನಪ್ರಿಯ ಕೃತಿ "ಭಾರತೀಯ ಗಣಿತ ಮತ್ತು ಖಗೋಲ ವಿಜ್ಞಾನ" ಕೃತಿಯಲ್ಲಿನ ಈ ಅಮೂಲ್ಯ ವಿವರಗಳನ್ನು ಕಳುಹಿಸಿಕೊಟ್ಟಿದ್ದಾರೆ.
ನೀಲಕಂಠ ಸೋಮಯಾಜಿಯ ಸೂರ್ಯಕೇಂದ್ರ ಸಿದ್ಧಾಂತ:
ಸಹಸ್ರಾರು ವರ್ಷಗಳಿಂದ ಖಗೋಲಜ್ಞರು ಗ್ರಹಗಳ ಚಲನೆಯು “ಭೂಕೇಂದ್ರ” (ಜಿಯೋ-ಸೆಂಟ್ರಿಕ್) ಸಿದ್ಧಾಂತವನ್ನು ಆಧರಿಸಿದೆ ಎಂದು ನಂಬಿಕೊಂಡಿದ್ದರು. ಹಾಗೆಯೇ ಲೆಕ್ಕಾಚಾರಗಳನ್ನು ಮಾಡುತ್ತಿದ್ದರು.
ನಿಕೋಲಸ್ ಕಾಪರ್ನಿಕಸ್ (ಕ್ರಿ. ಶ. 1473-1543) ಎಂಬ ಪೋಲ್ಯಾಂಡ್ ದೇಶದ ಖ್ಯಾತ ಖಗೋಲತಜ್ಜನು ಗ್ರಹಗಳು (ಭೂಮಿಯೂ ಸೇರಿದಂತೆ) ಸೂರ್ಯನ ಸುತ್ತಲೂ ತಿರುಗುತ್ತವೆ ಎಂಬ ತನ್ನ ಸೂರ್ಯಕೇಂದ್ರ (ಹಿಲಿಯೋ-ಸೆಂಟ್ರಿಕ್) ಸಿದ್ಧಾಂತವನ್ನು ಮಂಡಿಸಿದನು. ಆತನಿಗಿಂತ ಸ್ವಲ್ಪ ದಶಕಗಳ ಹಿಂದೆಯೇ ನೀಲಕಂಠ ಸೋಮಯಾಜಿ (1444-1545) ಅಂತಹುದೇ ತನ್ನ ಸಿದ್ಧಾಂತವನ್ನು ಪತಿಪಾದಿಸಿದನು. ಆತನ ಪರಿಕಲ್ಪನೆಯಲ್ಲಿ ಎಲ್ಲಾ ಐದು ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತವೆ ಹಾಗೂ ಸೂರ್ಯನು ತನ್ನ ಪರಿವಾರದೊಂದಿಗೆ ಭೂಮಿಯ ಸುತ್ತ ಪರಿಭ್ರಮಣೆ ಮಾಡಿದಂತೆ ಭೂಮಿಯಲ್ಲಿರುವ ವೀಕ್ಷಕರಿಗೆ ತೋರುತ್ತದೆ (ಶೀರ್ಷಿಕಾ ಚಿತ್ರವನ್ನು ನೋಡಿ). ಇದೇ ಮಾದರಿಯನ್ನು ಮುಂದೆ ಬರುವ ಐರೋಪ್ಯ ಖಗೋಲಜ್ಞ ಟೈಕೊ ಬ್ರಾಹೆ (1546-1601) ಮತ್ತು ಒರಿಸ್ಸಾ ರಾಜ್ಯದ ಭಾರತೀಯ ಖಗೋಲಜ್ಞ ಚಂದ್ರಶೇಖರ ಸಾಮಂತ ಕೂಡ ಪ್ರತಿಪಾದಿಸಿದರು.
1994ರಲ್ಲಿ ಪ್ರಕಟಗೊಂಡ ಜನಪ್ರಿಯ ಸಂಶೋಧನ ನಿಯತಕಾಲಿಕೆಯಾದ “ಕರೆಂಟ್ ಸೈನ್ಸ್”ನಲ್ಲಿ ಡಾ. ಎಂ. ಡಿ. ಶ್ರೀನಿವಾಸ್, ಡಾ| ಎಂ. ಎಸ್. ಶ್ರೀರಾಂ (ಇಬ್ಬರೂ ಕನ್ನಡಿಗರು) ಮತ್ತು ಡಾ. ರಾಮಸುಬ್ರಹ್ಮಣ್ಯನ್ ಒಂದು ಮಹತ್ವಪೂರ್ಣವಾದ ಸಂಶೋಧನ ಲೇಖನವನ್ನು ಪ್ರಕಟಿಸಿದರು. ಅವರ ಪ್ರಕಾರ ಬುಧ ಮತ್ತು ಶುಕ್ರ ಗಹಗಳ ಚಲನೆಯನ್ನು ಚರ್ಚಿಸುವ ಸಂದರ್ಭದಲ್ಲಿ ನೀಲಕಂಠ ಸೋಮಯಾಜಿಯು ಎಲ್ಲಾ ಗ್ರಹಗಳ ಚಲನೆಗೆ ಸೂರ್ಯಕೇಂದ್ರ ಸಿದ್ಧಾಂತವನ್ನು ಸೂಚಿಸುವುದಲ್ಲದೆ ಆ ಗ್ರಹಗಳ "ಶೀಘ್ರಫಲ”ಗಳ ಲೆಕ್ಕಾಚಾರಗಳಲ್ಲಿ ಆ ಸಿದ್ಧಾಂತವನ್ನೇ ಬಳಸಿದ್ದಾನೆ. ಅಷ್ಟೇ ಅಲ್ಲದೆ, ಈ ಸೂರ್ಯಕೇಂದ್ರ ಸಿದ್ಧಾಂತದ ಸಾಧ್ಯತೆಯ ಬಗ್ಗೆ ತನಗೆ ತನ್ನ ಪರಮಗುರು ಪರಮೇಶ್ವರನಿಂದ ಸೂಚನೆ ದೊರಕಿತೆಂದೂ ನೀಲಕಂಠ ಹೇಳಿದ್ದಾನೆ. ಆಧುನಿಕ ಖಗೋಲ ವಿಜ್ಞಾನದಲ್ಲಿ ಸೂರ್ಯ ಕೇಂದ್ರ ಸಿದ್ಧಾಂತದ ಪಿತಾಮಹನೆಂದು ಪರಿಗಣಿಸಲಾದ ಕಾಪರ್ನಿಕಸ್ಗಿಂತ ಹಿಂದೆಯೇ ಪರಮೇಶ್ವರ ಮತ್ತು ನೀಲಕಂಠ ಅಂತಹುದೇ ವಾದವನ್ನು ಸೂಚಿಸಿ ತಮ್ಮ ಸಿದ್ಧಾಂತಗ್ತಂಥಗಳಲ್ಲಿ ಬಳಸಿರುವುದು ನಮ್ಮ ಭಾರತದ - ಅದರಲ್ಲೂ ವಿಶೇಷವಾಗಿ ಕೇರಳದ ಖಗೋಲಜ್ಞರ ಒಂದು ಶ್ರೇಷ್ಠವಾದ ಹೆಗ್ಗಳಿಕೆಯಲ್ಲವೆ?
ಹೀಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಗಣಿತಶಾಸ್ತ್ರಜ್ಞರಿಗೆ ಹಾಗೂ ಖಗೋಲ ವಿಜ್ಞಾನಿಗಳಿಗೆ ಬಹಳ ಮನ್ನಣೆಯಿದ್ದು ವಿಶ್ವದ ವಿಜ್ಞಾನ ಇತಿಹಾಸಕಾರರೂ ಭಾರತೀಯ ಗಣಿತಜ್ಞರ ಅಮೂಲ್ಯವಾದ ಕೊಡುಗೆಗಳಿಗಾಗಿ ಮುಕ್ತಕಂಠದಿಂದ ಹೊಗಳಿದ್ದಾರೆ.
ಕೃತಜ್ಞತೆ: ಬಾಲಚಂದ್ರ ರಾವ್ Balachandra Rao
🌷🙏🌷
On the birth anniversary of Great Indian Astronomer and Mathematician Nilakantha Somayaji 🌷🙏🌷
ಕಾಮೆಂಟ್ಗಳು