ಪೂರ್ಣಿಮಾ ಸುರೇಶ್
ಪೂರ್ಣಿಮಾ ಸುರೇಶ್
ಪೂರ್ಣಿಮಾ ಸುರೇಶ್ ಬಹುಮುಖಿ ಬರೆಹಗಾರ್ತಿ, ಕಲಾವಿದೆ ಮತ್ತು ಸಾಂಸ್ಕೃತಿಕವಾಗಿ ಸಕ್ರಿಯರು.
ಜೂನ್ 11 ಪೂರ್ಣಿಮಾ ಅವರ ಜನ್ಮದಿನ. ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಇವರು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ.
ಪೂರ್ಣಿಮಾ ಸುರೇಶ್ ಅವರು ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿದ್ದಾರೆ. ಅವರು ಮಂಗಳೂರು ಆಕಾಶವಾಣಿಯಲ್ಲಿ ಗ್ರೇಡೆಡ್ ಕಲಾವಿದೆ. ಅವರೋರ್ವ ಸಂಘಟಕರು ಹಾಗೂ ನಿರೂಪಕಿ ಕೂಡ.
ಪೂರ್ಣಿಮಾ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ ಅನೇಕ ನಾಟಕಗಳ ನೂರಾರು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನದ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಅನೇಕ ಜನಪ್ರಿಯ ಪ್ರದರ್ಶನಗಳನ್ನು ಕಂಡಿದೆ.
ಪೂರ್ಣಿಮಾ ಅವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಅವರ ಬರಹಗಳು ಮಧ್ಯಮಾವತಿ, ನನ್ನೊಳಗಿನ ಭಾವ, ಶಬ್ದ ಸೀಮೆಯ ಆಚೆ, ಅಕ್ಕನಂತೊಬ್ಬಳು ಅನುರಕ್ತೆ, ರಂಗ ರಂಗೋಲಿ, ಸುಭಾಷಿತ ಮಧುಸಂಚಯ ಶಬ್ದಕೋಶ (ಕನ್ನಡ- ಕೊಂಕಣಿ), ಶಿವರಾತ್ರ್ (ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕದ ಕೊಂಕಣಿ ಅನುವಾದ)ಮುಂತಾದ ಕೃತಿಗಳಾಗಿಯೂ ಜನಪ್ರಿಯಗೊಂಡಿವೆ.
ಪೂರ್ಣಿಮಾ ಸುರೇಶ್ ಅವರಿಗೆ ಕೊಂಕಣಿ ಸಿನಿಮಾ 'ಅಂತು' ದಲ್ಲಿನ ಅಭಿನಯಕ್ಕೆ ಗ್ಲೋಬಲ್ ಸಿನಿ ಅತ್ಯುತ್ತಮ ಪೋಷಕ ಕಲಾವಿದೆ ಪ್ರಶಸ್ತಿ, ಡಿ. ಎಸ್. ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ, 'ಅಕ್ಕನಂತೊಬ್ಬಳು ಅನುರಕ್ತೆ’ ಕವನ ಸಂಕಲನಕ್ಕೆ ಶಿವಮೊಗ್ಗದ ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದಿ. ಗೌರಮ್ಮ ಹಾರ್ನಹಳ್ಳಿ ಮಂಜಪ್ಪ ದತ್ತಿ ಪ್ರಶಸ್ತಿ ಮುಂತಾದ ಅನೇಕ ಕಲಾಗೌರವಗಳೂ, ಸಾಹಿತ್ಯ ಪ್ರಶಸ್ತಿಗಳೂ ಸಂದಿವೆ. ಅನೇಕ ಕವಿಗೋಷ್ಠಿ ಮತ್ತು ಸಂಕಿರಣಗಳಲ್ಲಿ ಭಾಗಿಯಾಗಿದ್ದಾರೆ.
ಪೂರ್ಣಿಮಾ ಸುರೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದೇನೆ. ನಿತ್ಯಹಸನ್ಮುಖಿ ಸದಾ ಸಕ್ರಿಯರಾಗಿರುವ ಪೂರ್ಣಿಮಾ ಸುರೇಶ್ ಅವರಿಗೂ ಅವರ ಕುಟುಂಬದವರಿಗೂ ಸಕಲ ಸುಖ, ಸೌಖ್ಯ, ಸೌಕರ್ಯ, ಸಾಧನಯುಕ್ತ, ಸಂತೃಪ್ತ ಬದುಕು ಸದಾ ಕಾಲ ದೊರಕುತ್ತಿರಲಿ. ನಮಸ್ಕಾರ🌷🙏🌷
Happy birthday Poornima Suresh 🌷🙏🌷
ಕಾಮೆಂಟ್ಗಳು