ರಾಘವೇಂದ್ರ ರಾಯಲಪಾಡು
ರಾಘವೇಂದ್ರ ರಾಯಲಪಾಡು ಚ ರಾ
ಅಪ್ರತಿಮ ಕನ್ನಡ ಪ್ರೇಮಿ ರಾಘವೇಂದ್ರ ರಾಯಲಪಾಡು ಅವರು ಬಹುಮುಖಿ ಸಾಧಕ, ಸಾಹಸಿ ಮತ್ತು ಸಮಾಜಮುಖಿ.
ಜುಲೈ 22, ರಾಘವೇಂದ್ರ ಅವರ ಜನ್ಮದಿನ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಇವರ ಹುಟ್ಟೂರು. ಇವರು 5 ವರ್ಷದವರಿದ್ದಾಗ ತಂದೆ ರಾಮಚಂದ್ರ ರಾವ್ ಅವರಿಗೆ ತಾಲ್ಲೂಕು ಕೇಂದ್ರವಾದ ಶ್ರೀನಿವಾಸಪುರದಿಂದ ಗಡಿಯಂಚಿನ ರಾಯಲಪಾಡು ಸರ್ಕಾರಿ ಪ್ರೌಢಶಾಲೆಗೆ ವರ್ಗವಾಯಿತು. ಅವರು ಪ್ರಯೋಗಶಾಲಾ ಸಹಾಯಕರಾಗಿ ಸೇವೆಯಲ್ಲಿದ್ದರು. ರಾಯಲಪಾಡು ತೆಲುಗು ಮನೆಮಾತಿನ ಊರು. ಅಲ್ಲಿ ಪ್ರಧಾನವಾಗಿ ಇವರ ಮನೆಯೊಂದೇ ಕನ್ನಡ ಮಾತನಾಡುವ ಮನೆಯಾಗಿತ್ತು. ಪ್ರೌಢಶಾಲೆಯವರೆಗೆ ಅಲ್ಲಿ ಓದಿದ ರಾಘವೇಂದ್ರ, ಕೆಜಿಎಫ್ ನಲ್ಲಿದ್ದ ಚಿಕ್ಕಮ್ಮನ ಆಶ್ರಯದಲ್ಲಿ ಪಿಯುಸಿ ಓದಿ, ಪದವಿಗೆ ಮುಳಬಾಗಿಲು ಸೇರಿದರು. ತಂದೆ ತಾಯಿಯರಿಗೆ ಮನೆಯಲ್ಲಿ ಆರು ಜನ ಮಕ್ಕಳಿದ್ದು ಆರ್ಥಿಕವಾಗಿ ಮುಗ್ಗಟ್ಟಿನ ಸ್ಥಿತಿಯಿತ್ತು.
ಬಾಲ್ಯದಲ್ಲಿ ತಾಯಿ ತಮ್ಮ ಅಣ್ಣ, ತಂಗಿಯರಿಗೆ ರಾಘವೇಂದ್ರ ಅವರ ಕೈಯಿಂದ ಪತ್ರಗಳನ್ನು ಬರೆಸುತ್ತಿದ್ದರು. ನಂತರ ಪ್ರತಿ ಶನಿವಾರ ಶ್ರೀರಾಮ ಕಥೆಯನ್ನು ಓದಿಸುತ್ತಿದ್ದರು. ಪಕ್ಕದ ಮನೆಯ ಅಜ್ಜಿಯೂ ಕಥೆ ಓದಿಸಿ ರಾಮಪ್ರಸಾದ ಕೊಡುತ್ತಿದ್ದರು. ಹೀಗೆ ಬರವಣಿಗೆ ಮತ್ತು ರಾಮ ಭಕ್ತಿ ರಾಘವೇಂದ್ರ ಅವರ ಮೈಗೂಡಿತು.
ರಾಘವೇಂದ್ರ ಅವರು ಪತ್ರಿಕೆಗಳ ವಾಚಕರ ವಾಣಿ, ಓದುಗರ ಓಲೆ, ನೀವು ಕೇಳಿದಿರಿ? ... ಮುಂತಾದ ಪುಟ್ಟ ಅಂಕಣಗಳಿಗೆ ಬರೆಯುವುದರ ಮೂಲಕ ಸಾಹಿತ್ಯ ಪ್ರವೇಶ ಮಾಡಿದರು. ಹಾಗೆಯೇ ಆಕಾಶವಾಣಿ ಬೆಂಗಳೂರು ಕೇಂದ್ರ, ಸೋವಿಯಟ್ ರಷ್ಯಾ ಪತ್ರಿಕೆಗಳಿಗೂ ಪತ್ರಗಳನ್ನು ಬರೆಯುತ್ತಿದ್ದರು.
1984ರಲ್ಲಿ ಬಿ ಕಾಂ ಪದವಿ ಗಳಿಸಿದ ನಂತರ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದರು. ಉದ್ಯೋಗ ಮಾಡುತ್ತಾ ಕನ್ನಡ ಮತ್ತು ಆಂಗ್ಲ ಬೆರಳಚ್ಚು, ಕಂಪ್ಯೂಟರ್ ಕಲಿತರು. ಪತ್ರಿಕೆಗಳಿಗೆ ಬರೆಯುವ ಹವ್ಯಾಸ ಮುಂದುವರೆದಿತ್ತು. ಕುಂದು ಕೊರತೆ, ನೋವು ದುಮ್ಮಾನಗಳಿಗೆ ದನಿಯಾದರು. ಹಾಜರಿದ್ದ ಕಾರ್ಯಕ್ರಮಗಳ ವರದಿಯನ್ನೂ ಮಾಡತೊಡಗಿದರು. ಮಂಗಳ ಸಾಪ್ತಾಹಿಕದ ಕಾರ್ಡಿನಲ್ಲಿ ಕತೆಗಳು, ಸ್ಪಂದನ, ಸುಧಾ, ತುಷಾರ, ಮಲ್ಲಿಗೆ ಮುಂತಾದವುಗಳ ಅಂಕಣಗಳಿಗೆ ಕತೆ, ಕವನ, ಲೇಖನಗಳನ್ನು ಬರೆಯುತ್ತಿದ್ದರು. ಅಷ್ಟಿಷ್ಟು ಗೌರವ ಸಂಪಾದನೆ ಬರುತ್ತಿದ್ದಂತೆ, ಬರೆವಣಿಗೆ ಹೆಚ್ಚಾಯಿತು.
ರಾಘವೇಂದ್ರ ಅವರು ಟೈಪಿಸ್ಟ್, ಅಕೌಂಟ್ಸ್ ಅಸಿಸ್ಟೆಂಟ್ ಆಗಿ ಉದ್ಯೋಗ ಮಾಡಿದರು. ಜೊತೆಗೆ ಪಾರ್ಟ್ ಟೈಮೂ ಮಾಡಿದರು. ಸಂಪಾದನೆ ಹೆಚ್ಚಾದಂತೆ ಜವಾಬ್ದಾರಿ, ನಿರೀಕ್ಷೆ, ನಿರಾಸೆ ಹೆಚ್ಚಾಯಿತು. ತಂದೆ ನಿವೃತ್ತರಾಗಿದ್ದರು. ಮಗಳ ಮದುವೆ ಮಾಡಿ ಮುಗಿಸಿದರು. ರಾಘವೇಂದ್ರರಿಗೆ ನಿರಾಳವೆನಿಸಿತು. ದೇಶ ಮತ್ತು ಧರ್ಮಕ್ಕಾಗಿ ಸೇವೆ ಮಾಡಬೇಕು ಎನಿಸಿತು. ವಿಶ್ವ ಹಿಂದೂ ಪರಿಷತ್ ಸೇವಾವ್ರತಿಯಾಗಿ ಮಂಗಳೂರು ತಲುಪಿದರು. ಉಡುಪಿ, ಕಾರ್ಕಳ, ಕುಂದಾಪುರ ಮೂರು ಜಿಲ್ಲೆಗಳನ್ನು ಸುತ್ತಾಡಿ ಕರಾವಳಿ ಮೀನುಗಾರರ ನಡುವೆ ಸೇವಾ ಕೆಲಸಗಳಲ್ಲಿ ತೊಡಗಿಕೊಂಡರು. ಅಯೋಧ್ಯೆಯ ರಾಮಶಿಲಾ ಪೂಜನ ಅಭಿಯಾನದಲ್ಲಿ ಉಡುಪಿ ರಥದಲ್ಲಿ ಹುಬ್ಬಳ್ಳಿಯವರೆಗೂ ಪಯಣಿಸಿದರು. ಆಗ ಮನೆಯವರಿಗೆ ಸಿಕ್ಕಿ, ನಂತರ ಊರಿಗೆ ಹಿಂದಿರುಗಿದರು. ಪುನಃ ಹೊಟ್ಟೆ ಪಾಡಿಗಾಗಿ ಬೆಂಗಳೂರು ಸೇರಿಕೊಂಡರು. ಅಲ್ಲಿನ ಒತ್ತಡದ ಜೀವನ ಇಷ್ಟವಾಗಲಿಲ್ಲ. ಶ್ರವಣಬೆಳಗೊಳದ ಬಾಹುಬಲಿ ಪಾಲಿಟೆಕ್ನಿಕ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಬೆಂಗಳೂರಿನಲ್ಲಿ ಸ್ನೇಹಿತನ ಒಡನಾಟದಲ್ಲಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರ ತಂಗಿಯ ಪರಿಚಯವಾಗಿ, ಪರಿಚಯ ಸಮಾನಾಸಕ್ತಿಯಾಗಿ ಬೆಳೆದು ವಿವಾಹವಾದರು. ಈ ಅನ್ಯೋನ್ಯ ದಂಪತಿಗಳು ಹೇಗೆಂದರೆ, ಮದುವೆ ಆದ ಮೇಲೆ ಪತ್ನಿ ಪಿಎಚ್.ಡಿ ಓದಿದರೆ ಪತಿ
ಎಂ.ಎ ಓದಿದರು. ವಿವಾಹವಾದ ನಂತರ
ಬಾಗೇಶಪುರದಲ್ಲಿದ್ದಾಗ ಹಾಸನ ಆಕಾಶವಾಣಿ ಪರಿಚಯವಾಗಿ ಇವರ ಹಲವು ಕತೆ, ಕವಿತೆ, ಚಿಂತನ ಮುಂತಾದವುಗಳು ಬಿತ್ತರಗೊಂಡವು. ಆಗಷ್ಟೇ ಅಲ್ಲಿ ಶುರುವಾದ ಮನೆ ಮನೆ ಕವಿಗೋಷ್ಠಿಯ ಭಾಗವಾಗಿದ್ದರು.
ರಾಘವೇಂದ್ರ ಅವರು ಮಂಗಳ ಸಾಪ್ತಾಹಿಕದ ರಾಜ್ಯಮಟ್ಟದ ಕಿರು ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ಕುಪ್ಪಳಿ ಮತ್ತು ಹೆಗ್ಗೋಡಿನ ನೀನಾಸಂಗಳಲ್ಲಿ ಆಯೋಜನೆಗೊಂಡಿದ್ದ ಕಥಾ ಕಮ್ಮಟಗಳಲ್ಲಿ ಭಾಗವಹಿಸಿದರು.
ಬಾಗೇಶಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳಿಗೆ ಸಂಜೆ ಪಾಠ ಮಾಡಿದರು. ಪರೀಕ್ಷಾ ಸಮಯದಲ್ಲಿ ಪಂಚಾಯಿತಿಯ ನೆರವಿನೊಂದಿಗೆ ರಾತ್ರಿ ಪಾಠ ಮಾಡಿ ಒಳ್ಳೆಯ ಫಲಿತಾಂಶಕ್ಕೆ ಕಾರಣರಾದರು. ಬೆಂಗಳೂರಿನ ರಾಮಕೃಷ್ಣ ಮಠದ ನೆರವಿನಿಂದ ಬಡಮಕ್ಕಳಿಗೆ ಅಗತ್ಯ ವಸ್ತುಗಳ ನೆರವು ಒದಗಿಸಿದರು. ರಾಮಕ್ಕ ಪದ್ಮಕ್ಕ ವಿಶ್ವಸ್ಥ ಸಮಿತಿ, ಇನ್ಫೋಸಿಸ್ ಮೂಲಕ ಶಾಲಾಮಕ್ಕಳಿಗೆ ಗ್ರಂಥಾಲಯದ ನೆರವು... ಮುಂತಾದ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡರು. ತಮಗೆ ಪ್ರೆರಣೆಯಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜಯಂತಿಯನ್ನು ಮೊದಲ ಬಾರಿಗೆ ಬಾಗೇಶಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ನೆರವೇರಿಸಿದರು.
ಮುಂದೆ ತಮ್ಮ ಊರಿನ ಕಡೆಗೆ ವಾಪಸಾದ ರಾಘವೇಂದ್ರ ಅವರು ಸಮೀಪದ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಗಡಿಭಾಗದ ಕನ್ನಡ ಮಾಧ್ಯಮದ ಈ ಶಾಲೆ ಉಚಿತ ಶಿಕ್ಷಣದ ಜೊತೆ ಅತ್ಯುತ್ತಮ ಊಟ ವಸತಿಯನ್ನೂ ಕಲ್ಪಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳು, ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಅವಕಾಶ.
ರಾಘವೇಂದ್ರ ಅವರು ಕೊರೋನಾ ಬಿಡುವಿನ ವೇಳೆಯಲ್ಲಿ ಸಂಸ್ಕೃತ ಸಂಭಾಷಣೆಯನ್ನು ಕಲಿತು, ಗಿರಿನಗರದ 'ಸಂಸ್ಕೃತ ಭಾರತೀ'ಯಲ್ಲಿ ಸಂಭಾಷಣ ಶಿಕ್ಷಕ ಪ್ರಶಿಕ್ಷಣ ತರಬೇತಿ ಪಡೆದುಕೊಂಡರು. ಅಂಚೆ ಶಿಕ್ಷಣದ ಮೂಲಕ ಕೋವಿದ ಪದವಿಯನ್ನು ಪಡೆದರು. ಈ ಪ್ರಶಿಕ್ಷಣದ ನಂತರ ಹಲವು ಶಾಲೆ, ಸಂಘ ಸಂಸ್ಥೆಗಳಲ್ಲಿ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಇಪ್ಪತ್ತು ದಿನ, ದಿನಕ್ಕೆ ಎರಡು ಗಂಟೆ ಅವಧಿಯಲ್ಲಿ ಸರಳವಾಗಿ ಸಂಸ್ಕೃತ ಸಂಭಾಷಣೆ ಮಾಡುವುದನ್ನು ಕಲಿಸುವ ಉಪಕ್ರಮ ನಡೆಸುತ್ತಿದ್ದಾರೆ. ಪೂರ್ವ ಸಂಸ್ಕೃತ ಜ್ಞಾನ ಇಲ್ಲದವರೂ ಕಲಿಯಬಹುದಾದ ಪದ್ಧತಿಯನ್ನು ಸಂಸ್ಕೃತ ಭಾರತೀ ಸಿದ್ಧಪಡಿಸಿದೆ.
ಕೋಲಾರದಲ್ಲಿ ಹತ್ತು ಹನ್ನೆರಡು ವರುಷ ನೆಲೆಸಿದ್ದ ರಾಘವೇಂದ್ರ ಅವರು, ಮಡದಿಗೆ ವರ್ಗವಾದ ಕಾರಣ ಇದೀಗ ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿಯಲ್ಲಿ ಸ್ಥಾಯಿಗೊಂಡಿದ್ದಾರೆ.
ಆತ್ಮೀಯ ಉತ್ಸಾಹಿ ಮತ್ತು ಸಮಾಜಮುಖಿ ರಾಘವೇಂದ್ರರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
ಕಾಮೆಂಟ್ಗಳು