ಭದ್ರಗಿರಿ ಕೇಶವದಾಸರು
ಭದ್ರಗಿರಿ ಕೇಶವದಾಸರು
ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೀರ್ತಿ ಭದ್ರಗಿರಿ ಕೇಶವದಾಸರದು. ಅದ್ವೈತ ವೇದಾಂತ ಮತ್ತು ಯೋಗ ಗುರುವಾಗಿ, ಬರಹಗಾರರಾಗಿ, ಸಂಗೀತ ಸಂಯೋಜಕರಾಗಿ ಹಾಗೂ ಸರ್ವಧರ್ಮ ಸಮನ್ವಯಕಾರರಾಗಿ ಸಹಾ ಅವರು ಪ್ರಸಿದ್ಧರು.
ಕೇಶವದಾಸರು 1934ರ ಜುಲೈ 22ರಂದು ಮೈಸೂರಿನ ಬಳಿಯ ಭದ್ರಗಿರಿ ಎಂಬ ಗ್ರಾಮದಲ್ಲಿ ಜನಿಸಿದರು. ಅವರಿಗೆ ತಂದೆ ತಾಯಿ ಇಟ್ಟ ಹೆಸರು ರಾಧಾಕೃಷ್ಣ. ತಂದೆ ವೆಂಕಟರಮಣ ಪೈ ಮತ್ತು ತಾಯಿ ರುಕ್ಮಿಣೀಬಾಯಿ.
ಕೇಶವದಾಸರು ತಮ್ಮ ತಾಯಿಯವರು ಸಂಜೆ ವೇಳೆ ಮಕ್ಕಳನ್ನು ಕೂಡಿಸಿಕೊಂಡು ಹೇಳಿಕೊಡುತ್ತಿದ್ದ ಧಾರ್ಮಿಕ ಕಥೆಗಳು, ಭಜನೆಗಳಿಂದ ಪ್ರಭಾವಿತರಾಗಿ ಕೀರ್ತನ ಕಲೆಯಲ್ಲಿ ಆಕರ್ಷಣೆ ಬೆಳೆಸಿಕೊಂಡರು.
ಉಡುಪಿಯಲ್ಲಿ ಬಿಎ ಮತ್ತು ಕಾನೂನು ಪದವಿಗಳನ್ನು ಪಡೆದರು. ರಮಾ ಮಾತಾಜಿ ಅವರು ಕೇಶವದಾಸರ ಪತ್ನಿಯಾದರು.
ಕೇಶವದಾಸರು ಶಾಲೆಯಲ್ಲಿದ್ದಾಗಲೇ ಇಂದ್ರಸೇನರಾಜನ ಕಥೆಯನ್ನು ಹರಿಕಥೆಯ ರೂಪದಲ್ಲಿ ನಿರೂಪಿಸಿ ಮೆಚ್ಚುಗೆ ಪಡೆದರು. ಪದವಿಗಾಗಿ ಓದುತ್ತಿದ್ದಾಗಲೇ ಬೇಸಿಗೆಯ ರಜೆಯಲ್ಲಿ ಕಥಾ ಕಾಲಕ್ಷೇಪದಿಂದ ಹಣ ಸಂಗ್ರಹಿಸಲು ಮೈಸೂರು, ಬೆಂಗಳೂರು, ಕೊಡಗು ಮುಂತಾದೆಡೆ ಕಥಾ ಕೀರ್ತನ ಕಾರ್ಯಕ್ರಮಗಳನ್ನು ಮಾಡಿದರು. ಕೇಶವದಾಸರು ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತಗಳೆರಡನ್ನೂ ಶಾಸ್ರೀಯವಾಗಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ವಿದೇಶಿಯರಿಗೆ ಅಪ್ತವಾಗುವಂತೆ ಅವರವರ ಭಾಷೆಗಳಲ್ಲಿ ಆಪ್ತವಾಗಿ ನಲಿವಿನೊಡನೆ ಕಥಾನಕಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಅವರಿಗೆ ಸಿದ್ಧಿಸಿತ್ತು. ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಜೊತೆಗೆ ಇನ್ನಿತರ ಕೆಲವು ಭಾರತೀಯ ಭಾಷೆಗಳಲ್ಲದೆ 8 ವಿದೇಶಿ ಭಾಷೆಗಳೂ ಅವರಿಗೆ ಸುಲಲಿತವಾಗಿ ಬರುತ್ತಿತ್ತು.
ಕೇಶವದಾಸರು ತಮಗೆ ದಾನಿಗಳು ನೀಡಿದ ಸ್ಥಳದಲ್ಲಿ ರಾಜಾಜಿನಗರದ ಐದನೆಯ ಬ್ಲಾಕಿನಲ್ಲಿ ದಾಸಾಶ್ರಮ ಸ್ಥಾಪನೆ ಮಾಡಿದರು. ಅಲ್ಲಿ ಪಾಂಡುರಂಗ, ರುಕ್ಮಾಯಿ, ಈಶ್ವರ, ಸುಬ್ರಹ್ಮಣ್ಯ, ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದರು. 1964ರಲ್ಲಿ ಕರ್ನಾಟಕ ಕೀರ್ತನಕಾರರನ್ನೆಲ್ಲಾ ಸಂಘಟಿಸಿ ಕರ್ನಾಟಕ ಕೀರ್ತನಕಾರರ ಸಮ್ಮೇಳನ ನಡೆಸಿದರು. ಶ್ರೀಮನ್ ಮಹಾರಾಜರಿಂದ ಉದ್ಘಾಟನೆ ಸಮಾರಂಭ ನೆರವೇರಿತು. 47 ಬಾರಿ ಭಾರತದಲ್ಲಿ ಹಾಡುತ್ತಾ ಕಥೆಹೇಳುತ್ತಾ ತೀರ್ಥಯಾತ್ರೆಗಳನ್ನು ನಡೆಸಿದರು.
1966ರ ವರ್ಷದ ಕುಂಭಮೇಳದಲ್ಲಿ ಕೇಶವದಾಸರಿಗೆ ಅಮರಯೋಗಿಗಳಾಗಿ ಪ್ರಖ್ಯಾತರಾದ ಬಾಬಾಜಿ ಅವರ ದರ್ಶನವಾಯಿತು. ಸ್ವಾಮಿ ಪರಮಹಂಸ ಯೋಗಾನಂದರ 'ಯೋಗಿಯೊಬ್ಬನ ಆತ್ಮಚರಿತ್ರೆ'ಯಲ್ಲಿ ಬಾಬಾಜಿ ಅವರ ವಿಶಾಲ ಚಿತ್ರಣವಿದೆ. ಬಾಬಾಜಿ ಅವರು ಕೇಶವದಾಸರಿಗೆ ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಅಲೌಕಿಕ ಕಾಸ್ಮಿಕ್ ಧರ್ಮದ ಅರಿವನ್ನು ವ್ಯಾಪಿಸಲು ಬೋಧಿಸಿದರಂತೆ. ಅದೇ ವರ್ಷ ಜರ್ಮನಿ, ಇಂಗ್ಲೆಂಡ್ ಮತ್ತು ನ್ಯೂಯಾರ್ಕಿಗೆ ಹೊರಟ ಕೇಶವದಾಸರು ಮುಂದೆ 30 ವರ್ಷಗಳಲ್ಲಿ ಹಲವು ಬಾರಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸುವ ಅನೇಕ ಯಾತ್ರೆಗಳನ್ನು ಕೈಗೊಂಡರು. ಬೆಂಗಳೂರು, ಓಕ್ಲ್ಯಾಂಡ್, ಟ್ರಿನಿಡಾಡ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಆಶ್ರಮ ಸ್ಥಾಪಿಸಿದರು. ಪರಮಾತ್ಮನೊಡನೆ ನೇರ ಸಂಪರ್ಕದ ಅನುಭಾವವನ್ನು ಪಡೆಯುವ ಅಲೌಕಿಕ ಜ್ಞಾನವನ್ನು ಅಪೇಕ್ಷಿತರಿಗೆ ಮಾರ್ಗದರ್ಶಿಸಿದರು. ಈ ತಳಹದಿಯ ಮೇಲೆ ಟೆಂಪಲ್ ಆಫ್ ಕಾಸ್ಮಿಕ್ ರಿಲಿಜನ್ ಅನ್ನು ಸ್ಥಾಪಿಸಿದರು.
ಕೇಶವದಾಸರು ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ವಿಶ್ವಶಾಂತಿ ಆಶ್ರಮವನ್ನು ಸ್ಥಾಪಿಸಿದರು. ಇಲ್ಲಿ 32 ಅಡಿಗಳ ಭವ್ಯ ವಿಜಯ ವಿಠಲ ಮೂರ್ತಿ ಸ್ಥಾಪನೆಯಾಯಿತು. ಮುಂದೆ ಇಲ್ಲಿ ಹಲವು ವ್ಯವಸ್ಥೆ ಸಭಾಭವನಗಳ ಜೊತಗೆ ಭವ್ಯ ವಿಶ್ವರೂಪ ದರ್ಶನ, ಭಗವದ್ಗೀತಾ ಉಪದೇಶಗಳ ಮೂರ್ತಿಗಳು ಮನಸೆಳೆಯುವಂತೆ ನಿರ್ಮಾಣಗೊಂಡಿವೆ. ಭಗವದ್ಗೀತಾ ಮಂದಿರದಲ್ಲಿ ಎಲ್ಲ 700 ಭಗವದ್ಗೀತಾ ಶ್ಲೋಕಗಳನ್ನೂ ಇಂಗ್ಲಿಷ್, ಸಂಸ್ಕೃತ, ಹಿಂದಿ ಮತ್ತು ಕನ್ನಡಗಳನ್ನು ಮಾರ್ಬಲ್ ಕೆತ್ತನೆಗಳಲ್ಲಿ ಮೂಡಿಸಲಾಗಿದೆ.
ಕೇಶವದಾಸರು 6000ಕ್ಕೂ ಹೆಚ್ಚು ಹಾಡುಗಳನ್ನು ಬರೆದು, ಸಂಯೋಜಿಸಿ ಹಾಡಿದ್ದರಂತೆ. ಅವರು ಗಾಯನ, ಕಥೆ ಹೇಳುವಿಕೆ ಮತ್ತು ಆಧ್ಯಾತ್ಮ ಸ್ಪರ್ಷದ ಹಾಸ್ಯಪೂರ್ಣ ಮಾತುಗಳಲ್ಲಿ ಬೋಧಿಸುತ್ತಿದ್ದರು. ಭಗವದ್ಗೀತೆ, ಬೈಬಲ್ ಸೇರಿದಂತೆ ಸುಮಾರು 50 ಗ್ರಂಥಗಳ ರಚನೆ ಮಾಡಿದರು. ಕಥಾ ಪ್ರಸಂಗಗಳ ನೂರಾರು ಧ್ವನಿಸುರುಳಿಗಳಿಗೆ ಧ್ವನಿಯಾದರು . ಹರಿಕಥಾ ಕಲಾವಿಚಕ್ಷಣ, ಕೀರ್ತನ ಕೇಸರಿ, ಕೀರ್ತನನಾಟಕ ವಿಶಾರದ ಮುಂತಾದ ಅನೇಕ ಬಿರುದುಗಳು, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.
ಭದ್ರಗಿರಿ ಕೇಶವದಾಸರು 1997ರ ಡಿಸೆಂಬರ್ 4ರಂದು ವಿಶಾಖಪಟ್ಟಣದಲ್ಲಿ ಪ್ರವಚನ ಮಾಡುತ್ತಿದ್ದ ಸಂದರ್ಭದಲ್ಲಿ ಈ ಲೋಕವನ್ನಗಲಿದರು.
On the birth anniversary of Harikatha Vidwan and Guru Bhadragiri Keshavadas
ಕಾಮೆಂಟ್ಗಳು