ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೃಷ್ಟಿ ನಾಗೇಶ್


ಸೃಷ್ಟಿ ನಾಗೇಶ್

ಕನ್ನಡದ ಬೆಳವಣಿಗೆಗೆ ಕನ್ನಡ ಪುಸ್ತಕ ಪ್ರಕಾಶಕರ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು.  ಅಂತಹ ಸ್ಮರಣೀಯ ಕ್ರಿಯಾಶೀಲ ಕೊಡುಗೆ ನೀಡುತ್ತಿರುವವರಲ್ಲಿ ನಮ್ಮ ಸೃಷ್ಟಿ ನಾಗೇಶ್ ಅವರ ಕೊಡುಗೆಯೂ ಅನುಪಮವಾದದ್ದು.

ಜುಲೈ 22, 'ಆ ಸೃಷ್ಟಿಕರ್ತ' ನಮ್ಮ 'ಸೃಷ್ಟಿ ನಾಗೇಶ'ರನ್ನು ಈ ಭುವಿಗೆ ತಂದ ಸುದಿನ. 
ಮೈಸೂರು ಜಿಲ್ಲೆಯ ನೂತನ ತಾಲೂಕು ಸಾಲಿಗ್ರಾಮದ ಪಕ್ಕದ ಒಂದು ಸಣ್ಣ ಹಳ್ಳಿ ಮೂಡಲಬೀಡು ಇವರ ಊರು. ತಂದೆ ಸಣ್ಣ ರೈತರು. ನಾಗೇಶ್ ಅವರು ಓದಿದ್ದು ಬೆಳೆದದ್ದು ಮೈಸೂರಿನ ಸರಕಾರಿ ಹಾಸ್ಟೆಲ್ ವ್ಯವಸ್ಥೆಯಲ್ಲಿ.  ಇವರು ಪತ್ರಿಕೋದ್ಯಮದಲ್ಲಿ ಎಂ. ಎ. ಓದಿದರು.

ನಾಗೇಶ್ ಅವರು ಪ್ರಕಾಶಕರಾಗಿ ಮೂಡಿಸಿದ ಸಂಸ್ಥೆ 'ಸೃಷ್ಟಿ ಪಬ್ಲಿಕೇಷನ್'. ಈ ಸೃಷ್ಟಿಯೇ ಅವರ ಹೆಸರಿನ ಜೊತೆ ಸೇರಿ, ಇವರನ್ನು 'ಸೃಷ್ಟಿ ನಾಗೇಶ್' ಎಂದು ಜನಪ್ರಿಯರನ್ನಾಗಿಸಿದೆ. ಜಗತ್ತಿನ ಅತ್ಯುತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿರುವ ಹಿರಿಮೆ ಈ 'ಸೃಷ್ಟಿ'ಯದು. ಪುಸ್ತಕೋದ್ಯಮದಲ್ಲಿ ಕನ್ನಡ ಪುಸ್ತಕಗಳಿಗೆ ಮುಖಪುಟ ವಿನ್ಯಾಸದಲ್ಲಿ ಹೊಸತನ ತಂದ ಹಿರಿಮೆಯೂ 'ಸೃಷ್ಟಿ' ಪ್ರಕಾಶನಕ್ಕಿದೆ.

ತಮ್ಮ ಅನುಭವದ ಬಗ್ಗೆ ಹೇಳುವ ಸೃಷ್ಟಿ ನಾಗೇಶ್ "ಪುಸ್ತಕೋದ್ಯಮದ ಪರ ಸದಾ ಹೋರಾಟ ಆಗಿ ಒದೆ ತಿಂದದ್ದು ಆಗಿದೆ. ಕನ್ನಡ ಪುಸ್ತಕೋದ್ಯಮದ ಪರವಾಗಿ, ಸರಕಾರದಿಂದ ಪುಸ್ತಕೋದ್ಯಮಕ್ಕೆ ಮತ್ತು ಪ್ರಕಾಶರಿಗೆ ಸಿಗಬೇಕಾದ ಸವಲತ್ತು ಮತ್ತು ಸವಾಲುಗಳಿಗೆ ಸದಾ ಓಡಾಟ" ಎನ್ನುತ್ತಾರೆ. 

ನಾಗೇಶರ 'ಸೃಷ್ಟಿ'ಯಿಂದ ಇಲ್ಲಿಯವರಿಗೆ 310 ಪುಸ್ತಕಗಳ ಪ್ರಕಟಣೆಯಾಗಿದೆ.  ಉತ್ತಮ ಅನುವಾದಕ್ಕೆ ಇವರಲ್ಲಿ ಸದಾ ಅದ್ಯತೆ.   ಅತ್ಯುತ್ತಮ ಮುದ್ರಣಕ್ಕಾಗಿ ಕರ್ನಾಟಕ ಸರ್ಕಾರದಿಂದ 'ಮುದ್ರಣ ಸೊಗಸು' ಪ್ರಶಸ್ತಿ ಇವರಿಗೆ ಸಂದಿದೆ.

ಕನ್ನಡ ಕಾಯಕವನ್ನು ಉಸಿರಾಗಿಸಿಕೊಂಡಿರುವ ಪುಸ್ತಕೋದ್ಯಮಿ, ಉತ್ಸಾಹಿ, ಎಲ್ಲರಿಗೂ ಪ್ರಿಯರಾದ, ಆತ್ಮೀಯ ಸೃಷ್ಟಿ ನಾಗೇಶರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Srushti Nagesh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ