ಐದು ಕಾಲಿನ ಮಂಚ ಕುಂಟ
ಐದು ಕಾಲಿನ ಮಂಚ ಕುಂಟ ಮಲಗಿದ್ದಾ,
ಐದು ಕಾಲಿನ ಮಂಚ ಕುಂಟ ಮಲಗಿದ್ದಾ,
ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ
ಇದ್ದೈದು ಕಾಲಿಗೂ ಕೈಕಾಲು ಬಂತು,
ಕುಂಟ ಮಲಗಿದ್ದಂತೆ ಮಂಚ ಧಾವಿಸಿತು
ಆರು ಜನ ದಾಂಡಿಗರು ಕೈಹಿಡಿದರೆಳೆದು,
ಜಾರಿ ಬಿದ್ದನೊ ಕುಂಟ ಪಕ್ಕೆಲುಬು ಮುರಿದು.
ಏಳೈಯ್ಯ ಕುಂಟೈಯ್ಯ ದಂಟೆ ಹಿಡಿದೇಳು,
ಕೋಳಿ ಹಾಡುವ ಸುಪ್ರಭಾತವನು ಕೇಳು
ಈ ಐದು ಈ ಆರು ಈ ಮೂರು ಸಾಕು,
ಹದಿನೆಂಟು ಬೇಕೋ ಬಿಡಬೇಕು ಹದಿನಾಲ್ಕು.
ರಚನೆ : ಬನ್ನಂಜೆ ಗೋವಿಂದಾಚಾರ್ಯರು
ಇದು ಮುಂಡಿಗೆ. ಒಗಟಿನಂತಹ ರಚನೆ. ಈ ರಚನೆಯು ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡಿದ್ದು.
ಐದು ಕಾಲಿನ ಮಂಚ ಅಂಂದರೆ, ಪಂಚೇಂದ್ರಿಯಗಳೇ ಕಾಲುಗಳಂತೆ ವರ್ತಿಸಿ ಸುಖವೆಂಬ, ಮೋಹದ ಅಮಲೆಂಬ ಮಂಚದಲ್ಲಿ ಮಲಗಿದ್ದು, ತನಗೆ ಆಧಾರವಾಗಿದ್ದ ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಆಲಂಬನ ಮೂರೂ ದಂಟೆಗಳನ್ನು ಬಗಲಿಗಿಟ್ಟು ಆತ್ಮನು ಮಲಗಿದ್ದ.
ಪರಮಾತ್ಮನಿಂದ ಬೇರೆಯಾಗಿ ದೇಹವೆಂಬ ಮೋಹದ ಮಂಚದಲ್ಲಿ ನೆಲೆಸಿದ್ದ ಕುಂಟನಾದ ಆತ್ಮನು ಎಚ್ಚರಿಕೆಯಿಲ್ಲದೆ ಚಲಿಸಲಾಗದೆ, ಜಡನಾಗಿ ಪಂಚೇಂದ್ರಿಯಗಳಿಗೆ ಎಳೆತಕ್ಕೆ ಬಲಿಯಾದ ಕುಂಟನಾಗಿ ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ ಅವಸ್ಥೆಗಳ ಮೌಢ್ಯದಿಂದ ಜಾರುತ್ತ, ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ದಂಟೆಯನ್ನು ಆಲಂಬನ ಮಾಡದೆ ಅವುಗಳನ್ನು ಬಗಲಿಗಿಟ್ಟದ್ದರಿಂದ,
ಪರಮಾತ್ಮನೆಂಬ ಆಲಂಬನದಿಂದ ದೂರವಾಗಿ ಕುಂಟನಾಗಿದ್ದ.
ಈ ಕುಂಟನಾಗಿ ಬಿದ್ದಿದ್ದ ಆತ್ಮನು - ಕಾಮ, ಕ್ರೋಧ, ಅಹಂಕಾರ, ಲೋಭ, ಮೋಹ ಮತ್ತು ಅಸೂಯೆಗಳೆಂಬ ಅರಿ ಷಡ್ವರ್ಗಗಳು ಎಳೆದ ಪರಿಗೆ ಬಲಿಯಾಗಿ, ಅಜ್ಞಾನವೆಂಬ ಕೂಪದಲ್ಲಿ ಕೆಳಗೆ ಬಿದ್ದನು. ವಿಕಲನಾದನು.
ಏಳೈಯ್ಯ ಕುಂಟ ಎದ್ದೇಳು , ಜ್ಞಾನ ಭಕ್ತಿ ವೈರಾಗ್ಯಗಳೆಂಬ ದಂಟೆಯನ್ನು ಹಿಡಿದೇಳು. ಕೋಳಿ ಕೂಗುವ ಸುಪ್ರಭಾತ- ಎಂದರೆ ಸಹಸ್ರಾರದಲ್ಲಿ ಉಂಟಾಗುವ ಜ್ಞಾನವೆಂಬ ಸೂರ್ಯೋದಯವು ನಿನಗಾಗಲಿ. ಈ ಐದು, ಈ ಮೂರು, ಈ ಆರು ಸಾಕಿನ್ನು - ಎಂದರೆ - 5+3 +6 =14 — ಮೇಲೆ ಹೇಳಿದ ದುರ್ಗುಣಗಳಾದ ಇವನ್ನು ಬಿಟ್ಟು ಎಚ್ಚರಾಗಿ, 6 ×3=18 ಜ್ಞಾನಗಳನ್ನೀವ 18 ಪುರಾಣಗಳನ್ನು ಆಧರಿಸಿ, ನೀನು ಮುಕ್ತಿಯನ್ನು ಪಡೆ ಎಂದು ಆಚಾರ್ಯರು ಉಪದೇಶಿಸುತ್ತಿದ್ದಾರೆ.
_______
ಇದು ಒಂದು ಮುಂಡಿಗೆ ಎಂಬ ಪ್ರಕಾರದ ರಚನೆ.
ಒಗಟಿನಂತಹ ಮುಂಡಿಗೆಗಳ ರಚನೆಯನ್ನು ಆರಂಭಿಸಿದವರು 16 ನೆಯ ಶತಮಾನದಲ್ಲಿದ್ದ ಕನಕದಾಸರು.
12 ನೆಯ ಶತಮಾನದಲ್ಲಿಯೂ ಒಗಟಿನಂತಹ ರಚನೆಗಳನ್ನು ವಚನಕಾರರು ರಚಿಸಿದ್ದಾರೆ. ಅವರದನ್ನು ಬೆಡಗಿನ ವಚನಗಳು ಎನ್ನುತ್ತಿದ್ದರು. ಸಂಸ್ಕೃತದಲ್ಲಿ ಇಂತಹ ರಚನೆಗಳಿಗೆ ಅತ್ಯಂತ ಪ್ರಾಚೀನದಿಂದಲೂ ಪ್ರಹೇಲಿಕಾ ಎಂದು ಪರಿಭಾಷೆ.
ಕೃಪೆ:. ರೋಹಿಣಿ ಸುಬ್ಬುರತ್ನಂ Rohini Subbarathnam
ಕಾಮೆಂಟ್ಗಳು